The Diary of Mrs.Sharada
4.5/5
()
About this ebook
Read more from Yandamoori Veerendranath
Jeevana Maadhurya Rating: 5 out of 5 stars5/5Ladies Hostel Rating: 5 out of 5 stars5/5Tappu Maadona Banni! Rating: 4 out of 5 stars4/5Duddu Duddu Rating: 5 out of 5 stars5/5Priyathama Rating: 0 out of 5 stars0 ratingsO Henne Neeneshtu Olleyavalu Rating: 0 out of 5 stars0 ratings
Related to The Diary of Mrs.Sharada
Related ebooks
Mooru Naatakagalu Rating: 0 out of 5 stars0 ratingsBuddha Matthu Parampare Rating: 4 out of 5 stars4/5Anoohya Rating: 0 out of 5 stars0 ratingsBest of Lovelavike Rating: 5 out of 5 stars5/5O Henne Neeneshtu Olleyavalu Rating: 0 out of 5 stars0 ratingsBottom Item Rating: 5 out of 5 stars5/5Ananthara Rating: 0 out of 5 stars0 ratingsThe Gift Rating: 3 out of 5 stars3/5Nakshatra Jaaridaaga Rating: 0 out of 5 stars0 ratingsHuttada Sutta Rating: 0 out of 5 stars0 ratingsAkarshitha Rating: 0 out of 5 stars0 ratingsKempu Kalave Rating: 0 out of 5 stars0 ratingsVaarasudhara Rating: 0 out of 5 stars0 ratingsಒಂದು ಬೊಗಸೆ ಪ್ರೀತಿ: Ondu bogase preethi Rating: 5 out of 5 stars5/5Jothe Jotheyali Rating: 4 out of 5 stars4/5Success Through Positive Thinking(Kannada): It is half empty or half full….is the way you look at it Rating: 4 out of 5 stars4/5EVEREST IN MIND (KANNADA) Rating: 0 out of 5 stars0 ratingsಯಶೋಃಗೀತ Rating: 0 out of 5 stars0 ratingsIdannu Bayasiralilla (Best of UG) Rating: 0 out of 5 stars0 ratingsNiranthara Rating: 0 out of 5 stars0 ratingsBindiya Rating: 4 out of 5 stars4/5Nilukada Nakshatra Rating: 0 out of 5 stars0 ratingsSamadhana Bhaaga 1 Rating: 0 out of 5 stars0 ratingsಸಮಗ್ರ ಕಥೆ Rating: 0 out of 5 stars0 ratingsHiranya Garbha Rating: 0 out of 5 stars0 ratingsSurya Vamsam Rating: 0 out of 5 stars0 ratingsನನ್ನವಳು: ಪ್ರೇಮಲೋಕದ ಪಯಣಿಗರು Rating: 0 out of 5 stars0 ratingsPutta Puttige Putta Hanate Rating: 0 out of 5 stars0 ratingsKshameyirali Taayi Tunge... Rating: 0 out of 5 stars0 ratingsBhutagala University Rating: 0 out of 5 stars0 ratings
Reviews for The Diary of Mrs.Sharada
2 ratings0 reviews
Book preview
The Diary of Mrs.Sharada - Yandamoori Veerendranath
http://www.pustaka.co.in
ದಿ ಡೈರಿ ಆಫ್ ಮಿಸೆಸ್ ಶಾರದ
The Diary of Mrs.Sharada
Author :
ಯಂಡಮೂರಿ ವೀರೇಂದ್ರನಾಥ್
Yandamoori Veerendranath
For more books
http://www.pustaka.co.in/home/author/yandamoori-veerendranath
Digital/Electronic Copyright © by Pustaka Digital Media Pvt. Ltd.
All other copyright © by Author.
All rights reserved. This book or any portion thereof may not be reproduced or used in any manner whatsoever without the express written permission of the publisher except for the use of brief quotations in a book review.
ಯಂಡಮೂರಿ ವೀರೇಂದ್ರನಾಥ್
ಯಂಡಮೂರಿ ವೀರೇಂದ್ರನಾಥ್
ಯಂಡಮೂರಿ ವೀರೇಂದ್ರನಾಥ್
ದಿ ಡೈರಿ ಆಫ್ ಮಿಸೆಸ್ ಶಾರದ
ಕನ್ನಡ ಅನುವಾದ:
ರಾಜಾಚೆಂಡೂರ್
ಸುಧಾ ಎಂಟರ್ಪ್ರೈಸಸ್
761, 8ನೇ ಮೈನ್, 3ನೇ ಬ್ಲಾಕ್
ಕೋರಮಂಗಲ, ಬೆಂಗಳೂರು 560034
ಫೋನ್: 22287876
ಪ್ರಕಾಶಕರು
ದಿ ಡೈರಿ ಆಫ್ ಮಿಸೆಸ್ ಶಾರದ
ಪ್ರೋಲೋಗ್:
ಏನೋ ಅದು ಅಷ್ಟು ದೀಕ್ಷೆಯಿಂದ ಓದುತ್ತಿದ್ದೀ?
ಲೋಟದಲ್ಲಿ ಮದ್ಯ ಸುರಿಯುತ್ತಾ ಒಬ್ಬ ಎರಡನೆಯವನನ್ನು ಕೇಳಿದ. ಮೆಣಸಿನಕಾಯಿ ಬಜ್ಜಿಗಳ ಪೊಟ್ಟಣ ಬಿಚ್ಚಿ, ಬಜ್ಜಿಗಳನ್ನು ಪ್ಲೇಟಿನಲ್ಲಿ ಹಾಕಿ, ಕಾಗದ ಎಸೆಯಲು ಹೋದವನು ತಡೆದು ಅದನ್ನು ಓದುತ್ತಿದ್ದ ಎರಡನೆಯವನು ತಲೆಯೆತ್ತಿ-
ಇದೇನೋ ಇಂಟರೆಸ್ಟಿಂಗಾಗಿದೆಯೋ, ಡೈರಿಯಲ್ಲಿನ ಹಾಳೆಯಂತಿದೆ
ಎಂದ. ಯಾವುದೋ ಹಳೆಯ ಡೈರಿಯ ಕಾಗದ.
ನಲವತ್ತೇಳು ವರ್ಷಗಳಿಂದ ಕೇವಲ ರಾಷ್ಟ್ರೀಯ ದಿನಗಳಲ್ಲಿಯೇ ಹೊರಕ್ಕೆ ತೆಗೆದು ವಾಪಸ್ಸು ಇಟ್ಟುಬಿಡುತ್ತಿರುವ ಬಾವುಟದಂತೆ ಚೆನ್ನಾಗಿ ನಲುಗಿ, ಕರೆಗಳಾಗಿದೆ ಆ ಕಾಗದ.
ಡೈರಿಯಲ್ಲಿನ ಕಾಗದವಾ? ಹಳೆಯ ಪೇಪರ್ನವನಿಗೆ ಡೈರಿಗಳನ್ನು ಕೂಡಾ ಮಾರುತ್ತಾರೆನ್ನು.
ಇದ್ಯಾವುದೋ ಹುಡುಗಿಯ ಡೈರಿಯ ಹಾಳೆಯಂತಿದೆ, ಕೆಳಗೆ ‘ಶಾರದಾ’ ಎಂದು ಇದೆ.
ಹುಡುಗಿಯ ಡೈರಿಯಲ್ಲಿನ ಹಾಳೆಯಾ? ಏನಾದರೂ ಇಂಟರೆಸ್ಟಿಂಗಾಗಿದೆಯಾ?
ಉತ್ಸಾಹದಿಂದ ಮುಂದಕ್ಕೆ ಬಾಗಿದ ಮೊದಲನೆಯವನು.
ಹುಡುಗಿಯಲ್ಲ, ದೊಡ್ಡವಳೇ ಇರಬೇಕು. ಕೈ ಬರಹ ಹಾಗೆಯೇ ಇದೆ. ಕನಿಷ್ಟ ಪಕ್ಷ ನಲವತ್ತು ವರ್ಷಗಳಿರಬಹುದೆನ್ನಿಸುತ್ತದೆ.
ನಿನ್ನ ವಿಶ್ಲೇಷಣೆಗಳನ್ನು ಬೆಂಕಿಗೆ ಹಾಕು, ಒಳಗೇನಿದೆಯೋ ಅದನ್ನು ಓದು.
ಯಾರಾದರೂ ಬಾಯ್ಫ್ರೆಂಡ್ ಬಗ್ಗೆ ಏನಾದರೂ ಇದ್ದರೆ, ಗುಂಡು ಹಾಕಲು ಶುರು ಮಾಡುವ ಮುಂಚೆ ಆನಂದವಾಗುತ್ತದೆ.
ಮೂರನೆಯವನು ಆ ಕಾಗದವನ್ನು ಎಳೆದುಕೊಂಡು ಗಟ್ಟಿಯಾಗಿ ಓದಲಾರಂಭಿಸಿದ.
"ಮನುಷ್ಯರಲ್ಲಿ ಎರಡು ವಿಧ.
ಬುದ್ಧಿವಂತರು.
ದಡ್ಡರು.
ಮನುಷ್ಯರು ಎರಡು ರೀತಿಯವರು.
ಬಲವಿರುವವರು
ಬಲವಿಲ್ಲದಿರುವವರು.
ಬುದ್ಧಿಯಾಗಲೀ, ಬಲವಾಗಲೀ
ಇರದವರು ಸಾಮಾನ್ಯರಾಗುತ್ತಾರೆ.
ಬಲವಿರುವವನು
ನೀತಿಯನ್ನು ಬಿಟ್ಟುಬಿಟ್ಟರೆ
ಪೊಲಿಟಿಷಿಯನ್ ಆಗುತ್ತಾನೆ
ಬುದ್ಧಿಯಿರುವವನು
ನೀತಿ ಬಿಟ್ಟುಬಿಟ್ಟರೆ
ಕ್ಯಾಪಿಟಲಿಸ್ಟ್ ಆಗುತ್ತಾನೆ
ಬುದ್ಧಿಯಿರುವವನು
ನೀತಿಯನ್ನು ಬಿಡದಿದ್ದರೆ ಟೀಚರೋ, ಮೇಧಾವಿಯೋ
ಆಗಿ ಸಂತೃಪ್ತಿ ಪಡೆಯುತ್ತಾನೆ.
ಬಲವಿರುವವನು
ನೀತಿಯನ್ನು ಬಿಟ್ಟುಬಿಡದಿದ್ದರೆ
ಶ್ರಮಜೀವಿಯಾಗಿ ಶಕ್ತಿಯನ್ನು ಧಾರೆಯೆರೆಯುತ್ತಾನೆ.
ನನ್ನ ಜೀವನವನ್ನು ದರ್ಪಣವನ್ನಾಗಿ ಮಾಡಿ, ನಲವತ್ತು ವರ್ಷಗಳ ಚರಿತ್ರೆಯನ್ನು ಅದರಲ್ಲಿ ಪ್ರತಿಬಿಂಬವಾಗಿ ಮಾಡಿ ನೋಡಿದರೆ ನನಗೆ ತಿಳಿದ ಸತ್ಯವಿದು. ದಿ ಕಂಟ್ರೀ ಥ್ರೂ ಮೈ ಐಸ್. ಯಾಕೋ ಈ ರಾತ್ರಿ ಜೀವನದಲ್ಲಿ ಕೊನೆಯ ದಿನವೆನ್ನಿಸುತ್ತಿದೆ. ಇದೇ ಡೈರಿಯಲ್ಲಿನ ಕೊನೆಯ ಪುಟವೆನ್ನಿಸುತ್ತಿದೆ.
- ಶಾರದ
ಗಟ್ಟಿಯಾಗಿ ಓದುವುದನ್ನು ಪೂರ್ತಿ ಮಾಡಿ ಏನೋ ಈ ಮೊಳೆ?
ಎನ್ನುತ್ತಾ ಕಾಗದವನ್ನು ಪಕ್ಕದವನಿಗಿತ್ತ.
ಯಾರೀ ಶಾರದಾ?
ಯಾವ ಶಾರದಾನೋ! ಮೇಲೆ ಇನಿಷಿಯಲ್ ಇದೆಯಲ್ಲಾ, ಎ.ಶಾರದ ಎಂದು.
ಮೊದಲನೆಯವನು ತನ್ನ ಬುದ್ಧಿವಂತಿಕೆಯನ್ನು ಉಪಯೋಗಿಸುತ್ತಾ ಹಾಗ್ಯಾಕೆ ಅಂದುಕೊಳ್ಳಬೇಕು? ವಿ. ಶಾರದಾನೋ ಎಲ್. ಶಾರದಾನೊ ಆಗಿ ಅಳಿಸಿಹೋಗಿರಬಹುದು.
ಎ. ಶಾರದಾನೋ, ಎಲ್.ಶಾರದಾನೋ, ಪಿ.ಶಾರದಾನೋ ಯಾವ ಶಾರದ ಆದರೇನು? ಪ್ರತಿ ಶಾರದ ಚರಿತ್ರೆ ಒಬ್ಬ ಪುರುಷನ ಪಾದಘಟ್ಟಪೀಡನ ಚರಿತ್ರೆ...
ಕವನ ಹೇಳುವಂತೆ ಹೇಳಿದವನೊಬ್ಬ.
ಇದು ಅಂತಹ ಚರಿತ್ರೆ ಅಲ್ಲವೆಂದುಕೊಳ್ಳುತ್ತೇನೆ. ಏನೋ ಬುದ್ಧಿವಂತಿಕೆ ದೇಶ ಎನ್ನುತ್ತಿದ್ದಾಳಲ್ಲಾ!
ಲೋ, ನಿಮ್ಮೆಲ್ಲರಿಗೂ ತಲೆ ಕೆಟ್ಟಿದೆ ಕಣ್ರೋ.
ಯಾಕೆ ಗುರೂ?
ಮತ್ತೇನ್ರೋ? ಮದ್ಯ ತುಂಬಿದ ಲೋಟಗಳನ್ನು ಮುಂದಿಟ್ಟುಕೊಂಡು ನಮ್ಮ ದೇಶದ ಡೈರಿಯ ಬಗ್ಗೆ ಮಾತಾಡುತ್ತಿದ್ದೀರಿ
ಎನ್ನುತ್ತಾ ಆ ಕಾಗದವನ್ನು ಜೋರಾಗಿ ಎಳೆದುಕೊಂಡು, ಉಂಡೆ ಮಾಡಿ ಬಲವಾಗಿ ಕಿಟಕಿಯಿಂದ ಹೊರಕ್ಕೆ ಎಸೆದುಬಿಟ್ಟ.
ಅದು ಹೋಗಿ ರಸ್ತೆಯ ಮೇಲೆ ಬಿದ್ದು, ಅಂಚಿಗೆ ಬಂದು, ಪಕ್ಕದಲ್ಲಿದ್ದ ಕಾಲುವೆಯೊಳಕ್ಕೆ ಜಾರಿತು. ಜೀವನದಿಗಳು ಒಣಗಿಹೋದರೂ, ದೇಶದಲ್ಲಿ ಯಾವಾಗಲೂ ತುಂಬಿ ಹರಿಯುವ ಕೊಳಕುನೀರಿನ ಕಾಲುವೆ ಆ ಕಾಗದದ ಉಂಡೆಯನ್ನು ತನ್ನಲ್ಲಿ ಮುಳುಗಿಸಿಕೊಂಡು ಮುಂದಕ್ಕೆ ಪ್ರವಹಿಸಿತು.
ರಾಜಕೀಯ ಪಕ್ಷದ ಮೆರವಣಿಗೆಗೆ ಲಾರಿಯಲ್ಲಿ ಕರೆತಂದಿರುವ ಜನರಂತೆ ಆ ಕಾಗದ ಗೊತ್ತುಗುರಿಯಿಲ್ಲದೇ ಸಾಗಿಹೋಯಿತು.
ಅಧ್ಯಾಯ
1
ಬಾಪೂಜಿ ಕನಸು ಕಂಡ ಸ್ವಾತಂತ್ರ್ಯ ಬಂದ ಇಪ್ಪತ್ತೆರಡು ವರ್ಷಗಲ ನಂತರ.... ನಗರದ ಎರಡು ಕಡೆಯಿಂದ ಒಂದು ಅರ್ಧರಾತ್ರಿ
ಇಬ್ಬರು ಹೆಂಗಸರು ಒಂಟಿಯಾಗಿ ರಸ್ತೆಗೆ ಬಂದರು. ಒಬ್ಬರು ನಗರಕ್ಕೆ ಪೂರ್ವದಲ್ಲಿದ್ದ ನೇತಾಜಿ ಸುಭಾಷ್ ಚಂದ್ರಬೋಸ್ ಬೀದಿಯಿಂದ ಮತ್ತೊಬ್ಬರು ಸ್ಮಶಾನದ ಪಕ್ಕದಲ್ಲಿರುವ ದುರ್ಗಾಬಾಯ್ ದೇಶ್ಮುಖ್ನಗರದ ಸಂದಿಯಿಂದ.
ಸಬ್ ಇನ್ಸ್ಪೆಕ್ಟರ್ ಮನೆಗೆ ಹೊರಟೊಡನೆ, ತನ್ನ ಪ್ರತಾಪ ತೋರಿಸಲು ಸ್ಟೇಷನ್ನಲ್ಲಿ ಹೆಡ್ ಮೈ ಮುರಿದ ಹಾಗೆ, ಚಂದ್ರ ಮೋಡಗಳ ಮರೆಗೆ ಹೋದೊಡನೆ ಕತ್ತಲೆ ಡ್ಯೂಟಿ ತೆಗೆದುಕೊಂಡಿತು.
ದೇಶ್ಮುಖ್ನಗರ್ ಸಂದಿಯಿಂದ ಬಂದ ಹುಡುಗಿಗೆ ಹದಿನಾಲ್ಕು ವರ್ಷಗಳಿರಬಹುದು. ಜಾಕೆಟ್ಟು ಭುಜದ ಹತ್ತಿರ ಹರಿದಿತ್ತು. ಲಂಗ ಚೆನ್ನಾಗಿ ಮಾಸಿಹೋಗಿತ್ತು. ಹೆದರುತ್ತಲೇ ಕಸದ ತೊಟ್ಟಿಯ ಪಕ್ಕದಿಂದ ಮೆಯಿನ್ರಸ್ತೆಯ ಮೇಲಕ್ಕೆ ಬರುತ್ತಿದ್ದಾಗ-
ಏಯ್ ನಿಲ್ಲು!
ಎಂದು ಕೇಳಿಸಿತ್ತು. ಆ ಹುಡುಗಿ ಬೆದರುಕಣ್ಣುಗಳಿಂದ ನೋಡುತ್ತಾ ನಿಂತುಬಿಟ್ಟಳು. ಸೈಕಲ್ ಮೇಲೆ ಹೋಗುತ್ತಿದ್ದ ಕಾನ್ಸ್ಟೇಬಲ್ ಧರ್ಮರಾಜು ಹತ್ತಿರಕ್ಕೆ ಬಂದು ಕೆಳಕ್ಕಿಳಿಯದೇ ಒಂದು ಕಾಲನ್ನು ನೆಲಕ್ಕಿಟ್ಟು, ಕನ್ನಡದ ಸರಿಪಡಿಸಿಕೊಂಡು ಯಾರು ನೀನು? ಎಲ್ಲಿ ನಿನ್ನ ಮನೆ?
ಎಂದು ಕೇಳಿದ.
ಆ ಹುಡುಗಿ ಉತ್ತರಿಸಲಿಲ್ಲ. ಸೈಕಲ್ ಸ್ಟ್ಯಾಂಡ್ ಹಾಕಿ, ಹತ್ತಿರಕ್ಕೆ ಬಂದು ಮತ್ತೆ ಕೇಳಿದ.
ಅರ್ಧರಾತ್ರಿಯಲ್ಲಿ ಎಲ್ಲಿಗೆ ಹೋಗುತ್ತಿದ್ದೀ?
ನಮ್ಮಮ್ಮ ಸತ್ತುಹೋದಳು
ಮನೆಯೆಲ್ಲೆಂದರೆ ಅಮ್ಮ ಸತ್ತುಹೋದಳೂಂತಿದ್ದೀಯಲ್ಲಾ? ನಿಮ್ಮ ತಂದೆ ಏನು ಮಾಡ್ತಾನೆ?
...................
ಅವನು ಕೂಡಾ ಸತ್ತುಹೋದನಾ?
ನಮ್ಮ ತಂದೆ ಚಿಕ್ಕವಯಸ್ಸಿನಲ್ಲಿಯೇ ಸತ್ತುಹೋದರು. ಅಮ್ಮನನ್ನು ಒಂದು ಗಂಟೆಯ ಹಿಂದೆ ಸಾಯಿಸಿದರು
ಕಾನ್ಸ್ಟೇಬಲ್ ಬೆಚ್ಚಿಬಿದ್ದ. ಸಾಯಿಸಿದರಾ?
ಎಂದ.
ಹೌದು. ಆ ನೆಹರೂ ವಿಗ್ರಹದ ಹಿಂದೆ ಇಂದು ಕೊಂದುಬಿಟ್ಟು ಅವರೇ ತೆಗೆದುಕೊಂಡು ಹೋಗಿ ಹೂತುಬಿಟ್ಟರು
ಕೆನ್ನೆಗಳ ಮೇಲೆ ಜಾರುತ್ತಿದ್ದ ಕಣ್ಣೀರನ್ನು ಕೈಯಿಂದ ಒರೆಸಿಕೊಂಡಳು.
ಎಷ್ಟು ಹೊತ್ತಾಯಿತು ಸಾಯಿಸಿ?
ಒಂದು ಗಂಟೆ ಆಗಿರಬಹುದು
ಮತ್ತೆ ನೀನೇನು ಮಾಡುತ್ತಿದ್ದೆ?
ನಮ್ಮ ತಾಯಿ ಕಿರುಚಬೇಡವೆಂದಳು. ನನ್ನನ್ನು ನೋಡಿದರೆ - ನನ್ನನ್ನು ಕೂಡಾ ಸಾಯಿಸಿಬಿಡುತ್ತಾರೆ ಎಂದಳು.
ಸ್ಮಶಾನದಲ್ಲಿ ಹೂತಿದ್ದನ್ನು ಕೂಡಾ ನೀನು ಸ್ವತಃ ನೋಡಿದೆಯಾ?
ಅಲ್ಲಿಂದಲೇ ಬರುತ್ತಿದ್ದೇನೆ.
ಪೊಲೀಸನಿಗೆ ನಂಬಿಕೆಯುಂಟಾಗಲಿಲ್ಲ. ನೋಡೋಣ ಬಾ
ಎನ್ನುತ್ತಾ ಆ ಹುಡುಗಿಯನ್ನು ಕರೆದುಕೊಂಡು ಹೊರಟ....
ಕತ್ತಲಿನಲ್ಲಿ ಸ್ಮಶಾನ ದೇಶದಂತಿತ್ತು. ಕಾಂಗ್ರೆಸ್ ಹರಡಿ ತಿಂದುಬಿಟ್ಟ ಬಾಳೆಯೆಲೆಯಂತಿತ್ತು. ಕಮ್ಯೂನಿಸ್ಟ್ಗಳು ಸುಟ್ಟು ಹಾಕಿದ ಬಸ್ಸಿನ ಹೊಗೆಯಂತೆ ಅಲ್ಲಲ್ಲಿ ಚಿತೆಗಳಿಂದ ಹೊಗೆ ಏಳುತ್ತಿತ್ತು. ಭವಿಷ್ಯತ್ತಿನಲ್ಲಿ ಬಿ.ಜೆ.ಪಿ. ಯಾತ್ರೆಯ ನಂತರ ಉಳಿಯುವ ಶೂನ್ಯ ಆಗಲೇ ಅಲ್ಲಿ ಆವರಿಸಿತ್ತು. ಜನತಾದಳ ನಿರ್ಧಾರದಿಂದ ಆತ್ಮಹತ್ಯೆ ಮಾಡಿಕೊಂಡ ಮಂಡಲ್ ಕಮಿಷನ್ ಯುವಕರ ಶರೀರದಂತೆ ಕೆಲವು ಶವಗಳು ಸುಟ್ಟೂ ಸುಡದೇ ಅಲ್ಲಿದ್ದವು.
ಇದೇ....
ಎಂದಳು ಆ ಹುಡುಗಿ ಒಂದು ಗುಡ್ಡೆಯ ಹತ್ತಿರ ನಿಂತು. ಗುಡ್ಡೆ ಅಗೆದು ಆಗಲೇ ಮತ್ತೆ ಮಣ್ಣು ತುಂಬಿದ ಹಾಗೆ ಇನ್ನೂ ಒದ್ದೆ ಆರಿರಲಿಲ್ಲ. ಡಾಕ್ಟರ್ ಇಲ್ಲದ ಪ್ರೈಮರಿ ಆಸ್ಪತ್ರೆ ಬೆಂಚಿನ ಮೇಲೆ ಮಲಗಿಕೊಂಡಿರುವ ತುಂಬು ಗರ್ಭಿಣಿಯಂತಿತ್ತು. ಆ ಗುಡ್ಡೆ. ಆ ಹುಡುಗಿಒ ನಿಜ ಹೇಳುತ್ತಿರುವಳೆಂಬ ನಂಬಿಕೆ ಉಂಟಾಗಿತ್ತು. ಪೊಲೀಸ್ ಸ್ಟೇಷನ್ಗೆ ರಿಪೋರ್ಟ್ ಮಾಡೋಣವಾ? ಎಂದುಕೊಂಡ. ಕೊಂದಿರುವುದು ನೆಹರೂ ವಿಗ್ರಹದ ಹಿಂದೆ, ಒನ್ ಟೌನ್ಗೆ ಸೇರುತ್ತೆ. ಹೂತಿರುವುದು ದುರ್ಗಾಬಾಯ್ ಸ್ಮಶಾನದಲ್ಲಿ, ಅಂದರೆ ತ್ರೀಟೌನ್, ತನ್ನದಂತೂ ಗಾಂಧೀನಗರ್, ಟೂ ಟೌನ್.
ನಡಿ ಹೋಗೋಣ
ಎಂದ, ಆ ಸಮಾಧಿಯನ್ನು ತನ್ನ ನೆನಪಿನಲ್ಲಿ ಸಮಾಧಿ ಮಾಡುತ್ತಾ! ಆ ಹುಡುಗಿ ಅವನನ್ನು ಅನುಸರಿಸಿದಳು. ಅಲ್ಲಿಯವರೆವಿಗೂ ಚೆನ್ನಾಗಿಯೇ ಇದ್ದರೂ, ತಾಯಿಯ ಶವದ ಮೇಲೆ ಮಣ್ಣು ನೋಡಿ ಮತ್ತೆ ಅಳಲಾರಂಭಿಸಿದಳು. ಚಂದ್ರ ಮೋಡಗಳ ಮರೆಯಿಂದ ಹೊರಕ್ಕೆ ಬಂದ. ಕಳ್ಳರು ಬಂದು ಹೋದ ಆರು ತಿಂಗಳ ನಂತರ ಪೊಲೀಸ್ ಸೈರನ್ ಮೊಳಗಿದ ಹಾಗೆ ಬೆಳದಿಂಗಳು ಹಾಯಾಗಿ ಭೂಮಿಯ ಮೇಲಕ್ಕೆ ಬಂದಿತು.
ನಿಮ್ಮ ತಾಯಿ ಏನು ಕೆಲಸ ಮಾಡುತ್ತಿದ್ದಳು?
ಸ್ಮಶಾನದಿಂದ ಸ್ವಲ್ಪ ದೂರ ಬಂದ ಮೇಲೆ ಕೇಳಿದ.
ಭಿಕ್ಷೆ ಎತ್ತುತ್ತಿದ್ದಳು
ಅಳು ತಡೆದುಕೊಂಡು ಹೇಳಿದಳು.
ಕಾನ್ಸ್ಟೇಬಲ್ ಆ ಹುಡುಗಿಯತ್ತ ಆಶ್ಚರ್ಯದಿಂದ ನೋಡಿದ. ಭಿಕ್ಷೆ ಎತ್ತುವವಳ ಮಗಳಾ ನೀನು?
ಎಂದು ಕೇಳಿದ. ಆ ಹುಡುಗಿಗೆ ಆ ಪ್ರಶ್ನೆ ಅರ್ಥವಾಗಲಿಲ್ಲ. ತನಗೇ ಅರ್ಥವಾಗಲಿಲ್ಲವೆಂದು ತೋರಿ, ನಿನ್ನ ಭಾವ ಹಾಗಿಲ್ಲವಲ್ಲಾ. ಓದಿಕೊಂಡಿರುವವರ ಹಾಗಿದೆಯಲ್ಲಾ
ಎಂದ ತನ್ನ ಅನುಮಾನವನ್ನು ಸಮರ್ಥಿಸಿಕೊಳ್ಳುವಂತೆ.
ನಾನು ಎಂಟನೆಯ ಕ್ಲಾಸು ಓದುತ್ತಿದ್ದೇನೆ.
ಅವನು ಹುಡುಗಿಯತ್ತ ವಿಚಿತ್ರವಾಗಿ ನೋಡಿ ಭಿಕ್ಷೆ ಬೇಡುವವಳ ಮಗಳು ಎಂಟನೆಯ ಕ್ಲಾಸಾ?
ಎಂದ.
ನಮ್ಮ ಅಮ್ಮ ಯಾವಾಗಲೂ ನನ್ನನ್ನು ಬಿ.ಎ. ಓದಬೇಕೆನ್ನುತ್ತಿದ್ದಳು
ಬೆಚ್ಚಿಬಿದ್ದು. ಬಿ.ಎ.ನಾ?
ಅತಿ ವಿಸ್ಮಯದಿಂದ ಕೇಳಿದ.
ಹೌದು ಬಿ.ಎ. ಎಕನಾಮಿಕ್ಸ್, ಅಮ್ಮ ಕೂಡಾ ಅದನ್ನೇ ಓದಿದ್ದು
ಎಂದಳು ಹುಡುಗಿ. ಆ ಕಾನ್ಸ್ಟೇಬಲ್ಗೆ ಮೊಟ್ಟಮೊದಲನೆಯ ಸಲ ತಾನು ಯಾವುದೋ ದೆವ್ವದೊಂದಿಗೆ ಮಾತಾಡುತ್ತಿರುವೆನೇನೋ ಎನ್ನುವ ಅನುಮಾನ ಉಂಟಾಯಿತು. ಸ್ಮಶಾನಕ್ಕೆ ಕರೆದೊಯ್ದು ಗುಡ್ಡೆ ತೋರಿಸಿದ್ದು, ಅಮ್ಮನನ್ನು ರೌಡಿಗಳು ಕೊಂದರೆಂದಿದ್ದು, ಅಮ್ಮ ಬಿ.ಎ. ಓದಿ ಭಿಕ್ಷೆ ಎತ್ತುತ್ತಿದ್ದಳೆಂದಿದ್ದು.....
ನಿಮ್ಮ ಅಮ್ಮನನ್ನು ಯಾಕೆ ಕೊಂದರು?
ನಿನಗೆ ತಿಳಿಯದು
ನಿಷ್ಕಾರಣವಾಗಿ ಒಬ್ಬಳು ಬೇಡಿ ತಿನ್ನುವವಳನ್ನು ಯಾರಾದರೂ ಕೊಲ್ಲುತ್ತಾರಾ?
ಆ ಹುಡುಗಿ ಅದಕ್ಕೆ ಕೂಡಾ ಉತ್ತರಿಸಲಿಲ್ಲ. ಅವನೇ ಹೇಳಿದ. ಹೋಗಲಿ, ಬಚ್ಚಿಟ್ಟುಕೊಂಡದ್ದಕ್ಕಾಗಿಯೇ ಎಂದುಕೊಂಡರೆ ಹಾಗೆ ಕೊಂದು ಶವವನ್ನು ತೆಗೆದುಕೊಂಡು ಹೋಗಿ ಸ್ಮಶಾನದಲ್ಲಿ ಹೂಳುವುದಿಲ್ಲ ಅಲ್ಲವಾ! ಯಾರೋ ದೊಡ್ಡ ತಿನ್ನುವವಳಿಗೆ ಅಂತಹ ದೊಡ್ಡ ರೌಡಿಗಳೊಂದಿUಗೆಯ ಹಳೆಯ ದ್ವೇಷವೆಂಥದಪ್ಪಾ? ಹೋಗಲಿ, ನಿನ್ನ ತಂದೆಗೇನಾದರೂ ಅವರೊಂದಿಗೆ ಸಂಬಂಧವಿತ್ತೇನೋ, ಅಂದ ಹಾಗೆ ನಿಮ್ಮ ತಂದೆ ಏನು ಮಾಡುತ್ತಿದ್ದ?
ಗೊತ್ತಿಲ್ಲ. ನಾನು ಹುಟ್ಟುವುದಕ್ಕೆ ಮುಂಚೆಯೇ ಸಾಯಿಸಿಬಿಟ್ಟರು
‘ಅವನನ್ನು ಕೂಡಾ ಕೊಂದುಬಿಟ್ಟರಾ? ಯಾರು..... ರೌಡಿಗಳಾ?"
ಇಲ್ಲ ಪೊಲೀಸರು.
ಅವನಿಗೆ ಎಂಜಲೂ ನುಂಗಲಾಗಲಿಲ್ಲ. ಇದ್ಯಾವುದೋ ಕೆತ್ತುತ್ತಿದ್ದಷ್ಟೂ ಹೆಚ್ಚಾಗಿ ತಲೆ ತಿನ್ನುವ ವ್ಯವಹಾರವಾಗಿ ಕಾಣಿಸುತ್ತಿದೆ. ಹುಡುಗಿಯತ್ತ ನೋಡಿದ. ಹದಿನಾಲ್ಕು ತುಂಬಿರಬೇಕು. ಭುಜಗಳು ಆಗ ತಾನೇ ಗುಂಡಾಗಿ ತಯಾರಾಗುತ್ತಿದ್ದವು.
ಜಾಕೆಟ್ಟು ಮೋಟಾಗಿದ್ದರಿಂದ ಹೊಟ್ಟೆ ಕಾಣಿಸುತ್ತಿತ್ತು.
ನಿಮ್ಮ ಅಮ್ಮ, ನೀನು ಎಲ್ಲಿರುತ್ತೀರಿ?
ಛತ್ರದಲ್ಲಿ.... ನನ್ನ ಪುಸ್ತಕಗಳ ಕೂಡಾ ಅಲ್ಲಿಯೇ ಇವೆ
ಎಲ್ಲರೂ ಸತ್ತಮೇಲೆ ಇನ್ನು ಪುಸ್ತಕಗಳು ಯಾಕೆ? ಎಲ್ಲಿದ್ದುಕೊಂಡು ಓದುತ್ತೀ?
ಆ ಹುಡುಗಿ ಉತ್ತರಿಸದೇ ಕಣ್ಣೊರೆಸಿಕೊಂಡಳು.
ನಮ್ಮ ಮನೆಗೆ ಹೋಗೋಣ ಬಾ. ಇಷ್ಟು ರಾತ್ರಿಯಲ್ಲಿ ಆ ಛತ್ರಕ್ಕೆ ಹೋಗುವುದು ಕೂಡಾ ಕಷ್ಟವೇ, ನಮ್ಮ ಮನೆಯಲ್ಲಿಯೇ ಇರುವಿಯಂತೆ. ಬೆಳಿಗ್ಗೆಯೇ ಹೋಗಿ ಪುಸ್ತಕಗಳನ್ನೂ ಬಟ್ಟೆಗಳನ್ನೂ ತಂದುಕೊಳ್ಳಬಹುದು
ಎನ್ನುತ್ತಾ ಮನೆಗೆ ಕರೆತಂದ.
ಮನೆಗೆ ಬರುತ್ತಿದ್ದಷ್ಟು ಹೊತ್ತು ಹೆಂಡತಿಗೆ ಏನು ಹೇಳಬೇಕೆಂದು ಯೋಚಿಸುತ್ತಿದ್ದ. ಮನೆ ಇನ್ನು ನೂರು ಗಜಗಳ ದೂರವಿರುವಾಗ ಆಲೋಚನೆ ಬೆಳಗಿತ್ತು. ನೆಟ್ಟಗೆ ನಡೆಯುತ್ತಾ ಮನೆಗೆ ಹೋದ.
ಬಾಗಿಲು ತೆರೆದ ಹೆಂಡತಿಯೊಂದಿಗೆ ಮೂವರೂ ಗಂಡು ಮಕ್ಕಳೇ, ಮಗಳಿಲ್ಲ ಎಂದು ಅಳುತ್ತಿದ್ದೆಯಲ್ಲಾ ಇಷ್ಟು ವರ್ಷಗಳೂ? ನೋಡು, ನಿನಗೋಸ್ಕರ ಒಬ್ಬ ಮಗಳನ್ನು ಕರೆತಂದಿದ್ದೇನೆ
ಎಂದ. ಅವಳು ಮುಖ ಸಿಂಡರಿಸಿ ಯಾರೀ ಹುಡುಗಿ?
ಎಂದಳು.
ಮೊದಲು ಒಳಕ್ಕೆ ಬರಲಿ, ಆಮೇಲೆ ಹೇಳ್ತೀನಿ
ಎಂದ. ಎಲ್ಲರೂ ನಿದ್ರಿಸಿದ ಮೇಲೆ ನನಗೆ ಯಾವಾಗಿನಿಂದಲೋ ಇತ್ತು ಈ ಆಲೋಚನೆ. ಇಷ್ಟು ದಿನಕ್ಕೆ ಸರಿಯಾದ ಹುಡುಗಿ ಸಿಕ್ಕಿದಳು
ಎನ್ನುತ್ತಾ ತನ್ನ ಮನದ ಯೋಚನೆ ಹೇಳಿದ. ಅವಳ ಮುಖ ಅರಳಿತ್ತು. ಆದರೂ ಅನುಮಾನದಿಂದ ಇದರಲ್ಲಿ ಅಪಾಯವೇನೂ ಇಲ್ಲ ಅಲ್ಲವಾ?
ಎಂದಳು.
ಏನೂ ಇಲ್ಲ. ಎಲ್ಲವನ್ನು ನಾನು ನೋಡಿಕೊಳ್ತೀನಲ್ಲಾ
ಎಂದ. ಆ ನಂತರ ಸ್ವಲ್ಪ ಹೊತ್ತಿಗೆ ಎರಡು ಮೂರು ಸಲ ತಟ್ಟಿ, ಹೆಂಡತಿ ಗಾಢವಾಗಿ ನಿದ್ರಿಸಿದ್ದಾಳೆಂದು ನಿಶ್ಚಯಿಸಿಕೊಂಡ ಮೇಲೆ ಎದ್ದು ಮುಂದಿನ ರೂಮಿಗೆ ಬಂದು ಆ ಹುಡುಗಿಯ ಪಕ್ಕಕ್ಕೆ ಸೇರಿದ.
ಆ ಹುಡುಗಿಯ ಕೆನ್ನೆಗಳ ಮೇಲಿನ ನೀರಿನ ಗೆರೆಗಳು ಒಣಗಿದ ಹೊಲದಲ್ಲಿ ಬಿರುಕು ಬಿಟ್ಟಿರುವ ಭೂಮಿಯ ಸೀಳುಗಳಂತಿದ್ದವು. ತಾಯಿಯನ್ನು ಸಾಯಿಸುತ್ತಿದ್ದ ದೃಶ್ಯ ಇನ್ನೂ ಕಣ್ಗಳ ಮುಂದಿನಿಂದ ಅಳಿಸಿರಲಿಲ್ಲವೇನೋ - ಸಣ್ಣಗೆ ನಡುಗುತ್ತಿದ್ದಳು.
ಪಕ್ಕದಲ್ಲಿಯೇ ಮಲಗಿಕೊಂಡು ಮೇಲೆ ಕೈಹಾಕಿದ. ಆ ಹುಡುಗಿ ಬೆಚ್ಚಿಬಿದ್ದು ಕಣ್ತೆರೆದಳು. ನಿನಗೆ ಭಯವಾಗ್ತಿರಬಹುದು. ಪಕ್ಕದಲ್ಲಿ ಮಲಗಿಕೊಳ್ಳೆಂದಳು
ಎಂದ.
ಹುಲಿ ಬಂದಾಗ ಓಡಿಹೋಗೆಂದು ಜಿಂಕೆಯ ಮರಿಗೆ ‘ಅನುಭವ’ ಕಲಿಸದು. ಪ್ರಕೃತಿ ಕಲಿಸುತ್ತದೆ. ಅಪ್ರಯತ್ನವಾಗಿ ದೂರಕ್ಕೆ ಸರಿದಳು.
ಹಾಗೆ ಯಾಕೆ ನಡುಗುತ್ತಿದ್ದೀ? ಹತ್ತಿರಕ್ಕೆ ಬಾ
ಲಂಗ, ಜಾಕೆಟ್ಟುಗಳ ನಡುವಿನ ಸೊಂಟದ ಮೇಲೆ ಕೈಯಾಡಿಸುತ್ತಾ ಹತ್ತಿರಕ್ಕೆ ಕರೆದುಕೊಂಡ: "ನಾನು ಹೇಳಿದ ಹಾಗೆ ಕೇಳಿದರೆ ನಿನಗೆ ಊಟ, ಬಟ್ಟೆಗೆ ತೊಂದರೆ ಇಲ್ಲ ಹಾಗೆ ನೋಡಿಕೊಳ್ಳುತ್ತೇನೆ, ಸರಿಯಾ?’ ಎಂದ ಧರ್ಮರಾಜು.
ನಾನು ಓದುತ್ತೇನೆ
ಓದಿಕೊಳ್ಳುವಿಯಂತೆ, ಇಲ್ಲಿ ಹೀಗೆ ಪಕ್ಕದಲ್ಲಿ ಬಂದು ಮಲಗಿಕೊಂಡೆನೆಂದು ನಿಮ್ಮ ಅಮ್ಮನಿಗೆ ಹೇಳಬೇಡ
ನಮ್ಮ ಅಮ್ಮ ಸತ್ತುಹೋಗಿದ್ದಾಳಲ್ಲಾ?
ಛೆ! ಅಮ್ಮ ಅಂದರೆ ನಿಮ್ಮಮ್ಮ ಅಲ್ಲ, ನನ್ನ ಹೆಂಡತಿ, ನಿನಗೆ ಅಮ್ಮನ ಹಾಗೆ ಅರ್ಥವಾಯ್ತಾ?
ಆಗಿದೆಯೆಂಬಮತೆ ತಲೆದೂಗಿದಳು. ಆ ನಂತರ ಅವನು ಆ ಹುಡುಗಿಯನ್ನು ತನ್ನತ್ತ ತಿರುಗಿಸಿಕೊಂಡು, ಮೊಣಕಾಲಿನ ಮೇಲೆ ಕೈ ಹಾಕಿ ಮಾಮೂಲಾಗಿ ಸರಿಸಿದಂತೆ ಮೇಲೆಕ್ಕೆ ಕೈ ತೆಗೆದುಕೊಂಡು ಹೋದ. ಆ ಹುಡುಗಿ ಅಪ್ರಯತ್ನವಾಗಿ ಅವನ ಕೈಯನ್ನು ದೂರ ಮಾಡಿ ಅಳತೊಡಗಿದಳು. ಭಯ ಹೋಗಿಸಲು ಕೇಳಿದನೋ, ಅಲ್ಲಿಯವರೆವಿಗೂ ಕೇಳಲಿಲ್ಲವೆಂದು ನೆನಪಾಗಿ ಕೇಳಿದನೋ ಆಗಲೀ, ಏನು ನಿನ್ನ ಹೆಸರು?
ಎಂದು ಕೇಳಿದ.
ವಿಶಾರದ
ಎಂದಳು ಬೆದರಿ ದೂರಕ್ಕೆ ಸರಿಯುತ್ತಾ.
* * *
ನಗರದ ಎರಡನೆಯ ಕಡೆಯಿರುವ ನೇತಾಜಿ ಸುಭಾಷ್ ಚಂದ್ರಬೋಸ್ ರಸ್ತೆಯಿಂದ ಬಂದ ಸ್ತ್ರೀಗೆ ಇಪ್ಪತ್ತೈದು ವರ್ಷಗಳಿರಬಹುದು. ಎರಕ ಹೊಯ್ದ ಬೊಂಬೆಯಂತಿದ್ದಳು. ಕತ್ತಲೆ ಆ ಯುವತಿಯ ಮೇಲೆ ಬಿದ್ದು ಬೆಳದಿಂಗಳಾಗಿ ಹೊಳೆಯುತ್ತಿತ್ತು.
ಅರ್ಧರಾತ್ರಿ ದಾಟಿದ್ದರಿಂದ ಬೀದಿ ನಿರ್ಜನವಾಗಿತ್ತು. ಆ ನಿಶ್ಯಬ್ದವನ್ನು ವಿಚ್ಛಿನ್ನ ಮಾಡುತ್ತಾ ಹಿಂದಿನಿಂದ ಒಂದು ಮೋಟಾರ್ ಸೈಕಲ್ ಬಂದು ನಿಂತಿತು. ಏಯ್! ಯಾರು ನೀನು?
ಅವಳು ನಡಿಗೆಯನ್ನು ನಿಲ್ಲಿಸಿ, ವಾಹನದ ಮೇಲಿದ್ದ ವ್ಯಕ್ತಿಯತ್ತ ನೋಡಿದಳು. ಧರಿಸಿದ್ದ ಪಟ್ಟಾಪಟ್ಟಿ ಬನಿಯನ್ ಬಿಚ್ಚಿ, ಆ ವ್ಯಕ್ತಿ ಕತ್ತಿ ಹಿಡಿದುಕೊಂಡರೆ ಖೈಮಾ ಮಾಡುವವನಂತಿದ್ದ. ಖದ್ದರ್ ಟೋಪಿ ಹಾಕಿದರೆ ಮಿನಿಸ್ಟರ್ನಂತಿರುತ್ತಿದ್ದ ಒಟ್ಟಿನಲ್ಲಿ ‘ಸಿ’ ಕ್ಲಾಸ್ ಗೂಂಡಾನಂತಿದ್ದ.
ಯಾರು ನೀನು ಅಂದರೆ ಮಾತಾಡುತ್ತಿಲ್ಲ ಯಾಕೆ? ಇಷ್ಟು ರಾತ್ರಿಯಲ್ಲಿ ಎಲ್ಲಿಗೆ ಹೋಗುತ್ತಿದ್ದೀ?
ಒಂದು ಕಾಲದಲ್ಲಾಗಿದ್ದರೆ ಭಯದಿಂದ ಪ್ರಜ್ಞೆ ತಪ್ಪಿ ಬಿದ್ದುಬಿಟ್ಟಿರುತ್ತಿದ್ದಳೇನೋ ಆಗಲೀ, ಈಗ ಅಂತಹುದೇನೂ ನಡೆಯಲಿಲ್ಲ. ಅನುಭವ ಪಾಠ ಕಲಿಸಿತ್ತೋ-ಚಳಿ ಮೈಯನ್ನು ಪೂರ್ತಿಯಾಗಿ ಮುಳುಗಿಸುತ್ತೋ-
ನನ್ನ ಗಂಡ ಮನೆಯಿಂದ ಓಡಿಸಿದ. ಎಲ್ಲಿಗೆ ಹೋಗಬೇಕೆಂದು ಯೋಚಿಸುತ್ತಿದ್ದೇನೆ
ಎಂದಳು.
ಊಹಿಸದ ಈ ಉತ್ತರದಿಂದ ಅಂತಹ ರೌಡಿ ಕೂಡಾ ತಬ್ಬಿಬ್ಬಾದ.
ಅರ್ಧರಾತ್ರಿಯಲ್ಲಿ ಮನೆಯಿಂದ ಓಡಿಸಿದನಾ? ಯಾಕೆ?
ಎಂದು ಕೇಳಿದ.
ಯಾಕೆ?
ತನ್ನನ್ನು ತಾನೇ ಪ್ರಶ್ನಿಸಿಕೊಂಡಳು. ಪ್ರಶ್ನೆ ತುಂಬಾ ಚಿಕ್ಕದು. ಉತ್ತರ ಮಾತ್ರ ಚರಿತ್ರೆಯಷ್ಟು ದೊಡ್ಡದು!
ಎಲ್ಲಿ ನಿಮ್ಮ ಮನೆ?
ಅವನೇ ಮತ್ತೆ ಪ್ರಶ್ನಿಸಿದ. ಅವಳು ಹೇಳಿದಳು.
ಅದು ನನ್ನ ಏರಿಯಾನೇ. ನನ್ನ ಜೊತೆ ನನ್ನ ಮನೆಗೆ ಬಾ. ಬೆಳಗಾದ ಕೂಡಲೇ ನಿನ್ನ ಮನೆಗೆ ಕಳಿಸುತ್ತೇನೆ
ನನ್ನ ಗಂಡ ನನ್ನನ್ನು ಕೊಂದುಬಿಡುತ್ತಾನೆ. ನಮ್ಮ ಅತ್ತೆ, ನಾದಿನಿ ಸುಮ್ಮನಿರೋಲ್ಲ
ನಾನೇ ಸ್ವತಃ ಕರೆದುಕೊಂಡು ಬಿಟ್ಟರೆ ಕೂಡಾ ಸುಮ್ಮನಿರೋದಿಲ್ಲವಾ? ನಿಮ್ಮ ಏರಿಯಾದಲ್ಲಿ ನನ್ನ ಹೆಸರನ್ನು ಯಾವಾಗಲೂ ಕೇಳೇ ಇಲ್ಲವಾ? ಮಟ್ಕಾ ಮಸ್ತಾನ್. ಆದರೂ ಈ ಅರ್ಧರಾತ್ರಿಯಲ್ಲಿ ಎಲ್ಲಿಗೆ ಹೋಗುತ್ತಿದ್ದೀ?
ಅದು ಕೂಡಾ ಚಿಕ್ಕ ಪ್ರಶ್ನೆಯೇ! ಆದರೆ ಉತ್ತರ ಮಾತ್ರ ಸ್ತ್ರೀ ನಿಸ್ಸಹಾಯಕತೆಯಷ್ಟು ದೊಡ್ಡದು!
ನಿನ್ನ ಸಮಸ್ಯೆಗೆ ನಾನೊಂದು ಪರಿಹಾರ ಹೇಳುತ್ತೇನೆ, ನಿರ್ಧಾರ ಮಾಡು
ಹಾಯಾಗಿ ಸಿಗರೇಟ್ ಹೊತ್ತಿಸಿಕೊಳ್ಳುತ್ತಾ ಹೇಳಿದ. ಅವಳು ಆಸೆಯಿಂದ ನೋಡಿದಳು. ಒಂದು ನಾಯಿ ಬಾಲವಾಡಿಸಿಕೊಂಡು ಅವರ ಹತ್ತಿರಕ್ಕೆ ಬಂದು ನೋಡಿ, ತನಗೆ ಸಂಬಂಧಿಸದ ವಿಷಯವಲ್ಲವೆಂದು ಹೊರಟುಹೋಯಿತು.
ಮಸ್ತಾನ್ ಹೇಳಿದ, ಈ ರಾತ್ರಿಯೆಲ್ಲಾ ನೀನು ನನ್ನ ಜೊತೆ ಇರುತ್ತೀ! ಅಂದರೆ ನನ್ನ ಕಡೆಯವಳಾಗಿಬಿಡುತ್ತಿ ಎಂದರ್ಥ. ಒಂದು ಸಲ ನನ್ನ ಕಡೆಯವಳಾದ ಮೇಲೆ ಇನ್ನು ನಿನ್ನ ಗಂಡ ನಿನ್ನನ್ನೇನೂ ಮಾಡಲಾರ. ಹೂವಿನಲ್ಲಿಟ್ಟು ನೋಡಿಕೊರ್ಳಳುತ್ತಾನೆ. ನಾನು ಒಂದು ತಿಂಗಳಿಗೋ, ಎರಡು ತಿಂಗಳಿಗೋ ಒಂದು ಸಲ ನಿಮ್ಮ ಮನೆಗೆ ಬಂದು ಮನೆಯಲ್ಲಿಯೇ ಇರುತ್ತೇನೆ. ನಿನ್ನ ಗಂಡ ಏನು ಮಾಡುವ ಹಾಗಿದ್ದಾನೆ? ಸುತ್ತಮುತ್ತಲಿನ ಮನೆಯವರಿಗೆ ಹೇಳುತ್ತಾನಾ? ಹೇಳುವುದಿಲ್ಲ. ಗೌರವವನ್ನು ಬೀದಿಪಾಲು ಮಾಡುವುದಿಲ್ಲ. ಕುಕ್ಕಿ ಹಾಕಿದ ಹೇನಿನಂತೆ ಬಿದ್ದಿರುತ್ತಾನೆ. ಯಾವಾಗಲಾದರೂ ನಿನ್ನನ್ನು ಏನಾದರೂ ಅಂದನೆಂದುಕೋ, ನಾನು ಬಂದಾಗ ಹೇಳುತ್ತೀ ನೀನು! ಅವನ ಕೈಯ ಒಂದು ಕಿರುಬೆರಳನ್ನು ಮುರಿದುಬಿಡುತ್ತೇನೆ. ನಿನಗೆ ಚಿಕ್ಕ ಅಪಾಯ ಉಂಟಾದರೂ ಅವನ ಪ್ರಾಣ ಹೋದ ಹಾಗೆಯೇ. ಅವನ ತಾಯಿ, ನಿನ್ನ ನಾದಿನಿ ಕೂಡಾ ಸತ್ತ ಹಾಗೆಯೇ. ಹಾಗೆ ಭಯದಲ್ಲಿಡುತ್ತೇನೆ. ನಿನ್ನನ್ನು ಹೂವಿನಲ್ಲಿಟ್ಟು ನೋಡಿಕೊಳ್ಳುತ್ತಾನೆ. ಅದಕ್ಕೆ ಬದಲಾಗಿ ನೀನು ನನ್ನನ್ನು ನಿನ್ನ ಸ್ನೇಹಿತನಂತೆ ಇಟ್ಟುಕೊಳ್ಳುತ್ತೀ. ತುಂಬಾ ಮುಜುಗರ ಮಾಡುವುದಿಲ್ಲ. ತಿಂಗಳಿಗೊಂದು ಸಲ ಮೂರನೆಯ ಕಣ್ಣಿಗೆ ತಿಳಿಯದ ಹಾಗೆ ಗೆಸ್ಟ್ನಂತಿರುತ್ತೇನೆ. ನಿನಗೂ, ನನಗೂ, ನಿನ್ನ ಗಂಡನಿಗೂ ಹೊರತಾಗಿ ನಾಲ್ಕನೆಯ ಮನುಷ್ಯನಿಗೆ ತಿಳಿಯುವುದಿಲ್ಲ. ನಿನ್ನ ಸಂಸಾರವನ್ನು ಚೆನ್ನಾಗಿಡುವ ಹೊಣೆ ನನ್ನದು. ನಾನು ಹೇಳಿದ ಪ್ರಫೋಜಲ್ ಚೆನ್ನಾಗಿದೆಯಾ?
ಯಾವ ಮಾಕ್ರ್ಸ್ ಆಗಲೀ, ಮನು ಆಗಲಿ ಹೇಳಿರದ ಈ ಹೊಸ ಥಿಯರಿ ಅರ್ಥವಾಗದೆಯೋ, ಅರ್ಥವಾದರೂ ಜೀರ್ಣಿಸಿಕೊಳ್ಳಲಾಗದೆಯೋ ಅವಳು ಗಲಿಬಿಲಿಯಿಂದ ನೋಡುತ್ತಾ ಇದ್ದುಬಿಟ್ಟಳು.
ಏನು ಹಾಗೆ ನೋಡುತ್ತಿದ್ದೀ? ನಾನು ಹೇಳಿದ್ದು ಅರ್ಥವಾಗಲಿಲ್ಲವಾ? ಇಷ್ಟಕ್ಕೂ ನಿನ್ನ ಹೆಸರೇನು?
ಲಕ್ಷ್ಮೀಶಾರದಾ
ನೋಡೂ..... ನಾನು ನಿನ್ನನ್ನು ಅನುಭವಿಸುವುದು ಎನ್ನುವುದು ಈ ರಾತ್ರಿ ಹೇಗೂ ನಡೆಯುತ್ತೆ. ನೀನೊಪ್ಪಿಕೊಂಡರೆ ನಿನ್ನ ಸಂಸಾರ ಚೆನ್ನಾಗಿರುತ್ತೆ. ಇಲ್ಲದಿದ್ದರೆ ರೇಪ್ ನಡೆಯುತ್ತೆ ಇಲ್ಲಿಯೇ. ಈ ರಸ್ತೆಯ ಪಕ್ಕದಲ್ಲಿಯೇ.... ನಿನಗ್ಯಾವುದು ಬೇಕೋ ಯೋಚಿಸಿಕೋ
ಹೆಣ್ಣು ಅರ್ಧರಾತ್ರಿ ನಿರ್ಭೀತಿಯಿಂದ ತಿರುಗಾಡುವ ದಿನ ಎಂದು ಬರುತ್ತದೋ ತಿಳಿದಾಗಲೀ, ಭಯಭಯವಾಗಿ ಹೊರಕ್ಕೆ ಬಂದ ಇಬ್ಬರು ಹೆಂಗಸರು ಮಾತ್ರ ಆ ರೀತಿಯಾಗಿ ಸಿಕ್ಕಿಕೊಳ್ಳುವ ಪರಿಸ್ಥಿತಿ ಏರ್ಪಟ್ಟಿತು.
ಒಬ್ಬರು ಪೊಲೀಸ್ ಕೈಯಲ್ಲಿ
ಮತ್ತೊಬ್ಬರು ಗೂಂಡಾ ಕೈಯಲ್ಲಿ.
2
ಮಟ್ಕಾ ಮಸ್ತಾನ್ ಅವಳತ್ತಲೇ ನೋಡುತ್ತಿದ್ದ.
ಲಕ್ಷ್ಮೀಶಾರದ ತಲೆ ತಗ್ಗಿಸಿಕೊಂಡು ನಿಂತಿದ್ದಳು. ಆಕೆ ಮಾತ್ರ ಏನುತ್ತರ ಹೇಳಬಲ್ಲಳು?
‘ನೀನೊಪ್ಪಿಕೊಂಡರೆ ನಿನ್ನ ಸಂಸಾರ ಚೆನ್ನಾಗಾಗುತ್ತೆ. ಒಪ್ಪಿಕೊಳ್ಳದಿದ್ದರೆ ರೇಪ್ ನಡೆಯುತ್ತೆ. ಎರಡರಲ್ಲಿ ಯಾವುದು ಬೇಕೋ ಆರಿಸಿಕೋ’ ಎಂದು ಮಟ್ಕಾ ಮಸ್ತಾನ್ ಅವಳಿಗೆ ಎರಡು ಛಾಯ್ಸ್ ಕೊಟ್ಟಿದ್ದ.
ಎಲೆಕ್ಷನ್ನಿಗೆ ನಿಂತವನು ಓಟರ್ ಹತ್ತಿರಕ್ಕೆ ಬಂದು, ನಾನು ಕಳ್ಳಕೊರಮ, ಲಂಚಕೋರ; ಆದರೆ ಆ ಇನ್ನೊಬ್ಬ ಕೊಲೆಗಾರ, ಗೂಂಡಾ; ನೀನು ಯಾರಿಗೆ ಕೊಡುತ್ತೀ ಓಟು ಎಂದು ಕೇಳಿದರೆ ಉಂಟಾಗುವ ಗಲಿಬಿಲಿ ಅವಳಿಗೆ ಉಂಟಾಗಿತ್ತು.
ಅವಳು ಮನೆಯಿಂದ ಯಾವತ್ತೂ ಹೊರಕ್ಕೆ ಬಂದವಳಲ್ಲ. ಹೊರಗಿನ ಪ್ರಪಂಚ ಹೀಗಿರುತ್ತದೆಂದು ಕೂಡಾ ಅವಳಿಗೆ ತಿಳಿಯದು.
ಮನೆಯಲ್ಲಿ ಗಂಡ ಹಿಂಸಿಸುತ್ತಾನೆಂದು ಮಾತ್ರವೇ ಗೊತ್ತು. ಹೊರಗೆ ಬಂದರೆ ರೌಡಿಗಳು ಹಿಂಸಿಸುತ್ತಾರೆಂದು ತಿಳಿಯದು.
ಬೆಳಗಾಗುವವರೆವಿಗೂ ಹೀಗೆ ಹೊರಗೆ ಬಿದ್ದರೆ ಗಂಡುನಾಯಿ ಕೂಡಾ ವ್ಯಾಪಾರ ಮಾಡುತ್ತದೆಂದು ತಿಳಿಯದು.
ಆದರೂ
ಮನೆಗೆ ಹೋಗಬೇಕಾ? ಬೇಡವಾ? ಎನ್ನುವ ನಿರ್ಣಯ ಅಲ್ಲ ಅವಳು ತೆಗೆದುಕೊಳ್ಳಬೇಕಾದದ್ದು. ಎದುರಿಗಿರುವ ರೌಡಿಯನ್ನು ಮನೆಗೆ ಕರೆದುಕೊಂಡು ಹೋಗಿ ಪರ್ಮನೆಂಟು ಮಾಡಿಕೊಳ್ಳಬೇಕಾ? ಕಸದ ತೊಟ್ಟಿಯ ಪಕ್ಕದಲ್ಲಿ ಟೆಂಪೊರರಿ ಮಾಡಿಕೊಳ್ಳಬೇಕಾ? ಎನ್ನುವುದನ್ನು ನಿರ್ಧರಿಸಬೇಕು.
ಅವಳು ಯಾವ ನಿರ್ಧಾರವನ್ನು ತೆಗೆದುಕೊಳ್ಳದಿರುವುದನ್ನು ನೋಡಿ ಏನಿದು? ಇಷ್ಟು ಹೊತ್ತು ಆಲೋಚಿಸುತ್ತಿದ್ದೀ? ಬೇಗ ನಿರ್ಧಾರ ತಗೋ. ನಾನೇ ನಿಮ್ಮ ಮನೆಗೆ ಬಂದು ವ್ಯವಹಾರವನ್ನೆಲ್ಲಾ ಸೆಟಲ್ ಮಾಡಿ, ನಿನ್ನ ಸಂಸಾರವನ್ನು ಚೊಕ್ಕವಾಗಿ ಮಾಡುತ್ತೇನೆಂದರೆ ಅದಕ್ಕೆ ಇಷ್ಟು ಯಾಕೆ ಯೋಚಿಸುತ್ತಿದ್ದೀ?
ಎಂದ.
ಆ ಸಮಯದಲ್ಲಿ ಅಲ್ಲಿ ಒಬ್ಬ ಯುವಕ ಸೈಕಲ್ ಮೇಲೆ ಬಂದ. ಸೆಕೆಂಡ್ ಷೋ ಸಿನೆಮಾದಲ್ಲಿ ಸೋಡಾ ಮಾರಿ ಮನೆಗೆ ಹೋಗುತ್ತಿದ್ದವನವನು.
ಲೈಟು ಬೆಳಕಿನಲ್ಲಿ ಆ ಯುವತಿಯನ್ನು ನೋಡಿ ಗುರುತು ಹಿಡಿದು ಶಾರದರವರೇ, ನೀವಾ?
ಎಂದ ಆಶ್ಚರ್ಯದಿಂದ.
ಅವಳು ಅವನನ್ನು ತಲೆಯೆತ್ತಿ ನೋಡಿದಳು. ಅವಳು ತನ್ನನ್ನು ಗುರುತಿಸಲಿಲ್ಲವೆಂದು ಅವನು ಮೊದಲೇ ಊಹಿಸಿದವನಂತಿದ್ದ. ಅವಳು ಮದುವೆಯಾದ ದಿನದಿಂದ ಇಲ್ಲಿಯವರೆವಿಗೆ ಬೀದಿಬಾಗಿಲಿನಲ್ಲಿ ಕಾಣಿಸಿರಲಿಲ್ಲ.
ನಾನು ನಿಮ್ಮ ಎದುರು ಮನೆಯಲ್ಲಿದ್ದೀನ್ರಿ. ನನ್ನ ಹೆಸರು ಬೋಸ್ಬಾಬು
ಎಂದ.
ಆಗಿದ್ರೆ ಏನೋ? ನೀನಿಲ್ಲಿಂದ ಹೋಗು
ಎಂದ ಮಸ್ತಾನ್. ಬೋಸ್ ಅವನ ಮಾತುಗಳಿಗೆ ತಲೆಕೆಡಿಸಿಕೊಳ್ಳದೇ ಈ ಸಮಯದಲ್ಲಿ ನೀವು ಇಲ್ಲಿದ್ದೀರಲ್ಲಾ, ಯಾಕೆ?
ಎಂದ. ಶಾರದ ತಲೆಯೆತ್ತಿ ಅವನತ್ತು ನೋಡಿದಳು. ಬೋಸ್ಗೆ ಇಪ್ಪತ್ತೈದು ವರ್ಷಗಳಿರಬಹುದು. ಆದರೆ ಅಷ್ಟು ವಯಸ್ಸಾದಂತೆ ಕಂಡುಬರುತ್ತಿರಲಿಲ್ಲ. ಚಂದ್ರಕಿರಣದ ಕಾಂತಿಯಲ್ಲಿ ಮುಗ್ಧವಾಗಿ, ಅಂದವಾಗಿದ್ದ. ಪ್ರಪಂಚದಲ್ಲಿನ ಕಲ್ಮಶ ಇನ್ನೂ ಅವನ ಕಣ್ಗಳಲ್ಲಿ ಸೇರಿರಲಿಲ್ಲ.
ಲಕ್ಷ್ಮೀಶಾರದ ಏನೋ ಹೇಳಬೇಕೆಂದುಕೊಂಡಳು. ತುಟಿಗಳು ಚಲಿಸಿದವು. ತನ್ನ ಬೀದಿಯಲ್ಲಿನ ಹುಡುಗ ಈ ರೀತಿಯಾಗಿ ಕಾಣಿಸಿಕೊಂಡಿದ್ದು ಮಾತ್ರ ಅವಳಿಗೆ ಸ್ವಲ್ಪ ಹಾಯ್ ಎನ್ನಿಸಿತ್ತು. ಈ ಪೂರ್ತಿ ವ್ಯವಹಾರಕ್ಕೆ ಬೇಸರದಿಂದಿದ್ದುದು ಮಟ್ಕಾ ಮಸ್ತಾನ್ ಒಬ್ಬನೇ. ಪಾರ್ಟಿಯೊಂದಿಗೆ ಬೆಲೆ ಸೆಟಲ್ ಮಾಡಿಕೊಳ್ಳಲಿರುವ ಕಾನ್ಸ್ಟೇಬಲ್ಗೆ, ವ್ಯವಹಾರದ ನಡುವೆ ಹಠಾತ್ತನೆ ಯಸೈ ಸ್ಟೇಷನ್ಗೆ ಬಂದುಬಿಟ್ಟರೆ ಹೇಗೆ ಮೈ ಉರಿಯುತ್ತದೋ ಅಷ್ಟು ಕಿರಿಕಿರಿಯುಂಟಾಗಿದೆ ಅವನಿಗೆ. ಹೋಗೋ... ನಿನಗಿಲ್ಲೇನು ಕೆಲಸ?.... ಹೋಗು
ಎಂದು ಗದರಿದ.
ಬೋಸ್ಗೆ ಏನೂ ಅರ್ಥವಾಗಲಿಲ್ಲ. ಒಂದು ಸಲ ಅವಳತ್ತ ಮಸ್ತಾನ್ನತ್ತ ನೋಡಿ ಸೈಕಲ್ನೊಂದಿಗೆ ಮುಂದಕ್ಕೆ ಹೋದ. ಆಗ ಶಾರದ ಚಲಿಸಿ ಏನ್ರೀ, ನಾನೂ ನಿಮ್ಮ ಜೊತೆ ಬಂದುಬಿಡ್ತೀನಿ
ಎಂದಳು.
ಮಸ್ತಾನ್ಗೆ ಮತ್ತಷ್ಟು ಮೈ ಉರಿಯಿತು. ಪಾರ್ಟಿಯನ್ನು ಬದಲಾಯಿಸಿ ಹೋಗಲು ಇದೇನಾದರೂ ರಾಜಕೀಯ ಅಂದುಕೊಂಡಿದ್ದೀಯಾ? ವ್ಯಭಿಚಾರ... ನಿಲ್ಲು!
ಎಂದ, ಅವಳ ರಟ್ಟೆ ಹಿಡಿದುಕೊಂಡು. ಅದೇ ಸಮಯಕ್ಕೆ ಸೈಕಲ್ ಮೇಲೆ ಒಬ್ಬ ಕಾನ್ಸ್ಟೇಬಲ್ ಬಂದ. ಕೊಕ್ಕೆಗೆ ಖಾಕಿ ಬಟ್ಟೆ ತಗುಲಿಸಿದ ಹಾಗಿದ್ದ. ಅರ್ಧರಾತ್ರಿ ಇಬ್ಬರು ಗಂಡಸರ ನಡುವೆ ಒಬ್ಬಳು ಹೆಂಗಸನ್ನು ನೋಡಿ ಸತ್ತ ಕೋಣನನ್ನು ನೋಡಿ ಸುಯ್ಯೆಂದು ಹಾರಿ ಬರುವ ಗಿಡುಗನಂತೆ ವೇಗವಾಗಿ ಹತ್ತಿರಕ್ಕೆ ಬಂದ. ಮಸ್ತಾನ್ನನ್ನು ನೋಡಿ ಬದುಕಿರುವ ಚೇಳನ್ನು ಬೂಟ್ನಲ್ಲಿ ನೋಡಿದ ಹಾಗೆ ಬೆದರಿ ಸೆಲ್ಯೂಟ್ ಮಾಡಿದ.
ಮಸ್ತಾನ್ ಆ ಸೆಲ್ಯೂಟ್ಗೆ ತಲೆಕೆಡಿಸಿಕೊಳ್ಳದೇ ಅವಳ ಕೈ ಹಿಡಿದುಕೊಂಡು ನಡಿ
ಎಂದ. ಲಕ್ಷ್ಮೀಶಾರದ ಅಪ್ರಯತ್ನವಾಗಿ ಬಿಡಿಸಿಕೊಂಡಳು. ಅಷ್ಟರಲ್ಲಿ ಬೋಸ್ ಆ ಪೊಲೀಸ್ ಹತ್ತಿರಕ್ಕೆ ಹೋಗಿ ನೋಡಿ, ಈಕೆ ನಮ್ಮ ರಸ್ತೆಯಲ್ಲಿದ್ದಾರೆ. ಈ ರೌಡಿ ಈಕೆಯ ಹತ್ತಿರ ತರಲೆ ಮಾಡುತ್ತಿದ್ದಾನೆ
ಎಂದ.
ಆಗ ಬಿದ್ದಿತು ಹಿಂದಿನಿಂದ ಏಟು. ಬೋಸ್ ಮುಂದಕ್ಕೆ, ಸೈಕಲ್ ಹಿಂದಕ್ಕೆ ಬಿದ್ದರು. ಮೊಣಕೈಗಳು ಏಟು ತಿಂದವು. ಅವನೇನೋ ಹೇಳುವಷ್ಟರಲ್ಲಿ ಮಸ್ತಾನ್ ಮತ್ತೆ ಅವನ ಕಾಲರ್ ಹಿಡಿದು ಮೇಲೆತ್ತಿ ಗಲ್ಲದ ಕೆಳಗೆ ಮತ್ತೆ ಹೊಡೆದ. ಬೋಸ್ನ ಹಲ್ಲುಗಳು ಅಲ್ಲಾಡಿದವು. ಆ ಏಟಿಗೆ ಲಕ್ಷ್ಮೀಶಾರದಳ ಕಣ್ಣಲ್ಲಿ ನೀರು ತುಂಬಿತು.
ಬಿಟ್ಟುಬಿಡಣ್ಣಾ ಪಾಪ!
ಎಂದ ಪೊಲೀಸು! ಮಸ್ತಾನ್ನೊಂದಿಗೆ ಅದಕ್ಕಿಂತ ಹೆಚ್ಚು ಮಾತಾಡುವುದು ಡೇಂಜರಸ್ ಎಂದು ಅವನಿಗೆ ತಿಳಿದಿತ್ತು. ಅದೇ ಅವನ ಬದಲಾಗಿ ಅಲ್ಲಿ ಒಬ್ಬ ಚಿಕ್ಕ ಗೂಂಡಾ ಇದ್ದಿದ್ದರೆ ದಬಾಯಿಸಿ ಗಿಡುಗನಂತೆ ಆ ಐವತ್ತು ಕೇಜಿಯ ಮಾಂಸವನ್ನು ತಾನೇ ಎಳೆದುಕೊಂಡು ಹೋಗಿರುತ್ತಿದ್ದ. ಆದರೆ ಅಲ್ಲಿದ್ದಿದ್ದು ಸಿಂಹ. ಅದು ತಿಂದು ಹೊರಟು ಹೋಗುವವರೆವಿಗೂ ಕಾಯುವುದು ನರಿಯ ಧರ್ಮ! ಅವನು ತನ್ನ ಧರ್ಮವನ್ನು ಚೊಕ್ಕವಾಗಿ ನಿರ್ವಹಿಸುತ್ತಿದ್ದ.
ಗಲಾಟೆಗಳು ನಡೆಯದ ಹಾಗೆ ನೋಡಿಕೊಳ್ಳುವುದೇ ಅಲ್ಲವಾ ಪೊಲೀಸರ ಕೆಲಸ. ಅದಕ್ಕೇ ‘ಬಿಟ್ಟುಬಿಡಣ್ಣಾ’ ಎಂದಿದ್ದ.
ಬೋಸ್ನನ್ನು ಮೇಲಕ್ಕೆತ್ತಿ ಎಲ್ಲಿ ಕೆಲಸ ಮಾಡುತ್ತೀಯೋ ನೀನು?
ಎಂದ. ಬೋಸ್ ಉತ್ತರಿಸಲಿಲ್ಲ. ಬಾಯಿಯಿಂದ ಕಾರುತ್ತಿದ್ದ ರಕ್ತವನ್ನು ಮೊಣಕೈಯಿಂದ ಒರೆಸಿಕೊಂಡ.
ಏನು ನಿನ್ನ ಹೆಸರು?
ಬೋಸ್
ಓಹೋ, ಸುಭಾಷ್ ಚಂದ್ರಬೋಸಾ?
ಅಲ್ಲ, ಜಗದೀಶ್ ಚಂದ್ರಬೋಸ್
ಸರಿ ಸರಿ, ಹೋಗು ಹೋಗು. ಇನ್ನು ಯಾವಾಗಲೂ ಇಂತಹ ವಿಷಯಗಳಲ್ಲಿ ತಲೆ ಹಾಕಬೇಡ. ನಾವು ನಾವು ನೋಡಿಕೊಳ್ಳುತ್ತೇವೆ.......
ನೋಡಿಕೊಳ್ಳುವುದು ವಿಷಯವನ್ನೋ - ಶಾರದಾನೋ ತಿಳಿಯದವನಂತೆ ಬೋಸ್ ಅಲ್ಲಿಯೇ ನಿಂತುಕೊಂಡ.
ಪೊಲೀಸ್ ಲಕ್ಷ್ಮೀಶಾರದಳತ್ತ ತಿರುಗಿ ನೀನು ಈ ಅರ್ಧರಾತ್ರಿ ಹೊತ್ತಿನಲ್ಲಿ ಇಲ್ಲೇನು ಮಾಡುತ್ತಿದ್ದಿ?
ಎಂದು ಗದರಿಸಿದ. ಪೂರ್ತಿಯಾಗಿ ಪೊಲೀಸ್ ಡಾಮಿನೇಟ್ ಮಾಡುತ್ತಿದ್ದಾನೆಂದು ಅನುಮಾನ ಬಂದಿತು ಮಸ್ತಾನ್ಗೆ. ಅಮೆರಿಕಾ ಇದೆಯಲ್ಲಾ, ವಿಶ್ವಸಂಸ್ಥೆ ತೀರ್ಪು ಹೇಳುತ್ತದೆಂದರೆ ಕಷ್ಟವಲ್ಲವಾ...
ನೀನು ಹುಡುಗನನ್ನು ಕರೆದುಕೊಂಡು ಹೋಗು. ಇಬ್ಬರೂ ಹೋಗೀ. ನಾನು ಇವಳ ವಿಷಯ ನೋಡಿಕೊಳ್ಳುತ್ತೇನೆ
ಎಂದ, ನೀನೇಕೆ ನನಗೆ ಅಡ್ಡ? ಎನ್ನುವಂತೆ.
ಪೊಲೀಸೂ ಕಮ್ಮಿಯವನೇನಲ್ಲ. ಅವನು ಹೋಗ್ತಾನಣ್ಣಾ! ನೀನಾ ಕತ್ತಲೆಗೆ ಕರೆದುಕೊಂಡು ಹೋಗು. ನಾನಿಲ್ಲಿ ಕಾವಲಾಗಿರುತ್ತೇನೆ
ಎಂದ. ಇಂತಹ ಭೂಮಿಯ ಮೇಲಾ ನಾನು ಬೆಳಕು ಹರಡುತ್ತಿರುವುದು ಎಂದು ಬೆಳದಿಂಗಳು ಮೋಡಗಳ ಮರೆಗೆ ಮಾಯವಾಯಿತು.
ಆಗ ಆ ಕತ್ತಲೆಯಲ್ಲಿ - ಬೋಸ್ ಹಾರಿ ಮಸ್ತಾನ್ನನ್ನು ಒದ್ದ. ಅಲ್ಲಿದ್ದ ಉಳಿದ ಮೂವರೂ ಊಹಿಸಿರಲಿಲ್ಲ. ಹಾಗೆ ನಡೆಯುತ್ತದೆಂದು. ಅಷ್ಟು ವೇಗವಾಗಿ ನಡೆದಿತ್ತಾ ಘಟನೆ. ಕಾವಲು ಕಾಯಬೇಕಾಗಿದ್ದ ಪೊಲೀಸೇ ರೌಡಿಯನ್ನು ರೇಪ್ ಮಾಡೆಂದು ಪ್ರೋತ್ಸಾಹಿಸಿದ್ದರಿಂದ ಬಂದ ಆವೇಶವೋ, ಚಿಕ್ಕಂದಿನಿಂದಿರುವ ಬಿಸಿರಕ್ತವೋ ಇನ್ನೇನೋ ಮಾಡದಿದ್ದರೆ ಲಾಭವಿಲ್ಲವೆಂಬ ಕೆಟ್ಟಧೈರ್ಯವೋ ಅವನನ್ನು ಆ ಕೆಲಸಕ್ಕೆ ಪ್ರೇರೇಪಿಸಿತ್ತು. ಅಣೆಕಟ್ಟನ್ನು ಕಿತ್ತುಹಾಕುವ ಗೋದಾವರಿ ಕೂಡಾ ಚೆಲುವೆಯಾಗಿಯೇ ಆರಂಭವಾಗುತ್ತದೆ. ಪೂರ್ತಿಯಾಗಿ ಜೀವನವನ್ನು ಮಾರ್ಪಡಿಸುವ ತಿರುವು ಕೂಡಾ ಚಿಕ್ಕ ಘಟನೆಯಿಂದಲೇ ನಡೆಯುತ್ತದೆ.
ಮಸ್ತಾನ್ ಊಹಿಸಿರಲಿಲ್ಲ. ಆರಡಿ ಎತ್ತರ, ಹದಿನಾರು ವರ್ಷಗಳ ಅನುಭವವಿರುವ ತನ್ನನ್ನು ಆ ಹುಡುಗ ಹಾಗೆ ಹೊಡೆಯುತ್ತಾನೆಂದು ಅಂದುಕೊಂಡಿರದಿದ್ದುದರಿಂದ ತತ್ತರಿಸಿಹೋದ. ಆ ಹೊಡೆಯುವುದು ಕೂಡಾ ಯಾರೋ ಚಿಕ್ಕ ಹುಡುಗ ಆವೇಶದಿಂದ ಹೊಡೆದ ಹಾಗಲ್ಲದೇ, ಅಂಗಾಲಿನ ಮಧ್ಯದಿಂದ ಮಸ್ತಾನ್ ಮೊಣಕಾಲ ಚಿಪ್ಪಿನ ಮೇಲೆ ಹೊಡೆದಿದ್ದ.
ಅದರಲ್ಲಿ ಕೂಡಾ ಪ್ರೊಫೆಷನಲಿಸಂ ಇದೆಯೆಂದು ಮಸ್ತಾನ್ ಗ್ರಹಿಸುವಷ್ಟರಲ್ಲಿಯೇ ನೋವು ಹಣೆಯವರೆಗೂ ತೆವಳಿತ್ತು.
ಮೊಣಕಾಲಿನ ಚಿಪ್ಪು ಪಕಕ್ಕೆ ತೊಲಗಿದ್ದರೆ ರಸ್ತೆ ಮಧ್ಯದಲ್ಲಿ ಬುಡಕಡಿದ ಮರದಂತೆ ಬಿದ್ದ.
ತನ್ನ ಮುಂದೆಯೇ ಒಬ್ಬ ರೌಡಿ ಹಾಗೆ ಹೊಡೆಸಿಕೊಂಡು, ಒದೆಸಿಕೊಂಡಿದ್ದನ್ನು ನೋಡುತ್ತಾ ಸುಮ್ಮನಿರಲಾಗದೇ ಪೊಲೀಸ್ ಬೋಸ್ನನ್ನು ತಡೆಯಲು ಹೋದ. ಒಬ್ಬ ರೌಡಿಯನ್ನು ಒಬ್ಬ ಸಾಧಾರಣ ಮನುಷ್ಯ ಹೊಡೆಯುವುದು ಪೊಲೀಸ್ ವ್ಯವಸ್ಥೆಗೆ ಅವಮಾನ ಎಂಬಂತೆ ಎದುರಿಸಲು ಹೋದ. ಬೋಸ್ ಅವನನ್ನು ಗಟ್ಟಿಯಾಗಿ ಹಿಡಿದುಕೊಂಡು ಮೇಲಕ್ಕೆತ್ತಿದ. ದೇಹವನ್ನು ಗಾಳಿಯಲ್ಲೆತ್ತಿ ಮಸ್ತಾನ್ನ ಮುರಿದಿದ್ದ ಕಾಲಿನ ಮೇಲೆ ಬಿಸಾಡಿದ. ಮಸ್ತಾನ್ ಗಟ್ಟಿಯಾಗಿ ಚೀರಿದ.
ಬೋಸ್ ಟಕ್ಕನೆ ಕೆಳಗೆ ಬಿದ್ದಿದ್ದ ಸೈಕಲನ್ನು ತೆಗೆದುಕೊಂಡು ನಿಲ್ಲಿಸಿ, ಬನ್ನಿ
ಎಂದ ಗಾಬರಿಯಿಂದ.
ಲಕ್ಷ್ಮೀಶಾರದ ಗಲಿಬಿಲಿಯಿಂದ ಅವನತ್ತ ನೋಡಿದಳು.
ಬೇಗ ಹತ್ತಿ!
ಎನ್ನುತ್ತಾ ಅವಳ ಕೈ ಹಿಡಿದುಕೊಂಡು ಸರಿಸುಮಾರು ಬಲವಂತವಾಗಿ ಎಳೆದು ಮುಂದೆ ಕುಳ್ಳಿರಿಸಿಕೊಂಡು ವೇಗವಾಗಿ ತುಳಿಯತೊಡಗಿದ.
ಮೋಡಗಳ ಮರೆಯಿಂದ ಚಂದ್ರ ಹೊರಕ್ಕೆ ಬಂದಿದ್ದರಿಂದ ಮತ್ತೆ ಅಲ್ಲೆಲ್ಲಾ ಪ್ರಕಾಶವಂತವಾಯಿತು.
ತಣ್ಣನೆಯ ಗಾಳಿ ನಿಧಾನವಾಗಿ ಬೀಸುತ್ತಿತ್ತು. ಎರಡು ಮೂರು ತಿರುವುಗಳನ್ನು ತಿರುಗಿ, ಅವರು ದೂರವಾದರೆಂದು ನಂಬಿಕೆಯುಂಟಾದ ಮೇಲೆ ಸೈಕಲ್ ವೇಗ ತಗ್ಗಿಸಿದ. ಅವಳು ಇನನು ಆ ಷಾಕ್ನಿಂದ ಚೇತರಿಸಿಕೊಂಡಿರಲಿಲ್ಲ.
ಇಷ್ಟು ಸರಿರಾತ್ರಿಯಲ್ಲಿ ಹೀಗೆ ಯಾಕೆ ಬರಬೇಕಾಗಿ ಬಂತು?
ಕೇಳಿದ.
ಅವಳು ತಕ್ಷಣವೇ ಮಾತಾಡಲಾರದೇ ಹೋದಳು. ಸ್ವಲ್ಪ ತಡೆದು, ತವರು ಮನೆಗೆ ಹೋಗಿ ವರದಕ್ಷಿಣೆ ತೆಗೆದುಕೊಂಡು ಬರದಿದ್ದರೆ ಮತ್ತೆ ವಾಪಸ್ಸು, ಬರುವ ಅಗತ್ಯವಿಲ್ಲವೆಂದು ಒದ್ದೋಡಿಸಿಬಿಟ್ಟರು
ಎಂದಳು ನಿಧಾನವಾಗಿ.
ಅರ್ಧರಾತ್ರಿಯಲ್ಲಾ?
ಆಶ್ಚರ್ಯದಿಂದ ಕೇಳಿದ.
ಅವಳು ಆ ಪ್ರಶ್ನೆಗೆ ಉತ್ತರಿಸದೇ ನಾನೂ ಬೇಸತ್ತುಹೋಗಿದ್ದೇನೆ. ಇದಕ್ಕಿಂತ ಸಾವೇ ಒಳ್ಳೆಯದೆಂದು ಹೊರಕ್ಕೆ ಬಂದೆ
ಬಂದಳು. ಆದರೆ ಹೊರಕ್ಕೆ ಬಂದ ಮೇಲೆ ಭಯವಾಯಿತು. ಸಾಯಲು ಕೂಡಾ ಧೈರ್ಯ ಬೇಕೆಂದು ತಿಳಿಯಿತು
ಮದುವೆಯಾಗಿ ನೀವು ಅತ್ತೆಮನೆಗೆ ಬಂದಾಗ ನೋಡಿದ್ದೆ. ತಲೆ ಬಗ್ಗಿಸಿಕೊಂಡು ಕಾರಿಳಿದಿದ್ದಿರಿ. ಅದೇ ಕೊನೆಯ ಸಲ. ನಾವಿರುವುದು ನಿಮ್ಮ ಎದುರು ಮನೆಯಲ್ಲಿಯೇ, ನೀವು ಬೀದಿಬಾಗಿಲಿಗೆ ಕೂಡಾ ಬಂದ ಹಾಗೆ ಕಾಣಿಸಿಲ್ಲ ಅಂದುಕೊಂಡಿದ್ದೇನೆ.
ಅವಳು ಉತ್ತರಿಸಲಿಲ್ಲ.
ಅವನಿಗೆ ಸ್ತ್ರೀ ಎನ್ನವವರೇ ಹೊಸದು. ಅನುಭವವಿಲ್ಲ. ಅದಕ್ಕೇ ಅವನಿಗೆ ಯಾವ ಫೀಲಿಂಗೂ ಇರಲಿಲ್ಲ. ಆದರೆ ಅವಳು ವಿವಾಹಿತೆ. ಅವನಿಗೆ ಹತ್ತಿರವಾಗಿ ಕುಳಿತುಕೊಂಡಿದ್ದಳು. ಅವನ ಎದೆ ಅವಳ ಭುಜಕ್ಕೆ ತಾಕುತ್ತಿತ್ತು. ಮುಂಗುರುಳು ಅವನ ಗಲ್ಲಕ್ಕೆ ತಗಲುತ್ತಿರುವ ಸ್ಪರ್ಶ ತಿಳಿಯುತ್ತಿತ್ತು. ಗಂಡನೊಂದಿಗೆ ಕೂಡಿ ಅವಳೆಂದೂ ಹೊರಕ್ಕೆ ಬಂದಿರಲಿಲ್ಲ. ಇಷ್ಟು ಹತ್ತಿರವಾಗಿ ಹೀಗೆ ಪ್ರಯಾಣಿಸುವುದು ಅದೊಂದು ರೀತಿಯಾಗನ್ನಿಸುತ್ತಿತ್ತು. ಮುಜುಗರ ತುಂಬಿದ ಪರಿಸ್ಥಿತಿ.
ಅವಳಿಗೆ ನಡೆದಿದ್ದೆಲ್ಲಾ ನಿಜವೋ, ಕನಸೋ ಅರ್ಥವಾಗುತ್ತಿಲ್ಲ. ಮುಖ ಮೂತಿ ತಿಳಿಯದ ವ್ಯಕ್ತಿಯೊಂದಿಗೆ ಸೈಕಲ್ ಮೇಲೆ ಅರ್ಧರಾತ್ರಿ....
ಅವನಿಗೆ ಕೂಡಾ ಇನ್ನೇನು ಮಾತಾಡಬೇಕೆಂದು ತಿಳಿಯಲಿಲ್ಲ. ಸೈಕಲ್ ನಿಧಾನವಾಗಿ ತುಳಿಯುತ್ತಿದ್ದ.
ನನ್ನ ಹೆಸರು ನಿಮಗೆ ಹೇಗೆ ಗೊತ್ತು?
ಏನಾದರೂ ಮಾತಾಡಬೇಕೆಂದುಕೊಂಡವಳಂತೆ ಕೇಳಿದಳು.
ಎದುರು ಮನೆಯವರು ಲಗ್ನಪತ್ರಿಕೆ ಕೊಟ್ಟಿದ್ದರು.
ಅವಳು ನಾಚಿಕೊಂಡಳು. ಇಷ್ಟು ಚಿಕ್ಕವಿಷಯ ಹೊಳೆಯದಿದ್ದುದಕ್ಕೆ! ಇಷ್ಟು ಕಾಲ ಆ ಹೆಸರು ತನಗೆ ಹೇಗೆ ನೆನಪಿದೆಯೋ ಎನ್ನುವುದಕ್ಕೆ ವಿವರಣೆ ನೀಡುವವನಂತೆ ಅವನು ಹೇಳಿದ "ನಿಮ್ಮನ್ನು ಒಂದೇ ಒಂದು ಸಲ ನೋಡಿದೆನೆಂದು ಹೇಳಿದೆನಲ್ಲಾ...? ಮದುವೆಯಾಗಿ ಅತ್ತೆಮನೆಗೆ ಬಂದಿದ್ದೀರಿ. ಎಲ್ಲರೂ ಕಿಟಕಿ, ಬಾಗಿಲುಗಳ ಹತ್ತಿರ ನಿಂತು ನೋಡಿದೆವು. ಎದುರು ಮನೆಗೆ ಹೊಸವಧು ಬರುತ್ತಾಳೆಂದರೆ, ಹೇಗಿರುತ್ತಾಳೋ ನೋಡೋಣವೆಂದು ಎಲ್ಲರಿಗೂ ಕುತೂಹಲವೇ ಅಲ್ಲವಾ... ಬಾಡಿಗೆ ಕಾರಿನಿಂದ ನೀವು ಇಳಿದಿರಿ. ನನಗೆ ಚೆನ್ನಾಗಿ ನೆನಪಿದೆ. ನೀವು ಭುಜಗಳ ಮೇಲೆ ಸೆರಗು ಹೊದ್ದುಕೊಂಡು, ತಲೆ ತಗ್ಗಿಸಿಕೊಂಡು ಪತಿಯ ಹಿಂದೆಯೇ ಹೆಜ್ಜೆಗಳನ್ನು ಹಾಕುತ್ತಾ ಮೆಟ್ಟಲು ಹತ್ತಿ ನಿಮ್ಮ ಮೇಲಿನ ಪೋರ್ಷನ್ಗೆ ಹೊರಟುಹೋದಿರಿ. ನಮ್ಮ ತಾಯಿ ಹೇಳಿದರು - ಹುಡುಗಿಯ ಹೆಸರು ಲಕ್ಷ್ಮೀಶಾರದ ಅಂತೆ, ಹೆಸರಿಗೆ ತಕ್ಕ ಹಾಗೆ ಹೊಂದಿಕೆಯಾಗಿದ್ದಾಳೆ ಚಿನ್ನಾ ಎಂದು. ಆ ಮಾತುಗಳೂ, ದೃಶ್ಯವೂ ಚೆನ್ನಾಗಿ ನೆನಪಿನಲ್ಲಿ ಉಳಿದು ಹೋಗಿವೆ. ಅದ್ಕಕೇ ನೋಡಿದೊಡನೆಯೇ ನಿಮ್ಮನ್ನು ಗುರುತು ಹಿಡಿಯಬಲ್ಲವನಾದೆ. ಆಗಾಗ ನಮ್ಮ ಮನೆಯಲ್ಲಿ ಅಂದುಕೊಳ್ಳುತ್ತಿರುತ್ತೇವೆ ಇಪ್ಪತ್ತನಾಲ್ಕು ಗಂಟೆಗಳೂ ನೀವು ಮನೆಯಲ್ಲಿಯೇ ಇದ್ದು ಏನು ಮಾಡುತ್ತಿರುತ್ತೀರಿ ಎಂದು.
‘ಅಳುತ್ತಾ ಇರುತ್ತೇನೆ’ ಮನಸ್ಸಿನಲ್ಲಿ ಅಂದುಕೊಂಡಳು. ಅವಳಿಗೆ ತನ್ನ ಮನೆ, ಗಂಡ, ಅತ್ತೆ, ನಾದಿನಿಯರು ನೆನಪಾಗಿದ್ದರು. ತಾನು ಮನೆಯಿಂದ ಹೊರಕ್ಕೆ ಬಂದುಬಿಟ್ಟಿದ್ದು ನೆನಪಾಯಿತು. ಮನೆಯಲ್ಲಿನ ಪರಿಸ್ಥಿತಿ ಹೇಗಿದ್ದಿರುತ್ತದೆ? ತಾನು ನಿಜವಾಗಿಯೂ ಮನೆ ಬಿಟ್ಟು ಹೊರಟುಹೋಗಿರುವುದನ್ನು ನೋಡಿ ಎಲ್ಲರೂ ಗಾಬರಿಯಾಗಿರುವರಾ? ಮನೆಮರ್ಯಾದೆಗಳು ಬೀದಿಪಾಲಾದುವೆಂದು ಹೆದರುತ್ತಾ, ತನ್ನನ್ನು ನೋಡಿ ಹಮ್ಮಯ್ಯ ಎಂದುಕೊಳ್ಳುತ್ತಾರಾ? ಇನ್ನು ಮುಂದೆ ನೋಯಿಸಿದರೆ ಹೀಗೆಯೇ ಹೊರಟುಹೋಗುತ್ತಾಳೆಂಬ ಭಯದಿಂದ ಇನ್ನು ಮುಂದೆ ತನ್ನನ್ನು ಸರಿಯಾಗಿ ನೋಡಿಕೊಳ್ಳುವರಾ?
ಅವರು ನೋಡಿಕೊಂಡರೂ, ನೋಡಿಕೊಳ್ಳದಿದ್ದರೂ ಆ ಊಹೆಯೇ ಚೆನ್ನಾಗಿತ್ತು.
ನಿಮಗೆ ಇನ್ನೂ ಭಯ ಹೋಗಿಲ್ಲವೆಂದುಕೊಂಡಿದ್ದೇನೆ
ಎಂದ ಬೋಸ್.
ಭಯ ಯಾಕೆಂಬಂತೆ ಅವಳು ತಲೆ ತಿರುಗಿಸಿ ಹಿಂದಕ್ಕೆ ನೋಡಿದಳು. ಅವನ ಮುಖ ತುಂಬಾ ಹತ್ತಿರವಾಗಿದ್ದುದರಿಂದ ತಕ್ಷಣವೆ ತಲೆತಿರುಗಿಸಿಕೊಂಡು ಆ ಮಸ್ತಾನ್ ನಮ್ಮ ಏರಿಯಾ ರೌಡಿಯೇ ಅಂತೆ
ಎಂದಳು.
ಆಗಿರಲಿ ಬಿಡಿ. ಅವನು ರಾತ್ರಿ ಕತ್ತಲಿನಲ್ಲಿ ನಮ್ಮನ್ನು ಸರಿಯಾಗಿ ನೋಡಿರಲಾರ. ನೀವು ಹೇಗೂ ಮನೆಯಿಂದ ಹೊರಗೆ ಬರುವುದಿಲ್ಲ. ನಮ್ಮ ಮನೆ ಎಲ್ಲಿ ಎಂದು ತಿಳಿಯುವ ಅವಕಾಶವೇ ಇಲ್ಲ. ಇನ್ನೇನು ಮಾಡಬಲ್ಲ?
ಎಂದ ಹಗುರವಾಗಿ.
ಅವಳು ಚಿಂತೆಯಿಂದ, ಸಣ್ಣನೆಯ ಸ್ವರದಲ್ಲಿ ಹೇಳಿದಳು. ಆ ಮಸ್ತಾನ್ ಮನಸ್ಸಿನಲ್ಲಿ ಏನಿದೆಯೆಂದು ತಿಳಿಯದಿದ್ದಾಗ ಸಹಾಯ ಮಾಡುತ್ತಾನೆಂದುಕೊಂಡು ಅವನಿಗೆ ನಮ್ಮ ಮನೆಯ ಪೂರ್ತಿ ಅಡ್ರೆಸ್ ಕೊಟ್ಟೆ
ಆ ಮಾತುಗಳಿಗೆ ತೂರಾಡದೇ ಸೈಕಲ್ ಮೇಲೆಯೇ ಉಳಿದುಕೊಳ್ಳಲು ಬೋಸ್ ತುಂಬಾ ಕಷ್ಟಪಡಬೇಕಾಗಿ ಬಂದಿತು. ತನ್ನ ಮನಸ್ಸಿನಲ್ಲಿನ ಕೋಲಾಹಲ ಅವಳಿಗೆ ತಿಳಿದರೆ ಮತ್ತಷ್ಟು ಹೆದರುತ್ತಾಳೆಂದು, ಮಾಮೂಲಾಗಿ, ಸರಿ ಬಿಡಿ. ಅವನು ಬಂದಾಗ ನೋಡಿಕೊಳ್ಳೋಣ
ಎಂದ.
ಮುನ್ನುಗ್ಗಿ ಬರುತ್ತಿದ್ದ ಅಪಾಯದ ಬಗ್ಗೆ ಅವಳು ಕೂಡಾ ಊಹಿಸಿದಳು. ತಣ್ಣನೆಯ ಗಾಳಿ ಮೈಯನ್ನು ನಡುಗಿಸಿತು.
ಇಬ್ಬರೂ ತಮ್ಮ ರಸ್ತೆ ತಲುಪಿದರು. ಚಿಕ್ಕ ಸಂದಿ ಅದು. ಮೂರೂ ಕಡೆ ಮನೆಗಳಿದ್ದವು.
ನಡುವೆ ಸಿಮೆಂಟ್ ಕಲ್ಲು ಹಾಸಲ್ಪಟ್ಟಿತ್ತು. ಸುತ್ತಲೂ ಹತ್ತು ಮನೆಗಳವರೆವಿಗೂ ಇದ್ದವು. ಬೆಳ್ಳಗಿನ ಸುಣ್ಣದ ಗೋಡೆಗಳ ಮೇಲೆ ಬೆಳದಿಂಗಳು ಮಿಂಚುತ್ತಿತ್ತು.
ಅವನು ಸೈಕಲ್ ಸ್ಟ್ಯಾಂಡ್ ಹಾಕಿ ಬನ್ನಿ
ಎಂದ. ಅವಳಿಗೆ ಭಯವಾಗಿತ್ತು. ನಡುಗುತ್ತಿದ್ದ ಕಾಲ್ಗಳಿಂದ ಅವನನ್ನು ಅನುಸರಿಸುತ್ತಾ ಮೆಟ್ಟಿಲು ಹತ್ತಿದಳು. ಅವನು ಬಾಗಿಲು ತಟ್ಟಿದ. ಐದು ನಿಮಿಷಗಳ ನಂತರ ಗಂಡ ಬಂದು ಬಾಗಿಲು ತೆರೆದ.
ಅರ್ಧರಾತ್ರಿ ಒಂದು ಗಂಟೆಗೆ ಎದುರು ಮನೆಯ ಹುಡುಗನನ್ನೂ, ಅವನ ಹಿಂದೆಯೇ ತನ್ನ ಹೆಂಡತಿಯನ್ನೂ ನೋಡಿ ತನ್ನ ಬೆಡ್ರೂಂನಲ್ಲಿ ತನ್ನ ಹಾಸಿಗೆಯ ಮೇಲೆ ಅಪ್ಪೋಜಿಷನ್ ಲೀಡರ್ನೊಂದಿಗೆ ತನ್ನ ಹೆಂಡತಿಯ್ನನು ನೋಡಿದ ಮಂತ್ರಿಯಂತೆ ಮೊದಲು ಆಶ್ಚರ್ಯಗೊಂಡು, ನಂತರ ಕೋಪದಿಂದ ನಡುಗಿಹೋದ. ಒಂದು ಕೆಟ್ಟಮಾತು ಇಲ್ಲಿ ಬರೆಯಕೂಡದ್ದು ಕೇವಲ ವ್ಯಭಿಚಾರಿಗಳೂ, ಕುಡುಕರೂ, ಪೊಲೀಸರೂ ಬಳಸುವುದು ಉಪಯೋಗಿಸಿ ಯಾಕೆ ಬಂದೆಯೇ ಮತ್ತೆ?
ಎಂದು ಕೇಳಿದ.
ಬೋಸ್ ಬಾಯಿ ಹಾಕಿ ರಸ್ತೆಯ ಮೇಲೆ ರೌಡಿಗಳು ಹಿಂಬಾಲಿಸಿದ್ದರಿಂದ ಕರೆದುಕೊಂಡು ಬಂದೇರೀ
ಎಂದ ವಿನಯದಿಂದ.
‘ನನಗೆ ಪುರುಸೊತ್ತಿಲ್ಲ’ ಎನ್ನುವಷ್ಟು ಬಿರುಸಿನಿಂದ ಹೋಗಿ ಹೋಗಿ
ಎನ್ನುತ್ತಾ ಬಾಗಿಲನ್ನು ದಢಾರೆಂದು ಹಾಕಿಕೊಂಡ ಗಂಡ.
ಆ ಬಾಗಿಲು ಮುಚ್ಚಿದ ಶಬ್ಧಕ್ಕಿಂತ, ಆ ನಂತರದ ನಿಶ್ಯಬ್ಧ ಅವಳನ್ನು ತರಾಟೆಗೆ ತೆಗೆದುಕೊಂಡವು.
ಆ ‘ಹೋಗಿ-ಹೋಗಿ’ಯಲ್ಲಿ ಅರ್ಧರಾತ್ರಿ ಮನೆಯನ್ನೂ, ಸಂಸಾರವನ್ನೂ ಬಿಟ್ಟುಹೋಗಿ, ಹೆಣ್ಣು ಎರಡು ಗಂಟೆಗಳ ನಂತರ ಮರಳಿ ಬಂದರೆ ಕರೆದುಕೊಳ್ಳಲು ನಾನೇನು ಶ್ರೀರಾಮಚಂದ್ರನಾ? ಎನ್ನುವ ಛೀತ್ಕಾರವಿತ್ತು. ಆ ಮಾತಿಗೆ ಬಂದರೆ ಶ್ರೀರಾಮಚಂದ್ರನೇ ವಾಪಸ್ಸು ಸ್ವೀಕರಿಸಲಿಲ್ಲ.
ಬೋಸ್ ನಿಧಾನವಾಗಿ ಹಿಂದಕ್ಕೆ ತಿರುಗಿ ನಡೀರಿ
ಎಂದ ಅಲ್ಲಿ ಮಾಡಲು ಇನ್ನೇನೂ ಉಳಿದಿಲ್ಲವೆನ್ನುವಂತೆ. ಅವಳೂ ಕೂಡಾ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡಿದ್ದಳು. ಗಲಾಟೆ ಮಾಡುವಂತಹ ಕೆಟ್ಟಧೈರ್ಯವಂತೂ ಇರಲಿಲ್ಲ. ಅವನ ಹಿಂದೆಯೇ ಮೆಟ್ಟಲಿಳಿಯತೊಡಗಿದಳು.
ಕೆಲವು ಕಾಲದ ಹಿಂದೆ ಹೊಸವಧುವಿನಂತೆ ತಲೆ ತಗ್ಗಿಸಿಕೊಂಡು ಮೈತುಂಬಾ ಸೆರಗು ಹೊದ್ದು ಗಂಡನ ಹಿಂದೆಯೇ ನಡೆಯುತ್ತಾ ಆ ಮೆಟ್ಟಿಲುಗಳನ್ನು ಹತ್ತಿದ್ದಳು. ಈಗ ಇಳಿಯುತ್ತಿದ್ದಳು.
3
ನಿನ್ನ ಹೆಸರು?
ಶಾರದ
ಪೂರ್ತಿ ಹೆಸರು?
ವಿಶಾರದ
ವಯಸ್ಸು
ಹದಿನಾಲ್ಕು
ನಿನ್ನ ತಂದೆ ಏನು ಮಾಡುತ್ತಾನೆ?
ಮ್ಯಾಜಿಸ್ಟ್ರೇಟು ಕೇಳಿದ.
ಇಲ್ಲ. ಕೊಂದುಬಿಟ್ಟರು.
ಯಾರು?
ಪೊಲೀಸರು
ಓಹೋ, ಕಳ್ಳ ಎಂದಾಯ್ತು!
ಪೊಲೀಸರು ಕೊಂದವರೆಲ್ಲಾ ಕಳ್ಳರು ಹೇಗಾಗುತ್ತಾರೋ ಆ ಚಿಕ್ಕ ತಲೆಗೆ ಅರ್ಥವಾಗಲಿಲ್ಲ. ಮ್ಯಾಜಿಸ್ಟ್ರೇಟ್ ಕಟಕಟೆಯಲ್ಲಿದ್ದ ಆ ಹುಡುಗಿಯತ್ತ ನೋಡಿದ. ಆ ಹುಡುಗಿ ಹೊಂದಿಕೆಯಾಗಿ, ಹಿತ್ತಲಿನಲ್ಲಿನ ತುಳಸೀಸಸಿಯ ಹಾಗಿದ್ದಳು.
ಎಷ್ಟು ಕಾಲದಿಂದ ನೀನು ಹೀಗೆ ಕಳ್ಳತನ ಮಾಡುಸ್ತಿದ್ದೀ?
ಶಿಕ್ಷಿಸಬಿಡಬೇಕೆಂಬ ಆತುರದಲ್ಲಿದ್ದ ಮ್ಯಾಜಿಸ್ಟೇಟ್. ಆ ಹುಡುಗಿ ತಕ್ಷಣವೇ ಉತ್ತರಿಸಲಿಲ್ಲ. ತಾಯಿಯನ್ನು ಕೊಂದುಬಿಟ್ಟ ರೌಡಿಗಳು ಶವವನ್ನು ಸ್ಮಶಾನದಲ್ಲಿ ಹೂತಿದ್ದ ರಾತ್ರಿ ಅಳುತ್ತಿದ್ದಾಗ ಪೊಲೀಸ್ ಬಂದು ಮೆನಗೆ ಕರೆದೊಯ್ದದ್ದು, ಮರುದಿನದಿಂದ ಕೆಲಸಕ್ಕಿಳಿಸಿದ್ದು ನೆನೆಪಿಗೆ ಬಂದಿತ್ತು.
ಕೆಲಸವೆಂದರೆ ದೊಡ್ಡ ಕೆಲಸವೇನಲ್ಲ. ರಿಸ್ಕ್ ಇರುವ ಕೆಲಸ.
ರಾತ್ರಿ ತುಂಬಾ ಹೊತ್ತು ಓದಿಕೊಳ್ಳುವುದು, ಬೆಳಿಗ್ಗೆಯೇ ಎದ್ದು ಮೆನಯ ಚಾಕರಿ ಮಾಡುವುದು, ನಂತರ ಪೊಲೀಸ್ ತಂದೆ(?)