Hongeya Neralu
By Geetha B.U.
4/5
()
About this ebook
Read more from Geetha B.U.
Second Innings Rating: 0 out of 5 stars0 ratingsAaradirali Belaku Rating: 0 out of 5 stars0 ratingsKai Hididhu Nadesennanu Rating: 0 out of 5 stars0 ratingsTamasoma Jyothirgamaya Rating: 0 out of 5 stars0 ratingsSolu Geluvina Hadiyalli Rating: 0 out of 5 stars0 ratings
Related to Hongeya Neralu
Related ebooks
Hanigavithegalu Rating: 0 out of 5 stars0 ratingsSankole Rating: 0 out of 5 stars0 ratingsVaarasudhara Rating: 0 out of 5 stars0 ratingsKaarmugilu Rating: 0 out of 5 stars0 ratingsJothe Jotheyali Rating: 4 out of 5 stars4/5Samadhana Bhaaga 1 Rating: 0 out of 5 stars0 ratingsThe Gift Rating: 3 out of 5 stars3/5Devare Ninna Kula Yavudu? Rating: 0 out of 5 stars0 ratingsBottom Item Rating: 5 out of 5 stars5/5Nakshatra Jaaridaaga Rating: 0 out of 5 stars0 ratingsKempu Kalave Rating: 0 out of 5 stars0 ratingsBest of Lovelavike Rating: 5 out of 5 stars5/5Grimm Brothers Rating: 0 out of 5 stars0 ratingsKanamareyada Kathegalu Bhaaga 1 Rating: 0 out of 5 stars0 ratingsYashassina Rahasyagalu Rating: 3 out of 5 stars3/5O Henne Neeneshtu Olleyavalu Rating: 0 out of 5 stars0 ratingsInchara Bandalu Inchara Rating: 0 out of 5 stars0 ratingsJeevana Maadhurya Rating: 5 out of 5 stars5/5Tappu Maadona Banni! Rating: 4 out of 5 stars4/5The Diary of Mrs.Sharada Rating: 5 out of 5 stars5/5Beladingala Godavari Rating: 0 out of 5 stars0 ratingsAnoohya Rating: 0 out of 5 stars0 ratingsHudugiyarige Maathra Rating: 3 out of 5 stars3/5Priyathama Rating: 0 out of 5 stars0 ratingsBeda Krishna Ranginata Rating: 0 out of 5 stars0 ratingsDuddu Duddu Rating: 5 out of 5 stars5/5Makkala Kate Bhaaga 1 Rating: 0 out of 5 stars0 ratingsIdannu Bayasiralilla (Best of UG) Rating: 0 out of 5 stars0 ratingsThushara Rating: 0 out of 5 stars0 ratingsಗಡಿಯಾರಕರ್ತೃ (The Watchmaker) Kannada Language Rating: 5 out of 5 stars5/5
Reviews for Hongeya Neralu
1 rating0 reviews
Book preview
Hongeya Neralu - Geetha B.U.
http://www.pustaka.co.in
ಹೊಂಗೆಯ ನೆರಳು
Hongeya Neralu
Author :
ಗೀತಾ ಬಿ.ಯು.
Geetha.B.U
For more books
http://www.pustaka.co.in/home/author/geetha-bu
Digital/Electronic Copyright © by Pustaka Digital Media Pvt. Ltd.
All other copyright © by Author.
All rights reserved. This book or any portion thereof may not be reproduced or used in any manner whatsoever without the express written permission of the publisher except for the use of brief quotations in a book review.
ಮುನ್ನುಡಿ
ನಮಸ್ಕಾರ,
ಇದು ಎರಡು ದೀರ್ಘ ಹಾಗೂ ಹಲವು ಪುಟ್ಟ ಕಥೆಗಳನ್ನು ಒಳಗೊಂಡ ಪುಸ್ತಕ.
ಮೊದಲನೆಯದು ‘ಹೊಂಗೆಯ ನೆರಳಲ್ಲಿ’, ಇದು ಒಂದು ನಿಜ ಘಟನೆಯನ್ನು ಆದರಿಸಿದ ಕಥೆ. ಈ ಕಾದಂಬರಿಯಲ್ಲಿ ಬರುವ ಪಾತ್ರಗಳಂಥಹ ವ್ಯಕ್ತಿಗಳು ನಿಜ ಪ್ರಪಂಚದಲ್ಲಿ ಇರುವುದರಿಂದಲೇ ಈ ಪ್ರಪಂದ ಇಷ್ಟೊಂದು ಸುಂದರಮಯ ಸದ್ಯ, ಹಿರಿಯರು ಹೇಳುವಂತೆ ಮಳೆಬೆಳೆ ಆಗುತ್ತಿರುವುದು. ನಿಷ್ಕಳಂಕ ಮನಸ್ಸಿನ ವ್ಯಕ್ತಿಗಳಿಗೆ ನನ್ನ ನಮನ.
ಈ ಪುಸ್ತಕದ ಇನ್ನೊಂದು ದೀರ್ಘ ಕಥೆ ಸವಿತಾ
ಹೆಚ್ಚಾಗಿ ಏನನ್ನೂ ಹೇಳದಿದ್ದರೂ ಓದಿದರೆ ಹಿತವೆನ್ನಿಸುತ್ತದೆ. ಮನಸ್ಸನ್ನು ಮುದಗೊಳಿಸುತ್ತದೆ ಎಂದೆನ್ನಿಸುತ್ತದೆ ನನಗೆ.
‘ಹೊಂಗೆಯ ನೆರಳಲ್ಲಿ’ ಅನ್ನು ‘ಮಲ್ಲಿಗೆ’ ಮಾಸಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಿಸಿದ ಮಲ್ಲಿಗೆ ಪತ್ರಿಕೆಯ ಸಂಪಾದಕ ವರ್ಗದವರಿಗೆ ನನ್ನ ವಂದನೆಗಳು.
‘ಸವಿತಾ’ ರಾಗಸಂಗಮದಲ್ಲಿ ಪ್ರಕಟಗೊಂಡಿತ್ತು. ಶ್ರೀ ಸುಂದರರಾಜನ್ ಅವರಿಗೆ ನನ್ನ ವಂದನೆಗಳು.
ಕಳೆದ ಹದಿನೆಂಟು ವರ್ಷಗಳಲ್ಲಿ ನಾನು ಬರೆದಿರುವ ಕೆಲವು ಕಥೆಗಳನ್ನು ಈ ಪುಸ್ತಕದಲ್ಲಿ ಸೇರಿಸಿದ್ದೇನೆ. ಸುಧಾ, ತರಂಗ, ಮಯೂರ, ಪ್ರಜಾಮತ, ಮಲ್ಲಿಗೆ ಮುಂತಾದ ಪತ್ರಿಕೆಗಳಲ್ಲಿ ಈ ಕಥೆಗಳು ಪ್ರಕಟಗೊಂಡಿದ್ದವು.
ಈ ಪ್ರಸ್ತಕಕ್ಕೆ ಸುಂದರವಾದ ಮುಖಚಿತ್ರ ಬರೆದುಕೊಟ್ಟಿರುವ ಜಿ,ಕೆ. ಸತ್ಯ ಅವರಿಗೆ ನನ್ನ ವಂದನೆಗಳು.
ಈ ಪುಸ್ತಕ ಹೊರಬರಲು ಕಾರಣಕರ್ತರಾದ ಹಂಸಧ್ವನಿಯ ಶ್ರೀ ಎಸ್ ರಂಗಸ್ವಾಮಿ ಅವರಿಗೆ ನಾನು ಅಭಾರಿಯಾಗಿದ್ದೇನೆ.
ನನ್ನ ಬರವಣಿಗೆಗೆ ಸದಾ ಪ್ರೋತ್ಸಾಹಿಸುವ ನನ್ನ ಪತಿ ಶ್ರೀ ಶಾರದಾ ಪ್ರಸಾದ್ ಅವರಿಗೆ ಹಾಗೂ ನನ್ನ ಅಕ್ಕ ಶ್ರೀಮತಿ ನಾಗಮಣಿ ಅವರಿಗೆ ನನ್ನ ಕೃತಜ್ಞತೆಗಳು.
ಓದುಗ ವೃಂದಕ್ಕೆ ನಮನ. ಈ ಸಂಗ್ರಹವನ್ನು ಕೊಂಡು, ಓದುವ ನಿಮ್ಮ ಪ್ರೋತ್ಸಾಹ ಸದಾ ಹೀಗೇ ಇರಲಿ ಎಂದು ಹಾರೈಸುತ್ತೇನೆ.
ನಿಮ್ಮ ಅಭಿಪ್ರಾಯಕ್ಕೆ ಸ್ವಾಗತ.
ವಂದನೆಗಳು.
ವಿಶ್ವಾಸಗಳೊಂದಿಗೆ
ಗೀತಾ ಬಿ.ಯು.
ಬರೆಯಲು ನನಗೆ ಸದಾ
ಹುರಿದುಂಬಿಸುವ ನನ್ನ ಪತಿ
ಶ್ರೀ ಶಾರದಾ ಪ್ರಸಾದ್ ಅವರಿಗೆ
ಪರಿವಿಡಿ
1. ಹೊಂಗೆಯ ನೆರಳಲ್ಲಿ
2. ಸವಿತಾ
3. ಅಪುತಸ್ಯ
4. ಯಾರು ಕಾರಣ
5. ಹೊಸ ಹಗಲಿನೆಡೆಗೆ
6. ದಿನಚರಿ !
7. ಪರಿಹಾರ
8. ಇದು ಯಾವ ಬಂಧ
9. ಅನಾಥರು ಯಾರು ?
10. ಮರಳಿದಾಗ
ಹೊಂಗೆಯ ನೆರಳಲ್ಲಿ
ಪುತ್ರಶೋಕಂ ನಿರಂತರಂ ಅಂತಾರೆ. ನಿಜ, ಆದರೆ ನಗುನಗುತ್ತಾ ಗಂಡನೊಡನೆ ಬಾಳಬೇಕಾಗಿದ್ದ ಸೊಸೆಯ ಬೋಳುಮುಖ ನೋಡಿದಾಗ, ಅಪ್ಪನ ತೆಕ್ಕೆಯಲ್ಲಿ ಸುರಕ್ಷಿತವಾಗಿರಬೇಕ್ಕಿದ್ದ ಮೊಮ್ಮಗಳನನ್ನು ನೋಡಿದಾಗ ಆಗುವ ಸಂಕಟ ಅಸಾಧ್ಯ
ಸೆರಗಿನ ತುದಿಯಲ್ಲಿ ಕಣ್ಣೊರೆಸಿಕೊಂಡರು ಕಾವೇರಮ್ಮ.
ನಿಮ್ಮ ಮಗನ ಕೂಡ ಬಾಳುವುದಕ್ಕೆ ಕೇಳಿಕೊಂಡು ಬರಲಿಲ್ಲ ಗಿರಿಜ
ಲೊಚಗುಟ್ಟಿದರು ಪಕ್ಕದ ಮನೆ ಲಲಿತಮ್ಮ.
ನಾನು ಇವರೂ ಎಷ್ಟು ಹೇಳಿದರೂ ಕೇಳಲ್ಲ ನೋಡಿ, ಮನೆಯಿಂದ ಹೊರಗೆ ಹೆಜ್ಜೆ ಇಟ್ಟಿದ್ದರೆ... ಕೇಳಿ...
ಯಾಕೆ...? ಪಾಪ ಅವಳೇನು ಮಾಡಿದ್ದಾಳೆ ? ಅಂಥಾ ಮುದ್ದಾದ ಹೆಂಡತಿ ಮುತ್ತಿನಂಥ ಮಗುವಿನೊಂದಿಗೆ ಬಾಳುವ ಯೋಗ ಅವನು ಪಡೆದುಕೊಂಡು ಬರಲಿಲ್ಲ. ಈ ವಯಸ್ಸಿನಲ್ಲಿ ನಮ್ಮನ್ನು ನೋಡಿಕೊಳ್ಳಬೇಕಾದವನು ಹೀಗೆ ಹೋಗ್ತಾನೆ ಅಂತ ಯಾರು ಕಂಡಿದ್ರು ?.. ಅವನು ಹೋದ ಅವನ್ಹಿಂದೇನೇ ನಮ್ಮೆಲ್ಲರ ಸುಖ ಸಂತೋಷವೆಲ್ಲಾ ಹೊರ್ಟ್ಹೋಯ್ತು
ನಿಟ್ಟುಸಿರಿಟ್ಟರು ಕಾವೆರಮ್ಮ.
ಸೊಸೆಯನ್ನು ಕೊಂಚ ಬೈಯ್ದರೆ, ಅಂದರೆ ತಮ್ಮ ಮಾತೂ ಸೇರಿಸೋಣ ಎಂದುಕೊಂಡಿದ್ದ ಲಲಿತಮ್ಮನಿಗೆ ಕಾವೇರಮ್ಮನವರು ಸೊಸೆಯ ಪರವಾಗೇ ಆಡಿದ ಮಾತುಗಳು ರುಚಿಸಲಿಲ್ಲ.
ಬರ್ತೀನ್ರಿ... ಇನ್ನೂ ಅಡಿಗೆಗೆ ಇಡಬೇಕು. ನಿಮ್ದು ಆಗ್ಬೇಕೇನೋ...
ತರಕಾರಿ ಹಾಕಿಸಿಕೊಂಡಿದ್ದ ಬೇಸನ್ ಹೊತ್ತು ಹೊರಟು ಲಲಿತಮ್ಮ.
ಹೂಂ... ಆಗ್ಬೇಕು...
ಕಾಂಪೌಂಡಿನ ಮೇಲಿದ್ದ ಬುಟ್ಟಿ ಕೈಗೆತ್ತಿಕೊಂಡು ಕಾಲೆಳೆದುಕೊಂಡು ಒಳ ನಡೆದರು ಕಾವೇರಮ್ಮ.
ಗಿರಿಜಾ, ನೋಡು, ಬದನೆಕಾಯಿ, ಹುರಳಿಕಾಯಿ . ಎಲೆಕೋಸು ತೊಗೊಂಡಿದ್ದೀನಿ. ಏನ್ಮಾಡೋಣಮ್ಮ ಅಡಿಗೆ...
ಅಲ್ಲೇ ಪೇಪರ್ ಓದುತ್ತಾ ಕುಳಿತಿದ್ದ ವೆಂಕಟರಾಯರು ಶುಷ್ಕನಗೆ ನಕ್ಕರು.
ಕಳೆದ ಐದು ತಿಂಗಳಿಂದ ಈ ಪ್ರಶ್ನೆಗೆ ಉತ್ತರವೇ ಬಂದಿಲ್ಲ. ಮುಂಚೆ ಹರೀಶನಿದ್ದಾಗ ಎಷ್ಟು ಲವಲವಿಕೆಯಿಂದ ಹೊರಗೋಡಿ ಬರುತ್ತಿದ್ದಳು ಗಿರಿಜ.
ಅಮ್ಮ... ಇದರಲ್ಲಿ ಗೊಜ್ಜು ಮಾಡೋಣ... ಅಲ್ಲ ಅಲ್ಲ ನೀವೇ ಮಾಡಿ. ಅದರಲ್ಲಿ ಹುಳಿ. ಅಯ್ಯೋ ಈ ತರಕಾರಿ ಚೆನ್ನಾಗಿಲ್ಲ. ಅಮ್ಮ ಬಟಾಣಿ ಯಾಕೆ ತೊಗೊಳ್ಳಿಲ್ಲ ? ಅಮ್ಮ ಇವತ್ತು ನಾನು ಈ ಎಲ್ಲಾ ತರಕಾರಿ ಹಾಕಿ ಬೇರೆ ಹೊಸ ತರಹ ಸಾಗು ಮಾಡ್ತೇನೆ
ಹೀಗೇ ಏನೋ, ಉತ್ತರ, ಗಲಗಲ ಮಾತೂ ... ಅತ್ತೆ ಸೊಸೆ ಸೇರಿ ರುಚಿರುಚಿಯಾಗಿ ಅಡಿಗೆ ಮಾಡಿಡುತ್ತಿದ್ದರು.
ಈಗ ದುಃಖವೆಷ್ಟೇ ಇದ್ದರೂ... ಹೊಟ್ಟೆ ಕೇಳಬೇಕಲ್ಲ, ಏನೋ ಕೊಂಡುಕೊಳ್ಳುವುದು, ಮಾಡುವುದು, ತಿನ್ನುವುದು. ಕಾವೇರಿ ಚಿಕ್ಕಮಗ ಗಿರೀಶನಿಗಾಗಿ, ಪುಟ್ಟ ಮೊಮ್ಮಗು ಅವಿನಾಶನಿಗಾಗಿ ಕೊಂಚ ಗೆಲುವಾಗಿರಲು ಪ್ರಯತ್ನಿಸುತ್ತಾಳೆ. ಆದರೆ ಗಿರಿಜ, ಹರೀಶ ಸತ್ತುಹೋಗಿ ಹಾಲಿನಲ್ಲಿ ಇರುವ ಫೋಟೋದಲ್ಲಿ ನಗುನಗುತ್ತಲಿದ್ದಾನೆ. ಆದರೆ ಗಿರಿಜ ಹೆಣವಾಗಿದ್ದಾಳೆ. ಪಾಪ ಇನ್ನೂ ಇಪ್ಪತ್ತೈದು ವರ್ಷ, ಮದುವೆಯಾಗಿ ನಾಲ್ಕು ವರ್ಷ ಸಂಸಾರ ಮಾಡಿದ್ದಳು ಅಷ್ಟೇ. ಅದರ ಕುರುಹು ಎರಡು ವರ್ಷದ ಅವಿನಾಶ್, ಈ ವಿಧಿಯಾಟ ಯಾಕಿಷ್ಟು ಕ್ರೂರ ? ... ವಯಸ್ಸಾದ ನನ್ನನ್ನು, ಇವಳನ್ನು ಬಿಟ್ಟು ಇನ್ನೂ ಬಾಳಿ ಬದುಕಬೇಕಿದ್ದ ಮೂವತ್ತೆರಡು ವರ್ಷದ ಹರೀಶನನ್ನು ಸೆಳೆದುಕೊಂಡಿತಲ್ಲಾ... ಯಾಕೆ? ಈ ವಯಸ್ಸಿನಲ್ಲಿ ನಮಗೆ ಆಸರೆಯಾಗಬೇಕಿದ್ದ ಮಗನನ್ನು ಕಿತ್ತುಕೊಂಡು ನೀವು ಇನ್ನೂ ಈ ಸಂಸಾರದಲ್ಲಿ ಏಗಿ ಅಂತ ಬಿಟ್ಟಿದ್ದಾನಲ್ಲಾ, ಆ ದೇವರು ! ಅವನಿಗೆ ಏನು ಹೇಳಬೇಕು ?
ಇಲ್ಲ ಇಲ್ಲ ‘ಗಿರಿಜೆಯನ್ನು’ ಹೀಗೇ ಕೋಣೆಯಲ್ಲಿ ಕುಳಿತು ಕೊಳೆಯುವುದಕ್ಕೆ ಬಿಡಬಾರದು. ಪ್ರಪಂಚ ಅರಿಯದ ಚಿಕ್ಕ ಹುಡುಗಿ-
ಕಾವೂ ಕಾವೂ...
ಬಂದೇರಿ, ಕಾಫಿ ಬೆರೆಸ್ತಾ ಇದ್ದೀನಿ. ನಿಮ್ಮ ಟೈಂ ನಂಗೆ ಗೊತ್ತಿಲ್ವಾ...?
ಅಡಿಗೆ ಮನೆಯಿಂದಲೇ ಉತ್ತರ ಬಂದಿತು.
ಕಾಫಿ ಮನೆ ಹಾಳಾಯ್ತು, ಬಾರೆ ಇಲ್ಲಿ...?
ಎರಡು ಲೋಟ ಕಾಫಿ ಹಿಡಿದೇ ಹೊರಬಂದರು ಕಾವೇರಮ್ಮ.
ಕೈಗೆ ಇತ್ತ ಲೋಟವನ್ನು ಇಸಿದುಕೊಂಡು ಗುಟುಕರಿಸಿದರು ವೆಂಕಟರಾಯರು.
ಅವಿನಾಶ ಎಲ್ಲಿ ?
ಬೆಳಿಗ್ಗೆ ಬೇಗ ಎದ್ಬಿಟ್ಟಿದ್ದ. ಈಗ ಮಲ್ಗಿದ್ದಾನೆ
ಗಿರಿಜಾ ?
ಬದನೆಕಾಯಿ ಹೆಚ್ಚುತ್ತಿದ್ದಾಳೆ
ಗಿರಿಜಾ, ಗಿರಿಜಮ್ಮ...
ಹೊರಬಂದು ಸುಮ್ಮನೆ ಬಾಗಿಲ ಬಳಿ ನಿಂತ ಸೊಸೆಯನ್ನು ದಿಟ್ಟಿಸಿದರು ವೆಂಕಟರಾಯರು.
ಬಣ್ಣ ಮಾಸಿದ ಮುದುಡಿಹೋದ ವಾಯಿಲ್ ಸೀರೆ, ಸ್ನಾನಕ್ಕೆ ಹಾಕಿದ ಕೂದಲು ಗಂಟು, ಬರೀ ಹಣೆ, ಕಿವಿ, ಕತ್ತು, ಕೈ, ಬತ್ತಿದ ಕೆನ್ನೆ, ಆಳಕ್ಕೆ ಇಳಿದ ಕಂಗಳು ಅಬ್ಬ! ಐದು ತಿಂಗಳಲ್ಲಿ ಇಷ್ಟು ಬದಲಾಗಲು ಸಾಧ್ಯವೇ ? ಕಾವೇರಿ ಎಷ್ಟು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಳು...
ನನ್ನ ಸೊಸೆ ಹಾಗೆಲ್ಲಾ ಹಳಸಲು ಹಳಸಲಾಗಿ ಇರಲ್ಲ. ಬೆಳಗ್ಗೆ ಎದ್ದು ಸ್ನಾನ ಮಾಡಿ ಇಸ್ತ್ರಿ ಮಾಡಿದ ಬ್ಲೌಸು ಸೀರೇನೆ ಉಡೋದು. ಮನೇಲೇ ಇದ್ರೂ ಲಕ್ಷಣವಾಗಿ ಜಡೆ ಹಾಕಿಕೊಂಡು ಕಣ್ಣಿಗೆ ಕಾಡಿಗೆ ಹಚ್ಚಿ, ಹಣೆಗೆ ಕುಂಕುಮವಿಟ್ಟೇ ಕೋಣೆಯಿಂದ ಆಚೆಗೆ ಕಾಲಿಡುವುದು. ಯಾವಾಗ ನೋಡಿದರೂ ಈಗೆಲ್ಲೋ ಹೊರಗೆ ಹೊರಟಿದ್ದಾಳೆ ಎನ್ನುವಂತೆ ಇರುತ್ತಾಳೆ. ಡ್ರೆಸ್ ಮಾಡಿಕೊಂದ್ದೇನೆ ಅಂತ ಕುಳಿತುಕೊಳ್ಳುವುದೇನು ಇಲ್ಲ. ನನ್ನ ಕೈಯಿಂದ ಕಿತ್ತುಕೊಂಡು ಕೆಲಸ ಮಾಡುತ್ತಾಳೆ...
ಆದರೆ ಈಗ... ಕೆಲಸವೇನು ಕಡಿಮೆ ಮಾಡಿಲ್ಲ. ಆದರೆ ಆ ಉತ್ಸಾಹ, ಆ ಅಲಂಕಾರ.
ಯಾಕಮ್ಮಾ ತಾಯಿ... ಬೆಂಡೋಲೆ, ಬಳೆ, ಸರ ಎಲ್ಲಾ ತೆಗೆದುಬಿಟ್ಟಿದ್ದೀಯಾ ? ಹಾಕ್ಕೊಮ್ಮ... ನೋಡಮ್ಮ, ನಾನು ಇವಳು ಹಳೆ ಕಾಲದವರು ನಿಜ. ಆದರೆ ನೀನು ಕುಂಕುಮ ಇಡಬಾರದು ಅಂತೇನು ಇಲ್ಲಮ್ಮ ಕಾವೇರಿ, ನೀನೇನಾದರೂ ಹೇಳಿದ್ಯಾ...?
ಇಲ್ಲ ಮಾವಯ್ಯಾ... ನಂಗೆ ಏನೂ ಬೇಡವಾಗಿದೆ
ದನಿ ಗದ್ಗದಿತವಾಯಿತು. ತಲೆತಗ್ಗಿಸಿದಳು ಗಿರಿಜ.
ಹರೀಶ ಹೋದಾಗ ಹತ್ತನೇ ದಿನದ ಶಾಸ್ತ್ರದಲ್ಲಿ ಒಂದನ್ನು ಕೂಡ ಮಾಡಲು ಬಿಡದೆ ತಮ್ಮ ಅನೇಕ ಬಂಧುಗಳು ಕೋಪಕ್ಕೆ ಈಡಾದ ಅತ್ತೆ ನಿಜಕ್ಕೂ ದೇವತಾ ಸ್ವರೂಪರೇ ಸರಿ.
ಹೇಳಿ, ಸರಿಯಾಗಿ ಹೇಳಿ ಅವಳಿಗೆ. ಒಳಗೆ ಹೋಗಬೇಡ ಬಾ ಇಲ್ಲಿ. ನನ್ನ ಪಕ್ಕ ಕುಳಿತುಕೋ. ನಾನು ಹೇಳಿ ಹೇಳಿ ಸಾಕಾಯಿತು. ನಿಮ್ಮ ಕೈಲಿ ಒಮ್ಮೆ ಹೇಳಿಸಬೇಕು ಅಂತಲೇ ಇದ್ದೆ. ಮಗ ಏನೋ ಹೋದ. ಸೊಸೆಯನ್ನು ಚೆನ್ನಾಗಿ ನೋಡೋಣ ಎಂದೇ ನನ್ನ ಸೋದರತ್ತೆ, ನಿಮ್ಮ ಅಕ್ಕ, ತಂಗಿ ಎಲ್ಲರ ನಿಷ್ಠೂರ ಕಟ್ಟಿಕೊಂಡೆ. ಇವಳು ನೋಡಿದರೆ ಬೆಂಡೋಲೆ, ಮೂಗುಬೊಟ್ಟು ಕೂಡ ತೆಗೆದುಬಿಟ್ಟಿದ್ದಾಳೆ.
ಅಮ್ಮಾ
ಸುಮ್ಮನಿರಮ್ಮ ಸಾಕು. ಆ ಸೌಭಾಗ್ಯ ಎಲ್ಲಾ ಹರೀಶನಿಂದ ಬಂದಿದ್ದು. ಅವನು ಹೋದ ಮೇಲೆ ಬೇಡ ಎಂದು ತೆಗೆದುಬಿಟ್ಟೆಯಲ್ಲಾ... ನಾವು ನಿಂಗೆ ಅತ್ತೆ ಮಾವ ಆಗಿದ್ದು, ಅವನಿಂದಲೇ ಅಲ್ಲವೇ... ನಮ್ಮನ್ನೂ ತೊರೆದು ಹೋಗುವೆಯಾ ಅವಿನಾಶ ನಿನ್ನ ಮಗನಾಗಿದ್ದು ಅವನಿಂದಲೇ ಅಲ್ಲವೇ... ಅವನನ್ನು ದೂರ ಮಾಡಿಲ್ಲ ಯಾಕೆ ?
ಜೋರಾಗಿ ಅಳಲಾರಂಭಿಸದರು ಕಾವೇರಮ್ಮ.
ಅಮ್ಮಾ, ಅಮ್ಮಾ, ಯಾಕ್ಹೀಗೆ ಮಾತಾಡ್ತೀರಾ ? ಹೆತ್ತ ತಂದೆ ತಾಯಿಗಳಿಗಿಂತ ಹೆಚ್ಚಾಗಿದ್ದಿರ. ನಿಮ್ಮನ್ನು ತೊರೆದು ನಾನೇನು ಮಾಡಲಮ್ಮ ?
ಕಾವೇರಮ್ಮನವರ ಮಡಿಲಲ್ಲಿ ಮುಖವಿಟ್ಟು ಜೋರಾಗಿ ರೋಧಿಸತೊಡಗಿದಳು ಗಿರಿಜ.
ಕೆಟ್ಟ ಮೇಲೆ ತೌರೇ ಗತಿ ಬಾಮ್ಮ
ಎಂದು ಹಿಂದೇಟು ಹಾಕಿಕೊಂಡೇ ಕರೆಯಲು ಬಂದಿದ್ದ ಅಪ್ಪನ ಮುಂದೆ ತಲೆ ತಗ್ಗಿಸಿಕೊಂಡು ನಿಂತಿದ್ದ ಆ ದಿನವನ್ನು ಹೇಗೆ ಮರೆಯಲು ಸಾಧ್ಯ?
ಮೂರು ಜನ ಸೊಸೆಯರ ನಡುವೆ ಮೆತ್ತಗಾಗಿರುವ ತಾಯಿ, ಹೆತ್ತ ತಂದೆಗೆ ಒಂದು ಗುಲಗಂಜಿಯಷ್ಟೂ ಗೌರವ ತೋರಿಸದ ಅಣ್ಣಂದಿರ ಮನೆಯಾದ ತನ್ನ ತೌರಿನಲ್ಲಿ ತನಗೆ, ತನ್ನ ಮಗುವಿಗೆ ಎಂತಹ ಸ್ವಾಗತ ಸಿಗಬುದೆಂದು ಊಹಿಸಬಲ್ಲಳು. ಆದರೆ ಹರೀಶನೇ ಹೋದ ಮೇಲೆ ಅತ್ತೆಯ ಮನಸ್ಸು ಹೇಗೋ... ಎಷ್ಟೋ ಕಥೆಗಳ ನೋಡಿದ್ದ , ಘಟನೆಗಳನ್ನು ಕೇಳಿದ್ದ ಗಿರಿಜೆಗೆ ‘ಹೋಗುವುದಿಲ್ಲ; ಇಲ್ಲೇ ಇರುತ್ತೇನೆ’ ಎಂದು ತನ್ನ ಮನೋಭೀಷ್ಟೆಯನ್ನು ಹೇಳಲು ಹಿಂಜರಿಕೆ.
ನೋಡಿ, ನನ್ನ ಸೊಸೆಯನ್ನು ತರಕಾರಿಯೋ, ಹೂವೋ, ಹಣ್ಣೋ ಅಲ್ಲ ಕೆಡಕ್ಕೆ ! ವಿಧಿಯಾಟಕ್ಕೆ ಅವಳೇನು ಮಾಡಲು ಸಾಧ್ಯ ?
ಪೇಪರ್ ಓದುತ್ತಿದ್ದ ಮಾವನವರು ಪೇಪರನ್ನು ಟೀಪಾಯ್ ಮೇಲೆ ಒಗೆದು ಎದ್ದು ನಿಂತರು.
ಹಾಗಲ್ಲ ರಾಯರೇ ! ... ಏನೋ ಸಂಪ್ರದಾಯ ... ನಮ್ಮ ಕೈಲೇನಿದೆ, ಕಳಿಸಿಕೊಡಿ
ಕೈ ಹಿಸುಕಿಕೊಂಡಿದ್ದರು ಅಪ್ಪ.
ನೋಡಿ, ನನ್ನದು - ನನ್ನ ಹೆಂಡತಿಯದು ಏನೂ ಇಲ್ಲ. ಗೆರಿಜೆಗೆ ಬಿಟ್ಟಿದೇವೆ. ಮಗನನ್ನು ಏನೋ ದೇವರು ಕಿತ್ತುಕೊಂಡ. ಆದರೆ ಅವನನ್ನು ಈ ಸೊಸೆ ಮೊಮ್ಮಗನಲ್ಲಿ ಕಾಣು ಎಂದು ಇವರನ್ನು ಬಿಟ್ಟು ಹೋಗಿದ್ದಾನೆ ಎಂದುಕೊಂಡಿದ್ದೇ. ಆದರೆ ಅವನು ಇಷ್ಟು ನಿರ್ದಯನಾಗಿ ಇವರನ್ನೂ ನಮ್ಮಿಂದ ದೂರ ಮಾಡುತ್ತಾನೆ ಎಂದುಕೊಂಡಿರಲಿಲ್ಲ. ಅವಳು ಬಂದರೆ...
ಮಾವಯ್ಯಾ, ನೀವು ಹೋಗೂ ಅಂದರೂ ಈ ಮನೆ ಬಿಟ್ಟು ನಿಮ್ಮನ್ನು ಅತ್ತೆಯನ್ನೂ ಬಿಟ್ಟು ನಾನೆಲ್ಲೂ ಹೋಗಲ್ಲ...
ಅಲ್ಲೇ ಆಡುತ್ತಿದ್ದ ಅವಿನಾಶನನ್ನು ಎತ್ತಿಕೊಂಡು ಒಳನಡೆದಿದ್ದಳು.
ಅಪ್ಪ ಮಾತನಾಡದೆ ಹೊರಟು ಹೋಗಿದ್ದರು.
ಕಾವೇರಮ್ಮನ ಮಡಿಲಿನಿಂದ ತಲೆಯೆತ್ತಿದಳು ಗಿರಿಜ.
ಅಮ್ಮಾ... ನನ್ನ ಏನು ಮಾಡು ಅಂತೀರಾ ?
ಹೀಗೆ ಎಷ್ಟು ದಿನ ಸೊರಗುತ್ತೀಯೇ ತಾಯಿ...?
ಅಮ್ಮಾ...
ನಿನ್ನ ದುಃಖ ನನಗೆ ಅರ್ಧವಾಗುತ್ತಮ್ಮ. ಹೀಗೆ ಮಂಕಾಗಿ ಕೂತಿದ್ದರೆ ಹೇಗಮ್ಮಾ ? ಅವಿನಾಶನ ಬಗ್ಗೆಯಾದರೂ ಯೋಚಿಸಬೇಡವೇ... ನೋಡ ಅದ್ಯಾವುದೋ ಕೋರ್ಸಿಗೆ ಸೇರಿಕೊಂಡಿದ್ದೀಯಲ್ಲ. ಅದನ್ನಾದರೂ ಪೂರಾ ಮಾಡಿಕೊಳ್ಳಬಾರದೇ ?
ಅದೆಲ್ಲಾ ಈಗ್ಯಾಕಮ್ಮಾ ?
ಈಗಲೇ ಅದರ ಅವಶ್ಯಕತೆ ಹೆಚ್ಚಮ್ಮ, ಯಾಕೆ ? ಎಷ್ಟೋ ಹೆಣ್ಣಮಕ್ಕಳಿಗೆ ಇಪ್ಪತ್ತೈದು ವರ್ಷಕ್ಕೆ ಇನ್ನೂ ಮದುವೆಯೇ ಆಗಿರುವುದಿಲ್ಲ. ಅವಿನಾಶನ್ನ ನಾನು ನೋಡಿಕೊಳ್ಳುತ್ತೇನೆ ; ನೀನು ಆ ಕೋರ್ಸ್ ಮುಗಿಸಿಕೋ
ಹೌದು ಗಿರಿಜಮ್ಮ, ನಿನ್ನ ಕಂಪ್ಯೂಟರ್ ಕೋರ್ಸ್ ಮುಗಿಸಿ ಯಾವ್ದಾದರೂ ಕೆಲಸಕ್ಕೆ ಸೇರಿಕೋ... ನೋಡು, ನಿನಗೆ, ನಿನ್ನ ಮಗನಿಗೆ ಎರಡು ಹೊತ್ತು ಊಟ ಹಾಕಲಿಕ್ಕೆ ನಂಗಾಗುವುದಿಲ್ಲ ಅಂತಲ್ಲ. ನಾಳೆಯ ಯೋಚನೆಯೂ ಮಾಡಬೇಕಮ್ಮ, ನಾಳೆ ಗಿರೀಶನ ಹೆಂಡ್ತಿ ಬರ್ತಾಳೆ, ಅಮೇರಿಕೆಯಲ್ಲಿರುವ ಸುರೇಶ ಕೂಡ ಇಲ್ಲೆಗೇ ಹಿಂತಿರುಗುತ್ತೇನೆ ಅಂತಾನೆ, ನಂತರ ಅವನ ಸಂಸಾರ... ನಾವಿರುವವರೆಗು ಸರಿ, ಆಮೇಲೆ...?
ಮಾವ ! ಸುರೇಶ, ಗಿರೀಶ ಇವರ ತಮ್ಮಂದಿರು, ನಿಮ್ಮ ಮಕ್ಕಳು...
ನಿಜಾಮ್ಮ, ಅವರು ಒಳ್ಳೆಯವರೇ, ಅಣ್ಣನ ಸ್ಥಾನ ಅತ್ತಿಗೆಯದು ಎನ್ನುವ ಉತ್ತಮ ಗುಣದವರು. ಆದರೆ ನೀನೂ ಧೀಮಂತನಾಗಿ ಅವರ ಮುಂದೆ ಇರಬೇಕಮ್ಮ. ನಿನ್ನ ಮಗ ನಾನು ಚಿಕ್ಕಪ್ಪಂದಿರ ಹಂಗಿನಲ್ಲಿದ್ದೀನಿ ಎಂದು ನೊಂದುಕೊಳ್ಳಬಾರದು. ತನ್ನ ಅಪ್ಪನಿಗೆ, ಅಂದರೆ ನನ್ನ ಮಗನಿಗೆ, ನನ್ನ ಹರೀಶನಿಗೆ ‘ಅಪ್ಪಾ... ನನ್ನ ಯಾಕೆ ತಬ್ಬಲಿ ಮಾಡಿಹೋದಿರಿ’ ಅಂತ ಶಾಪವಿಡಬಾರದಮ್ಮ
ಮಾವಯ್ಯಾ !
ಹೌದಮ್ಮ, ಈಗ ಜವಾಬ್ದಾರಿ ದುಪ್ಪಟವಾಗಿದೆ
ಅಮ್ಮಾ, ನಾನೇನು ಮಾಡ¯ಮ್ಮ, ನಂಗೆ ಯಾವುದರಲ್ಲೂ ಮನಸ್ಸೇ ಇಲ್ಲ ನಾನೇನಾದರೂ ಓದಬಲ್ಲೆ. ಕಲಿಯಬಲ್ಲೇ, ಸಾಧಿಸಬಲ್ಲೇ ಎಂಬ ವಿಶ್ವಾಸವೇ ನನಗೆ ಇಲ್ಲ. ಅಯ್ಯೋ! ... ಅವರ ಬದಲು ನಾನೇ ಹೋಗಬಾರದಿತ್ತೇ?
ಹಾಗಲ್ಲಮ್ಮ, ನಿನಗೆ ನೋವುಂಟು ಮಾಡಬೇಕು ಎಂದು ಅವರು ಈ ಮಾತು ಆಡುತ್ತಿಲ್ಲ; ಭವಿಷ್ಯದ ಬಗ್ಗೆ ಯೋಚಿಸಲಿ ಎಂದು ಹೇಳುತ್ತಿದ್ದಾರೆ, ಒಬ್ಬರ ಬದಲು ಒಬ್ಬರು ಹೋಗಬಹುದಿದ್ದರೆ ನಾನೇ ಹೋಗುತ್ತಿದ್ದೇನಮ್ಮ, ಓದು, ಮಾಡು ಅಂದರೆ ನಾಳೆಯಿಂದಲೇ ಹೋಗು ಅಂತಲೂ ಇಲ್ಲ, ನಿಧಾನವಾಗಿ ನೀನೇ ಈ ನಿಟ್ಟಿನಲ್ಲಿ ಯೋಚಿಸು. ನಿನಗೆ ನಾವು ಹೇಳಿದ್ದು ಸರಿ ತೋರಿದರೆ ಆ ಕೋರ್ಸಿಗೆ ಹೋಗು.
ಮಡಿಲಿನಲ್ಲಿ ಮುಖವಿಟ್ಟಿದ್ದ ಸೊಸೆಯ ಕೆನ್ನೆ ಸವರಿದರು ಕಾವೇರಮ್ಮ.
ನೀನು ಅವನೊಂದಿಗೆ ಇದ್ದಿದ್ದು ಕೇವಲ ನಾಲ್ಕು ವರ್ಷ. ಆದರೆ ನಾನು ಅವನನ್ನು ಹೆತ್ತ ತಾಯಿ. ಅವನನ್ನು ಸಾಕಿ ಸಲಹಿದವಳು. ಮೂವತ್ತೆರಡು ವರ್ಷದ ಮಗನನ್ನು ಕಳೆದುಕೊಂಡ ನನ್ನ ಹೊಟ್ಟೆಯ ಸಂಕಟ ತಾಯಿಯಾದ ನಿನಗೆ ಅರ್ಥವಾಗುವುದಿಲ್ಲವೇ... ಆದರೆ ನನ್ನ ಜೀವನ ಆರುತ್ತಿರುವ ಬತ್ತಿ ನನ್ನ ಬಗ್ಗೆ ನಾನು ಯೋಚಿಸುವುದಿಲ್ಲ. ನೀನು ಇನ್ನೂ ಬಾಳಿ ಬದುಕಬೇಕಾದವಳು. ಪುಟ್ಟ ಮಗುವಿನ ಜವಾಬ್ದಾರಿ ಹೊತ್ತವಳು. ನೋಡು, ಅವಿನಾಶ್ ಎದ್ದನೇನೋ... ಅರೆ ಬಂಗಾರ ! ನೋಡಿದ್ಯಾ, ಅವನೇ ಹೇಗೆ ರೂಮಿನಿಂದ ಹೊರಬಂದ. ಎದ್ದ ತಕ್ಷಣ ಅಳುವ ಬೇರೆ ಮಕ್ಕಳಂತಲ್ಲ ಈ ಬಂಗಾರ, ನಮ್ಮ ಹರೀಶಾನೂ ಹೀಗೆ ಅತ್ತಿದ್ದೇ ಇಲ್ಲ. ನಗುನಗುತ್ತಲೇ ಹೋಗಿ ನಮ್ಮನ್ನು ಅಳಿಸಿದ ಅಷ್ಟೇ...
ಸೆರಗಿನಿಂದ ಕಣ್ಣೊರಸಿಕೊಂಡು ಕೈ ಚಾಚಿಕೊಂಡು ತಮ್ಮ ತೆಕ್ಕೆಗೆ ಬಂದ ಮೊಮ್ಮಗನನ್ನು ಬಾಚಿ ತಬ್ಬಿಕೊಂಡು ಕೊಚಲೊಚನೆ ಮುತ್ತಿಟ್ಟರು ಕಾವೇರಮ್ಮ.
ಸರಿರಾತ್ರಿಯವರೆಗೂ ನಿದ್ದೆ ಬರದೆ ಹಾಸಿಗೆಯಲ್ಲಿ ಹೊರಳಾಡಿದಳು ಗಿರಿಜ. ‘ಹರೀಶ್... ಹರೀ... ನನ್ನ ಒಬ್ಬಂಟಿಯಾಗಿ ಬಿಟ್ಟು ಯಾಕೆ ಹೊರಟು ಹೋದಿರಿ... ಐದು ನಿಮಿಷದಲ್ಲಿ ಬರುತ್ತೀನಿ ಅಂದವರು... ಇನ್ನು ಬರಲಿಲ್ಲವೇಕೆ... ಇಲ್ಲ ಇಲ್ಲ... ಜೀವವಿಲ್ಲದೆ ಹೆಣವಾಗಿ ಬರಲಿಲ್ಲವೇ ಎಂದು ಹುಚ್ಚು ವಾದ ಮಾಡಬೇಡಿ ನನ್ನೊಂದಿಗೆ...’
ಆಸ್ಪತ್ರೆಯಲ್ಲಿ... ಕೈಕಾಲು, ತಲೆಗೆಲ್ಲಾ ಬ್ಯಾಂಡೇಜು ಹಾಕಿಕೊಂಡು... ಕೇರ್ನಲ್ಲಿ ಮಲಗಿದ್ದು ನನ್ನ ಹರೀಶನೇ ? ... ಜ್ಞಾನ ಬಂದಿದ್ದು ಎರಡೇ ನಿಮಿಷ. ಆಡಿದ್ದು ಎರಡೇ ಮಾತು... ನಿನಗೆ ಅನ್ಯಾಯ ಮಾಡಿದೆ ಗಿರಿಜ... ನೀನು ಇನ್ನೊಂದು ಮದುವೆ ಮಾಡಿಕೊ... ಅವರ ಸುತ್ತಾ ನಿಂತಿದ್ದ ನಾನು, ಅತ್ತೆ ಮಾವನವರೂ... ಮೂವರೂ ಹೇಳಿದ್ದು ಒಂದೇ ಮಾತು. ಹಾಗೆ ಮಾತಾಡಬೇಡಿ... ಬೇರೆ ಒಳ್ಳೆ ಮಾತಾಡಿ... ಬೇರೆ ಮಾತಾಡಲು ಅವರಿಗೆ ಜೀವ ಇದ್ದರೆ ತಾನೇ? ಆ ಹಾಳು ಲಾರಿ ಚಾಲಕನಿಗೆ ನಾನೇನೂ ಮಾಡಿದ್ದೇನೋ ಏನೋ... ಯಾವ ಜನ್ಮದಲ್ಲಿ ವಿಷವಿಟ್ಟಿದ್ದೆನೋ ಏನೋ... ಈ ಜನ್ಮದಲ್ಲಿ ನನ್ನ ಹರೀಶನನ್ನು ಕಿತ್ತುಕೊಂಡು... ನನ್ನ ಒಬ್ಬಂಟಿಗಳನ್ನಾಗಿ ಮಾಡಿಬಿಟ್ಟ.
ಸ್ಪೀಡಾಗಿ ಡ್ರೈವ್ ಮಾಡಿಕೊಂಡು ಯಾರಾದರೂ ಹೋಗುತ್ತಿದ್ದರೆ... ನೋಡು ಹೇಗೆ ಹೋಗ್ತಾನೆ. ಇಂಥವರು ಆಕ್ಸಿಡೆಂಟಾಗಿ ಸಾಯುತ್ತಾರೆ, ಸುಮ್ನೆ ಅಂಕಿ-ಅಂಶ ಮೇಲೇರಿಸುತ್ತಾರೆ ಎನ್ನುತ್ತಿದ್ದ ಇವರು, ಯಾವಾಗಲೂ ಹೆಲ್ಮೆಟ್ ಹಾಕಿಕೊಂಡು ನಿಧಾನವಾಗಿ ಡ್ರೈವ್ ಮಾಡುತ್ತಿದ್ದ ಇವರು... ಆಕ್ಸಿಡೆಂಟ್ನಲ್ಲಿ ಹೋಗಬೇಕೇ... ಗ್ರಹಚಾರವೆಂದರೆ
ಇದೆಯೇ ?
ಈಗ ನಾನು... ನಾನು ಏನು ಮಾಡಬೇಕು ? ಅತ್ತ ತವರು ಮನೆ ಇಲ್ಲ, ಅಲ್ಲಿ ಹೋಗಿರಲು ಸಾಧ್ಯವೇ ಇಲ್ಲ... ಇತ್ತದೇವರಂಥ ಅತ್ತೆ, ಮಾವ ಮುದ್ದಾದ ಮಗು ಬದುಕಬೇಕು ಎಂದು ಆಸೆ ಹುಟ್ಟಿಸುವ ಅವಿನಾಶ್...’
ಪಕ್ಕದಲ್ಲೇ... ಮಂದಸ್ಮಿವಾಗಿ ಮಲಗಿದ್ದ ಅವಿನಾಶ್ನ ಕೆನ್ನ ಸವರಿದಳು. ‘ಹೌದು, ತಾನು ಬದುಕಬೇಕು. ಅವಿನಾಶ್ನ ಹೊಣೆ ನನ್ನ ಮೇಲಿದೆ’.
ಚಿಕ್ಕಪ್ಪಂದಿರ ಹಂಗಿನ ಮೇಲೆ ಇವನು ಬೆಳೆಯಬಾರದು. ಈಗೇನೋ ಸರಿಯಾಗಿದೆ. ಮೈದುನಂದಿರು... ಸುರೇಶ, ನಾನು ಅವನನ್ನು ನೋಡಿಯೇ ಇಲ್ಲ. ಹೇಗೋ ಏನೋ ತಿಳಿಯದು. ಮುಂದಿನ ವರ್ಷ ಬರುತ್ತಾನೆ. ಮದುವೆಯಾಗಿ ಹೋಗಲಿಕ್ಕೆ... ನಂತರ ಇನ್ನೈದು ವರ್ಷ ಬಿಟ್ಟುಕೊಂಡು ಇಲ್ಲಿಗೇ ಬರುತ್ತಾನೆ. ಅವನು, ಅವನ ಹೆಂಡತಿಯೂ ಇಲ್ಲಿಯೇ ಇರುತ್ತಾರೆ.
ಗಿರೀಶ, ಸುರೇಶನ ಮದುವೆ ಆಗುವುದೇ ಕಾಯುತ್ತಿದ್ದಾನೆ, ಆವತ್ತು ನಮಗೆ ಸಿಕ್ಕಿಬಿದ್ದಿರಲಿಲ್ಲವೇ, ಆ ಲತಾಳ ಜೊತೆ ಪಾರ್ಕಿನಲ್ಲಿ, ಅಣ್ಣನ ಮದುವೆಯಾದ ತಕ್ಷಣ ಅವನು ಆ ಹುಡುಗಿಯನ್ನು ಮದುವೆಯಾಗುತ್ತಾನೆ. ಎಲ್ಲರೂ ಒಳ್ಳೆಯವರೇ. ಆದರೆ ಅವರವರ ಸಂಸಾರ ದೊಡ್ಡದಾಗುತ್ತಾ ನಾನು, ಅವಿನಾಶ್ ಈ ಮನೆಗೆ ಪರಕೀರಯರಾದರೆ ಆಶ್ಚರ್ಯವೇನೂ ಇಲ್ಲ.
"ನೋಡು ಗಿರಿಜ... ಸುರೇಶನೂ ಇಂಜಿನಿಯರ್ರೋ, ಡಾಕ್ಟರ್ರೋ ಆಗಿರೋ ಹುಡುಗಿ ಬೇಕು ಅಂತ ಬರೆದಿದ್ದಾನೆ. ಗಿರೀಶನ ಜೊತೆ ಓಡಾಡುತ್ತಿದೆಯಲ್ಲಾ ಆ ಹುಡುಗಿ ಲತಾ, ಅವಳೂ ಗಿರೀಶನ ಹಾಗೆ ಇಂಜಿನೀಯರ್ರು... ಅವನ ಫ್ಯಾಕ್ಟರೀಲೇ ಕೆಲಸ. ಹರೀಶ ಇದ್ದಿದ್ರೆ, ಆ ಮಾತೆ ಬೇರೆ. ಈಗ ಅವನಿಲ್ಲದೆ ನೀನು ಹೊರಗೆ ಕೆಲಸವೂ ಮಾಡದೆ ಮನೆಯಲ್ಲಿದ್ದರೆ, ಈ ಮನೆಗೆ ಹಿರಿಸೊಸೆಯಾಗಿ ಇರುವುದಿಲ್ಲ. ನೀನು ಅವರಿಗೆಲ್ಲಾ ಅಡಿಗೆಯವಳಾಗಿಬಿಡುತ್ತಿ.