Frankenstein
()
About this ebook
Her father, Narayana Uchil, was an educationist and reformist and mother U Vasanthi worked as PT and Guiding teacher at the Besant National Girls School.
With an inborn passion for books and reading and with a treasury of books at home, she read a lot and soon took to writing. Her first poem 'KaDalina Kare' was published in 'Rashtrabandhu, when she was just eleven.
Married life brought her to Mumbai. Memoirs of her grandmother were published in 'Amrita Varshini' in 'BeLLi' in 1971. Her other works are Kannada stories, features, translated stories and travelogues in different magazines in Karnataka and Mumbai.
She has worked for Sound and Picture Archive for Research On Women (SPARROW) in the field of transcription and translation. She has also served on the editorials of Mumbaivani special issues and Nityavani daily in Mumbai. She has presented a research paper on Mumbai-based Kannada fiction at PUKAR in Mumbai.
Besides, she was the president of Srijana, a forum of women writers in Kannada in Mumbai for two years. During her tenure, she had organized seminars, book releases and workshops in collaboration with the Anuvada Academy, Bangalore.
Her published works include 'Alamapanah', translated from the Hindi version of the Urdu novel of the same name by Rafia Manzurul Amin and it was brought out Bhagirathi Prakashana in 1994, translation of Margaret Mitchell's great Classic 'Gone With The Wind' published by Ankita Pustaka, Bangalore in 2004, translation of Mary Shelly's Classic, 'Frankenstein' published by Ankita Pustaka, Bangalore in 2007 and many others.
Read more from Shyamala Madhav
Police Diary Rating: 0 out of 5 stars0 ratingsSathsanchaya Rating: 0 out of 5 stars0 ratingsBaduku Chithra Chittara Rating: 0 out of 5 stars0 ratings
Related to Frankenstein
Related ebooks
Nanna Mattige Rating: 0 out of 5 stars0 ratingsPrashne Mathu Devaru Rating: 0 out of 5 stars0 ratingsSandarbha Sammandha Rating: 0 out of 5 stars0 ratingsTappu Maadona Banni! Rating: 4 out of 5 stars4/5Nanna Premada Hudugi Rating: 4 out of 5 stars4/5Kempu Kalave Rating: 0 out of 5 stars0 ratingsಯಶೋಃಗೀತ Rating: 0 out of 5 stars0 ratingsInchara Bandalu Inchara Rating: 0 out of 5 stars0 ratingsHaddina Rekke Saadu Rating: 5 out of 5 stars5/5Dhuddu Maaduvudu Hege? Rating: 0 out of 5 stars0 ratingsKengulabi Rating: 0 out of 5 stars0 ratingsThe Diary of Mrs.Sharada Rating: 5 out of 5 stars5/5Surya Vamsam Rating: 0 out of 5 stars0 ratingsKarmanye Vadhikaraste Rating: 0 out of 5 stars0 ratings
Reviews for Frankenstein
0 ratings0 reviews
Book preview
Frankenstein - Shyamala Madhav
http://www.pustaka.co.in
ಫ್ರಾಂಕಿನ್ಸ್ಟೈನ್
Frankenstein
Author :
ಶ್ಯಾಮಲಾ ಮಾಧವ
Shyamala Madhav
For more books
http://www.pustaka.co.in/home/author/shyamala-madhav
Digital/Electronic Copyright © by Pustaka Digital Media Pvt. Ltd.
All other copyright © by Author.
All rights reserved. This book or any portion thereof may not be reproduced or used in any manner whatsoever without the express written permission of the publisher except for the use of brief quotations in a book review.
ಅಂತರಂಗ
ವಿಶ್ವ ಸಾಹಿತ್ಯದ ಅನುಪಮ ಕೃತಿಗಳಲ್ಲೊಂದಾಗಿ, ದಂತಕಥೆಯೇ ಆಗಿಹೋದ ‘ಫ್ರಾಂಕಿನ್ಸ್ಟೈನ್’, ಕನ್ನಡನುವಾದದಲ್ಲಿ ಬೆಳಕು ಕಾಣುತ್ತಿರುವ ಸಾರ್ಥಕ್ಯ ನನ್ನದಾಗಿದೆ. ಹದಿನೆಂಟನೇ ಶತಮಾನದ ಗಾಥಿಕ್ ಶೈಲಿಯ ಈ ಮೂಲಕೃತಿಯು, ಹತ್ತೊಂಬತ್ತರ ಹರೆಯದ ಲೇಖಕಿ ಮೇರಿ ಶೆಲ್ಲಿಯ ಕನಸು-ಕಲ್ಪನೆಯ ಪ್ರತಿಕೃತಿ; ಬೆಳಕು ಕಂಡೊಡನೆ, ವಿವಾದಗಳೊಡನೇ ಯಶಸ್ಸು, ಜನಪ್ರಿಯತೆಯನ್ನು ಕಂಡುಕೊಂಡ ವಿಶಿಷ್ಟ ಮಹತ್ ಕೃತಿ.
ಉತ್ತರಧ್ರುವದ ಅನ್ವೇಷಕನಾಗಿ ಸಾಗಿದ ವಾಲ್ಟನ್, ತನ್ನ ಸೋದರಿಗೆ ಬರೆವ ಪತ್ರದೊಂದಿಗೆ ಆರಂಭವಾಗಿ, ಆ ಹಿಮಸಾಗರದಲ್ಲಿ ರಕ್ಷಿಸಲ್ಪಟ್ಟ ಫ್ರಾಂಕಿನ್ಸ್ಟೈನ್ನ ಕಥನವಾಗಿ, ಜೊತೆಎ ಆ ದೈತ್ಯ ಸೃಷ್ಟಿಯ ಅಂತರಂಗ ನಿವೇದನೆಯಾಗಿ ಸಾಗುವ ಈ ರಮ್ಯ ಕಥೆಯುದ್ದಕ್ಕೂ, ಅದ್ಭುತ ವರ್ಣನಾ ವೈಖರಿ, ಭಾವ ಸಂಘರ್ಷ ಚಿತ್ರ, ಸುರಮ್ಯ ಪ್ರವಾಸ ಕಥನ, ಹೃದ್ರಾವಕ ಸನ್ನಿವೇಶಗಳು ತೆರೆದುಕೊಳ್ಳುತ್ತವೆ.
ದೈತ್ಯ ಸೃಷ್ಟಿಯ ಭೀಭತ್ಸತೆಯೊಂದಿಗೆ ಮಿಳಿತವಾದ, ಆ ದೆವ್ವ ಸದೃಶ ದೇಹದಲ್ಲಿ ಮಿಡಿವ ಮಾನವೀಯ ಸಂವೇದನೆಗಳ, ಅರ್ತಿ, ಆಕಾಂಕ್ಷೆಯ ಕಥಾನಕವಿದು! ಅವು ತಿರಸ್ಕøತವಾಗಿ ಪರಿತ್ಯಕ್ರನಾದಾಗ ದಾನವಾಂಶವೇ ಮೇಲ್ಗೈ ಆಗಿ ಕಂಟಕನಾದ ರೋಮಾಂಚಕ ಕಥನವಿದು! ಸಂಪತ್ತು ಒಡ್ಡಿದ ಎಲ್ಲ ಆಮಿಷಗಳ ಬದಲಿಗೆ ಕೀರ್ತಿಯನ್ನೇ ಆಯ್ದುಕೊಂಡ ಅನ್ವೇಷಕ ವಾಲ್ಟನ್ನ ಈ ರಮ್ಯ ಅನುಭವ ಕಥನವನ್ನು ರಸವತ್ತಾಗಿ, ಮೈನವಿರೇಳಿಸುವಂತೆ ಹೆಣೆದ ಕಥೆಗಾತಿ ಮೇರಿ ಶೆಲ್ಲಿ ನನ್ನನ್ನು ಬಹುವಾಗಿ ತಟ್ಟಿ ಕಾಡಿದ್ದಾಳೆ.
ಅನುಪಮ ಭಾಷಾ ಸಂಪತ್ತಿನ ‘ಫ್ರಾಂಕಿನ್ಸ್ಟೈನ್’ ಮೂಲಕೃತಿಯನ್ನು ನನ್ನ ಕೈಯಲ್ಲಿರಿಸಿ ಅನುವಾದಕ್ಕೆ ಹಚ್ಚಿದವರು, ನನ್ನ ಆತ್ಮೀಯರಾಗಿ, ನನ್ನ ಸಾಹಿತ್ಯಿಕ ಸಾಧನೆಗೆ ಇಂಬಾದ ಶ್ರೇಷ್ಠ ಭಾಷಾತಜ್ಞ, ಸಾಹಿತಿ ಶ್ರೀ ಕೆ.ಟಿ.ಗಟ್ಟಿ ಅವರು. ಹೃದಯಸ್ಪರ್ಶಿಯಾಗಿ ಪ್ರಿಯವೆನಿಸುವ ಸಾಹಿತ್ಯ ಕೃತಿಗಳನ್ನು ನನ್ನ ಕನ್ನಡ ನುಡಿಯಲ್ಲಿ ಪಡಿಮೂಡಿಸುವ ಅನುವಾದ ಪ್ರಕ್ರಿಯೆ ನನಗೆ ಬಹಳ ಸಂತಸ, ಸಂತೃಪ್ತಿ ತರುವಂತಹುದು. ನನ್ನ ಓದುಗರಿಗೂ ಈ ಕೃತಿ ಅಷ್ಟೇ ಅಪ್ಯಾಯಮಾನವಾಗುವುದೆಂಬ ಭರವಸೆ ನನಗಿದೆ.
ಹಸ್ತಪ್ರತಿಯನ್ನು ಶ್ರದ್ಧೆಯಿಂದ ಡಿ.ಟಿ.ಪಿ ಮಾಡಿಕೊಟ್ಟ ಮುಂಬೈಯ ನವೀನ್ ಪ್ರಿಂಟರ್ಸ್ನ ಸಿಬ್ಬಂದಿ ವರ್ಗಕ್ಕೆ;
ಪುಸ್ತಕ ಪ್ರಕಾಶನವನ್ನು ಕೈಗೆತ್ತಿಕೊಂಡು ಅತ್ಯಂತ ಸಮರ್ಪಕವಾಗಿ ಆಕರ್ಷಕವಾಗಿ ಮುದ್ರಿಸಿ, ನನ್ನ ‘ಫ್ರಾಂಕಿನ್ಸ್ಟೈನ್’ ನನ್ನು ನಿಮಗೊಪ್ಪಿಸುತ್ತಿರುವ ‘ಅಂತಹ ಪುಸ್ತಕ’ದ ಪ್ರಕಾಶ್ ಕಂಬತ್ತಳ್ಳಿಯವರಿಗೆ;
ಸಾಹಿತ್ಯಾಭಿರುಚಿಯ ಸಹಜ ಸಂತಸದಿಂದ ಈ ಕೃತಿಯನ್ನು ಆಸ್ವಾದಿಸಿ ಹೃದ್ಯವಾಗಿಸಿಕೊಳ್ಳುವ ಸಹೃದಯರೆಲ್ಲರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು.
ಶ್ಯಾಮಲಾ ಮಾಧವ
ಪ್ರಸ್ತಾವನೆ
ಮೆರಿ ಶೆಲ್ಲಿಯ ಫ್ರಾಂಕಿನ್ಸ್ಟೈನ್
ಮೆರಿ ವಾಲ್ಸ್ಟೋನ್ಕ್ರಾಫ್ಟ್ ಹಾಗೂ ವಿಲಿಯಮ್ ಗಾಡ್ವಿನ್ ದಂಪತಿಯ ಮಗಳಾಗಿ 1797ರಲ್ಲಿ ಲಂಡನ್ನಲ್ಲಿ ಜನಿಸಿದ ಮೇರಿ ಶೆಲ್ಲಿ ಹುಟ್ಟಿದ ಹತ್ತು ದಿನಗಳಲ್ಲೇ ತಾಯಿಯನ್ನೂ ಕಳಕೊಂಡಳು. ಸ್ತ್ರೀವಾದದ ಪ್ರಥಮ ಪ್ರತಿಪಾದಕರಲ್ಲೊಬ್ಬಳಾಗಿದ್ದ ತಾಯಿ ಮೇರಿ ಹಾಗೂ ಪ್ರಸಿದ್ಧ ಪತ್ರಕರ್ತರಾಗಿದ್ದ ತಂದೆ ವಿಲಿಯಮ್ ಗಾಡ್ವಿನ್, ಮಹತ್ವಪೂರ್ಣ ಕೃತಿಗಳನ್ನು ರಚಿಸಿದವರು. ಬಾಲ್ಯವನ್ನು ತನ್ನ ತಂದೆಯ ಸಾಹಿತ್ಯಿಕ ಪ್ರಭಾವಲಯದಲ್ಲಿ ಕಳೆದ ಮೇರಿ, ಪತ್ರಕರ್ತ ಹಾಜ್ಲಿಟ್, ಲೇಖಕ ಲ್ಯಾಂಬ್, ಕವಿಗಳಾದ ಕೋಲ್ರಿಜ್ ಹಾಗೂ ಪಿ.ಬಿ. ಶೆಲ್ಲಿಯ ಸಾನಿಧ್ಯದಲ್ಲಿ ತನ್ನ ವಿದ್ಯೆಯನ್ನು ತಾನೇ ರೂಪಿಸಿಕೊಂಡಳು.
ಹತ್ತು ವರ್ಷದವಳಿದ್ದಾಗ ತನ್ನ ಪ್ರಥಮ ಕವನವನ್ನು ಪ್ರಕಟಿಸಿದ ಮೇರಿ, ಹದಿನಾರರ ಹರೆಯದಲ್ಲಿ ಕವಿ ಶೆಲ್ಲಿಯೊಡನೆ ಫ್ರಾನ್ಸ್ ಹಾಗೂ ಸ್ವಿಜಲ್ರ್ಯಾಂಡ್ಗೆ ಪಲಾಯನಗೈದಳು. 1816ರಲ್ಲಿ ಅವರಿಬ್ಬರೂ ವಿವಾಹ ಬಂಧನದಲ್ಲಿ ಸತಿಪತಿಗಳಾದರು. ಹಿಸ್ಟರಿ ಆಫ್ ಸಿಕ್ಸ್ವೀಕ್ಸ್ಟೂರ್
ಎಂಬ ಕೃತಿಯಲ್ಲಿ ಈ ದಂಪತಿ ಜೊತೆಯಾಗಿ ತಮ್ಮ ಅನುಭವಗಳನ್ನು ಪ್ರಕಟಿಸಿದರು. ಇಟೆಲಿಯಲ್ಲಿ ತಮ್ಮ ಮೊದಲ ಮಗುವನ್ನು ಕಳಕೊಂಡ ಅವರು, ಮತ್ತೆ ಪುನಃ ಇಂಗ್ಲೆಂಡ್ಗೆ ಹಿಂತಿರುಗಿದರು.
ಬೇಸಿಗೆ ರಹಿತ ವರ್ಷವೆಂದು ದಾಖಲಾದ, ಜ್ವಾಲಾಮುಖಿ ಸ್ಪೋಟದ ಪರಿಣಾಮವಾದ 1861ರ ಸುದೀರ್ಘ, ತೀಕ್ಷ್ಣ ಶೈತ್ಯ ಕಾಲದಲ್ಲಿ, ಹತ್ತೊಂಬತ್ತರ ಹರೆಯದ ಮೇರಿ ಗಾಡ್ವಿನ್, ತನ್ನ ಪ್ರಿಯಕರ ಶೆಲ್ಲಿಯೊಂದಿಗೆ, ರಜಾಕಾಲವನ್ನು ಕಳೇಯಲೆಂದು ಸ್ವಿಜರ್ಲೆಂಡ್ನ ಜಿನೇವಾ ಸರೋವರ ತಟದ ವಿಲ್ಲಾ ಡಿಯೋಡಾಟಿಯಲ್ಲಿ ಲಾರ್ಡ್ಬೈರನ್ನನ್ನು ಕೂಡಿಕೊಂಡರು. ಹೊರಗಣ ಶೈತ್ಯ ಹವೆಯ ಕಾರಣ, ರಜಾಕಾಲದ ಸುತ್ತಾಟದ ಯೋಜನೆಯೆಲ್ಲವನ್ನೂ ಕೈಬಿಡಬೇಕಾಗಿ ಬಂದು, ಒಳಗೇ ಕುಳಿತು ಜರ್ಮನ್ ಪ್ರೇತಕಥಾ ಸಂಗ್ರಹವೊಂದನ್ನು ಓದಿದ ಬಳಿಕ, ಬೈರನ್ ತನ್ನ ಅತಿಥಿಗಳೆದರು ಪಂಥಾಹ್ವಾನವೊಂದನ್ನಿಟ್ಟ. ಶೆಲ್ಲಿ ದಂಪತಿ, ತನ್ನ ವೈದ್ಯ ಜಾನ್ ವಿಲಿಯಮ್ ಪೊಲಿಡೊರಿ ಹಾಗೂ ತಾನು ನಾಲ್ವರೂ ವೈಯಕ್ತಿಕವಾಗಿ ಭಯಾನಕ ಕಥಾ ರಚನೆಯ ಸ್ಪರ್ಧೆ ಹಮ್ಮಿಕೊಂಡು ತಮ್ಮಲ್ಲಿ ಅತ್ಯಂತ ಭಯಾನಕ ಕಥೆ ಹೆಣೆದವರೇ ವಿಜೇತರೆಂಬ ಪಂಥಾಹ್ವಾನ! ಆ ರಾತ್ರಿ ಮೇರಿ, ಕನಸೊಂದನ್ನು ಕಂಡು ಎಚ್ಚೆತ್ತಿದ್ದಳು. ಬಿಳಿಚಿದ ಮುಖದ ವಿದ್ಯಾರ್ಥಿಯೊಬ್ಬ, ತಾನು ಸಂಯೋಜಿಸಿದ ದೇಹಕಾರವೊಂದರ ಬಳಿಯಲ್ಲಿ ಮೊಣಕಾಲೂರಿ, ಅದರಲ್ಲಿ ಜೀವಸ್ಪಂದನವನ್ನು ಕಾಣುವ ಭಯಾನಕ ಕನಸದು! ಈ ಕನಸಿಂದಲೇ ‘ಫ್ರಾಂಕಿನ್ಸ್ಟೈನ್’ ಕಥೆ ಮೊಳಕೆಯೊಡೆಯಿತು. ಬೈರನ್ ಹಾಗೂ ಶೆಲ್ಲಿಯರ ವೈಜ್ಞಾನಿಕ ವಿಷಯಗಳಲ್ಲಿನ ಆಸಕ್ತಿ; ವಿದ್ಯುತ್ ಸ್ಪರ್ಶದಿಂದ ಸತ್ತ ಕಪ್ಪೆಯಲ್ಲಿ ಸ್ಪಂದನ ತರುವ ಪ್ರಯೋಗ; ರಸವಿಜ್ಞಾನದ ಮಾತುಕತೆಯನ್ನು ಮೌನವಾಗಿ ಆಲಿಸುತ್ತಿದ್ದ ಮೇರಿ, ತನ್ನ ಈ ಕನಸಿನಿಂಧ ಕಥೆ ಹೆಣೆದು ಸ್ಪರ್ಧೆಯನ್ನು ಗೆದ್ದಳು. ಲಾರ್ಡ್ಬೈರನ್, ಬಾಲ್ಕನ್ಸ್ನ ತನ್ನ ಪಯಣದಲ್ಲಿ ಆಲಿಸಿದ್ದ ಪೈಶಾಚ ಕಥೆಗಳ ಆಧಾರದಲ್ಲಿ ಒಂದು ತುಣುಕಿನಷ್ಟೇ ಕಥೆ ಬರೆಯಲು ಶಕ್ಯನಾದರೆ, ಈ ತುಣುಕನ್ನೇ ಆಧರಿಸಿ, ಪೊಲಿಡೊರಿಯಿ 1819ರಲ್ಲಿ ‘ದಿ ವಾಂಪಯರ್’ ಕೃತಿಯನ್ನು ಸೃಷ್ಟಿಸಿದನು.
ವರ್ಷವೊಂದರೊಳಗೆ, 1817ರ ಮೇ ತಿಂಗಳಲ್ಲಿ ಫ್ರಾಂಕಿನ್ಸ್ಟೈನ್ ಆರ್ ದ ಮಾಡರ್ನ್ ಪ್ರೊಮೆಥಿಯನ್
ಎಂಬ ಮೂಲ ಶೀರ್ಷಿಕೆಯೊಂದಿಗೆ ಕೃತಿ ಸಿದ್ಧವಾಯ್ತು. ಲಂಡನ್ ಪಬ್ಲಿಶಿಂಗ್ ಹೌಸ್ 1818ರ ಜನವರಿ ಒಂದರಂದು ಕೃತಿಯನ್ನು ಪ್ರಕಟಿಸಿತು. ಲೇಖಕರ ಹೆಸರಿಲ್ಲದೆ ಅನಾಮಿಕನಾಗಿ ಪ್ರಕಟವಾದ ಕೃತಿಗೆ, ಪತಿ ಶೆಲ್ಲಿಯ ಸಹಿಯಿರದ ಮುನ್ನುಡಿಯಿತ್ತು. ಮೇರಿಯ ತಂದೆ ತತ್ವಶಾಸ್ತ್ರಜ್ಞ ವಿಲಿಯಮ್ ಗಾಡ್ವಿನ್ಗೆ ಕೃತಿ ಸಮರ್ಪಿತವಾಗಿತ್ತು. ಲೇಖಕರ ಹೆಸರಿರದೆ ಅನಾಮಿಕನಾಗಿದ್ದ ಈ ಪ್ರಭಾವಪೂರ್ಣ ಕೃತಿಯನ್ನು ಹತ್ತೊಂಬತ್ತರ ಹರೆಯದ ಮೇರಿ ಶೆಲ್ಲಿ ಬರೆದಿರಬಹುದೆಂದು ಜನರು ನಂಬುವುದು ಅಸಾಧ್ಯವಿತ್ತು.
ಆ ಕಾಲದಲ್ಲಿ ಪ್ರಚಲಿತವಿದ್ದಂತೆ ಮೂರು ಸಂಪುಟಗಳಾಗಿ, ಕೃತಿಯ ಐನೂರು ಪ್ರತಿಗಳು ಪ್ರಕಟಿಸಲ್ಪಟ್ಟಿದ್ದುವು.
1823ರ ಆಗಸ್ಟ್ 11 ರಂದು ಪ್ರಕಟವಾದ ಎರಡನೇ ಆವೃತ್ತಿ ಎರಡು ಸಂಪುಟಗಳಲ್ಲಿ ಪ್ರಕಟವಾಗಿ, ಲೇಖಕಿಯಾಗಿ ಮೇರಿ ಶೆಲ್ಲಿ ಹೆಸರು ನಮೂದಿಸಲ್ಪಟ್ಟಿತು. ಅದೇ ವರ್ಷ ಕೃತಿಯ ಫ್ರೆಂಚ್ ಅನುವಾದ ಪ್ರಕಟವಾಯ್ತು.
1831ರ ಅಕ್ಟೋಬರ್ 31ರಂದು ಒಂದೇ ಸಂಪುಟದಲ್ಲಿ ಮೂರನೇ ಆವೃತ್ತಿ ಪ್ರಕಟಿಸಲ್ಪಟ್ಟಿತು. ಕೃತಿಯ ಹುಟ್ಟಿನ ಬಗ್ಗೆ ಸುದೀರ್ಘವಾದ ಮುನ್ನುಡಿಯನ್ನೂ ಲೇಖಕಿ ಈ ಆವೃತ್ತಿಯಲ್ಲಿ ಪ್ರಸ್ತುತ ಪಡಿಸಿದಳು. ತನ್ನ ಕನಸೇ ಕಥೆಯ ಹುಟ್ಟಿಗೆ ಕಾರಣವೆಂದು ಲೇಖಕಿ ಹೇಳಿಕೊಂಡಿದ್ದರೂ, ‘ಫ್ರಾಂಕಿನ್ಸ್ಟೈನ್’ ಹೆಸರಿನ ಬಗ್ಗೆ ಅನೇಕ ಊಹಾಪೋಹಗಳು, ದಾವೆಗಳು ಹುಟ್ಟಿಕೊಂಡವು. ವಿವಾದಾತ್ಮಕ ಪ್ರತಿಕ್ರಿಯೆಗಳ ಹೊರತಾಗಿಯೂ ಮೊದಲ ಆವೃತ್ತಿ ಪ್ರಕಟವಾದೊಡನೆ ‘ಫ್ರಾಂಕಿನ್ಸ್ಟೈನ್’ ಜನಪ್ರಿಯವಾಗಿ ಯಶಸ್ಸನ್ನು ಕಂಡಿತು.
ಉಪಶೀರ್ಷಿಕೆಯ ಪ್ರೊಮೆಥಿಯನ್, ಗ್ರೀಕ್ ಪುರಾಣದಂತೆ, ಜೀವನವನ್ನು ಸೃಷ್ಟಿಸಿ, ದೇವಲೋಕದಿಂದ ಅಗ್ನಿಯನ್ನು ತಂದಿತ್ತು ಶಿಕ್ಷೆಗೆ ಒಳಗಾದವನು! ಅಂತೆಯೇ ಫ್ರಾಂಕಿನ್ಸ್ಟೈನ್ನನ್ನು ಇಲ್ಲಿ ಅಭಿನವ ಪ್ರೊಮೆಥಿಯನ್ ಎಂದು ಕರೆಯಲಾಗಿದೆ. ಕೈಗಾರಿಕಾ ಕ್ರಾಂತಿಯ ಆರಂಭದ ದಿನಗಳಲ್ಲಿ ಬರೆಯಲ್ಪಟ್ಟ ಈ ಕೃತಿಯಲ್ಲಿ ಸೃಷ್ಟಿಯು ಸೃಷ್ಟಿಕರ್ತನ ವಿರುದ್ಧ ತಿರುಗಿ ನಿಲ್ಲುವ ಪ್ರಮೇಯವು ತಂತ್ರಜ್ಞಾನದ ಜವಾಬ್ದಾರಿರಹಿತ ಪ್ರಯೋಗವು ಅನೂಹ್ಯ ಪರಿಣಾಮಗಳಿಗೆ ಎಡೆಕೊಡಬಹುದೆಂಬುದನ್ನು ಸೂಚಿಸುವಂತಿದೆ ಎಂಬ ಅಭಿಪ್ರಾಯವೂ ಇದೆ.
1818ರಲ್ಲಿ ಶೆಲ್ಲಿ ದಂಪತಿ ಇಂಗ್ಲೆಂಡ್ ತೊರೆದು ಇಟೆಲಿಗೆ ಬಂದರು. 1822ರ ಜುಲೈ 8ರಂದು ಲಿವೊರ್ನೋ ಬಳಿಯ ಸ್ಟೆಜಿಯಾ ಕೊಲ್ಲಿಯಲ್ಲಿ ಹಾಯಿದೋಣೆಯಲ್ಲಿ ಪ್ರಯಾಣಿಸುತ್ತಿರುವಾಗ ಪ್ರವಾಹಕ್ಕೆ ಸಿಲುಕಿ ಕವಿ ಶೆಲ್ಲಿ ಮೃತನಾದ. ಹತಹೃದಯಳಾಗಿ 1823ರಲ್ಲಿ ತನ್ನ ಪಾಳಿಗೆ ಉಳಿದೊಂದೇ ಮಗುವಿನೊಂದಿಗೆ ಇಂಗ್ಲೆಂಡ್ಗೆ ಹಿಂದಿರುಗಿದ ಮೇರಿ, ಮಗು ಪರ್ಸಿ ಫ್ಲಾರೆನ್ಸ್ನ ಏಳಿಗೆ, ವಿದ್ಯಾಭ್ಯಾದಕ್ಕಾಗಿ ತನ್ನ ಜೀವನವನ್ನು ಮೀಸಲಿಟ್ಟಳು. ಜೊತೆಗೆ ತನ್ನ ಲೇಖನ ವ್ಯವಸಾಯವನ್ನೂ ಮುಂದುವರಿಸಿದ ಆಕೆ, ಆ ಬಳಿಕ ಹಲವು ಕೃತಿಗಳನ್ನು ರಚಿಸಿ ಪ್ರಕಟಿಸಿದರೂ, ಅವಾವುದೂ ದಂತೆಕಥೆಯಾಗುಳಿದ ಈ ಪ್ರಥಮ ಕೃತಿ ‘ಫ್ರಾಂಕಿನ್ಸ್ಟೈನ್’ನಷ್ಟು ಪ್ರಭಾವ ಪೂರ್ಣವೆನಿಸಲಿಲ್ಲ. 1826ರಲ್ಲಿ ಮೇರಿ ಶೆಲ್ಲಿ ರಚಿಸಿದ ಕೊನೆಯ ಕಾದಂಬರಿ ‘ದ ಲಾಸ್ಟ್ ಮ್ಯಾನ್’-21ನೇ ಶತಮಾನದ ಇಂಗ್ಲಂಡ್ನ ರಿಪಬ್ಲಿಕನ್ ಚಿತ್ರವಾಗಿದ್ದು, ಪ್ಲೇಗ್ನಿಂದ ಮನುಕುಲವು ಅಳಿದು ಒಬ್ಬನೇ ಒಬ್ಬ ಮನುಷ್ಯನ ಉಳಿವನ್ನು ಚಿತ್ರಿಸುತ್ತದೆ.
ಆ ಬಳಿಕ ವಾಸ್ತವ ಚಿತ್ರಣಗಳ ಜನಪ್ರಿಯತೆಯನ್ನರಿತ ಮೇರಿ ಶೆಲ್ಲಿ ಹಲವು ನಿಯತಕಾಲಿಕೆಗಳಿಗೆ ಸಣ್ಣ ಕಥೆಗಳನ್ನೂ, ಜೀವನ ಚಿತ್ರಗಳನ್ನೂ ಬರೆದಳು. 1839ರಲ್ಲಿ ಶೆಲ್ಲಿಯ ಕವಿತೆಗಳ ನಾಲ್ಕು ಸಂಪುಟಗಳನ್ನೂ ರ್ಯಾಂಬಲ್ಸ್ ಇನ್ ಜರ್ಮನಿ ಆ್ಯಂಡ್ ಇಟೆಲಿ’ ಎಂಬ ಪ್ರವಾಸ ಕಥನವನ್ನು 1844ರಲ್ಲೂ ಪ್ರಕಟಿಸಿದಳು.
1851ರಲ್ಲಿ ಇಹವನ್ನಗಲಿದ ಮೇರಿ ಶೆಲ್ಲಿ ಹಲವು ಪತ್ರ ಸಂಚಯಗಳೂ, ಸಂಪಾದಿತ ಕೃತಿಗಳೂ ಪ್ರಕಟವಾಗಿರುವಂತೆಯೇ, ಈ ಪ್ರತಿಭಾನ್ವಿತ ಲೇಖಕಿಯ ಬಗ್ಗೆ, ಅವಳ ಕೃತಿಗಳು ಹಾಗೂ ಸಾಧನೆಯ ಬಗ್ಗೆ, ಅಸಂಖ್ಯ ಪರಿಚಯಾತ್ಮಕ, ಸಂಶೋಧನಾತ್ಮಕ, ವಿವಾದಾತ್ಮಕ ಕೃತಿಗಳು ಕಳೆದ ಶತಮಾನದುದ್ದಕ್ಕೂ ಬೆಳಕು ಕಂಡಿವೆ.
ಚಲಚ್ಚಿತ್ರವಾಗಿ ಫ್ರಾಂಕಿನ್ಸ್ಟೈನ್
ಫ್ರಾಂಕಿನ್ಸ್ಟೈನ್ ಕಥೆಯನ್ನು ಆಧರಿಸಿ ಹಾಗೂ ಅದರಿಂದ ಪ್ರಭಾವಿತವಾಗಿ 37 ಚಲಚ್ಚಿತ್ರಗಳು ತೆರೆ ಕಂಡಿವೆ. 1931ರಲ್ಲಿ ಚಿತ್ರಿತವಾದ ಬೋರಿಸ್ ಕಾರ್ಲೋವ್ ದೈತ್ಯನಾಗಿ ನಟಿಸಿದ ಹಾಗೂ ಕೋಲನ್ಕ್ಲೈವ್, ಫ್ರಾಂಕಿನ್ಸ್ಟೈನ್ನ ಪಾತ್ರ ನಿರ್ವಹಣೆಗೆ ಜೇಮ್ಸ್ವೇಲ್ ನಿರ್ದೇಶನದ ‘ಫ್ರಾಂಕಿನ್ಸ್ಟೈನ್’ ಕ್ಲಾಸಿಕ್ ಚಿತ್ರವೆಂದು ಪರಿಗಣಿಸಲ್ಪಟ್ಟಿದೆ. ಯೂನಿವರ್ಸಲ್ ಪಿಕ್ಚರ್ಸ್ ಸಂಸ್ಥೆ ಈ ಭೀಭತ್ಸ ಚಿತ್ರವನ್ನು ನಿರ್ಮಿಸುವ ಮುನ್ನ ಎರಡು ಮೂಕಿ ಚಿತ್ರಗಳೂ ನಿರ್ಮಾಣವಾಗಿದ್ದುವು; ‘ಫ್ರಾಂಕಿನ್ಸ್ಟೈನ್’ ಹಾಗೂ ‘ಲೈಫ್ ವಿದೌಟ್ ಅ ಸೋಲ್’ ಎಂಬ ಈ ಮೂಕಿಚಿತ್ರಗಳ ಬಳಿಕ ಬಂದ 1931ರ ವಾಕ್ಚಿತ್ರ ‘ಫ್ರಾಂಕಿನ್ಸ್ಟೈನ್’ನ ಬಳಿಕ, ಮೂವತ್ತಾರು ‘ಫ್ರಾಂಕಿನ್ಸ್ಟೈನ್’ ಚಲಚ್ಚಿತ್ರಗಳು ತೆರೆ ಕಂಡಿವೆ. 1994ರಲ್ಲಿ ತೆರೆಕಂಡ ಕೆನೆತ್ ಬ್ರಗನ್ ನಿರ್ದೇಶನದ ‘ಮೆರಿ ಶೆಲ್ಲೀಸ್ ಫ್ರಾಂಕಿನ್ಸ್ಟೈನ್’, ಮೂಲ ಕೃತಿಗೆ ನಿಕಟವಾಗಿ ನ್ಯಾಯ ಸಲ್ಲಿಸಿದ ಚಿತ್ರವೆಂದು ಕರೆಸಿಕೊಂಡಿತು. ನಿರ್ದೇಶಕನೇ ಫ್ರಾಂಕಿನ್ಸ್ಟೈನ್ನ ಪಾತ್ರವನ್ನು ವಹಿಸಿದ್ದು, ಖ್ಯಾತ ನಟ ರಾಬರ್ಟ್ ಡಿ ನೀರೋ ದೈತ್ಯನಾಗಿ ನಟಿಸಿದ್ದರು.
ನನ್ನನ್ನು ಈ ಭೂಮಿಗೆ ತಂದವನು ಇನ್ನಿಲ್ಲವಾಗಿ ಹೋಗಿದ್ದಾನೆ. ಇನ್ನು ನಾನೂ ಇಲ್ಲವಾದ ಮೇಲೆ, ನಮ್ಮಿಬ್ಬರ ನೆನಪೂ ಬೇಗನೇ ಅಳಿಸಿಹೋಗುವದು.....
ಎಂದು ಕತೆಯ ಕೊನೆಗೆ ಆ ದೈತ್ಯನ ಮಾತು ಉಲ್ಲೇಖಿತವಿದ್ದರೂ, ಮೇರಿ ಶೆಲ್ಲಿಯ ಫ್ರಾಂಕಿನ್ಸ್ಟೈನ್ ಹಾಗೂ ಅವನ ಆ ದೈತ್ಯಸೃಷ್ಟಿ ವಿಶ್ವಸಾಹಿತ್ಯದಲ್ಲಿ ಚಿರಂತನವಾಗಿ ಉಳಿದಿದ್ದಾರೆ.
-ಶ್ಯಾಮಲಾ ಮಾಧವ
ಫ್ರಾಂಕಿನ್ಸ್ಟೈನ್
ಪತ್ರ – 1
ಶ್ರೀಮತಿ ಸಾವಿಲ್
ಸ್ಟೇಂಟ್ ಪೀಟರ್ಸ್ಬರ್ಗ್
ಇಂಗ್ಲೆಂಡ್
11, ಡಿಸೆಂಬರ್, 17—
ನಿನ್ನೆಯಷ್ಟೇ ಇಲ್ಲಿಗೆ ಕ್ಷೇಮವಾಗಿ ತಲುಪಿದ ಬಗ್ಗೆ, ಹಾಗೂ ನನ್ನ ಯೋಜನೆಯು ಸಫಲವಾಗುವ ಭರವಸೆ ಹೆಚ್ಚಿಕೊಂಡ ಬಗ್ಗೆ ನಿನಗೆ ಬರೆದು ತಿಳಿಸುವುದೇ ನನ್ನ ಮೊದಲ ಕರ್ತವ್ಯ. ಪ್ರಿಯ ಸೋದರೀ, ನಿನ್ನ ಅನಿಷ್ಟ ಶಂಕೆಯ ಹೊರತಾಗಿಯೂ, ಕೈಗೆತ್ತಿಕೊಂಡ ಈ ಸಾಹಸ ಯಾನದ ಆರಂಭದಲ್ಲಿ ಯಾವುದೇ ದುರಂತ ಸಂಭವಿಸಿಲ್ಲವೆಂದು ತಿಳಿದು ನಿನಗೆ ಸಂತೋಷವಾಗಬಹುದು.
ಈಗಾಗಲೇ ನಾನು ಲಂಡನ್ನಿಂದ ಬಹಳಷ್ಟು ಉತ್ತರಕ್ಕೆ ಬಂದಿದ್ದೇನೆ. ಪೀಟರ್ಸ್ಬರ್ಗ್ನ ಈ ರಸ್ತೆಗಳಲ್ಲಿ ಸಂಚರಿಸುವಾಗ ನನ್ನ ಗಲ್ಲಗಳ ಮೇಲಾಡುವ ಉತ್ತರದ ಈ ಕುಳಿರ್ಗಾಳಿ ನನ್ನ ನರನಾಡಿಗಳನ್ನು ಉತ್ತೇಜಿಸಿ ಸಂತಸ ಬಂದಿರುವ ಈ ಗಾಳಿ ಆ ಶೈತ್ಯಹವೆಯ ಅನುಭವವನ್ನು ಮುಂದಾಗಿಯೇ ಉಣಿಸಿದೆ. ಭರವಸೆಯ ಈ ಗಾಳಿ ತಂದ ಚೈತನ್ಯದಿಂದ ನನ್ನ ಹಗಲುಗನಸುಗಳು ಇನ್ನೂ ಹೆಚ್ಚು ತೀವ್ರವೂ, ನಿಚ್ಚಳವೂ ಆಗಿವೆ. ಧ್ರುವ ಪ್ರದೇಶವು ಮಂಜುಗಡ್ಡೆಗಳ ನಿರ್ಜನ ತಾಣವೆಂದು ಒಪ್ಪಿಕೊಳ್ಳುವ ನಿರರ್ಥಕ ಯತ್ನದ ಹೊರತಾಗಿಯೂ, ನನ್ನ ಕಲ್ಪನೆಯಲ್ಲಿ ಅದು ಸೌಂದರ್ಯ, ಸಂತೋಷದ ಸಾಕಾರರೂಪ ತಾಳುತ್ತಿದೆ. ಮಾರ್ಗರೇಟ್ ಅಲ್ಲಿ ಸದಾ ಕಾಣುವ ಸೂರ್ಯನು ಕ್ಷಿತಿಜದಂಚಿನಲ್ಲಿ ಅನಂತ ಪ್ರಭೆಯನ್ನು ಪಸರಿಸುತ್ತಿರುತ್ತಾನೆ. ಈ ಮುನ್ನ ಕ್ರಮಿಸಿದ ನೌಕಾಯಾನಿಗಳಲ್ಲಿ ನಂಬಿಕೆಯಿರಿಸಿ, ಈ ಪ್ರಶಾಂತ ಸಾಗರದಲ್ಲಿ ನಮ್ಮ ಯಾನವು ಹಾಯಾಗಿ ಸಾಗಿ, ಹಿಮ ಹಾಗೂ ಮಂಜುಗಡ್ಡೆಗಳಿರದ, ಈವರೆಗೆ ಅನ್ವೇಷಿಸಲ್ಪಟ್ಟುದೆಲ್ಲವನ್ನೂ ಮೀರಿದಂತಹ ಸೌಂದರ್ಯದ್ಭುತಗಳ ಆ ತಾಣವನ್ನು ತಲುಪುವೆವೆಂಬ ಹಾರೈಕೆ ನಮ್ಮದು. ಆ ಅನಸ್ವೇಷಿತ, ಏಕಾಂತ ತಾಣಗಳ ಸ್ವರ್ಗೀಯ ಕಾಯಗಳಂತೆ ಅನುಪಮವಾದುದೇ ಅಲ್ಲಿ ಕಂಡುಬರಬಹುದು. ಅನಂತ ಪ್ರಕಾಶವಿರುವಲ್ಲಿ ಏನು ತಾನೇ ಇರಲಾರದು? ಸೂಜಿಯನ್ನು ಸೆಳೆವ ಆ ಅದ್ಭುತ ಶಕ್ತಿಯನ್ನು ನಾನಲ್ಲಿ ಕಂಡುಹಿಡಿಯಬಹುದು. ಈ ಸಮುದ್ರಯಾನದ ಮೂಲಕ ಸಾವಿರಾರು ಆಕಾಶ ಕಾಯಗಳ ಚಲನೆಯ ವೈಪರೀತ್ಯವನ್ನು ಹಿಡಿದಿಟ್ಟುಕೊಳ್ಳಬಹುದು. ಮಾನವರು ಹಿಂದೆಂದೂ ಕಂಡಿರದ ಭೂಭಾಗವನ್ನು ಕಂಡು, ಅಲ್ಲಿ ನನ್ನ ಹೆಜ್ಜೆ ಗುರುತುಗಳನ್ನು ಮೂಡಿಸಿ ನನ್ನ ಅದಮ್ಯ ಕುತೂಹಲವನ್ನು ತಣಿಸಿಕೊಳ್ಲಬಹುದು. ಬಾಲಕನೊಬ್ಬ ತನ್ನ ಒಡನಾಡಿಗಳೊಂದಿಗೆ ಪುಟ್ಟ ದೋಣಿಯಲ್ಲಿ ತನ್ನೂರ ಹೊಳೆಯಲ್ಲಿ ಸಾಗುವಾಗ ಅನುಭವಿಸುವ ಸಂತೋಷದಂತೆ, ನನ್ನೀ ಅಭೀಪ್ಸೆಗಳು ಅಪಾಯ ಹಾಗೂ ಸಾವಿನ ಎಲ್ಲ ಭಯವನ್ನೂ ಮೆಟ್ಟಿನಿಂತು, ಈ ಪ್ರಯಾಸಕರ ಯಾನದಲ್ಲಿ ತೊಡಗಿಕೊಳ್ಳುವಂತೆ ಮಾಡಿವೆ. ಒಂದು ವೇಳೆ ಕೊನೆಯಲ್ಲಿ ಇವೆಲ್ಲವೂ ಸುಳ್ಳಾದರೂ, ತಿಂಗಳುಗಳ ಬಳಿಕ ನಾನು ತಲುಪಬಹುದಾದ ಆ ಗಮ್ಯ ಪ್ರದೇಶಕ್ಕೆ ದಾರಿಯನ್ನು ಅನ್ವೇಷಿಸಿ ಮನುಕುಲಕ್ಕೆ ಅಮೂಲ್ಯ ಕೊಡುಗೆಯನ್ನೀಯುವುದಂತೂ ಖಂಡಿತ. ಆಯಸ್ಕಾಂತೀಯ ರಹಸ್ಯವನ್ನು ಬಯಲು ಮಾಡಲಂತೂ ಈ ನನ್ನ ಯಾವ ಅತ್ಯವಶ್ಯವಾದ ಸಾಧನೆ.
ಪತ್ರದ ಆರಂಭದಲ್ಲಿನ ನನ್ನ ರೂಕ್ಷತೆಯನ್ನು ಈ ವಿಚಾರಗಳು ಕೊಡವಿ ಹಾಕಿವೆ; ಹಾಗೂ ನನ್ನ ಹೃದಯದ ಉತ್ಸಾಹದ ದೀಪ್ತಿಯು ನನ್ನನ್ನು ಸ್ವರ್ಗಕ್ಕೇರಿಸಿದೆ. ಆತ್ಮದ ಬುದ್ಧಿ ಚಕ್ಷುಗಳು ನೆಟ್ಟಿರುವ ಧ್ಯೇಯಕ್ಕೆ ಸಮನಾದುದು ಬೇರಿಲ್ಲ. ಈ ಸಾಹಸಯಾನ ನನ್ನ ಬಾಲ್ಯದ ದಿನಗಳ ಮೆಚ್ಚಿನ ಕನಸು. ಧ್ರುವ ಪ್ರದೇಶದ ಸುತ್ತಣ ಸಾಗರಗಳಲ್ಲಿ ಸಂಚರಿಸಿ ಉತ್ತರ ಶಾಂತ ಸಾಗರವನ್ನು ತಲುಪಲು ಈ ಹಿಂದೆ ಕೈಗೊಂಡ ವಿವಿಧ ಸಮುದ್ರಯಾನಗಳ ಬಗ್ಗೆ ನಾನು ತುಂಬ ಆಸ್ಥೆಯಿಂದ ಓದಿಕೊಂಡಿದ್ದೇನೆ. ಅನ್ವೇಷಕ ದೃಷ್ಟಿಯಿಂದ ಕೈಗೊಂಡ ಎಲ್ಲ ಸಮುದ್ರಯಾನಗಳ ಚರಿತ್ರೆಯ ಕೃತಿಗಳ ಸಂಗ್ರಹ ನಮ್ಮ ಅಂಕಲ್ಥಾಮಸ್ರ ಲೈಬ್ರರಿಯಲ್ಲಿದ್ದುದು ನಿನಗೆ ನೆನಪಿರಬಹುದು. ನನ್ನ ವಿದ್ಯಾಭ್ಯಾಸವನ್ನು ಅವಗಣಿಸಲಾದರೂ, ಓದಿನ ಹುಚ್ಚು ನನಗೆ ಬಹಳವಾಗಿತ್ತು. ರಾತ್ರಿ ಹಗಲೂ ನಾನವನ್ನು ಓದುತ್ತಾ ಹೋದಂತೆ, ಈ ಕೃತಿಗಳು ಪ್ರಿಯವೆನಿಸಿ, ನಾನು ಸಮುದ್ರಯಾನಕ್ಕಿಳಿಯದಂತೆ ನಿರ್ಬಂಧಿಸಿದ ನನ್ನ ತಂದೆಯವರ ಚರಮವಾಕ್ಯಕ್ಕೆ ಅಂಕಲ್ ಬದ್ಧರಾಗುಳಿದುದು ನನಗೆ ತೀವ್ರ ನಿರಾಶೆಯನ್ನಿತ್ತಿತ್ತು.
ನಾನು ಲಕ್ಷ್ಯವಿಟ್ಟು ಓದಿದ ಕವಿಗಳ ಭಾವತೀವ್ರತೆಯು ನನ್ನನ್ನು ಸಮ್ಮೋಹನಗೊಳಿಸಿದಾಗ, ಸ್ವರ್ಗ ಸನ್ನಿಹಿತವೆನಿಸಿ ನಿರಾಶೆಯ ಭಾವ ಕಳೆಯುತ್ತಾ ಬಂತು. ನಾನೂ ಕವಿಯಾದೆ; ಒಂದು ವರ್ಷ ಸೃಜನಶೀಲತೆಯ ಸ್ವರ್ಗದಲ್ಲಿದ್ದೆ. ಹೋಮರ್ ಹಾಗೂ ಶೇಕ್ಸ್ಪಿಯರ್ನ ಹೆಸರುಗಳನ್ನು ಕೆತ್ತಿದ ಮಂದಿರದಲ್ಲಿ ನನ್ನ ಹೆಸರನ್ನೂ ಮೂಡಿಸಬಹುದೆಂದುಕೊಂಡೆ, ನನ್ನ ವೈಫಲ್ಯವೂ, ಅದರಿಂದ ನನಗಾದ ಘೋರ ನಿರಾಶೆಯೂ ನಿನಗೆ ತಿಳಿದೇ ಇದೆ. ಆದರೆ ಅದೇ ಸಮಯ ನನ್ನ ಪಾಲಿಗೆ ಬಂದ ಐಶ್ವರ್ಯದಿಂದಾಗಿ ಪುನಃ ನನ್ನ ವಿಚಾರಗಳು ಹಿಂದಿನ ಹಾದಿಗೆ ತಿರುಗಿದುವು.
ಈ ಯೋಜನೆಯ ನಿರ್ಧಾರವನ್ನು ನಾನು ಕೈಗೊಂಡು ಆರು ವರ್ಷಗಳೇ ಕಳೆದಿವೆ. ಈ ಮಹಾನ್ ಯೋಜನೆಗೆ ನಾನು ನನ್ನನ್ನೇ ಸಮರ್ಪಿಸಿಕೊಂಡ ಆ ಘಳಿಗೆಯನ್ನೂ ನಾನು ಸ್ಮರಿಸಬಲ್ಲೆ. ನನ್ನ ದೇಹವನ್ನು ಸಂಕಷ್ಟಗಳಿಗೊಡ್ಡಿಕೊಳ್ಳುವ ಮೂಲಕ ಆರಂಭಿಸಿದೆ. ಉತ್ತರ ಸಾಗರದಲ್ಲಿ ತಿಮಿಂಗಿಲದ ಬೇಟೆಯ ಸಾಹಸಯಾನಗಳಲ್ಲಿ ಜೊತೆಗೂಡಿದೆ. ಚಳಿ, ಹಸಿವು, ನೀರಡಿಕೆ, ನಿದ್ರಾಹೀನತೆಗಳನ್ನು ಸಹಿಸಿದೆ. ಹಗಲಲ್ಲಿ ಸಾಮಾನ್ಯ ನಾವಿಕರುಗಳಿಗಿಂತಲೂ ಹೆಚ್ಚು ಶ್ರಮಪಟ್ಟು, ರಾತ್ರಿಗಳನ್ನು ಗಣಿತ, ವೈದ್ಯಕೀಯ ವಿಜ್ಞಾನ, ಹಾಗೂ ಸಾಹಸಿ ನಾವಿಕನೊಬ್ಬನಿಗೆ ಅತ್ಯನುಕೂಲವಾಗಬಲ್ಲ ಭೌತವಿಜ್ಞಾನದ ವಿವಿಧ ಶಾಖೆಗಳ ಅಧ್ಯಯನದಲ್ಲಿ ಕಳೆದೆ. ಎರಡು ಬಾರಿ ಗ್ರೀನ್ಲ್ಯಾಂಡ್ನಲ್ಲಿ ತಿಮಿಂಗಿಲ ಬೇಟೆಯ ಯಾನಕ್ಕೆ ಸಹಾಯಕನಾಗಿದ್ದೆ. ನನ್ನ ಸೇವೆಯನ್ನು ಅಮೂಲ್ಯವೆಂದು ಗಣಿಸಿ, ನನ್ನ ನೌಕೆಯ ಕ್ಯಾಪ್ಟನ್ ನನಗೆ ಎರಡನೆಯ ಅಧಿಕಾರಸ್ಥಾನವನ್ನಿತ್ತು, ನನ್ನ ಶ್ರದ್ಧೆಯನ್ನು ಹಾಗೇ ಉಳಿಸಿಕೊಳ್ಳುವಂತೆ ಹೇಳಿದಾಗ ನಾನು ನಿಜಕ್ಕೂ ಹೆಮ್ಮೆ ಪಟ್ಟೆನೆಂದೇ ಹೇಳಬೇಕು.
ಮಾರ್ಗರೇಟ್, ಮಹತ್ವವಾದುದನ್ನು ಸಾಧಿಸುವ ಅರ್ಹತೆ ನನಗಿಲ್ಲವೆಂದು ಐಷಾರಾಮಗಳಿಂದ ನಾನು ನನ್ನ ಜೀವನವನ್ನು ಕಳೆದಿರಬಹುದು. ಆದರೆ ಸಂಪತ್ತು ಒಡ್ಡಿದ ಎಲ್ಲ ಆಮಿಷಗಳ ಬದಲಿಗೆ ನಾನು ಕೀರ್ತಿಯನ್ನೇ ಆಯ್ದುಕೊಂಡೆ. ಓ! ಯಾವುದಾದರೊಂದು ಪ್ರೋತ್ಸಾಹದ ದನಿ ನನ್ನ ಕರೆಗೆ ಸಕಾರಾತ್ಮಕವಾಗಿ ಓಗೊಟ್ಟರೆ! ನನ್ನ ಧೈರ್ಯ ಹಾಗೂ ನಿರ್ಧಾರ ಅಚಲವಾಗಿದೆ. ಆದರೆ ಭರವಸೆಯ ತುಯ್ದಾಟದಲ್ಲಿ ಕೆಲವೊಮ್ಮೆ ನಿರುತ್ಸಾಹ ಕಾಡುತ್ತದೆ. ನಾನು ಹೊರಟಿರುವ ಈ ಸುದೀರ್ಘ, ಪ್ರಯಾಸಕರ ಯಾನದಲ್ಲಿ ಎದುರಾಗಬಹುದಾದ ತುರ್ತುಪರಿಸ್ಥಿತಿಯನ್ನು ನನ್ನೆಲ್ಲ ಸ್ಥೈರ್ಯದಿಂದ ನಿಭಾಯಿಸಬೇಕಾಗಬಹುದು. ಇತರರ ಚೈತನ್ಯವನ್ನು ಎತ್ತಿ ಹಿಡಿಯುವುದರೊಂದಿಗೆ, ಅವರು ವಿಫಲರಾದಲ್ಲಿ ನನ್ನ ಸ್ಥಿರತೆ ಕಾಯ್ದುಕೊಳ್ಳಬೇಕಾಗಿಯೂ ಬರಬಹುದು.
ರಷ್ಯಾದಲ್ಲಿ ಸಂಚರಿಸಲು ಇದು ಅತ್ಯಂತ ಅನುಕೂಲಕರ ಕಾಲ. ಹಿಮಬಂಡಿಗಳಲ್ಲಿ ಹಿಮದ ಮೇಲೆ ಹಾರುತ್ತಾ ಹೋದಂತೆ ಸಾಗಬಹುದು. ಆಹ್ಲಾದಕರವಾದ ಈ ಸಾಗಾಟ ಇಂಗ್ಲೆಂಡ್ನ ಕುದುರೆ ಬಂಡಿಗಳಿಗಿಂತ ಹಿತಕರ ಎಂದೇ ನನ್ನ ಅಭಿಪ್ರಾಯ. ಉಣ್ಣೆಯ ಕೋರ್ಟ್ನಲ್ಲಿ ಸುತ್ತಿಕೊಂಡಿದ್ದರೆ ಚಳಿ ತೀವ್ರವೆನಿಸುವುದಿಲ್ಲ. ಡೆಕ್ನಲ್ಲಿ ಅಡ್ಡಾಡುತ್ತಿದ್ದರೆ ಚಿಂತೆಯಿಲ್ಲ. ಆದರೆ ದೀರ್ಘಕಾಲ ಚಲನೆಯಲ್ಲಿ ಕುಳಿತಲ್ಲೇ ಕುಳಿತಿದ್ದರೆ ರಕ್ತ ಹೆಪ್ಪುಗಟ್ಟದಂತೆ ತಡೆಯಲು ಉಣ್ಣೆಯ ಕೋಟು ಅಗತ್ಯವಾದ್ದರಿಂದ ನಾನೀಗಾಗಲೇ ಅದನ್ನು ಧರಿಸುತ್ತಿದ್ದೇನೆ. ಸ್ಯೇಂಟ್ ಪೀಟರ್ಸ್ಬರ್ಗ್ನಿಂದ ಅರ್ಕೇಂಜೆಲ್ವರೆಗಿನ ಮುಂದಣ ದಾರಿಯಲ್ಲಿ ಜೀವ ಕಳಕೊಳ್ಳುವ ಉದ್ದೇಶವೇನೂ ನನಗಿಲ್ಲ.
ಇನ್ನೆರಡು ವಾರ ಇಲ್ಲವೇ ಮೂರುವಾರಗಳಲ್ಲಿ ನಾನಲ್ಲಿಗೆ ಹೊರಡುತ್ತೇನೆ. ವಿಮೆ ಸಲ್ಲಿಸಿ ಹಡಗೊಂದನ್ನು ಬಾಡಿಗೆಗೆ ಪಡೆದು ತಿಮಿಂಗಲ ಬೇಟೆಯ ಅಭ್ಯಾಸವಿರುವ ಸಾಕಷ್ಟು ನಾವಿಕರನ್ನು ಜೊತೆಗೆ ಕರಕೊಳ್ಳುವೆ. ಜೂನ್ ತಿಂಗಳ ತನಕ ನಾನು ಪಯಣಹೊರಡುವುದಿಲ್ಲ ಎಂದು ಹಿಂದಿರುಗುವೆನೆಂದೇ? ಹಾ! ಪ್ರಿಯ ಸೋದರೀ, ಈ ಪ್ರಶ್ನೆಗೆ ಹೇಗೆ ಉತ್ತರಿಸಲಿ? ನಾನು ಯಶಸ್ವಿಯಾದಲ್ಲಿ ನಾವು ಪುನಃ ಭೇಟಿಯಾಗಲು ಹಲವಾರು ತಿಂಗಳುಗಳು-ವರ್ಷಗಳೇ-ಹಿಡಿಯಬಹುದು. ಒಂದು ವೇಳೆ ವಿಫಲವಾದರೆ, ನೀನು ನನ್ನನ್ನು ಬೇಗನೇ ಪುನಃ ನೋಡಬಹುದು; ಇಲ್ಲವೇ ಎಂದಿಗೂ ಕಾಣದಿರಬಹುದು.
ವಿದಾಯ ಹೇಳುತ್ತಿದ್ದೇನೆ. ಪ್ರಿಯ ಮಾರ್ಗರೆಟ್. ನನ್ನ ಮೇಲಿನ ನಿನ್ನ ಪ್ರೀತಿ, ಕಾರುಣ್ಯಗಳಿಗೆ ನನ್ನ ಕೃತಜ್ಞತೆಯೆಂಬಂತೆ ಆ ದೇವನು ನಿನ್ನನ್ನು ಹರಸಿ, ನನ್ನನ್ನು ಕಾಯಲಿ.
ನಿನ್ನ ಪ್ರಿಯ ಸೋದರ
ಆರ್. ವಾಲ್ಟನ್
ಪತ್ರ – 2
ಶ್ರೀಮತಿ ಸಾವಿಲ್
ಅರ್ಕೇಂಜಲ್
ಇಂಗ್ಲೆಂಡ್
28 ಮಾರ್ಚ್, 17¬--
ಹಿಮ ಹಾಗೂ ಮಂಜುಗಡ್ಡೆಗಳಿಂದ ಸುತ್ತುವರಿದಿರುವ ಈ ಪ್ರದೇಶದಲ್ಲಿ ಸಮಯವು ಎಷ್ಟು ನಿಧಾನವಾಗಿ ಸರಿಯುತ್ತಿದೆ! ಆದರೂ ನನ್ನ ಯೋಜನೆಯಲ್ಲಿ ಎರಡನೆಯ ಹೆಜ್ಜೆಯಿಟ್ಟಿದ್ದೇನೆ. ಹಡಗೊಂದನ್ನು ಬಾಡಿಗೆಗೆ ಪಡೆದಿದ್ದೇನೆ; ಹಾಗೂ ನನ್ನ ನಾವಿಕರನ್ನು ಒಟ್ಟುಗೂಡಿಸುತ್ತಿದ್ದೇನೆ. ಈಗಾಗಲೇ ದೊರಕಿರುವವರು, ಅಪ್ರತಿಮ ಧೈರ್ಯವನ್ನು ಹೊಂದಿದವರಾಗಿದ್ದು, ನಾನವರ ಮೇಲೆ ನಿರ್ಭಯನಾಗಿರಬಲ್ಲೆ.
ಆದರೆ ನನ್ನ ಒಂದು ಬಯಕೆಯನ್ನು ನಾನಿನ್ನೂ ಪೂರೈಸಿಕೊಳ್ಳಲು ಸಮರ್ಥವಾಗಿಲ್ಲ. ನನ್ನ ಈ ಕೊರತೆಯು ದೊಡ್ಡದೊಂದು ಕೆಡುಕೆಂದೇ ನನಗನಿಸುತ್ತಿದೆ. ಮಾರ್ಗರೆಟ್, ನನಗೆ ಗೆಳೆಯರಾರೂ ಇಲ್ಲ. ಯಶಸ್ಸಿನ ಸಂತಸದಿಂದ ನಾನು ಬೀಗುವಾಗ ನನ್ನ ಸಂತಸದಲ್ಲಿ ಪಾಲ್ಗೊಳ್ಳಲು ಜೊತೆಗಾರೂ ಇಲ್ಲ. ಒಂದು ವೇಳೆ ಕಾಡಿದರೆ ಆ ನಿರಾಶೆಯ ಕೂಪದಿಂದ ನನ್ನನ್ನೆತ್ತುವವರೂ ಯಾರು ಇಲ್ಲ. ಹೌದು; ನನ್ನ ಮನದ ಭಾವನೆಗಳನ್ನು ನಾನು ಬರೆದಿಡುವೆ, ನಿಜ. ಆದರೆ ಭಾವ ಸಂವಹನಕ್ಕೆ ಅದೊಂದು ದುರ್ಬಲ ಮಾಧ್ಯಮವಷ್ಟೇ. ನನ್ನ ಭಾವನೆಗಳಿಗೆ ಸ್ಪಂದಿಸಿ, ನನ್ನ ಕಣ್ಣುಗಳ ಭಾಷೆಯನ್ನೂ ಅರ್ಥಮಾಡಿಕೊಳ್ಳಬಲ್ಲ ಗೆಳೆಯನೊಬ್ಬನಿಗಾಗಿ ನಾನು ಹಂಬಲಿಸುತ್ತೇನೆ. ನಾನು ರೋಚಕ ಭಾವಜೀವಿ ಎಂದು ನೀನಂದುಕೊಳ್ಳಬಹುದು. ಆದರೆ, ಪ್ರಿಯ ಸೋದರೀ, ಗೆಳೆಯನೊಬ್ಬನ ಅಭಾವ ನಿಜಕ್ಕೂ ನನ್ನನ್ನು ಕಾಡುತ್ತಿದೆ. ನನ್ನ ಯೋಜನೆಗಳನ್ನು ಒಪ್ಪಿಕೊಳ್ಳುವ, ಇಲ್ಲವೇ ತಿದ್ದುವ, ನನ್ನ ಅಭಿರುಚಿಯನ್ನೇ ಹೊಂದಿದ, ಮೃದುಮನವಿದ್ದೂ ಧೈರ್ಯವಂತನಾದ, ಸುಸಂಸ್ಕøತ, ಸಶಕ್ತಮನದ ಯಾವನೊಬ್ಬ ಸಹಚರನೂ ನನಗಿಲ್ಲ. ಅಂತಹ ಗೆಳೆಯನೊಬ್ಬನಿದ್ದರೆ ನಿನ್ನ ಈ ಸೋದರನ ತಪ್ಪುಗಳನ್ನು ಹೇಗೆ ಸರಿಪಡಿಸಬಹುದು! ನನ್ನ ಯೋಜನೆಯನ್ನು ಕಾರ್ಯಗತಗೊಳಿಸುವ ಹಂಬಲ ತೀವ್ರವಾಗಿರುವಂತೆಯೇ ಕಷ್ಟಗಳ ಬಗ್ಗೆ ಅಸಹನೆಯೂ ಇದೆ. ಜೀವನದ ಮೊದಲ ಹದಿನಾಲ್ಕು ವರ್ಷಗಳನ್ನು ಬೀಡಾಡಿಯಾಗಿ ಕಳೆದೆ. ಆಗ ಓದಿದ್ದೆಂದರೆ ಕೇವಲ ನಮ್ಮ ಅಂಕಲ್ ಥಾಮಸ್ನ ಸಮುದ್ರಯಾನದ ಬಗೆಗಿನ ಕೃತಿಗಳು. ನಮ್ಮ ನಾಡಿನ ಹೆಸರಾಂತ ಕವಿಗಳ ಪರಿಚಯವೂ ಆಗ ನನಗಾಯ್ತು. ಆದರೆ ಇದರಿಂದ ಹೆಚ್ಚಿನ ಲಾಭ ಪಡೆಯುವಲ್ಲಿ ವಿಫಲನಾದಾಗ ಇತರ ದೇಶಗಳ ಭಾಷೆಗಳನ್ನೂ ತಿಳಿವ ಅಗತ್ಯದ ಅರಿವಾಯ್ತು. ಇಪ್ಪತ್ತೆಂಟು ವರ್ಷಪ್ರಾಯದಲ್ಲಿ, ಹದಿನೈದರ ಶಾಲಾ ಬಾಲಕರಿಂದ ಹೆಚ್ಚು ನಾನು ಅಜ್ಞಾನಿ ಆಗಿದ್ದೇನೆ. ನನ್ನ ಯೋಚನೆಗಳೂ, ಹಗಲುಗನಸುಗಳೂ ವಿಸ್ತಾರವೂ, ಭವ್ಯವೂ ಆಗುತ್ತಾ ಸಾಗಿವೆಯೆಂಬುದು ನಿಜ. ಆದರೆ ಅವನ್ನು ಕಾಪಿಡಬೇಕಾಗುತ್ತದೆ. ಇದಕ್ಕಾಗಿ ನನ್ನ ಸ್ವಭಾವವನ್ನು ಹಳಿಯದೆ ನನ್ನನ್ನು ಕೈಹಿಡಿದು ನಡೆಸಬಲ್ಲ ಗೆಳೆಯನ ಅಗತ್ಯ ನನಗೆ ತುಂಬ ಇದೆ.
ಇರಲಿ, ನನ್ನ ಈ ಹಳಹಳಿಕೆಯೆಲ್ಲ ನಿಷ್ಫಲ, ಬಲ್ಲೆ. ಈ ವಿಶಾಲ ಸಾಗರದಲ್ಲಾಗಲೀ, ವ್ಯಾಪಾರಿಗಳಿಂದಲೂ, ನಾವಿಕರಿಂದಲೂ ತುಂಬಿರುವ ಈ ಆಕೇರ್ಂಜಲ್ನಲ್ಲಾಗಲೀ ನನಗೆ ಗೆಳೆಯನೆಲ್ಲಿಂದ ಸಿಗಬೇಕು? ಆದರೂ ಈ ಒರಟು ಹೃದಯದಲ್ಲೂ ಭಾವನೆಗಳ ತುಡಿತವಿದೆ. ನನ್ನ ಹಡಗಿನ ಲೆಫ್ಟಿನೆಂಟ್; ಅಸೀಮ ಧೈರ್ಯದ, ಯಶಸ್ಸು, ಕೀರ್ತಿಗಾಗಿ ಹಾರೈಸುವ ಉತ್ಸಾಹಿ ಪುರುಷ. ಇಂಗ್ಲಿಷ್ನವನಾದರೂ ಆತ ಮಾನವೀಯ ಮೌಲ್ಯಗಳನ್ನು ಉಳಿಸಿಕೊಂಡಿದ್ದಾನೆ. ತಿಮಿಂಗಿಲ ಬೇಟೆಯ ಯಾನವೊಂದರಲ್ಲಿ ಪರಿಚಿತನಾದ ಆತನನ್ನು ಸಹಾಯಕ್ಕಾಗಿ ಈ ಯೋಜನೆಯಲ್ಲಿ ಸೇರಿಸಿಕೊಂಡಿರುವೆ.
ಮೃದು ಸ್ವಭಾವ ಹಾಗೂ ನಯವಾದ ಶಿಸ್ತುಗಾರಿಕೆಯ ಆತನ ಶ್ರದ್ಧೆ ಹಾಗೂ ನಿಸ್ಸೀಮ ಧೈರ್ಯವೇ ನಾನಾತನನ್ನು ನನ್ನ ಯೋಜನೆಗೆ ನೇಮಿಸಿಕೊಳ್ಳುವಂತೆಸಗಿತು. ಏಕಾಂಗಿಯಾಗಿ ಕಳೆದ ಯುವದಿನಗಳು, ನಿನ್ನ ಸ್ತ್ರೀಸಹಜ ಕೋಮಲ ಆರೈಕೆಯಲ್ಲಿ ಕಳೆದ ಅತ್ಯುತ್ತಮ ದಿನಗಳು, ನನ್ನ ಚಾರಿತ್ರ್ಯವನ್ನು ಎಷ್ಟು ಸಂಸ್ಕಾರಪೂರ್ಣವಾಗಿಸಿದೆಯೆಂದರೆ, ಹಡಗಿನಲ್ಲಿ ಕಾಣಬರುವ ಕ್ರೌರ್ಯ, ನೀಚತನದ ವ್ಯವಹಾರಗಳು ನನಗೆ ತೀವ್ರ ಅಸಹ್ಯಕರವಾಗಿ ಕಾಣುತ್ತವೆ. ಅಂತೆಯೇ, ಸಮಾನ ದಯಾದ್ರ್ರನಾದ ಹಾಗೂ ಕೈಕೆಳಗಿನವರಿಂದ ಆದರಿಸಿ ಗೌರವಿಸಲ್ಪಡುವ ಆತನ ಸೇವೆಯನ್ನು ಪಡೆಯುವುದು ನನ್ನ ಭಾಗ್ಯವೆಂದೇ ಅನಿಸಿತು. ಆತನಿಂದ ತನ್ನ