Swarnamrugha
By K.T. Gatti
()
About this ebook
M. A. (English), B.Ed. from the University of Kerala; L.T.C.L. Diploma from Trinity College, London; A.C.P. Diploma from the College of Preceptors, Oxford; Taught English for 15 years in India and 9 years in Ethiopia; Published four books in the teachingof English language, grammar and Phonetics; Published in Kannada 45 novels, 3 anthologies of short stories, 4 anthologies of essays, 2 anthologies of poems, 18 plays, and a travelogue; Published in the Tulu language a novel and a collection of poems translated from English.
Read more from K.T. Gatti
Parakaya Pravesha Rating: 0 out of 5 stars0 ratingsNiranthara Rating: 0 out of 5 stars0 ratingsNanna Premada Hudugi Rating: 4 out of 5 stars4/5Mane Rating: 2 out of 5 stars2/5Paridhi Rating: 0 out of 5 stars0 ratingsAnanthara Rating: 0 out of 5 stars0 ratingsPunarapi Jananam Rating: 4 out of 5 stars4/5Kaarmugilu Rating: 0 out of 5 stars0 ratingsHei Kaapurusha Rating: 0 out of 5 stars0 ratingsTheera Rating: 0 out of 5 stars0 ratingsKempu Kalave Rating: 0 out of 5 stars0 ratingsKarmanye Vadhikaraste Rating: 0 out of 5 stars0 ratingsMooru Naatakagalu Rating: 0 out of 5 stars0 ratingsIthihaasada Mogasaaleyalli Rating: 5 out of 5 stars5/5Kumbarana Pitilu Rating: 0 out of 5 stars0 ratingsKoopa Rating: 0 out of 5 stars0 ratingsMrityorma Amritam Gamaya Rating: 0 out of 5 stars0 ratingsKurudu Kaanchaana Rating: 0 out of 5 stars0 ratingsAbhramana Rating: 0 out of 5 stars0 ratings
Related to Swarnamrugha
Related ebooks
Inchara Bandalu Inchara Rating: 0 out of 5 stars0 ratingsHanigavithegalu Rating: 0 out of 5 stars0 ratingsThe Diary of Mrs.Sharada Rating: 5 out of 5 stars5/5Vaarasudhara Rating: 0 out of 5 stars0 ratingsSamadhana Bhaaga 1 Rating: 0 out of 5 stars0 ratingsYashassina Rahasyagalu Rating: 3 out of 5 stars3/5Tamasoma Jyothirgamaya Rating: 0 out of 5 stars0 ratingsBest of Lovelavike Rating: 5 out of 5 stars5/5Solu Geluvina Hadiyalli Rating: 0 out of 5 stars0 ratingsDhuddu Maaduvudu Hege? Rating: 0 out of 5 stars0 ratingsJeevana Maadhurya Rating: 5 out of 5 stars5/5Devare Ninna Kula Yavudu? Rating: 0 out of 5 stars0 ratingsRamanakathe Rating: 3 out of 5 stars3/5Kempu Kalave Rating: 0 out of 5 stars0 ratingsAnanthara Rating: 0 out of 5 stars0 ratingsSankole Rating: 0 out of 5 stars0 ratingsBuddha Matthu Parampare Rating: 4 out of 5 stars4/5Thushara Rating: 0 out of 5 stars0 ratingsKaarmugilu Rating: 0 out of 5 stars0 ratingsVishwam Shubham Mangalam Rating: 0 out of 5 stars0 ratingsMooru Naatakagalu Rating: 0 out of 5 stars0 ratingsSecond Innings Rating: 0 out of 5 stars0 ratingsMalegaalada Ondu Sanje Rating: 5 out of 5 stars5/5Idannu Bayasiralilla (Best of UG) Rating: 0 out of 5 stars0 ratingsPunarapi Jananam Rating: 4 out of 5 stars4/5Jothe Jotheyali Rating: 4 out of 5 stars4/5Hongeya Neralu Rating: 4 out of 5 stars4/5Success Through Positive Thinking(Kannada): It is half empty or half full….is the way you look at it Rating: 4 out of 5 stars4/5Kengulabi Rating: 0 out of 5 stars0 ratingsSurya Vamsam Rating: 0 out of 5 stars0 ratings
Reviews for Swarnamrugha
0 ratings0 reviews
Book preview
Swarnamrugha - K.T. Gatti
http://www.pustaka.co.in
ಸ್ವರ್ಣಮೃಗ
Swarnamrigha
Author :
ಕೆ. ಟಿ. ಗಟ್ಟಿ
K T Gatti
For more books
http://www.pustaka.co.in/home/author/kt-gatti
Digital/Electronic Copyright © by Pustaka Digital Media Pvt. Ltd.
All other copyright © by Author.
All rights reserved. This book or any portion thereof may not be reproduced or used in any manner whatsoever without the express written permission of the publisher except for the use of brief quotations in a book review.
ಕೆ. ಟಿ. ಗಟ್ಟಿ
ಸ್ವರ್ಣಮೃಗ
ಲೇಖಕನ ಮಾತು
1983ರಲ್ಲಿ ಮೊದಲು ಪ್ರಕಟವಾದ `ಸ್ವರ್ಣಮೃಗ’ ಕಾದಂಬರಿಯ ಹೆಚ್ಚಿನ ಪ್ರತಿಗಳು ಒಂದು ವಿಲಕ್ಷಣವಾದ ಕಾರಣದಿಂದ ಸಮರ್ಪಕವಾಗಿ ವಿತರಣೆಗೊಳ್ಳದೆ ಕರ್ನಾಟಕದ ಯಾವುದೋ ಒಂದು ಪ್ರದೇಶದ ಕೆಲವೇ ಓದುಗರನ್ನು ಮಾತ್ರ ತಲಪಿತು. `ಸ್ವರ್ಣಮೃಗ’ದ ಬರವಣಿಗೆಯಿಂದ ನನಗಾದ ಲಾಭ ಎಂದರೆ ಆ ದೇಶದಲ್ಲಿ ಸಂಚರಿಸಿ ಗಳಿಸಿದ ಅನುಭವ ಮಾತ್ರ.
ಈ ಕಾದಂಬರಿಯ ಕತೆಗೆ ನಾನು 1979ರಲ್ಲಿ ನೈಜೀರಿಯಾದಲ್ಲಿ ಒಂದು ತಿಂಗಳ ಕಾಲ ಪ್ರವಾಸ ಮಾಡಿದ ಹಿನ್ನೆಲೆ ಇದೆ. ಇದರಲ್ಲಿ ಬರುವ ಪಾತ್ರಗಳು ನನ್ನ ಸೃಷ್ಟಿಯಾದರೂ ಅವುಗಳಿಗೂ ನಿಜ ವ್ಯಕ್ತಿಗಳೇ ಆಧಾರ. ಈ ಪಾತ್ರಗಳಲ್ಲಿ ಅವರು ತಮ್ಮನ್ನು ಗುರುತಿಸಿಕೊಳ್ಳಲಾಗದಷ್ಟು ಫಿಕ್ಶನ್ ಇದರಲ್ಲಿ ಸೇರಿಕೊಂಡಿದೆ. ಮುಖ್ಯವಾಗಿ, ಇದು ಭಾಗಶಃ ಆಫ್ರಿಕದ ಒಂದು ದೊಡ್ಡ ದೇಶದ ಸಾಮಾಜಿಕ ಸ್ಥಿತಿಯ ಮತ್ತು ಅಲ್ಲಿ ವಾಸಿಸುತ್ತಿದ್ದ ಭಾರತೀಯರ ಬದುಕಿನ ಕತೆ ಕೂಡ ಹೌದು.
-ಕೆ. ಟಿ. ಗಟ್ಟಿ
ಸ್ವರ್ಣಮೃಗ
ಹೊರೆಯಾಳು ಸೂಟುಕೇಸನ್ನು ಕಾರಿನ ಬೂಟಿನಲ್ಲಿ ಇರಿಸಿದ. ಸುರೇಶ ಬೂಟಿಗೆ ಬೀಗಹಾಕಿ ಬಂದು ಎದುರು ಸೀಟಿನ ಬಾಗಿಲನ್ನು ತೆರೆದು ಶಾಲಿನಿಯ ಕಡೆಗೆ ಅಮಿತವಾದ ಆನಂದ ಮತ್ತು ಅಭಿಮಾನ ತುಂಬಿದ ದೃಷ್ಟಿಯಿಂದ ನೋಡಿದ. ಅವಳು ಗಂಡನನ್ನು ನೋಡಿ ಮುಗುಳ್ನಕ್ಕಳು. ಆ ಮುಗುಳ್ನಗುವಿನಲ್ಲಿ ಹೃದಯವನ್ನು ತುಂಬಿ ಉಕ್ಕುತ್ತಿರುವ ಹರ್ಷದ ಅಲೆಗಳು ಕಾಣಿಸಿದುವು. ಅವಳು ಕಾರನ್ನೇರಿ ಕುಳಿತೊಡನೆ, ಸುರೇಶ ಚಾಲಕನ ಸ್ಥಾನದಲ್ಲಿ ಕುಳಿತು ಶಾಲಿನಿಯ ಬಲಹಸ್ತವನ್ನು ಮುಷ್ಟಿತುಂಬಾ ಹಿಡಿದು ಬಲವಾಗಿ ಹಿಂಡಿದ. ಅವಳ ನೀಳವಾದ ಕಣ್ಣುಗಳಲ್ಲಿ ಸುಖದ ಕಣ್ಣೀರು ತುಂಬಿಕೊಂಡಿತು. ಅವಳು ಉದ್ವೇಗವನ್ನು ಅದುಮಿ ಹಿಡಿದುಕೊಂಡು ಸೆರಗಿನ ಕೊನೆಯಿಂದ ಕಣ್ಣೊರಸಿಕೊಂಡಳು. ಹಸ್ತದಲ್ಲಿ ಅವನು ಉಂಟುಮಾಡಿದ ನೋವು ಒಂದಪೂರ್ವವಾದ ಸುಖಾನುಭವವಾಗಿತ್ತು.
ನೀಲಿ ರೇಶಿಮೆಯ ಸೀರೆ ಮತ್ತು ಅದೇ ಬಣ್ಣದ ರವಿಕೆಯನ್ನು ತೊಟ್ಟು ತೆಳ್ಳನೆಯ ಕೋಮಲವಾದ ದೇಹದಲ್ಲಿ ಬಳುಕುತ್ತಾ ದೇವತೆಯಂತೆ ಅವಳು ವಿಮಾನದಿಂದ ಇಳಿದು ಬರುತ್ತಿರುವಾಗ ನೂರಾರು ಕಣ್ಣುಗಳು ರೆಪ್ಪೆಬಡಿಯದೆ ನೋಡಿರಬಹುದೆಂದುಕೊಂಡ ಸುರೇಶ. ಅವನ ಹೃದಯ, ಹೆಮ್ಮೆಯಿಂದ, ಅಭಿಮಾನದಿಂದ ಹಿಗ್ಗಿತು. ಮುಗುಳ್ನಕ್ಕು ಕಾರನ್ನು ಚಲಾಯಿಸಿದ.
ಕಂದು ಬಣ್ಣದ ಮರ್ಸಿಡಿಸ್ ಕಾರು ಸದ್ದೇ ಇಲ್ಲವೆಂಬಂತೆ ನೀರಿನಲ್ಲಿ ತೇಲುವಂತೆ ನಯವಾದ ಕಾಂಕ್ರೀಟ್ ರಸ್ತೆಯಲ್ಲಿ ಹರಿಯಿತು. ಏರ್ಪೋರ್ಟಿನ ಮುಂದಿನ ರಸ್ತೆಯನ್ನು ದಾಟುವವರೆಗೆ ಇಬ್ಬರ ಬಾಯಿಯಿಂದ ಒಂದು ಮಾತೂ ಹೊರಡಲಿಲ್ಲ. ಶಾಲಿನಿಯಂತು ಮಾತಾಡುವ ಸ್ಥಿತಿಯಲ್ಲೇ ಇದ್ದಂತಿರಲಿಲ್ಲ.
ಸುರೇಶನೇ ಪ್ರಯತ್ನದಿಂದ ಎಂಬಂತೆ,
ಪ್ರಯಾಣ ಹೇಗಿತ್ತು ಶಾಲಿ?’ ಎಂದು ಕೇಳಿದ.
`ಚೆನ್ನಾಗಿತ್ತು’ ಅವಳು ಅವನ ಮುಖವನ್ನು ದಿಟ್ಟಿಸಿ ಬಹಳ ಮೃದುವಾದ ದನಿಯಲ್ಲಿ ನುಡಿದಳು. ಶ್ರುತಿ ಮಾಡಿರಿಸಿದ ವೀಣೆ ಧ್ವನಿಸಿದಂತೆ.
`ಹೇಗಿದ್ದಿ?’ ಅವನು ದೊಡ್ಡದಾಗಿ ಮುಗುಳ್ನಕ್ಕು ಕೇಳಿದ.
`ಚೆನ್ನಾಗಿದ್ದೇನೆ’ ಈಗ ಅವಳ ಮಲ್ಲಿಗೆಯ ಮೊಗ್ಗುಗಳನ್ನು ಪೋಣಿಸಿದಂತಿದ್ದ ಹಲ್ಲುಗಳು ಹೊಳೆದುವು. ಆ ನಗುವಿನಲ್ಲಿ ತೆಳ್ಳಗಿನ ನೀಳವಾದ ಮೂಗು ಮತ್ತಷ್ಟು ಮೋಹಕವಾಗಿ ಕಾಣಿಸಿತು.
ಕಾರು ಮುರ್ತಾಲ ಮಹಮ್ಮದ್ ಏರ್ಪೋರ್ಟಿನ ಮುಂದಿನ ಮಾರ್ಗದಿಂದ ಇಕೇಜ ರೋಡಿಗಿಳಿಯಿತು. ಸುರೇಶ ಶಾಲಿನಿಯ ಕಡೆಗೆ ನೋಡಿದಾಗ ಅವಳ ಕಣ್ಣುಗಳು ಸಾಲುಗಟ್ಟಿ ಹರಿಯುತ್ತಿದ್ದ ನಾನಾ ಬಗೆಯ ವಾಹನಗಳ ಮೇಲಿದ್ದರೂ ಅವಳ ಮನಸ್ಸು ಮಾತ್ರ ಎಲ್ಲೋ ಅದೃಶ್ಶ ಪ್ರಪಂಚವೊಂದರಲ್ಲಿ ಅಲೆಯುತ್ತಿದ್ದಂತೆ ತೋರಿತು.
ಇಕೇಜ ಕಾರು ಇಬಾದನ್ ಎಕ್ಸ್ಪ್ರೆಸ್ವೇ ಪ್ರವೇಶಿಸಿತು.
ಸುರೇಶ ಟೇಪ್ರೆಕಾರ್ಡರಿನ ಗುಂಡಿಯನ್ನೊತ್ತಿದ. ಸ್ಟಿರಿಯೋ ಸಂಗೀತದ ಧ್ವನಿ ನವಿರಾಗಿ ಹೊಮ್ಮಿತು. ಸುರೇಶ ಧ್ವನಿಯನ್ನು ಅಧಿಕಗೊಳಿಸಿದ.
ವಾದ್ಯಧ್ವನಿಯಿಂದಲೇ ಮುಂದೆ ಬರಲಿರುವ ಹಾಡಿನ ಸಾಲುಗಳನ್ನು ನೆನಪಿಗೆ ತಂದುಕೊಂಡ ಶಾಲಿನಿ ಮುಗುಳ್ನಕ್ಕು ಸ್ವಲ್ಪ ಆಶ್ಚರ್ಯದಿಂದಲೇ ಗಂಡನ ಮುಖ ನೋಡಿದಳು. ಅವನು ಮಾರ್ಗದ ಮೇಲೆ ದೃಷ್ಟಿಯಿರಿಸಿದ್ದರೂ ಅವಳು ಅವನ ಕಡೆಗೆ ತಿರುಗಿದುದನ್ನು ಗಮನಿಸಿಕೊಂಡು ಅವಳ ಕಡೆಗೆ ನೋಡದೇನೇ ಮುಗುಳ್ನಕ್ಕ.
ಹಾಡು ಧ್ವನಿಸಿತು:
`ಸ್ವಾಗತವು ನಿನಗೆ-ನನ್ನೆದೆಯ ಗುಡಿಯೊಳಗೆ’
ಪಲ್ಲವಿ ಮುಗಿದಾಗ ಸುರೇಶ ಶಾಲಿನಿಯ ಮುಖ ನೋಡಿದ. ಅವಳು ಸಶಬ್ದವಾಗಿ ನಸುನಕ್ಕಳು. ಕೆನ್ನೆಗಳು ಕೇಪೇರಿದುವು. ಸುರೇಶ ಪುಲಕಿತನಾದ. ಅವಳನ್ನು ಅಲ್ಲೇ ಆಗಲೇ ಅಪ್ಪಿಕೊಳ್ಳಬೇಕೆನಿಸಿತು. ಅವನು ಆಕ್ಸಿಲೇಟರನ್ನು ಅದುಮಿದ.
`ಎಲ್ಲಿ ಸಿಕ್ಕಿತು ಈ ಹಾಡು ನಿಮಗೆ ?’ ಶಾಲಿನಿ ಕಣ್ಣರಳಿಸಿ ಕೇಳಿದಳು. ಅವಳ ಗಲ್ಲದಲ್ಲಿ ಹೌದೊ ಅಲ್ಲವೊ ಎಂಬಂತೆ ಗುಳಿ ಮೂಡಿತು.
ಇಲ್ಲಿ ಎಲ್ಲಾ ಸಿಗುತ್ತೆ’ ಸುರೇಶನೆಂದ.
`ಕನ್ನಡ ಹಾಡು ?’
`ಇಲ್ಲಿ ಎಲ್ಲಾ ಸಿಗುತ್ತೆ’ ಸುರೇಶನೆಂದ.
`ಇಲ್ಲ ಶಾಲಿ, ಕನ್ನಡ ಸಿಗೋಲ್ಲ. ಬೆಂಗ್ಳೂರಿನಿಂದ ಪ್ರದೀಪ್ ಎರಡು ಕ್ಯಾಸೆಟ್ ಕಳಿಸಿಕೊಟ್ಟಿದ್ದೆ’
`ಪರವಾಗಿಲ್ಲ, ಒಳ್ಳೆಯ ಸಿಲೆಕ್ಶನ್’ ಶಾಲಿನಿಯೆಂದಳು. ಅವಳ ಕೆನ್ನೆಗಳು ಕೆಂಪೇರಿದ್ದನ್ನು ಅವನು ಗಮನಿಸಿದ.
ಮದುವೆಯಾದ ಮೇಲೆ ಮುಂಬಯಿಯಲ್ಲಿ ಕಳೆದ ಒಂದು ತಿಂಗಳು ಕನಸೇ ಆಗಿತ್ತು. ಮತ್ತೀಗ ನಾಲ್ಕು ತಿಂಗಳ ಮೇಲೆ ಅವಳು ನವವಧುವಿನಂತೆಯೇ ತೋರಿದಳು.
`ಸಿನಿಮಾ ಎಲ್ಲಿ ನೋಡಿದೆವು ನೆನಪಿದೆಯೆ ?’ ಸುರೇಶ ಕೇಳಿದ.
`ಹೂಂ ನೆನಪಿದೆ, ಮಂಗ್ಳೂರಿನಲ್ಲಿ’
`ನಾನು ಬಹಳ ಮೆಚ್ಚಿಕೊಂಡ ಹಾಡು. ಈ ಹೊತ್ತಿನಲ್ಲಿ ಹಾಕಬೇಕೆಂದೇ ತರಿಸಿಕೊಂಡಿದ್ದೇನೆ’ ಸುರೇಶ ತುಂಟನಗು ನಕ್ಕ.
`ತುಂಬಾ ಘಾಟಿಯಿದ್ದೀರಿ ನೀವು !’ ಶಾಲಿನಿಯೆಂದಳು. ಅವಳ ನಸುನಗು ಅವನ ಎದೆಯೊಳಗೆ ಕಚಗುಳಿಯಿಟ್ಟಿತು.
ಸ್ವಲ್ಪ ಹೊತ್ತಿನ ಬಳಿಕ ಶಾಲಿನಿ ಹೊರಗಡೆ ನೋಡಿದಾಗ ಕಾರಿನ ವೇಗ ಗಮನಕ್ಕೆ ಬಂದು ವೇಗಸೂಚಿಯನ್ನು ನೋಡಿದಳು. ನೂರಿಪ್ಪತ್ತು ಕಿಲೋಮೀಟರ್ ಸೂಚಿಸಿತು.
ಶಾಲಿನಿ ಗಾಬರಿಗೊಂಡು,
`ಏನ್ರೀ ಇದು ಇಷ್ಟು ಸ್ಪೀಡು ?’ ಎಂದಳು. ಒಮ್ಮೆಲೇ ಅವಳ ಅಳುಕು, ಸಂಕೋಚ ಮಾಯವಾಗಿಬಿಟ್ಟಂತೆ ತೋರಿತು.
`ಇಲ್ಲಿ ಇದು ಸಾಮಾನ್ಯ ಸ್ಪೀಡು ಶಾಲಿ. ಹಿಂದೆ ಮುಂದೆ ನೋಡು’ ಸುರೇಶನೆಂದ.
ಶಾಲಿನಿ ಪುನಃ ಹೊರನೋಡಿದಳು.
ಎಡಗಡೆಯ ವಿಶಾಲವಾದ ಎಕ್ಸ್ಪ್ರೆಸ್ವೇಯಲ್ಲಿ ಲೇಗೋಸಿಗಭಿಮುಖವಾಗಿ ಚಲಿಸುತ್ತಿರುವ ಕಾರುಗಳು, ಬಸ್ಸುಗಳು ಮತ್ತು ಟ್ರಕ್ಕುಗಳನ್ನು ನೋಡಿದಳು. ಅವುಗಳ ವೇಗವನ್ನು ನೋಡಿ ಅವಳಿಗೆ ದಿಗ್ಭ್ರಮೆಯುಂಟಾಯಿತು. ತಮ್ಮ ದಾರಿಯಲ್ಲಿ ತಮ್ಮ ಕಾರನ್ನೂ ಹಿಂದೆ ಹಾಕಿ ಮುಂದೆ ಹಾಯುತ್ತಿದ್ದ ವಾಹನಗಳನ್ನು ನೋಡಿದಳು.
ಪುನಃ ವೇಗಸೂಚಿಯನ್ನು ನೋಡಿದಾಗ ಅದು ನೂರಮೂವತ್ತು ಕಿಲೋಮೀಟರ್ ಸೂಚಿಸಿತು.
ಶಾಲಿನಿ ಮತ್ತುಷ್ಟು ಗಾಬರಿಯಿಂದ,
`ಬೇಡ್ರಿ, ಸ್ಪೀಡು ಕಡಿಮೆ ಮಾಡಿ ನನಗೆ ಭಯ !’ ಎಂದಳು.
ಅವಳ ಮುಖದ ಮೇಲಿನ ಗಾಬರಿಯನ್ನು ಕಂಡ ಸುರೇಶ ವೇಗವನ್ನು ನಿಧಾನವಾಗಿ ನೂರಹತ್ತು ಕಿಲೋಮೀಟರಿಗಿಳಿಸಿದ.
ಅದೂ ಹೆಚ್ಚೇ ಅನಿಸಿತು ಶಾಲಿನಿಗೆ.
ಈ ಕಡೆ ಎಕ್ಸ್ಪ್ರೆಸ್ವೇ ಜೋಡುರಸ್ತೆಗಳು, ಆ ಕಡೆ ಇಕ್ಸ್ಪ್ರೆಸ್ವೇ ಜೋಡುರಸ್ತೆಗಳು. ಉಬ್ಬು ತಗ್ಗಿಲ್ಲದ ರಸ್ತೆಯ ಕಾಂಕ್ರೀಟು ನೆಲ. ಎರಡೂ ದಿಕ್ಕಿನಲ್ಲೂ ವಾಹನಗಳು ಒಂದರ ಹಿಂದೊಂದು ಶರವೇಗದಲ್ಲಿ ಓಡುತ್ತಿದ್ದವು.
`ಇಲ್ಲಿ ಎಲ್ರೂ ಇಷ್ಟೇ ವೇಗದಲ್ಲಿ ಹೋಗ್ತಾರ ?’ ಅವಳು ಕೇಳಿದಳು,
ಇಷ್ಟೇ ಏನು ? ನೂರೈವತ್ತು ನೂರರ್ವತ್ತು ಕಿಲೋಮೀಟರ್ ವೇಗದಲ್ಲಿ ಹೋಗ್ತಾರೆ. ನೂರಿಪ್ಪತ್ತಕ್ಕಿಂತ ಕಡಿಮೆ ವೇಗದಲ್ಲಿ ಯಾರೂ ಯಾವ ವಾಹನವನ್ನೂ ಓಡಿಸೋಲ್ಲ’
`ಹೌದೆ !’ ಶಾಲಿನಿ ವಿಸ್ಮಯದಿಂದ ಉದ್ಗರಿಸಿದಳು.
ರಸ್ತೆ ಕೂಡ ಹಾಗಿದೆ ನೋಡು ! ಇಂಡಿಯದ ನಮ್ಮೂರ ರಸ್ತೆಗಳಲ್ಲಿ ಇಷ್ಟು ವೇಗದಿಂದ ಓಡಿಸಿದರೆ ದೇಹದ ಎಲುಬು ಸಂದುಗಳೆಲ್ಲಾ ಕಳಚಿಹೋಗಬಹುದು. ನೂರು ಕಿಲೋಮೀಟರ್ ಹೋಗುವಷ್ಟರಲ್ಲಿ ಕಾರಿನ ಸಂದುಗಳೂ ಕದಲಿಹೋಗಬಹುದು. ಇವರು ಪೆಟ್ರೋಲನ್ನು ಸಿಮೆಂಟು ಮಾಡಿ ಹೊಯ್ದುಬಿಟ್ಟಿದ್ದಾರೆ. ಟಯರುಗಳು ನೆಲಕ್ಕೆ ತಾಗುತ್ತಿರುವುದು ತಿಳಿಯಬಾರದು ಅನ್ನೋ ಹಾಗೆ ಮಾಡಿದ್ದಾರೆ,’ ಎಂದು ಸುರೇಶ, `ನೋಡು ನೋಡು’ ಎಂದು ಮಾರ್ಗದ ಬಲಪಕ್ಕದಲ್ಲಿ ಅಡಿಮಗುಚಿಬಿದ್ದ ಭೀಮಾಕಾರದ ಪೆಟ್ರೋಲ್ ಟ್ಯಾಂಕರ್ ಮತ್ತು ಅದರ ಟ್ರೈಲರನ್ನು ತೋರಿಸಿದ.
ಟ್ಯಾಂಕರ್ ಒಡೆದು ಪೆಟ್ರೋಲು ಹರಿದು ಹೋಗುತ್ತಿತ್ತು. ಸುತ್ತಲೂ ಜನ ಸೇರಿದ್ದರು.
ಶಾಲಿನಿ ಮಾತೆತ್ತುವ ಮೊದಲೇ ಸುರೇಶ ಹೇಳಿದ,
`ಇಂಥ ಆಕ್ಸಿಡೆಂಟುಗಳು ಇಲ್ಲಿ ಸರ್ವೇಸಾಮಾನ್ಯ. ಅಲ್ಲಿ ನೋಡು’ ಎಂದು ಮಾರ್ಗದ ಪಕ್ಕದಲ್ಲಿ ನಜ್ಜುಗುಜ್ಜಾಗಿ ಬಿದ್ದಿದ್ದ ಕಾರೊಂದನ್ನು ತೋರಿಸಿದ.
ಶಾಲಿನಿ ಭಯದಿಂದ ಒಮ್ಮೆ ನಡುಗಿದಳು. ಅವಳ ಮುಖದ ಮೇಲಿನ ಭಾವವನ್ನು ಸುರೇಶ ಗಮನಿಸಿದ. ಕೆಂಪಾಗಿದ್ದ ಅವಳ ಕೆನ್ನೆಗಳಲ್ಲಿ ಬಿಳಿ ಛಾಯೆ ಮೂಡಿಕೊಳ್ಳುತ್ತಿರುವಂತೆ ತೋರಿತು.
ಕನಸಿನಂತೆ ಕಳೆದುಹೋದ ಒಂದು ತಿಂಗಳ ಅವಧಿಯಲ್ಲಿ ಸುರೇಶ ಶಾಲಿನಿಯ ಕುರಿತು ಅಷ್ಟಿಷ್ಟು ಅರಿತುಕೊಂಡಿದ್ದ. ಅವಳ ದೇಹದಷ್ಟೇ ಕೋಮಲವಾದುದು ಅವಳ ಮನಸ್ಸು. ಯಾರೊಬ್ಬರಿಗೂ ನೋವು ಮಾಡದಂಥ ನಡೆನುಡಿ. ಕಡಿಮೆ ಮಾತು. ಬಹುಮಟ್ಟಿಗೆ ಸೂಕ್ಷ್ಮವಾದ ಮನಸ್ಸು.
ಅವಳು ವ್ಯಗ್ರಭಾವದಿಂದ ಮೌನವಾಗಿ ಕುಳಿತುಕೊಂಡುಬಿಟ್ಟದ್ದನ್ನು ಕಂಡು ಸುರೇಶ ವೇಗವನ್ನು ತೊಂಭತ್ತು ಕಿಲೋಮೀಟರಿಗಿಳಿಸಿದ.
ಶಾಲಿನಿ ಮಾರ್ಗದ ಇಕ್ಕೆಡೆಗಳನ್ನು ನೋಡುತ್ತಾ ಕುಳಿತಳು. ಹತ್ತು ನಿಮಿಷಕ್ಕೊಮ್ಮೆಯಾದರೂ ಮುರಿದುಬಿದ್ದ, ನಜ್ಜುಗುಜ್ಜಾದ ಕಾರು, ಲಾರಿ ಅಥವಾ ಪೆಟ್ರೋಲ್ ಟ್ಯಾಂಕರುಗಳು ಕಾಣಿಸಿದುವು.
`ಇಷ್ಟೆಲ್ಲಾ ಆಕ್ಸಿಡೆಂಟುಗಳಾಗುತ್ತವೆಯೇ ಇಲ್ಲಿ ! ಅವಳು ಬೆರಗಿನಿಂದ ಕೇಳಿದಳು ಅವಳಷ್ಟಕ್ಕೇ ಎಂಬಂತೆ.
`ಹೂಂ’ ಸುರೇಶನೆಂದ. `ಇಲ್ಲಿ ಆಕ್ಸಿಡೆಂಟ್ ಎಂಬುದು ಒಂದು ಸಾಮಾನ್ಯ ಸಂಗತಿ ಶಾಲಿ. ಆಕ್ಸಿಡೆಂಟ್ ಆಗುವುದೆಲ್ಲಾ ಇತರರ ವಾಹನಗಳಿಗೆ ತನ್ನ ವಾಹನಕ್ಕೆ ಏನೂ ಆಗುವುದಿಲ್ಲ ಎಂದು ಪ್ರತಿಯೊಬ್ಬ ವಾಹನ ಚಾಲಕನ ಭಾವನೆ ! ಆಕ್ಸಿಡೆಂಟ್ನಲ್ಲಿ ಮುರಿದುಬಿದ್ದ ವಾಹನಗಳನ್ನು ಅಲ್ಲೇ ಬಿಟ್ಟು ಬಿಡುತ್ತಾರೆ. ಟಯರುಗಳು ಕೂಡ ಹಾಗೇ ಇವೆ ನೋಡು. ನಮ್ಮ ದೇಶದಲ್ಲಾದರೆ ಇದೊಂದೂ ಹೀಗೆ ಉಳಿಯುತ್ತಿರಲಿಲ್ಲ. ಈ ಆಕ್ಸಿಡೆಂಟುಗಳನ್ನು ಹೊಂದಿಕೊಂಡೇ ಗ್ಯಾರೇಜುಗಳು, ಇಂಡಸ್ರ್ಟಿಗಳು ಹುಟ್ಟಿಕೊಳ್ಳುತ್ತಿದ್ದುವು’
`ಇಂಥ ರೋಡಿನಲ್ಲಿ ಹೇಗೆ ಡ್ರೈವ್ ಮಾಡ್ತೀರ ನೀವು ! ಶಾಲಿನಿ ಭಯದಿಂದಲೇ ಕೇಳಿದಳು.
`ಹೇಗೆ ಅಂದರೆ ? ಹೀಗೇ ನೋಡು’ ಎಂದು ಸುರೇಶ ನಕ್ಕ.
`ನೀವು ಹೀಗೆ ಡ್ರೈವ್ ಮಾಡ್ತೀರ ಅಂತ ನಿಮ್ಮಮ್ಮನಿಗೆ ತಿಳಿಸಿದರೆ ಅವರ ಜೀವ ನಿಲ್ಲೋಲ್ಲ’ ಶಾಲಿನಿ ಖಿನ್ನಳಾಗಿ ನುಡಿದಳು.
ಒಂದು ಕ್ಷಣ ತಡೆದು ಸುರೇಶನೆಂದ,
`ನಾನು ಯಾವಾಗಲೂ ಹೀಗೇ ಡ್ರೈವ್ ಮಾಡ್ತೀನಂದ್ಕೊಂಡ್ಯಾ ?’
`ಮತ್ತೆ ?’
`ಇವತ್ತು ಮಾತ್ರ’
`ಯಾಕೆ ?’
`ಬೇಗ ಮನೆಗೆ ಸೇರೋಣ ಅಂತ’
`ಏನವಸರ ?’
`ಅಲ್ಲಾ, ಕಾರ್ಕಳದಲ್ಲಿ ಪೆದ್ದು ಹೆಣ್ಣುಗಳ ಸ್ಪರ್ಧೆ ಅಂತ ಒಂದು ಏರ್ಪಡಿಸ್ತಿದ್ರೆ ನಿನಗೇ ಫಸ್ಟ್ ಪ್ರೈಜ್ ಬರ್ತಿತ್ತು’
ಶಾಲಿನಿ ನಾಚಿ ನಕ್ಕಳು.
`ವಿಮಾನ ಎರಡು ಗಂಟೆ ತಡವಾಗಿ ಬರ್ತಿದ್ರೆ ?’ ಅವಳು ಕತ್ತುಕೊಂಕಿಸಿ ಕೇಳಿದಳು.
ಸುರೇಶ ಮುಗುಳ್ನಗುತ್ತಾ ನುಡಿದ,
`ಮನೆಸೇರಲು ತಡವಾಗಲು ವಿಮಾನ ತಡವಾಗಿ ಬರಬೇಕೆಂದಿಲ್ಲ. ಬೇರೆ ಸಂಗತಿಗಳೂ ಇವೆ ನೈಜೀರಿಯಾದಲ್ಲಿ’
2
ಕಾರು ಎಕ್ಸ್ಪ್ರೆಸ್ವೇಯನ್ನು ಬಿಟ್ಟು ಇಬಾದನ್ ನಗರದ ರಸ್ತೆಯನ್ನು ಪ್ರವೇಶಿಸಿತು.
ಪಶ್ಚಿವi ಆಫ್ರಿಕದ ಅತಿ ದೊಡ್ಡ ನಗರವೆಂದು ತಿಳಿಯಲ್ಪಡುವ ಇಬಾದನ್ ನಗರವನ್ನು ಪ್ರವೇಶಿಸುತ್ತುರುವಾಗಲೇ ಕಣ್ಣುಮುಟ್ಟದಷ್ಟು ದೂರದವರೆಗೆ ರಸ್ತೆ ತುಂಬಿದ್ದ ವಾಹನಗಳನ್ನು ಕಂಡು ಶಾಲಿನಿ ಆಶ್ಚರ್ಯಪಡುತ್ತಿರುವಾಗಲೇ ಸುರೇಶ ಕಾರನ್ನು ನಿಲ್ಲಿಸಿದ.
`ಇದೇನು ?’ ಶಾಲಿನಿ ಕೇಳಿದಳು.
ದೇಶದ ಅಧ್ಯಕ್ಷನೋ ಪ್ರಧಾನಮಂತ್ರಿಯೋ ಮಾರ್ಗದಲ್ಲಿ ಅಡ್ಡಬಂದಿರಬಹುದು ಎಂದು ಶಾಲಿನಿಗೆ ಅನಿಸಿರಬಹುದು ಎಂದುಕೊಂಡ ಸುರೇಶ. ಅವನು ಮುಗುಳ್ನಗುತ್ತಾ,
`ಇದೇ ಇಲ್ಲಿನ ಜನರು ಗೋಸ್ಲೋ ಅನ್ನೋ ಪವಾಡ. ಅರ್ಥಾತ್ ಟ್ರಾಫಿಕ್ಜಾಮ್. ಇಲ್ಲಿಂದ ಎರಡು ಮೈಲಿಯ ವರೆಗಾದರೂ ಈ ವಾಹನಗಳ ಕಾಡು ಇರುತ್ತದೆ. ಅದನ್ನು ಕ್ರಮಿಸಿ ಮನೆ ತಲುಪಬೇಕಾದರೆ ಇನ್ನು ಮೂರು-ನಾಲ್ಕು ಗಂಟೆಗಳಾದರೂ ಬೇಕು’ ಎಂದು ಸುರೇಶ ಕೈಗಡಿಯಾರ ನೋಡಿಕೊಂಡ. ಅದು ನಾಲ್ಕು ಗಂಟೆ ತೋರಿಸಿತು.
ಅವನ ಕಾರಿನ ಮುಂದಿದ್ದ ಲಾರಿ ಬಹಳ ಭಾರವಾದ ಟ್ರೈಲರನ್ನು ಎಳೆದುಕೊಂಡು ನಾಲ್ಕಡಿ ಮುಂದಕ್ಕೆ ಜರುಗಿ ನಿಂತಿತು.
ಸುರೇಶ ಬ್ರೇಕು ಸಡಿಲ ಬಿಟ್ಟು ನಾಲ್ಕಡಿ ಮುಂದಕ್ಕೆ ಕಾರನ್ನು ಕೊಂಡುಹೋಗಿ ಪುನಃ ಬ್ರೇಕನ್ನು ಅದುಮಿದ.
ಎಡಬಲದಲ್ಲಿ ವಾಹನಗಳ ಮತ್ತೆರಡು ಮೂರು ಸಾಲುಗಳು. ಇನ್ನು ಎರಡು ಗಂಟೆ ರಾತ್ರಿಯ ವರೆಗೆ ಇದೇ ಸ್ಪೀಡು ಎಂದು ಸುರೇಶ ಶಾಲಿನಿಯೊಡನೆ, `ಹಿಂದಕ್ಕೆ ನೋಡು’ ಎಂದ.
ಶಾಲಿನಿ ಹಿಂತಿರುಗಿ ನೋಡಿದಳು.
ಎರಡೇ ನಿಮಿಷಗಳಲ್ಲಿ ಕಾರಿನ ಹಿಂದುಗಡೆ ಬೆಳೆದುಬಿಟ್ಟ ವಾಹನಗಳ ಸಾಲುಗಳನ್ನು ನೋಡಿ ಅವಳು ಚಕಿತಳಾದಳು. ನಾನಾ ವಿಧವಾದ ವಾಹನಗಳ ಮೂರು-ನಾಲ್ಕು ಸಾಲುಗಳು ಹನುಮಂತನ ಬಾಲದಂತೆ ಬೆಳೆಯುತ್ತಲೇ ಇತ್ತು.
ಎಲ್ಲಾ ಕಡೆ ವಾಹನಗಳ ಚಾಲಕರ, ಪ್ರಯಾಣಿಕರ ಬೊಬ್ಬೆ, ಗಲಭೆ. ಆದರೆ ಯಾರ ಮುಖದಲ್ಲೂ ಚಿಂತೆ, ವ್ಯಗ್ರತೆ ಕಾಣಿಸಲಿಲ್ಲ. ಸಮಯಕ್ಕೆ ವಿಶೇಷವಾದ ಮೌಲ್ಯವೇನೂ ಇರಲಿಲ್ಲವಾದುದರಿಂದ ಇದೂ ಜೀವನದ ಒಂದು ಅವಿಭಾಜ್ಯ ಅಂಗ, ಒಂದು ಬಗೆಯ ಮನರಂಜನೆ ಎಂದು ಮಂದಿ ತಿಳಿದುಕೊಂಡಂತಿತ್ತು.
ಅಲ್ಲಿ ಇಲ್ಲಿ ಅಡ್ಡರಸ್ತೆಗಳಿಂದ ಹೇಳುವವರು ಕೇಳುವವರಿಲ್ಲದೆ ಅನಾಮತ್ತಾಗಿ ಬಂದು ಮೈನ್ರೋಡಿನ ವಾಹನಗಳ ಸಾಲಿನ ನಡುವೆ ತೂರಿಕೊಂಡು, ತುರುಕಿಕೊಂಡು ನಿಂತ ವಾಹನಗಳು. ಮೈನ್ರೋಡಿನಿಂದ ಅಡ್ಡರಸ್ತೆಗೆ ತಿರುಗಲು ಪ್ರಯತ್ನಿಸಿ ವಿಫಲವಾಗಿ ಯಾವಕಡೆಗೂ ಜರುಗಲಾರದೆ ದಿಕ್ಕೆಟ್ಟು ನಿಂತ ವಾಹನಗಳು.
ಅಂತೂ ಸಹಸ್ರಾರು ವಾಹನಗಳು ದಶದಿಕ್ಕುಗಳನ್ನು ನೋಡುತ್ತಾ ನಿಂತಿದ್ದುವು. ಮುಂದುವರಿಯುವ ತವಕದಿಂದ ತುಡಿಯುತ್ತಾ ಸಂಕಟಪಡುತ್ತಿದ್ದುವು.
ಕೆಲವರು ಚಾಲಕರು ತಮ್ಮ ವಾಹನಗಳಿಂದ ಹೊರಗಿಳಿದು ನಿಂತು ಯಾರ್ಯರನ್ನೋ ಬಯ್ಯುತ್ತಿದ್ದರು. ಕೆಲವರು ಆರಾಮವಾಗಿ ವಾಹನದೊಳಗೇ ಕುಳಿತುಕೊಂಡು ಹೊತ್ತು ಕಳೆಯುತ್ತಿದ್ದರು. ಹೊರಗೆ ನಿಂತೆದ್ದ ಚಾಲಕರು ಅವಕಾಶವಾದಾಗ ಒಮ್ಮೆ ತಮ್ಮ ವಾಹನದೊಳಹೊಕ್ಕು ನಾಲ್ಕೈದು ಅಡಿಗಳಷ್ಟು ಮುಂದೆ ಕೊಂಡುಹೋಗಿ ಪುನಃ ಹೊರಗಿಳಿದು ಬಂದು ಸುಮ್ಮನೆ ತಮಾಷೆ ನೋಡುತ್ತಿದ್ದರು.
ಅಲ್ಲೊಂದೆಡೆ ಇಲ್ಲೊಂದೆಡೆ ಪೊಲೀಸರು ಬಂದು ಏನೇನೋ ಒದರುತ್ತಿದ್ದರು. ಯಾರೂ ಅವರ ಮಾತಿಗೆ ಕಿವಿಗೊಡುವಂತೆ ತೋರುತ್ತಿರಲಿಲ್ಲ. ಇದ್ದ ಶಕ್ತಿಯನ್ನೆಲ್ಲ ಉಪಯೋಗಿಸಿ, ಬೊಬ್ಬಿಟ್ಟು ಗದರಿಸಿ, ಬೇಡಿ, ಸಮಜಾಯಿಸಿ ವಾಹನಗಳು ಅಲ್ಪ ಸ್ವಲ್ಪ ಮುಂದುವರಿಯುವಂತೆ ಮಾಡುತ್ತಿದ್ದರು. ಎಷ್ಟೋ ವಾಹನಗಳು ಹೇಗಾದರೂ ಮುಂದೆ ಹೋಗಬೇಕೆಂಬ ಆತುರದಿಂದ ಮೈನ್ರೋಡನ್ನು ಬಿಟ್ಟು ಚರಂಡಿಯ ಮೇಲಿಂದ ಹಾದು ಎಲ್ಲೆಲ್ಲೋ ಹೋಗಿ ಮತ್ತಿನ್ನೆಲ್ಲೋ ಸಿಕ್ಕಿಬಿದ್ದು ಮರಳಿ ಮೈನ್ರೋಡನ್ನು ಪ್ರವೇಶಿಸುವ ಕಾಯಕದಲ್ಲಿದ್ದವು.
ಒಟ್ಟಿನಲ್ಲಿ ಅದೊಂದು ವಾಹನಗ ಅರಣ್ಯದಂತೆ ತೋರುತ್ತಿತ್ತು.
`ಆಫ್ರಿಕದಲ್ಲಿ ಸಮಯಕ್ಕೆ ಬೆಲೆಯಿಲ್ಲ ಅನ್ತಾರೆ ಅದಕ್ಕೆ ಇದೊಂದು ನಿದರ್ಶನ’ ಎಂದ ಸುರೇಶ.
ಟ್ರೇಯಲ್ಲಿ, ತಟ್ಟೆಯಲ್ಲಿ, ಬುಟ್ಟಿಯಲ್ಲಿ ನಾನಾ ವಸ್ತುಗಳನ್ನು ಇರಿಸಿಕೊಂಡು ಇದೇ ಸಂದರ್ಭವೆಂದು ವ್ಯಾಪಾರಕ್ಕಿಳಿಯುವ ಮಂದಿ ವಾಹನಗಳನ್ನು ಸುತ್ತುವರಿಯುತ್ತಿದ್ದರು.
ಪೋಲತೀನ್ನಲ್ಲಿ ಸುತ್ತಿದ ಬ್ರೆಡ್, ಕೋಕಾಕೋಲದ ಬಾಟ್ಲಿಗಳು, ಕರಿದ ಮೀನು, ಕಪ್ಪೆ, ಹೆಗ್ಗಣ, ಮತ್ತು ಹೆಬ್ಬಾವಿನ ತುಂಡುಗಳು.
ಎಣ್ಣೆ ಜಿನುಗುತ್ತಿದ್ದ ಕರಿದ ವಿಚಿತ್ರ ಸಾಮಾಗ್ರಿಗಳನ್ನು ಕಂಡ ಶಾಲಿನಿ.
`ಇದೆಲ್ಲಾ ಏನು ?’ ಎಂದು ಕೇಳಿದಳು.
ಅದರಲ್ಲಿರುವ ಸಾಮಾಗ್ರಿಗಳ ಹೆಸರನ್ನು ಹೇಳಿದಾಗ ಶಾಲಿನಿಗೆ ವಾಂತಿಯಾಗುತ್ತಿರುವುದನ್ನು ಕಂಡು ಸುರೇಶ ನಕ್ಕ.
ಶಾಲಿನಿ ಬೇರೆ ಕಡೆಗೆ ದೃಷ್ಟಿ ಹರಿಸಿದಳು.
`ಈ ಗೋಸ್ಲೋವನ್ನು ಆಧರಿಸಿಕೊಂಡೇ ಇವರ ವ್ಯಾಪಾರವಿದ್ದಹಾಗಿದೆ’ ಎಂದ ಸುರೇಶ.
ಈ ನಡುವೆ ತುಂತುರು ಮಳೆಯೂ ಆರಂಭವಾಯಿತು. ಅಟ್ಲಾಂಟಿಕ್ ಸಾಗರದ ಮೇಲಿಂದ ತಣ್ಣಗಿನ ಗಾಳಿಯು ಬೀಸತೊಡಗಿತು. ಆದರೂ ಸೆಖೆಯನ್ನು ಕಡಿಮೆ ಮಾಡುವಷ್ಟು ಅದು ಪ್ರಭಾವವುಳ್ಳುದಾಗಿ ತೋರಲಿಲ್ಲ.
ಗಂಟೆ ಆರು ಸಮೀಪಿಸಿತು. ನಗರದ ದೀಪಗಳು ಹತ್ತಿಕೊಂಡವು.
`ಹೇಗಿದೆ ಇಬಾದನ್ ?’ಸುರೇಶ ಕೇಳಿದ.
ಕಾರಿನಲ್ಲಿ ಕುಳಿತು ಕುಳಿತು ಸಾಕಾಗಿತ್ತು ಶಾಲಿನಿಗೆ. ಆ ಎರಡು ಗಂಟೆ ಹೊತ್ತಿನಲ್ಲಿ ಅವರ ಕಾರು ಒಂದು ಗಂಟೆ ಚಲಿಸಿರಬಹುದೆನಿಸಿತು.
ಅವಳಿಗೆ ನಗರ ಚೆನ್ನಾಗಿಯೂ ಕಾಣಿಸಲಿಲ್ಲ, ಕೆಟ್ಟದಾಗಿಯೂ ಕಾಣಿಸಲಿಲ್ಲ. ಒಮ್ಮೆ ಮನೆ ಸೇರಿಬಿಟ್ಟರೆ ಸಾಕೆನಿಸಿತು. ಆ ವಾಹನಗಳ ಕಾಡನ್ನು ಕಂಡಾಗ ಮಾತ್ರ ಮನಸ್ಸಿಗೆ ತುಂಬಾ ಅಸುಖವುಂಟಾಯಿತು.
`ಏನೂ ಅನಿಸೋಲ್ಲರೀ’ ಅವಳು ಮುಗುಳ್ನಕ್ಕು ನುಡಿದಳು. `ಇನ್ನೆಷ್ಟು ದೂರವಿದೆ ?’ ಅವಳು ಕೇಳಿದಳು.
`ಹೆಚ್ಚೆಂದರೆ ಒಂದು ಮೈಲು. ಇನ್ನೊಂದು ಗಂಟೆಯಾದರೂ ಬೇಕು’ ಎಂದು ಸುರೇಶ ನಕ್ಕು, `ಲಾಗೋಸಿನಿಂದ ಇಬಾದನ್ಗೆ ನೂರು ಕಿಲೋಮೀಟರ್. ಅದಕ್ಕೆ ಒಂದು ಗಂಟೆ. ಇಬಾದನ್ನಿಂದ ಮನೆಗೆ ಮೂರು ಕಿಲೋಮೀಟರ್. ಅದಕ್ಕೆ ನಾಲ್ಕು ಗಂಟೆ’ ಎಂದ.
`ಇದನ್ನು ಯಾರಿಂದಲೂ ಸರಿಪಡಿಸಲು ಸಾಧ್ಯವಿಲ್ಲವೆ ?’ ಶಾಲಿನಿ ಕೇಳಿದಳು.
`ಈ ದೇಶದಲ್ಲಿ ಯಾರಿಂದಲೂ ಯಾವುದನ್ನೂ ಸರಿಪಡಿಸಲು ಸಾಧ್ಯವಿಲ್ಲ ಅನಿಸುತ್ತದೆ. ಎಲ್ಲಾ ಅದರಷ್ಟಕ್ಕೇ ಸರಿಯಾಗಬೇಕು. ರಸ್ತೆಯಲ್ಲಿ ನೀತಿ, ನಿಯಮ, ಶಿಸ್ತು ಯಾವುದೂ ಇಲ್ಲ. ಸರಕಾರದ ಬೊಕ್ಕಸದಲ್ಲಿ ಪೆಟ್ರೋಲಿನ ಹಣ ತುಂಬಿದೆ. ಆದ್ದರಿಂದ ಅದಕ್ಕೆ ಯಾವುದರಲ್ಲೂ ಆಸಕ್ತಿಯಿಲ್ಲ. ಬ್ಯಾಂಕು, ಪೋಸ್ಟಾಪೀಸು, ರೈಲ್ವೆ ಎಲ್ಲಾ ಕಡೆ ಇದೇ ಅವ್ಯವಸ್ಥೆ, ಬೇಜಾವಾಬ್ದಾರಿತನ’ ಸುರೇಶನೆಂದ.
`ಕುಳಿತು ಕುಳಿತು ಸಾಕಾಯ್ತು’ ಶಾಲಿನಿಯೆಂದಳು.
`ಏರ್ಕಂಡಿಶನ್ ಅಲ್ಲದಿದ್ದರೆ ನೀನು ಇಷ್ಟರಲ್ಲಿ ಸೆಖೆಯಿಂದ ಬೆಂದು ಹೋಗ್ತಿದ್ದ ಅಂತ ಕಾಣುತ್ತೆ’ ಸುರೇಶನೆಂದ ಮುಗುಳ್ನಗುತ್ತಾ.
ಏರ್ಕಂಡಿಶನಿದ್ದರೂ ಶಾಲಿನಿ ಬೆವೆತಿದ್ದಳು. ಪತಿಯ ಮಿಲನದ ಸುಖ ಸಂಭ್ರಮವೆಲ್ಲಾ ಎಲ್ಲೋ ಅವಿತುಕೊಂಡು ಅವಳ ಮನಸ್ಸಿನ ತುಂಬಾ ಬೆರಗು ಮನೆ ಮಾಡಿಕೊಂಡಂತೆ ತೋರಿತು.
ಅಂತೂ ಸುಮಾರು ಏಳೂವರೆ ಗಂಟೆಯ ಹೊತ್ತಿಗೆ ಇಬಾದನ್ ನಗರದ ದಕ್ಷಿಣ ಭಾಗದಲ್ಲಿ ದೊಡ್ಡ ಮನೆಯೊಂದರ ಮುಂದೆ ಕಾರು ಬಂದು ನಿಂತಿತು.
ದಷ್ಟಪುಷ್ಟನಾಗಿದ್ದ ಒಬ್ಬ ಕರಿಮನುಷ್ಯ ಗೇಟನ್ನು ಅಗಲವಾಗಿ ತೆರೆದು,
`ವೆಲ್ಕಮ್’ ಎಂದು ತಲೆಬಾಗಿ ವಂದಿಸಿದ.
ಮನೆಯ ಬಾಗಿಲು ತೆರೆದಿತ್ತು.
ಸುರೇಶ ಮತ್ತು ಶಾಲಿನಿ ಕಾರಿನಿಂದಿಳಿದೊಡನೆ ತೆರೆದ ಹಜಾರದ ಬಾಗಿಲಿನಿಂದ ನಾಲ್ವರು ಮನುಷ್ಯರು ಹೊರಗಿಳಿದರು.
`ಬನ್ನಿ ಬನ್ನಿ’ ಎಂದು ನಾಲ್ವರೂ ಕೈಜೋಡಿಸಿದರು.
ಸುರೇಶ ಹೆಂಡತಿಗೆ ಅವರನ್ನು ತೋರಿಸಿ,
`ಮಿಸ್ಟರ್ ಶಿವಾನಂದ್, ಮಿಸ್ಟರ್ ಜಾರ್ಜ್, ಮಿಸ್ಟರ್ ಗಣರಾಜ್, ಮಿಸ್ಟರ್ ಕೃಷ್ಣರಾವ್. ಇಲ್ಲೇ ಅಧ್ಯಾಪಕರಾಗಿದ್ದಾರೆ’ ಎಂದು ಪರಿಚಯ ಮಾಡಿಸಿದ.
ಶಾಲಿನಿ ಕೈಜೋಡಿಸಿದಳು. ಅವರು ಮತ್ತೊಮ್ಮೆ ಕೈಜೋಡಿಸಿದರು.
ಡಾಕ್ಟರ್ ರೆಡ್ಡಿ ಬಂದಿಲ್ವೆ’ ಸುರೇಶ ಕೇಳಿದ.
`ಸಂಜೆಗೊಮ್ಮೆ ಬಂದಿದ್ರು. ಅವರಿಗೆ ನೈಟ್ ಡ್ಯೂಟಿ ಇದೆಯಂತೆ. ನಾಳೆ ಬರ್ತೀನಿ ಅಂದಿದ್ದಾರೆ’ ಎಂದ ಜಾರ್ಜ್.
`ನಿಮ್ಮ ಮನೆಯೇ ಆದರೂ ನೀವೇ ಬಂದು ಒಳನುಗ್ಗುವುದು ಚಲೋದಾಗಿ ಕಾಣಿಸಲಿಲ್ಲ. ಯಾರಾದರೊಬ್ಬರು ಸ್ವಾಗತ ಅಂತ ಮಾಡೋದು ಅಗತ್ಯ ಅಂತ ಕಾದು ಕುಳಿತೆವು. ಫ್ಲೂ ಅಲ್ಲದಿದ್ರೆ ಮಿಸೆಸ್ ಗಣರಾಜ್ ಕೂಡ ಬರ್ತಿದ್ರು’ ಎಲ್ಲರಿಗಿಂತಲೂ ಹಿರಿಯರಾದ ಸುಮಾರು ಐವತ್ತರ ಹರೆಯದ ಕೃಷ್ಣರಾವ್ ಹೇಳಿದರು.
`ಏನು, ಏರ್ಪೋರ್ಟಿನಿಂದ ನೇರವಾಗಿ ಬಂದಿರಾ, ಅಲ್ಲಾ ಲಾಗೋಸ್ ಎಲ್ಲಾ ಸುತ್ತುಹಾಕಿಕೊಂಡು ಬಂದಿರಾ ?’ ಗಣರಾಜರೆಂದರು ನಗುತ್ತಾ.
`ಬರೀ ಹೆಡ್ಡ ಪ್ರಶ್ನೆ ಇದು !’ ಎಂದ ಜಾರ್ಜ್.
`ಏಕೆ ?’ ಗಣರಾಜರು ಕೇಳಿದರು.
`ಲಾಗೋಸ್ ಈಗಲೇ ಸುತ್ತಬೇಕಾದ ಅವಶ್ಯಕತೆ ಏನಿದೆ ಅವರಿಗೆ ? ಏನಿಲ್ಲೆಂದರೂ ಇನ್ನೊಂದೆರಡು ವರ್ಷ ಇದ್ದೇ ಇರ್ತಾರೆ. ಗೊತ್ತೇ ಇದೆಯಲ್ಲಾ ಲಾಗೋಸಿನಿಂದ ಇಬಾದನಿಗೆ ಒಂದು ಗಂಟೆ. ಇಬಾದನಿನಿಂದ ಮನೆಗೆ ನಾಲ್ಕು ಗಂಟೆ !’ ಕೃಷ್ಣರಾವ್ ಹೇಳಿದರು.
`ಓ, ಗೋ ಸ್ಲೋ !’ ಗಣರಾಜರು ಉದ್ಗರಿಸಿದರು.
`ನೈಜೀರಿಯ ಬಿಟ್ಟು ಐವತ್ತು ವರ್ಷದ ಮೇಲೆ ಎಲ್ಲಾ ಮರೆತುಹೋದರೂ ಈ ಗೋ ಸ್ಲೋ ಮರೆತುಹೋಗುವಂಥಾದ್ದಲ್ಲ’ ಸುರೇಶನೆಂದ.
ಮಿಸೆಸ್ ಸುರೇಶರಿಗೆ ಈಗಲೇ ಅದರ ಅನುಭವ ಮರೆಯಲಾರದಷ್ಟು ಚೆನ್ನಾಗಿ ಆಗಿರಬೇಕು’ ಜಾರ್ಜ್ ಹೇಳಿದ.
ಶಾಲಿನಿಯ ಮುಖದಲ್ಲಿ ಸಣ್ಣಗೆ ಮುಗುಳ್ನಗೆ ಮೂಡಿತು.
`ಸರಿ ಸಾಕು ಮಾತು. ಗೃಹ ಪ್ರವೇಶವಾಗಲಿ’ ಕೃಷ್ಣರಾವ್ ನಕ್ಕು ನುಡಿದರು.
ಎಲ್ಲರೂ ಮನೆಯೊಳಹೊಕ್ಕರು.
ಏರ್ಕಂಡೀಶನ್ಡ್ ವ್ಯವಸ್ಥೆಯಿರುವ ದೊಡ್ಡ ಮನೆ. ವಿಶಾಲವಾದ ಹಜಾರದಲ್ಲಿ ಬಣ್ಣದ ಟೀವಿ, ಬಳಿಯಲ್ಲೇ ಒಂದು ತ್ರೀ ಇನ್ ವನ್, ಕ್ಯಾಸೆಟ್ಟುಗಳ ರ್ಯಾಕು, ಗ್ರಾಮಫೋನು ರಿಕಾರ್ಡುಗಳ ಆಲ್ಬಮ್ಗಳು.
ಸೋಫದಲ್ಲಿ ಎಲ್ಲರೂ ಕುಳಿತುಕೊಂಡೊಡನೆ,
`ಏನು ಡ್ರಿಂಕ್ಸ್ ?’ ಸುರೇಶ ಕೇಳಿದ.
`ಏನೂ ಆಗುತ್ತೆ’ ನಟರಾಜರೆಂದರು.
`ಏನೂ ಆಗೋಲ್ಲ. ಹಾಲೇ ಆಗಬೇಕು’ ಕೃಷ್ಣರಾವ್ ಹೇಳಿದರು.
ಸುರೇಶ ಶಾಲಿನಿಯನ್ನು ಕರೆದುಕೊಂಡು ಒಳಹೋದ.
ಅಡಿಗೆ ಕೋಣೆಯಲ್ಲಿದ್ದ ಗ್ಯಾಸ್ ಕವರ್ ಎಲೆಕ್ಟ್ರಿಕ್ ಕುಕ್ಕಿಂಗ್ ರೇಂಜ್ ಮತ್ತು ಡೈನಿಂಗ್ ರೂಮಿನಲ್ಲಿದ್ದ ಫ್ರಿಡ್ಜ್ ತೋರಿಸಿ,
`ಫ್ರೀಡ್ಜ್ನಲ್ಲಿ ಹಾಲಿದೆ. ಸ್ವಲ್ಪ ಬಿಸಿಮಾಡಿಕೊಂಡರಾಯ್ತು’ ಎಂದ.
ಸುರೇಶ ಮರಳಿ ಹಜಾರಕ್ಕೆ ಬಂದೊಡನೆ ಕೃಷ್ಣರಾವ್’
`ಸುರೇಶ್, ಒಂದು ಸಮಸ್ಯೆಯುಂಟಾಗಿದೆಯಲ್ಲ ?’ ಎಂದರು.
`ಏನು ?’ ಸುರೇಶ ಕೇಳಿದ
`ನೋಡಿ, ಇವತ್ತು ಬೆಳಿಗ್ಗೆ ಇಜಬೋಡೆಗೆ ಹೋಗಿದ್ದೆವು ; ಶ್ರೀಕಾಂತರ ಮನೆಗೆ. ಅಲ್ಲಿ ಮುಟ್ಟಿದ ಸ್ವಲ್ಪ ಹೊತ್ತಿನಲ್ಲೇ ಹರೀಶನಿಗೆ ವಾಂತಿ ಭೇದಿ ಕಾಣಿಸಿಕೊಂಡಿತು. ಅವನನ್ನು ಹಾಸ್ಪಿಟಲಿಗೆ ಕರೆದುಕೊಂಡು ಹೋದೆವು. ಡಾಕ್ಟರ್ ಅವನನ್ನು ಪರೀಕ್ಷಿಸಿ ಒಂದು ದಿನ ಹಾಸ್ಪಿಟಲಿನಲ್ಲಿ ನಿಲ್ಲಿಸಬೇಕು ಅಂದ್ರು. ಆದರೆ ನನಗೆ ಇಬಾದನಿಗೆ ಬರಲೇಬೇಕಾಗಿತ್ತು ನೋಡಿ. ಮುಂದಿನ ವಾರ ಇಂಡಿಯಕ್ಕೆ ಹೋಗ್ತೇವಲ್ಲ, ಟಿಕೇಟು ರೆಡಿ ಮಾಡಿಡ್ತೀನಿ ಅಂತ ಟ್ರಾವಲ್ ಏಜಂಟ್ ಹೇಳಿದ್ದ. ಹಾಗೆ ನಳಿನಿಯನ್ನು ಹಾಸ್ಪಿಟಲಿನಲ್ಲೇ ಇರಲು ಹೇಳಿ ನಾನು ಇಬಾದನಿಗೆ ಬಂದೆ. ಟಿಕೇಟು ತೆಗೆದುಕೊಂಡು, ಇನ್ನು ಇಜಿಬೋಡೆಗೆ ಹೋಗೋಣವೆಂದರೆ ಕಾರು ಕೆಟ್ಟುಹೋಯ್ತು. ಗ್ಯಾರೇಜಿಗೆ ಹೋದ ಮೇಲೆ ಇವತ್ತಿಗೆ ಆಗುವ ಕೆಲಸ ಅಲ್ಲ ಅಂತ ತಿಳಿಯಿತು. ಇವತ್ತು ನಾನು ಇಲ್ಲೇ ಉಳಿಯುವ ಹಾಗಿದ್ದರೆ ಉಳಿದುಕೊಳ್ಳಬಹುದಾಗಿತ್ತು. ಆದರೆ ಅಲ್ಲಿನ ಸ್ಥಿತಿ ಹಾಗಿರುವಾಗ ಅದು ಸಾಧ್ಯವಿಲ್ಲ’ ಎಂದರು ಕೃಷ್ಣರಾವ್.
`ಫೋನು ಮಾಡಿ ವಿಚಾರಿಸಿದ್ರಾ, ಹೇಗಿದೆ ಮಗುವಿಗೆ ?’
ಈ ದೇಶದ ಫೋನಿನ ಕತೆ ಗೊತ್ತೇ ಇದೆಯಲ್ಲ. ಒಂದು ಗಂಟೆ ಹೋರಾಟ ನಡೆಸಿದ ಮೇಲೆ ಕನೆಕ್ಷನ್ ಸಿಕ್ಕಿತು. ಪರವಾಗಿಲ್ಲ, ಸುಧಾರಿಸ್ತಿದಾನೆ ಅಂತ ಡಾಕ್ರ್ಟು ಹೇಳಿದ್ರಂತೆ. ಆದ್ರೂ ಅವಳಿಗೆ ತುಂಬಾ ಗಾಬರಿ. ಕೂಡಲೇ ಬನ್ನಿ ಅಂದಿದಾಳೆ’
ಸುರೇಶ ಸ್ವಲ್ಪ ಹೊತ್ತು ಚಿಂತಿಸಿ ಕೈ ಗಡಿಯಾರ ನೋಡುತ್ತಾ ಕೇಳಿದ,
`ಈಗ ಇಜೆಬೋಡೆಗೆ ಹೋಗಿ ಅವ್ರನ್ನು ಕರ್ಕೊಂಡು ಬರೋದಂತೀರಾ ?’ ಗಂಟೆ ಒಂಭತ್ತು ಸಮೀಪಿಸುತ್ತಿತ್ತು.
`ಅದೇ ಒಳ್ಳೆಯದು ಅನಿಸುತ್ತೆ’ ಕೃಷ್ಣರಾವ್ ನುಸಿದರು.
`ಈಗಲೇ ಗಂಟೆ ಒಂಭತ್ತಾಯಿತು. ರಾತ್ರಿ ಪ್ರಯಾಣ ಮಾಡೋ ಬದಲು ನಾಳೆ ಬೆಳಿಗ್ಗೆ ಹೋಗೋದೇ ಒಳ್ಳೇದಲ್ವೆ ? ಫೋನು ಮಾಡಿ ತಿಳಿಸಿರಿ. ಶ್ರೀಕಾಂತರ ಮನೆಯಲ್ಲಿ ಜಾಗಕ್ಕೇನೂ ತೊಂದರೆಯಿಲ್ಲ’ ಸುರೇಶನೆಂದ.
`ನಾವೆಲ್ಲಾ ಹಾಗೇ ಹೇಳಿದೆವು’ ಶಿವಾನಂದನೆಂದ.
`ಇಲ್ರಿ. ಸಾಧ್ಯವಾದರೆ ಈಗಲೇ ಹೋಗಿ ಕರಕೊಂಡು ಬರ್ಬೇಕು, ಹೆಚ್ಚೆಂದರೆ ಹೋಗೋದಕ್ಕೆ ಒಂದೂವರೆ ಗಂಟೆ, ಬರೋದಕ್ಕೆ ಒಂದೂವರೆ ಗಂಟೆ. ಹನ್ನೆರಡು ಗಂಟೆಯೊಳಗೆ ಬಂದುಬಿಡ್ತೀವಿ’ ಕೃಷ್ಣರಾವ್ ಹೇಳಿದರು.
`ಅದು ಸರಿ. ಏನ್ಮಾಡೋದು ಈಗ ? ನಿಮ್ಮ ಕಾರಿನ ಡ್ರೈವರಿದ್ದಾನೆಯೆ ?’ ಸುರೇಶ ಕೇಳಿದ.
`ಅವನು ಮನೆಗೆ ಹೋಗ್ತೀನಂದ. ಹೋಗು ಅಂತ ಕಳಿಸ್ಬಿಟ್ಟೆ’
`ಕಾರು ನನ್ದೇ ಕೊಂಡೋಗ್ಬಹುದು. ಆದರೆ ತೊಂದರೆಯಾಗಿರೋದು ಏನು ಅಂದ್ರೆ...’ ಸುರೇಶ ಹೇಳಲು ನಿಧಾನಿಸಿದ.
`ಸುರೇಶ್ ಇಷ್ಟೊತ್ನಲ್ಲಿ, ಅದೂ ಈ ದಿನ ಮನೆಬಿಟ್ಟು ಹೊರಡುವ ಮನೋಸ್ಥಿತಿಯಲ್ಲಿ ಇಲ್ಲ’ ಎಂದು ಶಿವಾನಂದ ನಕ್ಕ.
ಶಾಲಿನಿ ಟ್ರೇಯಲ್ಲಿ ಹಾಲಿನ ಕಪ್ಪುಗಳನ್ನಿರಿಸಿಕೊಂಡು ಬಂದಳು.
`ಛೆ ಛೆ ! ಅನ್ಯಾಯ ! ಸುರೇಶ್ ಮನೆಬಿಟ್ಟು ಬರೋದು ಹೇಗೆ ಸಾಧ್ಯ ? ಕಾರು ಕೊಟ್ರೆ ಧಾರಾಳವಾಯ್ತು’ ಕೃಷ್ಣರಾವ್ ಹೇಳಿದರು.
`ಅದೇ ನಾನು ಹೇಳಿದ್ದು. ಇವತ್ತು ಭಾನುವಾರ ಡ್ರೈವರಿಗೆ ರಜಾ. ಅವನು ಬರೋಲ್ಲ’ ಎಂದ ಸುರೇಶ.
`ಯಾರು ಬಿಜಂಡೆಯೆ ?’
`ಹೌದು’
`ಅವನನ್ನು ಈಗತಾನೇ ನೋಡಿದೆ’
`ಎಲ್ಲಿ ?’
`ನೀವು ಬರುವ ಒಂದೈದು ನಿಮಿಷದ ಮೊದಲು ಇಲ್ಲೇ ಇದ್ದ. ಫ್ಯಾಕ್ಟರಿಯ ಕಡೆಗೆ ಹೋದುದನ್ನು ನೋಡಿದೆ’
`ನಿಮ್ಮಾಕೆ ಇವತ್ತು ಬರ್ತಿರೋದು ಅವನಿಗೆ ತಿಳಿದಿರಬೇಕು. ನೋಡ್ಬಿಟ್ಟು ಹೋಗೋಣ ಅಂತ ಬಂದಿರ್ಬೇಕು’ ಗಣರಾಜರೆಂದರು.
`ಅವನಿಲ್ದಿದ್ರೂ ತೊಂದರೆಯಿಲ್ಲ. ಜಾರ್ಜ್ ಬರ್ತಾರೆ. ಎರಡೇ ಗಂಟೆಯಲ್ಲಿ ಬಂದ್ಬಿಡ್ತೀವಿ’ ಕೃಷ್ಣರಾವ್ ಹೇಳಿದರು.
`ಬಿಜಂಡೆ ಮನಸ್ಸು ಮಾಡಿದರೆ ಒಂದೇ ಗಂಟೆಯಲ್ಲಿ ತಂದು ಬಿಡ್ತಾನೆ’ ಶಿವಾನಂದ ಹೇಳಿದ.
ಸುರೇಶ ಹೊರಹೋಗಿ,
`ಓಮಿಸೋರ’ ಎಂದು ಕರೆದ.
ಗೇಟಿನಲ್ಲಿದ್ದ ಕಾವಲುಗಾರ,
`ಯಸ್ ಸರ್’ ಎಂದು ಈ ಕಡೆ ಬಂದ.
`ಫ್ಯಾಕ್ಟರಿಯಲ್ಲಿ ಬಿಜಂಡೆ ಇರಬೇಕು. ಕರೆದುಕೊಂಡು ಬಾ’ ಸುರೇಶನೆಂದ.
ಐದೇ ನಿಮಿಷದೊಳಗೆ `ವೆಲ್ಕಮ್’ ಎಂದು ಹೇಳುತ್ತಾ ಡ್ರೈವರ್ ಬಿಜಂಡೆ ಹಜಾರದೊಳಗೆ ಬಂದ. ನಮ್ರತೆಯಿಂದ ಎಲ್ಲರ ಕೈಯನ್ನು ಕುಲುಕಿ ಶಾಲಿನಿಯ ಮುಂದೆ ಕೈಯೊಡ್ಡಿ ನಿಂತ. ಅವಳು ಸಂಕೋಚದಿಂದಲೇ ಕೈ ಮುಂದೆ ಮಾಡಿದಾಗ ಅತ್ಯಂತ ನಮ್ರತೆಯಿಂದ ಅವಳ ಕೈಕುಲುಕಿ `ವೆಲ್ಕಮ್, ಗುಡ್ವಿಶಸ್’ ಎಂದು ಹೇಳಿ ಬಿಜಂಡೆ ನಮ್ರನಾಗಿ ನಿಂತ.
`ಕುಳಿತುಕೊ. ಏನು ತೆಗೆದುಕೊಳ್ಳುತ್ತಿ ? ವಿಸ್ಕಿ, ಬೀರ್ ?’ ಸುರೇಶ ಕೇಳಿದ.
ಎಲ್ಲರ ಮುಂದೂ ಇದ್ದ ಹಾಲಿನ ಲೋಟಗಳನ್ನು ಗಮನಿಸಿದ ಬಿಜಂಡೆ,
`ಹಾಲೇ ಕೊಡಿ’ ಎಂದ.
`ಸಂಕೋಚಪಟ್ಟುಕೊಳ್ಳಬೇಡ. ಹಾಲು ಕುಡಿಯೋದು ನಮ್ಮ ಕ್ರಮ. ನೀನು ಬೀರ್ ಕುಡಿ’ ಎಂದು ಸುರೇಶ ಫ್ರಿಜ್ನೊಳಗಿಂದ ಬೀರ್ ಬಾಟಲೊಂದನ್ನು ತಂದು ಮುಚ್ಚಳ ತೆರೆದು ಅವನ ಮುಂದಿರಿಸಿದ.
ಸುರೇಶನೆಲ್ಲಾದರೂ ವಿಸ್ಕಿ ಕೊಟ್ಟುಬಿಡುವನೋ ಎಂದು ಭಯಪಟ್ಟುಕೊಂಡಿದ್ದ ಕೃಷ್ಣರಾವ್ ಸಮಾಧಾನ ಪಟ್ಟುಕೊಂಡರು.
ಬಿಜಂಡೆ ಬೀರ್ ಕುಡಿಯುತ್ತಿರುವಾಗ ಸುರೇಶ,
`ಒಂದು ಉಪಕಾರವಾಗಬೇಕಾಗಿದೆಯಲ್ಲ ಬಿಜಂಡೆ’ ಎಂದ.
`ಏನು ?’
`ನೋಡು, ಮಿಸ್ಟರ್ ಕೃಷ್ಣರಾಯರ ಹೆಂಡತಿ ಮತ್ತು ಮಗು ಇಜೇಬೋಡೆಯಲ್ಲಿದ್ದಾರೆ. ಮಗುವಿಗೆ ಅಷ್ಟೊಂದು ಹುಷಾರಿಲ್ಲ. ಹಾಸ್ಪಿಟಲಿನಲ್ಲಿದ್ದಾನೆ. ಒಮ್ಮೆ ಹೋಗಿ ಅವರನ್ನು ಕರಕೊಂಡು ಬರ್ಬೇಕಾಗಿತ್ತಲ್ಲ ?’
`ಬರುವುದಕ್ಕೆ ಏನಾದರೂ ತೊಂದರೆಯಿದ್ದರೆ ನನ್ನನ್ನು ಅಲ್ಲಿ ಬಿಟ್ಟುಬಿಟ್ಟರೂ ಸಾಕು’ ಕೃಷ್ಣರಾವ್ ಹೇಳಿದರು.
`ಚಿ, ಅದಕ್ಕೇನು, ಹೋಗೋಣ’ ಎಂದ ಬಿಜಂಡೆ.
ಬೀರ್ ಕುಡಿದು ಮುಗಿಸಿ ಬಿಜಂಡೆ ಕೃಷ್ಣರಾಯರೊಡನೆ,
`ಏಳಿ, ಹೋಗೋಣ’ ಎಂದ
ಸುರೇಶ ಅವನ ಕೈಗೆ ಕಾರಿನ ಬೀಗದ ಕೈ ಕೊಡುತ್ತಾ,
`ಪೆಟ್ರೋಲು ಇಲ್ಲದಿದ್ದರೆ ಹಾಕಿಸಿಕೊ’ ಎಂದು ಹತ್ತು ನಯಾರದ ನೋಟೊಂದನ್ನು ಕೊಟ್ಟ.
`ಪರವಾಗಿಲ್ರಿ ಸುರೇಶ್, ಹಣ ಯಾಕೆ, ನಾನೇ ಹಾಕಿಸಿಕೊಳ್ತೇನೆ’ ಎಂದರು ಕೃಷ್ಣರಾವ್.
`ನೀವೇಕೆ ಖರ್ಚು ಮಾಡ್ಬೇಕು ? ಕಂಪೆನಿಯ ಕಾರು. ಕಂಪೆನಿಯೇ ಪೆಟ್ರೋಲಿಗೂ ಹಣ ಕೊಡುತ್ತೆ’
`ಆದ್ರೂ ಇದು ನನ್ನ ಸ್ವಂತ ಕೆಲಸ’
`ಅದೆಲ್ಲಾ ಸಣ್ಣ ವಿಚಾರ ಬಿಡಿ. ಎರಡು ಗಂಟೆಗೆ ಎಷ್ಟು ಪೆಟ್ರೋಲು ಬೇಕು ! ಈ ದೇಶದಲ್ಲಿ ಯಾವುದಕ್ಕೆ ಕೊರತೆಯಿದ್ದರೂ ಸದ್ಯಕ್ಕೆ ಪೆಟ್ರೋಲಿಗೆ ಕೊರತೆಯಿಲ್ಲ. ಕೆಲವು ಕಡೆ ಪೆಟ್ರೋಲಿಗಿಂತ ನೀರೇ ದುಬಾರಿ’ ಎಂದು ಸುರೇಶ ನಕ್ಕು, `ಬಿಜಂಡೆ ಸಿಕ್ಕಿದ್ದು ಒಳ್ಳೆಯದಾಯ್ತು. ಕಂಪೆನಿಯ ಕಾರನ್ನು ನಿಮ್ಮ ಡ್ರೈವರನ ಕೈಗೆ ಕೊಡುವುದು ಸರಿಯಾಗುವುದಿಲ್ಲ ನೋಡಿ. ಏನಾದರೂ ಹೆಚ್ಚು ಕಡಿಮೆಯಾದರೆ ಇಲ್ಲದ ತಲೆಬೇನೆ ಹುಟ್ಟಿಕೊಳ್ಳುತ್ತದೆ’ ಸುರೇಶನೆಂದ.
ಕೃಷ್ಣರಾವ್ ಮತ್ತು ಬಿಜಂಡೆ ಹೊರಟುಹೋದ ಮೇಲೆ ಶಿವಾನಂದ, ಗಣರಾಜ ಮತ್ತು ಜಾರ್ಜ್ ಸ್ವಲ್ಪ ಹೊತ್ತು ಮಾತಾಡುತ್ತಾ ಕುಳಿತಿದ್ದು ಮತ್ತೊಮ್ಮೆ ಎಲ್ಲರೂ ಸುರೇಶನ ಕೈಕುಲುಕಿ, ಶಾಲಿನಿಗೆ ಕೈಜೋಡಿಸಿ ವಂದಿಸಿ, ಹೊರಡಲನುವಾದಾಗ ಜಾರ್ಜ್ ಸುರೇಶನೊಡನೆ ಮೆಲ್ದನಿಯಲ್ಲಿ ಆದರೆ ಎಲ್ಲರಿಗೂ ಕೇಳಿಸುವಂತೆ,
`ಗೋ ಸ್ಲೋ’ ಅಂದ.
ಎಲ್ಲರೂ ನಕ್ಕರು.
ಶಾಲಿನಿ ನಾಚಿ ನೀರಾದಳು.
3
ಫ್ಯಾಕ್ಟರಿಯಲ್ಲಿ ನೈಟ್ಶಿಫ್ಟಿನ ಕೆಲಸ ನಡೆಯುತ್ತಿತ್ತು. ದಿನವೂ ಆಗೊಮ್ಮೆ ಈಗೊಮ್ಮೆ ಯಾರಾದರೂ ಯಾವುದಾದರೂ ಕೆಲಸಕ್ಕೆ ಬಂದು ಕರೆಗಂಟೆಯನ್ನೊತ್ತುತ್ತಿದ್ದರು. ಆದರೆ ಆ ದಿನ ಯಾರೂ ಬರಲಿಲ್ಲ. ಈ ದಿನ ಇವರಿಗೆ ಸಮಸ್ಯೆಯೇ ಇಲ್ಲವೇನೋ ಅಂದುಕೊಂಡ ಸುರೇಶ. ಪರವಾಗಿಲ್ಲ, ಇವರಿಗೂ ಸ್ವಲ್ಪ ತಿಳುವಳಿಕೆ ಇದೆ. ಈ ದಿನ ಕಿರುಕುಳ ಕೊಡಬಾರದೆಂದು ತೀರ್ಮಾನಿಸಿಕೊಂಡಿರಬೇಕು ಅಂದುಕೊಂಡ.
ಸ್ವಲ್ಪ ಹೊತ್ತಿನವರೆಗೆ ಶಾಲಿನಿಗೆ ಅವಿರತವಾಗಿ ಫ್ಯಾಕ್ಟರಿಯ ಸದ್ದಿನಿಂದಾಗಿ ಕಿರಿಕಿರಿಯುಂಟಾಯಿತು. ಹಿಂದಿನ ಬಾಗಿಲು ತೆರೆದಾಗಲೆಲ್ಲಾ ಶಬ್ದ ಅದ್ಭುತವಾಗಿ ಮನೆಯೊಳಗೆ ನುಗ್ಗುತ್ತಿತ್ತು. ಬಾಗಿಲು ಮುಚ್ಚಿದರೆ ಅಷ್ಟು ಪೀಡಿಯಿಲ್ಲ, ಗುರ್ರ್ ಎಂಬ ಸಾಂದ್ರವಾದ ಧ್ವನಿ ; ಸಹಿಸಿಕೊಳ್ಳಬಹುದೆಂಬಂತಿತ್ತು.
ಅತ್ತಿತ್ತ ಓಡಾಡುವ ಫ್ಯಾಕ್ಟರಿಯ ಕೆಲಸಗಾರರಾದ ಧಾಂಡಿಗ ಕರಿಯರನ್ನು ಕಂಡು ಶಾಲಿನಿ,
`ಏನು ಕಪ್ಪುರೀ ಇವರು !’ ಎಂದಿದ್ದಳು.
`ಹೌದು ಬಣ್ಣದಲ್ಲಿ’ ಎಂದು ಸುರೇಶ ನಕ್ಕು, `ಡ್ರೈವರ್ ಕೈಕುಲುಕಿದ ಮೇಲೆ ಗುಟ್ಟಾಗಿ ಕೈ ನೋಡಿಕೊಂಡೆಯಲ್ಲಾ ಏಕೆ ?’ ಎಂದ/
ಇಲ್ಲವಲ್ಲ ? ನನಗೆ ನೆನಪಿಲ್ಲ’ ಶಾಲಿನಿಯೆಂದಳು.
`ನೋಡಿಕೊಂಡಿದ್ದಿ ! ಬಹುಶಃ ಕಪ್ಪು ಕೈಗಂಟಿಕೊಳ್ಳುತ್ತೇನೊ ಎಂದುಕೊಂಡಿರಬಹುದು ನೀನು ! ಎಂದು ಸುರೇಶ ಗಟ್ಟಿಯಾಗಿ ನಕ್ಕು, `ಆದರೆ ನಾನು ಕಂಡಂತೆ ಇವರ ಮನಸ್ಸು ಅಷ್ಟು ಕಪ್ಪಲ್ಲ ಶಾಲಿ. ಇಲ್ಲಿಗೆ ಬಂದ ನಮ್ಮ ದೇಶದ ಜನರಲ್ಲಿ ಎಷ್ಟೋ ಮಂದಿಗೆ ಎಷ್ಟು ಕಪ್ಪು ಮನಸ್ಸಿದೆ ಅಂದರೆ ಈ ಕರಿಜನರಲ್ಲಿ ಅಂಥ ಮನಸ್ಸಿನವರನ್ನು ಒಬ್ಬರನ್ನೂ ಕಂಡಿಲ್ಲ. ಇವರಲ್ಲಿ ಏನಾದರೂ ವಿಕಲ್ಪ ಬುದ್ಧಿಯನ್ನು ಕಂಡರೆ ಅದರಲ್ಲಿ ಹೆಚ್ಚಿನಂಶವನ್ನು ಹುಟ್ಟಿಸಿದವರು ಬಿಳಿಯರು ಮತ್ತು ನಾವು ಅನ್ನಬೇಕು’ ಎಂದ.
ಸುಮಾರು ಹತ್ತು ಗಂಟೆಯ ಹೊತ್ತಿಗೆ ಯಾರೋ ಒಬ್ಬ ಫ್ಯಾಕ್ಟರಿಯ ಆಳು ಬಂದು ಕರೆಗಂಟೆಯನ್ನೊತ್ತಿದಾಗ ಶಾಲಿನಿ ಸುರೇಶನ ತೋಳಿನಲ್ಲಿದ್ದಳು.
ಸುರೇಶ ಎದ್ದು ಹೋಗಿ ಅವನಿಗೆ ಹೇಳಬೇಕಾದ್ದನ್ನು ಹೇಳಿ ಮರಳಿ ಬಂದಾಗ ಶಾಲಿನಿ,
`ಇಡೀ ರಾತ್ರಿ ಇವರು ಹೀಗೆ ಬರ್ತಿರ್ತಾರ ?’ ಎಂದು ಕೇಳಿದಳು.
`ಹಾಗೇನೂ ಇಲ್ಲ ಶಾಲಿ, ಯಾವಾಗಾದರೊಮ್ಮೆ ಬರ್ತಾರೆ. ಏನಾದ್ರೂ ಎಮರ್ಜೆನ್ಸಿಯಿದ್ದರೆ ಬರ್ತಾರೆ. ಇಡೀ ಫ್ಯಕ್ಟರಿಯ ಜವಾಬ್ದಾರಿ ನನ್ನ ಮೇಲಿದೆ. ಆದ್ದರಿಂದಲೇ ಭಾನುವಾರ ಹೊರತು ಬೇರೆ ಯಾವ ದಿನವೂ ನಾನು ಎಚ್ಚರವಾಗಿರಬೇಕೆಂದಿಲ್ಲ. ನಿದ್ದೆ ಮಾಡಿಬಿಡ್ತೇನೆ. ಕರೆಗಂಟೆ ಬಾರಿಸಿದಾಗ ಒಮ್ಮೆ ಏಳಬೇಕು ಅಷ್ಟೆ. ಏನಾದರೂ ಅಗತ್ಯದ ಕೆಲಸವಿದ್ದರೆ ಒಮ್ಮೆ ಫ್ಯಾಕ್ಟರಿಯೊಳಗೆ ಹೋಗಿ ಬರಬೇಕಾಗುತ್ತದೆ. ಮತ್ತೆ ಪುನಃ ಸಲೀಸಾಗಿ ನಿದ್ದೆ ಬರ್ತದೆ. ಇದೊಂದು ಅಭ್ಯಾಸವಾಗಿಬಿಟ್ಟಿದೆ’ ಸುರೇಶನೆಂದ.
ಅವನು ಸೋಫಾದಲ್ಲಿ ಕುಳಿತುಕೊಂಡು ಶಾಲಿನಿಯನ್ನು ತೊಡೆಯ ಮೇಲೆ ಕುಳ್ಳಿರಿಸಿಕೊಂಡು, ಅವಳನ್ನಪ್ಪಿ ಹಿಡಿದುಕೊಂಡು,
`ಆದರೆ ಇತ್ತೀಚೆಗೆ ಸ್ವಲ್ಪ ಸಮಯದಿಂದ ಯಾರೂ ಕಾಲಿಂಗ್ ಬೆಲ್ ಬಾರಿಸದಿದ್ದರೂ ನಿದ್ರೆ ಬರುತ್ತಿರಲಿಲ್ಲ ನೋಡು’ ಎಂದ.
`ಏಕೆ ?’ ಶಾಲಿನಿ ಕಣ್ಣರಳಿಸಿದಳು.
`ನಿನ್ನ ನೆನಪು, ನೀನು ಬರುವ ಕುರಿತಾದ ನಿರೀಕ್ಷೆ, ಉದ್ವೇಗ’
`ಓ, ಹಾಗೊ ! ನಾನು ಇಂಥ ದಿನವೇ ಬರುವುದೆಂದು ಮೊದಲೇ ತೀರ್ಮಾನವಾಗಿತ್ತಲ್ಲ. ಬೇರೆ ದಿವಸ ಏಕೆ ನಿರೀಕ್ಷಿಸಬೇಕು ?’ ಅವಳು ನಾಚುತ್ತಾ ಕಿಲಕಿಲನೆ ನಕ್ಕು ನುಡಿದಳು. ಅವಳ ಎಡಗೆನ್ನೆಯಲ್ಲಿ ಆಕರ್ಷಕವಾದ ಗುಳಿಯೊಂದು ಮೂಡಿ ಮಾಯವಾಯಿತು.
`ಹಾಗಂತ ನಿನ್ನನ್ನು ಮರೆತುಬಿಡಬೇಕೆ ? ನೀನು ಯಾವಾಗ ಬಂದು ಮುಟ್ಟುತ್ತಿಯೋ, ಯಾವಾಗ ಒಮ್ಮೆ ನಿನ್ನನ್ನು ಹಿಡಿದಪ್ಪಿಕೊಳ್ಳುವೆನೊ ಎಂದು ಕಾತರಿಸುತ್ತಿದ್ದೆ. ಎರಡು ತಿಂಗಳು ನಾವು ಒಟ್ಟಿಗೆ ಇಂಡಿಯದಲ್ಲಿದ್ದುದು ನನಗೆ ಕನಸೇ ಅನಿಸಿದೆ. ಆ ಕುರಿತು ನನಗೆ ಏನೇನೂ ನೆನಪಿಲ್ಲ, ನಿನ್ನ ನೆನಪಿನ ಹೊರತು’
ಅವಳು ಮೋಹಕವಾಗಿ ನಗುತ್ತಾ,
`ನಾನು ಇನ್ನೆರಡು ತಿಂಗಳು ಕಳೆದು ಬರುತ್ತಿದ್ದರೆ ?’ ಎಂದು ಕೇಳಿದಳು.
`ಇನ್ನೂ ಸ್ವಲ್ಪ ಕಾಲ ನಿದ್ದೆ ಕಳೆದುಕೊಳ್ಳುತ್ತಿದ್ದೆ’ ಎಂದು ಸುರೇಶ ಅವಳ ಗಲ್ಲವನ್ನು ಎತ್ತಿಹಿಡಿದು, ಅಗಲವಾಗಿ ಅರಳಿ ಮಿನುಗುತ್ತಿದ್ದ ಅವಳ ಕಣ್ಣುಗಳೊಳಗೆ ಇಣುಕಿ, `ನೀನೇನು ಮಾಡ್ತಿದ್ದೆ ?’ ಎಂದು ಕೇಳಿದ.
`ಸುಖವಾಗಿ ನಿದ್ದೆ ಮಾಡ್ತಿದ್ದೆ’ ಅವಳು ಗಟ್ಟಿಯಾಗಿ ನಕ್ಕಳು.
`ನನ್ನ ನೆನಪಾಗುತ್ತಿರಲಿಲ್ಲ ?’
`ಊಹುಂ’
`ಖಂಡಿತವಾಗಿ ?’
`ನಿಮ್ಮ ನೆನಪು ಆಗುವುದೆಂದರೇನು ನಿಮ್ಮನ್ನು ಮರೆತಿದ್ದರೆ ತಾನೇ ನಿಮ್ಮ ನೆನಪು ಆಗಬೇಕಾದ್ದು ? ಮರೆತೇ ಇಲ್ಲವಾದರೆ ?’
`ಮತ್ತೆ ಸುಖವಾಗಿ ನಿದ್ದೆ ಮಾಡ್ತೀಯಂತೆ ?’
`ನಿದ್ದೆ ಬರದಿದ್ದರೆ ಮಾತ್ರವೇ ನಿಮ್ಮನ್ನು ಮರೆತಿಲ್ಲ ಅಂತ ಅರ್ಥವೆ ? ನಿಮ್ಮ ನೆನಪಿನಲ್ಲೇ ನಿದ್ದೆ ಬರ್ತದೆ. ನೀವು ನನ್ನನ್ನು ಬೇರೆ ಹೊತ್ತು ಮರೆತಿರ್ತೀರಿ ! ನೆನಪಾದಾಗ ಮಾತ್ರ ನಿದ್ರೆ ಬರೋಲ್ಲ ಅಷ್ಟೆ’ ಶಾಲಿನಿ ಪುನಃ ಗಟ್ಟಿಯಾಗಿ ನಕ್ಕಳು.
`ಪರವಾಗಿಲ್ಲ, ಮಾತಿನಲ್ಲಿ ಜಾಣೆ ಇರುವಿ !’
`ಮತ್ಯಾವುದರಲ್ಲಿ ಅಲ್ಲ ?’
`ಅದು ಇನ್ನು ನೋಡಬೇಕಷ್ಟೆ’
`ಹಿಂದಿನದ್ದು ಏನೂ ನೆನಪಿಲ್ವೆ ?’
`ಯಾವಾಗ ? ಇಂಡಿಯದಲ್ಲಿ ಕಳೆದ ಎರಡು ತಿಂಗಳಲ್ಲೆ ?’
`ಹೂಂ’
`ಒಂದು ವಿಷಯ ಪರವಾಗಿಲ್ಲ. ಉಳಿದ ವಿಷಯಗಳ ಕುರಿತು ಆಗ ಸರಿಯಾದ ಮಾಹಿತಿ ಸಿಕ್ಕಿರಲಿಲ್ಲ’
`ಯಾವ ವಿಷಯದಲ್ಲಿ ?’ ಶಾಲಿನಿ ಕುತೂಹಲದಿಂದ ಕೇಳಿದಳು.
ಸುರೇಶ ಮೇಜಿನ ಮೇಲಿದ್ದ ರಾಧಾಕೃಷ್ಣರು ಗಾಢವಾದ ಆಲಿಂಗನದಲ್ಲಿರುವ ದಂತದ ಪುತ್ತಳಿಯನ್ನು ತೋರಿಸಿದ.
`ಛಿ ! ಕೆಟ್ಟವರು ನೀವು !’ ಶಾಲಿನಿಯೆಂದಳು ನಾಚಿ ನೀರಾಗಿ.
ಸುರೇಶ ಅವಳನ್ನು ಬಲವಾಗಿ ಅಪ್ಪಿ ಹಿಡಿದುಕೊಂಡು ತುಟಿಗಳನ್ನು ಚುಂಬಿಸಿದ. ಶಾಲಿನಿ ತಾನೆಲ್ಲಿರುವೆನೆಂಬುದನ್ನು ಮರೆತುಬಿಟ್ಟಳು.
ಹನ್ನೆರಡು ಗಂಟೆಯಾದಾಗ ಸುರೇಶನ ಗಮನ ಒಮ್ಮೆಲೇ ಗಡಿಯಾರದ ಕಡೆಗೆ ಹೋಯಿತು.
`ಏನು ಕೃಷ್ಣರಾವ್ ಇನ್ನೂ ಬರಲಿಲ್ಲ !’ ಎಂದು ಉದ್ಗರಿಸಿದ.
`ಹನ್ನೆರಡು ಗಂಟೆಯಾಯಿತಷ್ಟೆ. ಬರಬಹುದು’ ಶಾಲಿನಿಯೆಂದಳು.
`ಇಷ್ಟರಲ್ಲೇ ಬರ್ಬೇಕಾಗಿತ್ತು’
`ಏನೋ ತಡವಾಗಿರಬಹುದು’
`ತಡವಾಗಬೇಕಾದ ಕಾರಣವೇ ಇಲ್ಲ. ರಾತ್ರಿ ಗೋಸ್ಲೋ ಏನೂ ಇಲ್ಲ. ಬಿಜಂಡೆ ಡ್ರೈವ್ ಮಾಡೋದು ಅಂದ್ಮೇಲೆ ಹತ್ತು ನಿಮಿಷದ ಮೊದಲೇ ಬಂದು ಮುಟ್ತಾನೆ’ ಎಂದ ಸುರೇಶ.
ಕಾಯುತ್ತಲೇ ಗಂಟೆ ಒಂದು ದಾಟಿದಾಗ ಸುರೇಶನಿಗೆ ಗಾಬರಿಯೇ ಆಯಿತು.
ಶಾಲಿನಿ ನಿದ್ರಿಸಿಬಿಟ್ಟಿದ್ದಳು.
ಸುರೇಶ ಎದ್ದು ಬಾಲ್ಕನಿಗೆ ಬಂದು ರಸ್ತೆಯುದ್ದಕ್ಕೂ ದೃಷ್ಟಿ ಹಾಯಿಸಿದ.
ಸುರೇಶ ಕೃಷ್ಣರಾಯರ ಮನೆಗೆ ಫೋನು ಮಾಡಿದ.
ಫೋನಿನ ಕರೆಗಂಟೆ ಬಾರಿಸುತ್ತಿದ್ದುದು ಮಾತ್ರ ಕೇಳಿಸುತ್ತಿತ್ತೇ ವಿನಾ ಯಾರೂ ರಿಸೀವರ್ ಎತ್ತಲಿಲ್ಲ. ಕೃಷ್ಣರಾವ್ ಮನೆಗೆ ಮರಳಲಿಲ್ಲ ಎಂಬುದು ಖಾತ್ರಿಯಾಯಿತು.
ಇಜೆಬೋಡೆಗೆ ಶ್ರೀಕಾಂತರ ಮನೆಗೆ ಫೋನು ಮಾಡಿದ. ಹತ್ತು ನಿಮಿಷದ ಪ್ರಯತ್ನದ ಬಳಿಕ ಸಂಪರ್ಕ ಸಿಕ್ಕಿತು.
`ಹಲೋ, ಯಾರು ?’ ಶ್ರೀಕಾಂತ್ ಕೇಳಿದರು.
`ನಾನು ಸುರೇಶ್, ಇಬಾದನ್ನಿಂದ ಮಾತಾಡ್ತಿದ್ದೀನಿ ;
`ನಮಸ್ಕಾರ, ಏನು ವಿಶೇಷ ? ನಿಮ್ಮಾಕೆ ಬಂದ್ರಾ ?’
`ಬಂದ್ಲು. ಅಂದ್ಹಾಗೆ ಕೃಷ್ಣರಾವ್ ಎಷ್ಟು ಹೊತ್ತಿಗೆ ನಿಮ್ಮಲ್ಲಿಂದ ಹೊರಟ್ರು ?
`ಕೃಷ್ಣರಾಯರೆ ? ಇನ್ನೂ ಇಲ್ಲಿಗೆ ಬಂದೇ ಇಲ್ವಲ್ಲ ?’ ಶ್ರೀಕಾಂತ್ ಆಶ್ಷರ್ಯದಿಂದ ಕೇಳಿದರು.
`ಬಂದಿಲ್ವೆ? ಹೆಂಡತಿ ಮತ್ತು ಮಗುವನ್ನು ಕರ್ಕೊಂಡು ಬರ್ತೀನಿ ಅಂತ ಇಲ್ಲಿಂದ ಹೋಗಿದ್ರು’ ಸುರೇಶನೂ ಆಶ್ಚರ್ಯದಿಂದ ಕೇಳಿದ.
`ಎಷ್ಟು ಹೊತ್ತಿಗೆ?’
`ಸುಮಾರು ಒಂಭತ್ತು ಗಂಟೆಯ ಹೊತ್ತಿಗೆ’
`ಹೌದೆ!’
`ಅವರ ಹೆಂಡತಿ, ಮಗು ಎಲ್ಲಿದ್ದಾರೆ?’
`ಇಲ್ಲೇ ನಮ್ಮನೆಯಲ್ಲಿದ್ದಾರೆ’
`ಸರಿ. ಏನಾಯ್ತೆಂದು ಅರ್ಥವಾಗ್ತಿಲ್ಲ. ಆಮೇಲೆ ಪುನಃ ಫೋನು ಮಾಡ್ತೀನಿ’
`ಸರಿ’
ಸುರೇಶ ರಿಸೀವರ್ ಕೆಳಗಿರಿಸಿ ಆಲೋಚಿಸುತ್ತಾ ಕುಳಿತ.
ಶಾಲಿನಿ ಗಾಢ ನಿದ್ದೆಯಲ್ಲಿದ್ದಳು.
ಹೆಚ್ಚಿನಂಶ ದಾರಿಯಲ್ಲಿ ಕಾರು ಕೆಟ್ಟಿರಬಹುದು ಅಂದುಕೊಂಡ. ಆದರೆ ಅಂಥ ಸಂಭವ ಕಡಿಮೆಯೆಂದೇ ಅನಿಸಿತು. ಆದರೆ ಬೇರೆ ಯಾವ ಕಾರಣವೂ ಹೊಳೆಯಲಿಲ್ಲ. ಯಾರಾದರೂ ದರೋಡೆಕೋರರು ದಾರಿಯಲ್ಲಿ ಆಕ್ರಮಿಸಿರಬಹುದೆ ಎಂದೊಮ್ಮೆ ಚಿಂತಿಸಿದ. ರಾತ್ರಿಯ ಹೊತ್ತಾದ್ದರಿಂದ ಅಪಘಾತದ ಸಂಭವ ಕಡಿಮೆ ಅಂದುಕೊಂಡ. ಹೆಚ್ಚಿನಪಕ್ಷ ದಾರಿಯಲ್ಲಿ ಕಾರು ಕೆಟ್ಟುದೇ ಕಾರಣವಿರಬೇಕೆಸಿತು.
ಗಂಟೆ ಎರಡು ಸಮೀಪಿಸಿತು. ಸುಮ್ಮನೆ ಯೋಚಿಸುತ್ತಾ ಕುಳಿತಾರಾಗದೆಂದು ಶಿವಾನಂದನಿಗೆ ಪೋನು ಮಾಡಿ ವಿಷಯ ತಿಳಿಸಿದ.
`ಸುಮ್ಮನೆ ಇರುವಂತಿಲ್ಲ. ದಾರಿಯಲ್ಲಿ ಏನೋ ಆಗಿರ್ಬೇಕು. ಕೂಡಲೇ ಹೋಗಿ ನೋಡ್ಬೇಕು’ ಅಂದ.
`ಹೇಗೆ ಮಿಸ್ಟರ್ ಸುರೇಶ್? ಗಣರಾಜರ ಕಾರು ಗ್ಯಾರೇಜಿನಲ್ಲಿದೆ. ನಮ್ಮಲ್ಲಿ ಬೇರೆ ಯಾರಲ್ಲೂ ಕಾರು ಇಲ್ಲ’ ಶಿವಾನಂದನೆಂದ.
`ಆ ವಿಷಯ ಚಿಂತಿಸಬೇಡಿ.