Sandarbha Sammandha
()
About this ebook
Read more from Begur Ramalingappa
Nataka Dange Rating: 0 out of 5 stars0 ratingsKeshavankitha Rachanegalu - Tatvarajakarana Rating: 0 out of 5 stars0 ratings
Related to Sandarbha Sammandha
Related ebooks
Kaarmugilu Rating: 0 out of 5 stars0 ratingsVishwam Shubham Mangalam Rating: 0 out of 5 stars0 ratingsDhuddu Maaduvudu Hege? Rating: 0 out of 5 stars0 ratingsHanigavithegalu Rating: 0 out of 5 stars0 ratingsBeda Krishna Ranginata Rating: 0 out of 5 stars0 ratingsTamasoma Jyothirgamaya Rating: 0 out of 5 stars0 ratingsKengulabi Rating: 0 out of 5 stars0 ratingsMooru Naatakagalu Rating: 0 out of 5 stars0 ratingsRamanakathe Rating: 3 out of 5 stars3/5Haddina Rekke Saadu Rating: 5 out of 5 stars5/5Vaarasudhara Rating: 0 out of 5 stars0 ratingsNanna Premada Hudugi Rating: 4 out of 5 stars4/5Kempu Kalave Rating: 0 out of 5 stars0 ratingsInchara Bandalu Inchara Rating: 0 out of 5 stars0 ratingsMalegaalada Ondu Sanje Rating: 5 out of 5 stars5/5Yashassina Rahasyagalu Rating: 3 out of 5 stars3/5Mane Rating: 2 out of 5 stars2/5Tappu Maadona Banni! Rating: 4 out of 5 stars4/5Samadhana Bhaaga 1 Rating: 0 out of 5 stars0 ratingsThushara Rating: 0 out of 5 stars0 ratingsAnanthara Rating: 0 out of 5 stars0 ratingsJeevana Maadhurya Rating: 5 out of 5 stars5/5Makkala Kate Bhaaga 1 Rating: 0 out of 5 stars0 ratingsO Henne Neeneshtu Olleyavalu Rating: 0 out of 5 stars0 ratingsSolu Geluvina Hadiyalli Rating: 0 out of 5 stars0 ratingsIthihaasada Mogasaaleyalli Rating: 5 out of 5 stars5/5Buddha Matthu Parampare Rating: 4 out of 5 stars4/5Grimm Brothers Rating: 0 out of 5 stars0 ratingsNimmannu Neevu Gellaballiri Rating: 0 out of 5 stars0 ratingsDevare Ninna Kula Yavudu? Rating: 0 out of 5 stars0 ratings
Related categories
Reviews for Sandarbha Sammandha
0 ratings0 reviews
Book preview
Sandarbha Sammandha - Begur Ramalingappa
http://www.pustaka.co.in
ಸಂದರ್ಬ ಸಮ್ಮಂದ
Sandarbha Sammandha
Author:
ಬೇಗೂರ್ ರಾಮಲಿಂಗಪ್ಪ
Begur Ramalingappa
For more books
http://www.pustaka.co.in/home/author/begur-ramalingappa
Digital/Electronic Copyright © by Pustaka Digital Media Pvt. Ltd.
All other copyright © by Author.
All rights reserved. This book or any portion thereof may not be reproduced or used in any manner whatsoever without the express written permission of the publisher except for the use of brief quotations in a book review.
ಸಂದರ್ಬ ಸಮ್ಮಂದ
-ಡಾ.ರಾಮಲಿಂಗಪ್ಪ ಟಿ.ಬೇಗೂರು
ಪರಿವಿಡಿ
ಭಾಗ 1
1. ಹರಿಯುತ್ತಿರಲಿ ಮಹಿಳಾ ನದಿ / 3
2. ವರ್ತಮಾನದ ಕತೆಗಳು -1 / 14
3. ಜೀವನಕ್ರಮದ ಜಿಜ್ಞಾಸೆ -ಬಲಿಹಾರ / 20
4. ಕಳೆದು ಹೋದ ತಂಬೂರಿ ನಾದ / 25
ಭಾಗ 2
5. ಕಾಯಕ ಜೀವಿಗಳ ಸಾಮಾಜಿಕ ಚಿಂತನೆ / 35
6. ಸಾಂದರ್ಭಿಕತೆ ಮತ್ತು ಸಂಬಂಧಿಕತೆಯ ರಾಜಕಾರಣ / 52
7. ಸಿದ್ಧಲಿಂಗಯ್ಯನವರ ಉರಿಕಂಡಾಯ / 61
8. ಬಿಳುಮನೆಯವರ ಕಿರುಕಥನಗಳು / 70
9. ಅನುಪಮಾ ಪ್ರಸಾದ್ ಅವರ ದೂರತೀರ / 81
10. ಚಳಿಗಾಲದ ಎಲೆಸಾಲು / 89
11. ಮೂರು ತಲೆಮಾರುಗಳ ಕೌಟುಂಬಿಕ ಚಲನೆಗಳು : ಸ್ವಧಾ / 99
12. ಫಾಸ್ಟ್ ಫಾರ್ವರ್ಡ್-ಓಡುವ ಕಥನ / 105
13. ಸೆಕ್ಸಿ ಕಾಫಿ ಹೌಸ್ / 112
14. ಸಂಭ್ರಮ ಮತ್ತು ತಲ್ಲಣಗಳ ಬೆರಕೆ / 116
15. ಶಬ್ಧಗಂಧ ಗುಣ / 118
16. ಜನಮನ ಸೆಳೆದ ದುರಂತ ನಾಟಕ ಅನಭಿಜ್ಞ ಶಾಕುಂತಲ / 122
17. ಸದಭಿರುಚಿಯ ಮಕ್ಕಳ : ಚಿತ್ರ ಚಿನ್ನಾರಿ ಮುತ್ತ / 130
18. ಆಧುನೀಕರಣದ ಪ್ರಕ್ರಿಯೆಯನ್ನು ಹಿಡಿಯುವ ಚಿತ್ರ : ಕನಸೆಂಬೊ ಕುದುರೆಯನೇರಿ / 137
ಭಾಗ 3
19. ಮಬ್ಬಿನಿಂದ ಮಬ್ಬಿಗೆ / 143
20. ರಬ್ಬರ್ ಪ್ರಜ್ಞೆಯ ಅಳಲು / 147
21. ಎಲ್ಲಿ ನವಿಲು ಹೇಳಿರೇ / 154
22. ಬೆಲ್ಲ ಮತ್ತು ಕಲ್ಲು / 158
23. ಎರಡು ಲೋಟಗಳು / 162
ಭಾಗ 4
24. ಜಿ.ಎಸ್.ಎಸ್ ನಮಗೆ ಏಕೆ ಮತ್ತು ಹೇಗೆ ಮಾದರಿ ? / 169
25. ಪುಸ್ತಕ ಜೋಗಿ : ಚಿ.ಶ್ರೀನಿವಾಸರಾಜು / 176
26. ರೂಪಾಂತರಿತ ಪಾತ್ರ ಕಿ.ರಂ. / 181
27. ಬಾಳ್ವೆ ಕಟ್ಟದು, ಪೀಳ್ಗೆ ಕಟ್ಟದು: ಕಂಬಾರ್ರ ದಾಯ / 185
ಭಾಗ – 1
ಹರಿಯುತ್ತಿರಲಿ ಮಹಿಳಾ ನದಿ
ಯಾವುದೇ ಲೇಖಕನ/ಲೇಖಕಿಯ ಕೃತಿಗೆ ಮುನ್ನುಡಿ ಬೆನ್ನುಡಿ ಬರೆಯುವಾಗ ನಮ್ಮಲ್ಲಿ ಪ್ರೋತ್ಸಾಹಿಸುವ ಧಾಟಿಯಲ್ಲಿ, ಪ್ರಶಂಸಾ ಧಾಟಿಯಲ್ಲಿ, ಗುಣಗ್ರಹಣ ಧಾಟಿಯಲ್ಲಿ ಬರೆಯುವುದೇ ಸಂಪ್ರದಾಯವಾಗಿದೆ. ಅದರಲ್ಲು ಹಿರಿಯರು ಕಿರಿಯರಿಗೆ ಬರೆಯುವಾಗ ಹರಸುವುದು, ಪ್ರಮಾಣ ಪತ್ರ ನೀಡುವುದು, ಹಲವು ರಿಯಾಯಿತಿಗಳಿಂದ ಬರೆಯುವುದು ಇಂತಹ ಮಾದರಿಗಳನ್ನೆ ಅನುಸರಿಸುವುದು ಸಂಪ್ರದಾಯವಾಗಿದೆ. ಇನ್ನು ಕಿರಿಯರು ಹಿರಿಯರಿಗೆ ಬರೆಯುವಾಗ ಮೆಚ್ಚಿ ಜೈ ಜೈ ಅನ್ನುವುದು ಮತ್ತು ಧನ್ಯೋಸ್ಮಿ ಆಗುವುದು ಕೂಡ ಈಗೀಗ ರೋಗವಾಗುತ್ತಿದೆ. ಆದರೆ ಪ್ರಭಾವತಿಯವರ ಸಮಗ್ರ ಕಾವ್ಯಕ್ಕೆ ಮುನ್ನುಡಿ ಬರೆಯುವಾಗ ಈ ಯಾವ ಸಾಂಪ್ರದಾಯಿಕ ಜಾಡುಗಳ ಹಂಗೂ ಇಲ್ಲ. ಇಲ್ಲ ಅಷ್ಟೆ.
ಆಧುನಿಕ ಮಹಿಳಾ ಕಾವ್ಯದಲ್ಲಿ ಶೈಲಜಾ ಉಡಚಣ, ವೈದೇಹಿ, ಎಚ್.ಎಸ್.ಮುಕ್ತಾಯಕ್ಕ, ಪ್ರತಿಭಾ ನಂದಕುಮಾರ್, ಶಶಿಕಲಾ ವೀರಯ್ಯಸ್ವಾಮಿ, ಸರ್ವಮಂಗಳ, ಸ.ಉಷಾ, ಸಂಧ್ಯಾದೇವಿ, ಕೆ.ಷರೀಫಾ, ಎಚ್.ಎಲ್.ಪುಷ್ಪ, ಹೇಮಾ ಪಟ್ಟಣಶೆಟ್ಟಿ, ಗೀತಾ ನಾಗಭೂಷಣ, ಜ್ಯೋತಿ ಗುರುಪ್ರಸಾದ್, ಲಲಿತಾ ಸಿದ್ಧಬಸವಯ್ಯ, ಸುಕನ್ಯಾ ಮಾರುತಿ ಹೀಗೆ ಹಲವಾರು ಜನ ತಮ್ಮದೇ ಛಾಪು ಮೂಡಿಸಿದ್ದಾರೆ. ಇದು ಇವರದ್ದೆ ಕವಿತೆ ಎಂದು ಗುರ್ತಿಸಬಲ್ಲಂತಹ ಕಾವ್ಯದ ಅನನ್ಯತೆಯನ್ನು ಇವರು ಸಾಧಿಸಿದ್ದಾರೆ. ಸುಕ್ರಿ ಬೊಮ್ಮಗೌಡ, ಬುರ್ರಕಥಾ ಈರಮ್ಮ, ಬನ್ನೂರು ಕೆಂಪಮ್ಮ, ಸಿರಿಯಜ್ಜಿ ಇಂತಹ ಹಲವಾರು ಜನ ಮಹಿಳೆಯರು ನಮ್ಮ ಸಾಹಿತ್ಯ ಪರಂಪರೆಗಳನ್ನು ಸಮೃದ್ಧಗೊಳಿಸಿದ್ದಾರೆ. ಅಕ್ಕಮಹದೇವಿ ಮತ್ತಿತರ ವಚನಕಾರ್ತಿಯರು, ಹರಪನಹಳ್ಳಿ ಭೀಮವ್ವ ಮತ್ತಿತರ ಕೀರ್ತನಕಾರ್ತಿಯರನ್ನು ಹೊರತುಪಡಿಸಿದರೆ ಬರಿ ಪುರುಷರ ಬರವಣಿಗೆಯನ್ನು ಮಾತ್ರವೆ ಒಳಗೊಂಡಿರುವ ‘ಪ್ರತಿಷ್ಠಿತ ಸಾಹಿತ್ಯ’ಕ್ಕೆ ಆಧುನಿಕ ಸಂದರ್ಭದಲ್ಲಿ ಒಂದು ಮಹಿಳಾ ದಂಡೇ ಎದುರು ನಿಂತಂತೆ ಇವರೆಲ್ಲ ಬರೆದಿದ್ದಾರೆ. ಅಷ್ಟೆ ಅಲ್ಲ ಇಡೀ ಆಧುನಿಕ ಸಾಹಿತ್ಯವನ್ನು ಮಹಿಳಾ ಸಂವೇದನೆ ಮತ್ತು ಪುರುಷ ಸಂವೇದನೆಗಳ ಲಿಂಗಾಧಾರಿತ ನೆಲೆಯಲ್ಲಿ ಸೀಳಿ ನೋಡಬಲ್ಲಷ್ಟು ಗಾಢವಾಗಿ ಇವರೆಲ್ಲ ಬರೆದಿದ್ದಾರೆ. ಇವರ ಸಾಲಿಗೆ ಸೇರುವ ಕವಿಗಳಲ್ಲಿ ಡಾ.ಎಸ್.ವಿ.ಪ್ರಭಾವತಿ ಅವರೂ ಒಬ್ಬರು.
ವಚನಗಳಿಂದ, ಕೀರ್ತನೆಗಳಿಂದ, ತತ್ವಪದಗಳಿಂದ ಪ್ರೇರಣೆ-ಪರಿಕರಗಳನ್ನು ಅಪಾರವಾಗಿ ಪಡೆದಿರುವ ಆಧುನಿಕ ಮಹಿಳಾ ಕಾವ್ಯವು ಕುವೆಂಪು, ಬೇಂದ್ರೆ, ಅಡಿಗ, ಕೆ.ಎಸ್.ನ ಇವರುಗಳಿಂದಲೂ ಪ್ರೇರಣೆ-ಪರಿಕರಗಳನ್ನು ಪಡದುಕೊಂಡಿದೆ. ಪುರುಷ ಸಾಹಿತ್ಯದಿಂದ ಪ್ರೇರಣೆ-ಪರಿಕರಗಳನ್ನು ಪಡೆದಿದ್ದರೂ ಗಾಢ ಮಹಿಳಾ ಸಂವೇದನೆಯನ್ನು ಇದು ಹೊಂದಿರುವುದೆ ಇದರ ವಿಶಿಷ್ಟತೆ ಮತ್ತು ಅನನ್ಯತೆಯಾಗಿದೆ. ನಾದ ಮತ್ತು ಲಯಗಳಲ್ಲಿ ಕೆ.ಎಸ್.ನ. ಮತ್ತು ಬೇಂದ್ರೆಯವರಿಂದಲೂ, ಪ್ರತಿಮಾ ರೂಪಕ ಮಾರ್ಗದಲ್ಲಿ ಅಡಿಗರು ಮತ್ತು ವಚನ ಪರಂಪರೆಯಿಂದಲೂ ವೈಚಾರಿಕ ಚಿಂತನಾ ಮಾರ್ಗದಲ್ಲಿ ಕುವೆಂಪು ಅವರಿಂದಲೂ ಪ್ರಭಾವತಿಯವರು ಪ್ರೇರಣೆ ಮತ್ತು ಪರಿಕರಗಳನ್ನು ಪಡೆದಿದ್ದಾರೆ. ಈ ಎಲ್ಲ ಲಯಗಾರಿಕೆ, ವೈಚಾರಿಕತೆ, ರೂಪಕ ಮಾರ್ಗಗಳೊಂದಿಗೆ ಸ್ತ್ರೀವಾದಿ ಪ್ರತಿಭಟನೆಯ ನೆಲೆಗಳನ್ನು ಹದಗೊಳಿಸಿ ತಮ್ಮದೇ ಕಾವ್ಯಧಾಟಿಯನ್ನು ಪ್ರಭಾವತಿಯವರು ರೂಪಿಸಿಕೊಂಡಿದ್ದಾರೆ. ಹೀಗಾಗಿ ಇವರ ಕವಿತೆಗಳಲ್ಲಿ ಪ್ರತಿಭಟನೆಯ ದನಿಗಳೂ, ವೈಚಾರಿಕ ಜಿಜ್ಞಾಸೆಗಳೂ, ರೂಪಕ ಸಾಮಗ್ರಿಗಳ ಭಿನ್ನಾರ್ಥ ಸಾಧ್ಯತೆಗಳೂ ಇವೆ. ಹಾಗೆ ನೋಡಿದರೆ ವಿಜಯಾ ಸುಬ್ಬರಾಜ್, ಅರುಂಧತಿ ರಮೇಶ್ ಇಂಥವರ ಕವಿತೆಗಳು ಅಡಿಗ ಮಾರ್ಗದ ಸಂಪೂರ್ಣ ಅನುಕರಣೆಯಲ್ಲಿ ಮುಳುಗಿ ಅನನ್ಯತೆ ಇಲ್ಲದೆ ಸೋಲುತ್ತವೆ. ಆದರೆ ಪ್ರಭಾವತಿ, ಎಚ್.ಎಲ್.ಪುಷ್ಪ ಇಂಥವರ ಕವಿತೆಗಳು ಅಡಿಗನವ್ಯ ಧಾಟಿಯ ಪ್ರತಿಮಾ ಮಾರ್ಗವನ್ನು ಚೆನ್ನಾಗಿ ದುಡಿಸಿಕೊಂಡು ಗೆದ್ದಿವೆ. ಆದರೆ ಪ್ರಭಾವತಿಯವರ ಕವಿತೆಗಳು ರೋಚಕತೆ, ಭಾವನಾತ್ಮಕತೆ, ಬೆರಗುಗಳಿಂದ ನಮ್ಮನ್ನು ಸೆಳೆಯುವುದಿಲ್ಲ. ಅವು ರೂಪಕ ಧಾಟಿಯಿಂದ ನಮ್ಮನ್ನು ಮರು ಓದಿಗೆ ಒತ್ತಾಯಿಸುತ್ತವೆ. ವೈಚಾರಿಕವಾಗಿ ಚಿಂತಿಸಲು ತೊಡಗಿಸುತ್ತವೆ. ಕತೆ, ಕಾವ್ಯ, ಪ್ರಬಂಧ ಎಂಬವುಗಳೆಲ್ಲ ಫಾರಮ್ಮುಗಳಷ್ಟೆ. ಆದರೆ ಅಂತಿಮವಾಗಿ ಇವೆಲ್ಲವೂ ಡಿಸ್ಕೋರ್ಸ್ಗಳೇ ಅಲ್ಲವೆ? ಹಾಗಾಗಿ ಇವರ ಕಾವ್ಯ ಕೂಡ ಮಹಿಳಾ ಸಂಕಥನದ ಒಂದು ಭಾಗವೇ ಆಗಿದೆ.
ಪ್ರಭಾವತಿಯವರ ಮೊದಲ ಸಂಕಲನ ಮಳೆ ನಿಂತ ಮೇಲಿನ ಮರ, ಎರಡನೆಯದ್ದು ಉಳಿದದ್ದು ಆಕಾಶ, ಮೂರನೆಯದು ಭೂಮಿ. ಇನ್ನು ಇವರ ನಾಲ್ಕನೆ ಸಂಕಲನ ಹರಿಯುತಿರಲಿ ಬಿಡು. ಹೀಗೆ ಇವರ ನಾಲ್ಕೂ ಸಂಕಲನಗಳು ಮಳೆ, ನದಿ, ಮರ, ಭೂಮಿ, ಆಕಾಶ ಹೀಗೆ ಪ್ರಕೃತಿ ರೂಪಕಗಳ ಮೂಲಕವೆ ಹೆಸರು ಪಡೆದಿವೆ. ಚರಿತ್ರೆ ಮತ್ತು ಪುರಾಣಗಳ ಪಾತ್ರಪ್ರತೀಕಗಳ ಜೊತೆಗೆ ಪ್ರಕೃತಿ ರೂಪಕಗಳು ಇವರ ಕಾವ್ಯದ ತುಂಬ ತುಂಬಿಕೊಂಡಿವೆ. 5ನೆ ಸಂಕಲನಕ್ಕೆ ಆಗುವಷ್ಟು ಇರುವ ಇವರ ‘ಆನಂತರದ ಕವಿತೆಗಳು’ ಕೂಡ ಭೂಮಿ, ಆಕಾಶ, ಮಳೆ, ಮರ ಇತ್ಯಾದಿ ಪ್ರತೀಕಗಳು ಮತ್ತು ರೂಪಕಗಳನ್ನು ಹೇರಳವಾಗಿ ಒಳಗೊಂಡಿವೆ. ಇನ್ನು ಇವರು ತಮ್ಮ ಸಮಗ್ರ ಕಾವ್ಯವನ್ನು ಕರೆದಿರುವುದೆ ‘ನದಿ ಹರಿಯುತ್ತಿರಲಿ’ ಎಂದು. ಇಲ್ಲೆಲ್ಲ ಪ್ರಕೃತಿಯ ಹತ್ತಾರು ಅಂಗಗಳೇ ಕಾವ್ಯರೂಪಕಗಳಾಗಿ ಮೈತಾಳಿವೆ. ಈ ರೂಪಕಗಳ ಲೋಕವಲ್ಲದೆ ಚರಿತ್ರೆ-ಪುರಾಣ ಪಾತ್ರಗಳು, ಆಧುನಿಕ ವ್ಯಕ್ತಿ ಚಿತ್ರಗಳು, ಕವನ ಹುಟ್ಟುವ ಲೋಕ, ಸಾವು ಮತ್ತು ಬದುಕಿನ ಸಂಬಂಧಗಳು, ಸಾಮಾಜಿಕ ಸಮಸ್ಯೆಗಳು ಮತ್ತು ಅವುಗಳ ಕಾರಣಪ್ರಪಂಚ ಹೀಗೆ ಹಲವು ವಲಯಗಳು ಇವರ ಕಾವ್ಯದ ಪ್ರಧಾನ ವಲಯಗಳಾಗಿವೆ. ಮೊದಲ ಸಂಕಲನ ಮಳೆ ನಿಂತ ಮೇಲಿನ ಮರದಲ್ಲಿ ಮಳೆ ಅಥವಾ ನೀರು ಮತ್ತೆ ಮತ್ತೆ ಪುನರಾವರ್ತನೆ ಆಗುವ ಪ್ರತೀಕ. ಮಳೆ, ನದಿ, ಸಮುದ್ರ, ಹರಿವು ಹೀಗೆ ನೀರು ಇವರಿಗೆ ಬಹು ಪ್ರಿಯವಾದ ಕಾವ್ಯಪ್ರತಿಮೆ. ಮೊದಲ ಸಂಕಲನದ ನಂತರವೂ ಈ ನೀರು ಹನಿಯುವುದು ನಿಂತೆ ಇಲ್ಲ. ಮಳೆ (ಪು.63), ಸಮುದ್ರ-ನದಿ (93), ಮಳೆಯ ಹಾಡು (121), ಇಳೆ ಮಳೆ (128), ಒಡೆದ ಕನಸು (215), ಮಳೆಯಾಗುತಿದೆ (261), ಮಳೆ ನಿಲ್ಲುವವರೆಗೆ (284) ಹೀಗೆ ಇವರು ಮಳೆಯ ಬಗೆಗೇ ಹಲವಾರು ಕವಿತೆಗಳನ್ನು ಬರೆದಿದ್ದಾರೆ.
ಎಚ್ಚರದ ಸ್ಥಿತಿಯನ್ನು ಮುಚ್ಚಿ ಭಾವನಾತ್ಮಕ ಸಂಬಂಧಗಳನ್ನು ಎತ್ತಿ ಹಿಡಿಯುವುದು; ಹೆಣ್ಣನ್ನು ವೈಚಾರಿಕ ಅಥವಾ ಬೌದ್ಧಿಕ ಆಕೃತಿಯನ್ನಾಗಿ ಕಲ್ಪಿಸಿಕೊಳ್ಳಲು ಆಗದಿರುವುದು ಕನ್ನಡ ಸಾಹಿತ್ಯ ಕಥನದಲ್ಲಿನ ಲಿಂಗರಾಜಕಾರಣವೆ ಆಗಿದೆ. ಒಬ್ಬ ಸಾಕವ್ವ, ಒಬ್ಬ ತಿಮ್ಮಿ ಇಂತಹ ಕೆಲವೊಂದು ಪಾತ್ರಗಳನ್ನು ಬಿಟ್ಟರೆ ಮಿಕ್ಕ ಪ್ರತಿಷ್ಠಿತ ಪುರುಷ ಸಾಹಿತ್ಯದ ಪಾತ್ರಗಳ ಚರಿತ್ರೆಯನ್ನು ಗಮನಿಸಿದರೆ ಇದು ತಿಳಿಯುತ್ತದೆ. ಇವೂ ಕೂಡ ಹಾಗೆ ನೋಡಿದರೆ ಕುಟುಂಬ ಕಟ್ಟುವ ಹೋಮ್ ಮೇಕರ್ ಪಾತ್ರಗಳೆ. ಆದರೆ ಆಧುನಿಕ ಮಹಿಳಾ ಕಾವ್ಯ ಅದರಲ್ಲು ವಿಶೇಷವಾಗಿ ಪ್ರತಿಭಾ, ಶೈಲಜ ಉಡಚಣ, ಶಶಿಕಲಾ ವೀರಯ್ಯಸ್ವಾಮಿ, ಮುಕ್ತಾಯಕ್ಕ ಇಂಥವರ ಕಾವ್ಯದಲ್ಲಿ ಹೆಣ್ಣನ್ನು ವೈಚಾರಿಕ ಆಕೃತಿಯಾಗಿಯೂ ಕಲ್ಪಿಸಿಕೊಳ್ಳುವ ನಡೆಗಳಿವೆ. ಪ್ರಭಾವತಿಯವರ ಕಾವ್ಯ ಕೂಡ ಹೀಗೆ ಭಾವನಾತ್ಮಕ ನೆಲೆಗಟ್ಟುಗಳನ್ನು ಬಹುಪಾಲು ಬಿಟ್ಟುಕೊಟ್ಟ ವೈಚಾರಿಕ ಸ್ತ್ರೀದನಿಯೇ ಆಗಿದೆ. ಇವರ ಹಲವು ಕವಿತೆಗಳು ಕವಿತೆಯ ಸೋಕಾಲ್ಡ್ ಸೌಂದರ್ಯ, ಆಕೃತಿಯ ಚೆಲುವುಗಳಿಲ್ಲದ ವಿಚಾರಚಿಂತನಾ ಗಪದ್ಯಗಳಂತೆ ಕಾಣುತ್ತವೆ. ಆಶಯ ಮತ್ತು ಆಕಾರಗಳ ನಡುವಣ ಸಂಬಂಧಗಳನ್ನು ಚರ್ಚಿಸಲು ಇವರ ಕವಿತೆಗಳು ಒಳ್ಳೆಯ ಉದಾಹರಣೆಗಳಾಗಬಲ್ಲವು. ಹಾಗಾಗಿಯೆ ಎಚ್ಚರದ ಸ್ಥಿತಿ ಮತ್ತು ಉದ್ದೇಶಪೂರ್ವಕ ಕಟ್ಟಾಣಿಕೆ ಇವರ ಕವಿತೆಗಳಲ್ಲಿ ಕಾಣುತ್ತದೆ. ಇವರ ಕವಿತೆಗಳಲ್ಲಿ ಬಾವನೆಗಳೇ ಇಲ್ಲವೆಂದಲ್ಲ. ಇದ್ದರೂ ಅವೆಲ್ಲವು ವ್ಯವಸ್ಥೆಯ ಕುರಿತಾದ ಸಿಟ್ಟು, ವ್ಯಂಗ್ಯ, ಪ್ರತಿರೋಧ, ನಿರಾಕರಣೆ, ದುಃಖ, ವಿಷಾದಗಳೇ ಆಗಿವೆ.
ನಮ್ಮ ಹೆಣ್ಣಿನ ಅಂತರಂಗವಂತೂ ಅದೊಂದು ನಿಗೂಢ ಜಗತ್ತು. ಪ್ರತಿಷ್ಠಿತ ಸಾಹಿತ್ಯದಲ್ಲಿ ನಾವು ಕಟ್ಟಿಕೊಂಡಿರುವ ಹೆಣ್ಣುಜಗತ್ತು ಏನಿದ್ದರೂ ಅದೆಲ್ಲ ಗಂಡು ತಾನು ಕಂಡ ಅಥವಾ ಕಂಡಿದ್ದೇನೆಂದು ಹೇಳುವ ಹೆಣ್ಣಿನ ಜಗತ್ತು ಅಷ್ಟೆ. ಆದರೆ ಹೆಣ್ಣೇ ಅವಳ ಅಂತರಂಗವನ್ನು ಅಭಿವ್ಯಕ್ತಿಸಿದರೆ ಆಗ ಅದರ ಸ್ವರೂಪವೆ ಬೇರೆ ಇರುತ್ತದೆಯಲ್ಲವೆ? ಹೆಣ್ಣಿನ ಅಂತರಂಗದಲ್ಲಿ ಏನೇನು ನಡೆಯುತ್ತದೆ ಎಂಬುದು ಯಾರಿಗೂ ತಿಳಿಯಬಾರದು; ಅದು ಹಾಗೇ ಗೋರಿಯಾಗಬೇಕು ಎಂಬ ಮತ್ತು ವಯಕ್ತಿಕ-ಖಾಸಗಿ-ಕೌಟುಂಬಿಕ ಎನ್ನಬಹುದಾದ ಸಂಗತಿಗಳನ್ನು ಹೆಣ್ಣು ಅಬಿವ್ಯಕ್ತಿಸಬಾರದು ಎಂಬ ‘ಅಲಿಖಿತ ಸಂವಿಧಾನ’ವೊಂದು ನಮ್ಮ ಸಮಾಜದಲ್ಲಿ ಜಾರಿಯಲ್ಲಿದೆ. ಆದರೆ ಆಧುನಿಕ ಮಹಿಳಾ ಸಾಹಿತ್ಯದ ಒಂದು ಬಹು ಮುಖ್ಯವಾದ ಚಹರೆಯು ಈ ಅಲಿಖಿತ ಅಥವಾ ಸಾಹಿತ್ಯ ಲಿಖಿತ ಮೌಲ್ಯವನ್ನು ಮೀರುವುದೇ ಆಗಿದೆ. ಹೆಣ್ಣಿನ ಅಂತರಂಗದ ಅನಾವರಣ; ಒಳಮನೋಲೋಕದ ದರ್ಶನ ಆಧುನಿಕ ಮಹಿಳಾ ಸಾಹಿತ್ಯದ (ಒಟ್ಟಾರೆ ಮಹಿಳಾ ಸಾಹಿತ್ಯದ) ಒಂದು ಚಹರೆಯೆ ಅಲ್ಲವೆ? ಪ್ರಭಾವತಿಯವರ ಕಾವ್ಯ ಕೂಡ ಇದಕ್ಕೆ ಹೊರತಲ್ಲ. ಅಹಲ್ಯೆ, ದ್ರೌಪದಿ, ಸೀತೆ ಇಂತಹ ಪುರಾಣ ಪ್ರತೀಕಗಳು; ಭೂಮಿ, ನದಿ, ಮರ, ಮಳೆ, ಸಾವು ಇತ್ಯಾದಿ ಪ್ರಕೃತಿ ರೂಪಕಗಳ ಮೂಲಕ ಈ ದರ್ಶನವನ್ನು ಪ್ರಭಾವತಿ ಅವರ ಕಾವ್ಯ ಮಾಡುತ್ತದೆ. ಕಾವ್ಯದ ಪರಿಕರಗಳೆ ರೂಪಕ, ಉಪಮೆ, ಅನ್ಯೋಕ್ತಿ, ವ್ಯಂಗ್ಯ, ಧ್ವನಿ ಇತ್ಯಾದಿಗಳು. ಹೌದು. ಆದರೆ ಹೆಣ್ಣಿನ ಅಂತರಂಗದ ಅನಾವರಣ ಯಾಕೆ ರೂಪಕದ ಮೊರೆ ಹೋಗುತ್ತದೆ? ಖಚಿತವಾದ ನೇರ ಬಾಣಗಳು ಏಕೆ ಅಜ್ಞಾತವಾಸಕ್ಕೆ ಹೋಗಿ ರೂಪಕಗಳಲ್ಲಿ ಬಚ್ಚಿಟ್ಟುಕೊಳ್ಳುತ್ತವೆ? ಖಾಸಗಿ ಲೋಕವು ಸಾರ್ವಜನಿಕ ಅಂಗಳಕ್ಕೆ ಬರುವಾಗ ಅನೇಕ ಸೆನ್ಸಾರುಗಳನ್ನು; ‘ಅಲಿಖಿತ ಸಂವಿಧಾನ’ದ ಅನೇಕ ಒತ್ತಡಗಳನ್ನು ಹಾದು ಬರಬೇಕಾಗುತ್ತದೆ.
‘ಎಲ್ಲ ಮಹಿಳೆಯರೂ ಕಾರಂತರ ಮಂಜುಳೆಯಂತೆ ತಮ್ಮ ದಿನಚರಿ ಬರೆಯಲು ಆಗುವುದಿಲ್ಲ. ಆ ಅವನು, ಈ ಇವನ ಬಗ್ಗೆ ಮಾತಾಡಲು ಆಗುವುದಿಲ್ಲ. ಎಲ್ಲ ಗಂಡನೊಳಗೇ ಐಕ್ಯ ಎಂಬಂತೆ ಕೆಲವೊಮ್ಮೆ ನಟಿಸಬೇಕಾಗುತ್ತದೆ’. (ನೋಡಿ; ಪು.169) ಹೀಗಿರುವುದೇ ಹೆಣ್ಣಿನ ವಾಸ್ತವ. ಇಂತಹ ಹೆಣ್ಣಿನ ವಾಸ್ತವಕ್ಕೆ ಒದಗುವ ಒಂದು ಹೊರದಾರಿಯೆ ಕಾವ್ಯ. ನಿಟ್ಟುಸಿರು ಬಿಡಬಹುದಾದ ದಾರಿಯಿದು. ಇಂತಹ ಹೊರದಾರಿಯನ್ನು ಪ್ರಭಾವತಿಯವರು ತಮ್ಮ ತಲ್ಲಣಗಳ ಅಭಿವ್ಯಕ್ತಿಯ ಮಾದ್ಯಮವಾಗಿ ಸಮರ್ಥವಾಗಿ ಬಳಸಿದ್ದಾರೆ. ಆಧುನಿಕ ಕವಿತೆಗಳಿಗೆ ಇವರು ಕೊಟ್ಟಿರುವ ಉಪಮೆ ಬೋನ್ಸಾಯ್ ಗಿಡಗಳದ್ದು. ಆಧುನಿಕ ಕವಿತೆಗಳೆಲ್ಲ ಅಪಾರವಾದ ಹೆಣ್ಣುಲೋಕದ ಅನುಭವಗಳ ಬೋನ್ಸಾಯ್ ಗಿಡಗಳೇ ಹೌದು. ವ್ಯಾಸ ವಾಲ್ಮೀಕಿ, ಪಂಪ, ಕುಮಾರವ್ಯಾಸ, ಕುವೆಂಪು ಇವರ ಪರಂಪರೆ ನೋಡಿದರೆ ಒಟ್ಟಾರೆ ಸಾಹಿತ್ಯ ಕಥನಗಳೆ ನಿಧಾನಕ್ಕೆ ಬೋನ್ಸಾಯ್ ಗಿಡಗಳಾಗುತ್ತ ಬಂದಂತೆ ಕಾಣುತ್ತದೆ. ಇನ್ನೊಂದು ನಿಜ ಏನೆಂದರೆ ಪ್ರಭಾವತಿಯವರ ಕವಿತೆಗಳು ಕೂಡ ಕೊನೆಕೊನೆಗೆ ಬೋನ್ಸಾಯ್ ಗಿಡಗಳಾಗುತ್ತ ಬಂದಿವೆ. ಇವರ ಇತ್ತೀಚಿನ ‘ಆ ನಂತರದ ಕವಿತೆಗಳ’ಂತು ಬೋನ್ಸಾಯ್ ಗಿಡಗಳನ್ನೆ ಮತ್ತಷ್ಟು ಬೋನ್ಸಾಯ್ ಮಾಡಿದಂತೆ ಆಗಿವೆ. ಕವಿತೆ ಮತ್ತು ಹನಿಗವಿತೆಗಳನ್ನು ಕಸಿ ಮಾಡಿದ ‘ಹನಿಗವಗವಿತೆ’ಗಳಂತೆ ಆಗಿವೆ.
ದೀಪಾವಳಿಯ ನೆನಪು, ಕನ್ನಡ ರಾಜ್ಯೋತ್ಸವ, ಪರ್ವ, ಸುವರ್ಣಸ್ವಾತಂತ್ರ್ಯ ಹೀಗೆ ಹಬ್ಬಗಳ ಕುರಿತು ಇವರು ಕೆಲವೊಂದು ಕವಿತೆಗಳನ್ನು ಬರೆದಿದ್ದಾರೆ. ಹಬ್ಬ ಎಂದರೆ ಇವರಿಗೆ ಸಂಭ್ರಮ ಅಲ್ಲ. ಕನ್ನಡವನ್ನು ಕೊಲ್ಲುತ್ತ ಕನ್ನಡ ರಾಜ್ಯೋತ್ಸವ ಮಾಡುವುದು ಅಥವಾ ಸ್ವಾತಂತ್ರ್ಯವನ್ನು ದುರುಪಯೋಗ ಮಾಡುತ್ತ ಸುವರ್ಣಸ್ವಾತಂತ್ರ ಆಚರಿಸುವುದನ್ನು ಕಂಡು ಇವರಿಗೆ ಸಿಟ್ಟು ಮತ್ತು ವಿಷಾದಗಳಿವೆ. ಹಬ್ಬಗಳ ಕುರಿತ ಈ ಎಲ್ಲ ಕವಿತೆಗಳಲ್ಲು ಸಮಾಜವನ್ನು ಗಂಡು ಮತ್ತು ಹೆಣ್ಣುಗಳ ಎರಡು ಭಿನ್ನ ಕ್ರಿಯಾಲೋಕಗಳೆಂಬಂತೆ ಕಾಣುವ ದೃಷ್ಟಿಯಿದೆ. ಸಮಾಜದ ಎಲ್ಲ ಅನಾಹುತ, ಅನಾಚಾರಗಳಿಗೆ ಈ ಗಂಡುಕುಲವೇ ಕಾರಣ ಎಂಬ ಸಿಟ್ಟು ಮತ್ತು ವ್ಯಗ್ರತೆಗಳು ವ್ಯಂಗ್ಯವಾಗಿ ಇಲ್ಲೆಲ್ಲ ತುಂಬಿಕೊಂಡಿವೆ. ಪದ್ಯ ಮತ್ತು ಗದ್ಯಗಳ ಮದ್ಯದ ರೂಪ ಗಪದ್ಯವಾಗಿ, ಕವಿತೆ ಮತ್ತು ಹನಿಗವಿತೆಗಳ ಮದ್ಯದ ರೂಪ ಹನಿಗವಗವಿತೆಗಳಾಗಿ ಇವರ ಕವನಗಳು ಹೊರಳಿಕೊಂಡಿರುವಂತೆಯೆ ಇವರ ಹಲವಾರು ಕವನಗಳು ಭಾಷಣ ಮತ್ತು ವಿಚಾರಚಿಂತನೆಗಳ ಮದ್ಯಮ ರೂಪವನ್ನು ತಾಳಿವೆ. ಇದು ಇವರ ಒಟ್ಟಾರೆ ಕಾವ್ಯದ ಲಕ್ಷಣವಲ್ಲ. ಇವರ ಹಲವಾರು ಕವಿತೆಗಳು ತುಸು ಆಯ ತಪ್ಪಿದರೆ ಭಾಷಣ ಆಗಬಹುದಾದ ಸಾಧ್ಯತೆಗಳನ್ನು ಇಲ್ಲವೆ ಕಾವ್ಯಾತ್ಮಕ ವಿಚಾರಲೇಖನ ಆಗಬಹುದಾದ ಸಾಧ್ಯತೆಗಳನ್ನು ತಪ್ಪಿಸಿಕೊಂಡ ಕಾವ್ಯರಚನೆಗಳಾಗಿವೆ. ಒಂದು ಉದಾಹರಣೆಗೆ ಬೇಕಾದರೆ ನೀವು ಕನ್ನಡ ರಾಜ್ಯೋತ್ಸವ ಪದ್ಯವನ್ನು ನೋಡಬಹುದು (ಪು. 104).
ಹರಿದ ನೋಟು, ಕಾದಿರುವೆ ಬಾ, ನಿರೀಕ್ಷೆ, ಭೂಮಿ ಕಾಯುವುದಿಲ್ಲ, ಕನಸುಗಳು, ಕಾಯುತ್ತಿರು, ನಾನು ನೀನು, ಇಳೆ ಮಳೆ, ಭೂಮಿ(ಮಳೆಗಾಗಿ ಕಾಯುವ ಸೂಳೆ ಇಳೆ!), ಭೂಮಿ ನಾನು, ಮುಕ್ತಿ ಇಂತಹ ಹಲವಾರು ಪದ್ಯಗಳಲ್ಲಿ ಕಾಯುವಿಕೆ ಒಂದು ಬಹು ಪುನರಾವರ್ತಿತ ಪ್ರತಿಮೆಯಾಗಿ ಬರುತ್ತದೆ. ಹೆಣ್ಣು ಗಂಡಿಗಾಗಿ ಕಾಯವುದು, ಮಗುವಿಗಾಗಿ ಕಾಯುವುದು, ಮುಕ್ತಿಗಾಗಿ ಕಾಯುವುದು, ಸಾವಿಗಾಗಿ ಕಾಯುವುದು ಹೀಗೆ ಎಲ್ಲೆಲ್ಲು ಕಾಯಬೇಕಾದ ಸ್ಥಿತಿಯ ಬಗ್ಗೆ ಒಂದು ದೊಡ್ಡ ಅಸಹನೆ ಮತ್ತು ಪ್ರತಿರೋಧ ಇವರ ಕಾವ್ಯಬದುಕಿನುದ್ದಕ್ಕು ಪ್ರಕಟವಾಗುತ್ತಲೆ ಬಂದಿದೆ. ಹೊಸರೈಲು ಸಿಗದೇ ಹೋಗುವುದು, ಟಿಕೇಟೇ ತಪ್ಪಿಹೋಗುವುದು ಇಂಥದ್ದೆಲ್ಲ ಹೆಣ್ಣಿಗೇ ಯಾಕೆ ಹೆಚ್ಚಾಗಿ ಆಗುತ್ತದೆ? ಗಂಡಿಗೆ ಇಂಥದ್ದು ಬಹು ಕಡಿಮೆಯಲ್ಲ! ಇಂತಹ ಪ್ರಶ್ನೆಗಳು ಇವರ ಕಾವ್ಯದಲ್ಲಿ ಮತ್ತೆ ಮತ್ತೆ ಕೇಳಲ್ಪಟ್ಟಿವೆ. ಹಾಗೆಯೆ ಈ ರೀತಿಯ ಲಿಂಗರಾಜಕಾರಣವೆ ಈ ಜಗದಲ್ಲೆಲ್ಲ ತುಂಬಿರುವ ಬಗ್ಗೆ ಇವರ ಕಾವ್ಯ ದೊಡ್ಡ ಪ್ರತಿರೋಧವನ್ನು ಪ್ರಕಟಿಸಿದೆ.
ಪುರಾಣ ಪ್ರತೀಕಗಳು ಮತ್ತು ಪ್ರಕೃತಿ ರೂಪಕಗಳು ಆಧುನಿಕ ಮಹಿಳಾ ಕಾವ್ಯದಲ್ಲಿ ಬಹು ಮುಖ್ಯವಾದ ಪರಿಕರಗಳು ಮತ್ತು ಅಭಿವ್ಯಕ್ತಿ ವಿನ್ಯಾಸಗಳು. ಇವೆರಡನ್ನೂ ಪ್ರಭಾವತಿಯವರ ಕಾವ್ಯ ಬಹು ಚೆನ್ನಾಗಿ ದುಡಿಸಿಕೊಂಡಿದೆ. ವೈದೇಹಿ ಸೂರ್ಯನ ಬಗ್ಗೆ ಸಾಕಷ್ಟು ಪದ್ಯಗಳನ್ನು ಬರೆದಿದ್ದಾರೆ, ಭಾಗ್ಯ ಜಯಸುದರ್ಶನ ಭೂಮಿಯ ಬಗ್ಗೆ ಸಾಕಷ್ಟು ಪದ್ಯಗಳನ್ನು ಬರೆದಿದ್ದಾರೆ. ಈ ತಲೆಮಾರಿನ ಸ್ವಯಂಪ್ರಭಾ ಮಳೆಯ ಮೇಲೆ ಸಾಕಷ್ಟು ಪದ್ಯಗಳನ್ನು ಬರೆದಿದ್ದಾರೆ. ಮತ್ತು ರೂಪ ಹಾಸನ ರೊಟ್ಟಿ ಮತ್ತು ಹಸಿವು ಎಂಬ ಥೀಮುಗಳನ್ನು ಇರಿಸಿಕೊಂಡು ಒಂದು ಸಂಕಲನವನ್ನೆ ತಂದಿದ್ದಾರೆ. ಇಲ್ಲೆಲ್ಲ ಹೆಣ್ತನವನ್ನು ಕಥಿಸಲಾಗಿದೆ. ಎಸ್.ವಿ.ಪ್ರಭಾವತಿಯವರು ಕೂಡ ಭೂಮಿ ಮತ್ತು ಮೃತ್ಯುವಿನ ಕುರಿತು ಸಾಕಷ್ಟು ಪದ್ಯಗಳನ್ನು ಬರೆದಿದ್ದಾರೆ. ಹೀಗೆ ಯಾವುದಾದರೂ ಥೀಮುಗಳನ್ನು ಇರಿಸಿಕೊಂಡು ಬರೆಯುವುದು ಮತ್ತು ಆ ಮೂಲಕ ಹೆಣ್ಣು-ಹೆಣ್ತನಗಳನ್ನು ಕಥಿಸುವುದು ನಮ್ಮ ಮಹಿಳಾ ಕಾವ್ಯದ ಒಂದು ಲಕ್ಷಣವೇ ಆಗಿದೆ. ಪ್ರಭಾವತಿಯವರಲ್ಲಂತು ಈ ಲಕ್ಷಣ ಡಾಳಾಗಿ ಇದೆ.
ನದಿ, ಆಕಾಶ, ಭೂಮಿ, ಮರ, ಮಳೆ, ಗಾಳಿ, ಹೂವು ಹೀಗೆ ಪ್ರಭಾವತಿ ಅವರು ಹಲವು ಪ್ರತಿಮೆಗಳನ್ನು ಪ್ರಕೃತಿಯಿಂದ ತೆಗೆದುಕೊಳ್ಳುತ್ತಾರೆ. ಇವು ಇವರಿಗೆ ಕಾವ್ಯಪ್ರತಿಮೆಗಳೂ ಹೌದು, ಸಾಮಗ್ರಿಗಳೂ ಹೌದು. ಇದಲ್ಲದೆ ಇವರು ಪುರಾಣ ಮತ್ತು ಚರಿತ್ರೆಗಳಿಂದಲೂ ರೂಪಕ ಮತ್ತು ಸಾಮಗ್ರಿಗಳನ್ನು ಪಡೆಯುತ್ತಾರೆ. ಅಕ್ಕ (ಪು. 33), ಅಭಿನವ ಅಕ್ಕ (ಪು.36), ಹೀಗೊಂದು ಸ್ವಗತ (ಪು.59), ಕೃತ್ತಿಕಾ (ಪು.144), ಅಲ್ಪಾಯು ಬಸವ (ಪು.149), ಕಿಂಡಿಯೊಳಗೊಂದು ಸತ್ಯ (ಪು.152), ಗಾಂಧಿ ಎಂದರೆ (ಪು.152), ಹರಿದ ನೋಟು (ಪು.165) ವಿಕ್ರಮನಿಗೊಂದು ಪಿಸುಮಾತು (ಪು.179), ದ್ರೌಪದಿ (ಪು.183), ಸೀತಾ (ಪು.185), ಮೀರಾಬಾಯಿ ಹಾಡುತ್ತಾಳೆ (ಪು.187), ದೇವಕಿ (ಪು.224), ಮೀರಬೇಕು (ಪು.281) ಹೀಗೆ ಇವರಲ್ಲಿ ಸಾಕಷ್ಟು ಪುರಾಣ ಮತ್ತು ಚರಿತ್ರೆಯ ಪಾತ್ರ, ಪ್ರಸಂಗಗಳಿಗೆ ಸಂಬಂಧಿಸಿದ ಕವಿತೆಗಳಿವೆ. ಪ್ರಶ್ನೆ, ಜಿಜ್ಞಾಸೆ ಮತ್ತು ಮರುನಿರೂಪಣೆಗಳು ಇಲ್ಲಿನ ಮುಖ್ಯ ಕಾವ್ಯಕ್ರಮಗಳು. ಇಲ್ಲೆಲ್ಲ ಪುರಾಣ ಮತ್ತು ಚರಿತ್ರೆಗಳಲ್ಲಿ ಹೆಣ್ಣನ್ನು ನಿಕೃಷ್ಟವಾಗಿ ಕಾಣಲಾಗಿರುವ ಬಗ್ಗೆ ಮತ್ತು ಅದು ಇಂದಿಗೂ ಮುಂದುವರೆದಿರುವ ಬಗ್ಗೆ ಪ್ರತಿರೋಧ ವ್ಯಕ್ತವಾಗಿದೆ. ಪುರಾಣ ಚರಿತ್ರೆಗಳು ನಮ್ಮ ಆಧುನಿಕ ಮಹಿಳಾ ಕಾವ್ಯದಲ್ಲಿ ವರ್ತಮಾನದ ಪ್ರತಿನಿಧೀಕರಣಕ್ಕೆ ಬಳಕೆಯಾಗಿರುವಂತೆ ಪ್ರಭಾವತಿಯವರಲ್ಲು ವರ್ತಮಾನದ ಕಥನಕ್ಕೆ ಬಳಕೆಯಾಗಿವೆ. ವರ್ತಮಾನದ ಲಿಂಗತಾರತಮ್ಯವನ್ನು ಪ್ರತಿರೋಧಿಸುವ ಪ್ರತೀಕಗಳಾಗಿ ಬಳಕೆಯಾಗಿವೆ. ಅಕ್ಕ, ಸೀತಾ, ಬುದ್ಧ, ದ್ರೌಪದಿ, ಮೀರಾ, ದೇವಕಿ, ಕೃತ್ತಿಕಾ, ಗಾಂಧಿ ಇತ್ಯಾದಿ ಪಾತ್ರಕವಿತೆಗಳಲ್ಲಿ ಚರಿತ್ರೆ ಮತ್ತು ಪುರಾಣದ ಪಾತ್ರಗಳನ್ನು ಪ್ರಭಾವತಿ ಅವರು ಕೆಲವೊಮ್ಮೆ ತಮ್ಮ ಎದುರು ನಿಲ್ಲಿಸಿಕೊಂಡು ಪ್ರಶ್ನಿಸುತ್ತಾರೆ ಮತ್ತು ಸಂವಾದಿಸುತ್ತಾರೆ. ಕೆಲವೊಮ್ಮೆ ಮರುನಿರೂಪಿಸುತ್ತಾರೆ. ಹಾಗೆಯೆ ಕೆಲವೊಮ್ಮೆ ಅಂದನ್ನು ಇಂದಿಗೆ ಅನ್ವಯಿಸಿ ನೋಡುವುದನ್ನು ಪ್ರಶ್ನಿಸುತ್ತಾರೆ ಕೂಡ! (ನೋಡಿ; ಹೀಗೊಂದು ಸ್ವಗತ. ಪು-59) ಹೀಗೆ ಪ್ರಶ್ನಿಸುವುದು ಇವರ ಕಾವ್ಯದ ಕ್ರಮಗಳಲ್ಲಿ ಒಂದು ಮುಖ್ಯವಾದ ಕ್ರಮ.
ನಮ್ಮ ಕಾವ್ಯಪರಂಪರೆಯಲ್ಲಿ ಕಾವ್ಯವ್ಯಾಖ್ಯಾನ, ಕಾವ್ಯಕಟ್ಟುವ ಕ್ರಮ ಇತ್ಯಾದಿಗಳನ್ನು ಒಳಗೊಂಡ ಕಾವ್ಯತತ್ವವು ಕಾವ್ಯದ ರೂಪದಲ್ಲೆ ಅಪಾರ ಪ್ರಮಾಣದಲ್ಲಿ ಸೃಷ್ಟಿಯಾಗಿದೆ. ಪ್ರಭಾವತಿಯವರೂ ಕೂಡ ಇಂತಹ ಸಾಕಷ್ಟು ಕವಿತೆಗಳನ್ನು ಬರೆದಿದ್ದಾರೆ. ಕವನವೆಂದರೆ ಏನು? ಈಗಿನ ಕವನಗಳು ಹೇಗಿವೆ? ಕವನ ಹುಟ್ಟುವುದು ಯಾವಾಗ? ಅದು ಹೇಗೆ ಹುಟ್ಟುತ್ತದೆ? ಕವನ ಅರ್ಥವಾಗುವುದು ಎಂದರೆ ಏನು? ಇಂತಹ ಹಲವಾರು ಪ್ರಶ್ನೆಗಳಿಗೆ ಉತ್ತರಿಸುವ ಹಾಗೆ ಇಂತಹ ಕವನಗಳಿವೆ.
ಪಾತಿವ್ರತ್ಯದ ಸೋಗಿನಲ್ಲಿ ಎಲ್ಲವನ್ನೂ ನುಂಗುತ್ತಾ
ಅರಗಿಸಿಕೊಳ್ಳುತ್ತಾ ಮತ್ತೆ ಮತ್ತೆ ಫಲವಾಗುತ್ತಾ
ನಡೆದಿರುವ ಈ ವಿಷಚಕ್ರದ ಅಡಿಯಲ್ಲಿ
ಕುಳಿತೇ ಕನಸು ಕಾಣುವ ಈ ಕೊಂಚ ಹೊತ್ತು
ಕವನ