Abhilashe
()
About this ebook
Read more from Yandamoori Veerendranath
Duddu Duddu Rating: 5 out of 5 stars5/5Ladies Hostel Rating: 5 out of 5 stars5/5Jeevana Maadhurya Rating: 5 out of 5 stars5/5Tappu Maadona Banni! Rating: 4 out of 5 stars4/5O Henne Neeneshtu Olleyavalu Rating: 0 out of 5 stars0 ratingsPriyathama Rating: 0 out of 5 stars0 ratings
Related to Abhilashe
Related ebooks
Kappunadhi Rating: 0 out of 5 stars0 ratingsPriyathama Rating: 0 out of 5 stars0 ratingsSkyline People's Heaven Apartment Kannada Version Rating: 0 out of 5 stars0 ratingsKarmanye Vadhikaraste Rating: 0 out of 5 stars0 ratingsBhutagala University Rating: 0 out of 5 stars0 ratingsSuruli - Manadi Suttida Kathegalu Rating: 0 out of 5 stars0 ratingsSabeethu Rating: 0 out of 5 stars0 ratingsVyuha Rating: 0 out of 5 stars0 ratingsKempu Nakshatra Rating: 0 out of 5 stars0 ratingsAnoohya Rating: 0 out of 5 stars0 ratingsKurudu Thiruvu Rating: 0 out of 5 stars0 ratingsThushara Rating: 0 out of 5 stars0 ratingsKarala Garbha Rating: 0 out of 5 stars0 ratingsVaarasudhara Rating: 0 out of 5 stars0 ratingsAdarshave Bennu hatti Rating: 5 out of 5 stars5/5Hastakshepa Rating: 0 out of 5 stars0 ratingsNaleyannu geddavanu Rating: 0 out of 5 stars0 ratingsHudugiyarige Maathra Rating: 3 out of 5 stars3/5Best of Lovelavike Rating: 5 out of 5 stars5/5Naanu Saalugalu - Volume 2 Rating: 0 out of 5 stars0 ratingsThe Diary of Mrs.Sharada Rating: 5 out of 5 stars5/5Raktachandana Rating: 5 out of 5 stars5/5Beladingala Godavari Rating: 0 out of 5 stars0 ratingsTamasoma Jyothirgamaya Rating: 0 out of 5 stars0 ratingsPolice Diary Rating: 0 out of 5 stars0 ratingsAtruptatmagala Aakrandana Rating: 0 out of 5 stars0 ratingsKempu Kalave Rating: 0 out of 5 stars0 ratingsBottom Item Rating: 5 out of 5 stars5/5Solu Geluvina Hadiyalli Rating: 0 out of 5 stars0 ratingsKaredare Baare..! Rating: 0 out of 5 stars0 ratings
Reviews for Abhilashe
0 ratings0 reviews
Book preview
Abhilashe - Yandamoori Veerendranath
http://www.pustaka.co.in
ಅಭಿಲಾಷೆ
Abhilashe
Author :
ಯಂಡಮೂರಿ ವೀರೇಂದ್ರನಾಥ್
Yandamoori Veerendranath
For more books
http://www.pustaka.co.in/home/author/yandamoori-veerendranath
Digital/Electronic Copyright © by Pustaka Digital Media Pvt. Ltd.
All other copyright © by Author.
All rights reserved. This book or any portion thereof may not be reproduced or used in any manner whatsoever without the express written permission of the publisher except for the use of brief quotations in a book review.
ಯಂಡಮೂರಿ ವೀರೇಂದ್ರನಾಥ್
ಅಭಿಲಾಷೆ
ಕಾದಂಬರಿ
ಅಭಿಲಾಷೆ
ಅಧ್ಯಾಯ:ಒಂದು
ಬೆಳಗಿನ ಜಾವ ನಾಲ್ಕು ಗಂಟೆಯಾಗಿತ್ತು.
ಮೊಣಕಾಲಿನ ಮೇಲೆ ತಲೆಯಾನಿಸಿ ಚಿರಂಜೀವಿ ಕುಳಿತಿದ್ದ. ರಾತ್ರಿಯಿಡೀ ಅಳುತ್ತಲೇ ಇದ್ದುದರಿಂದ ಕಣ್ಣೀರಿನ ಕರೆ ಕೆನ್ನೆಯ ಮೇಲೆ ಕಾಣಿಸುತ್ತಿತ್ತು. ರಾತ್ರಿಯಿಡೀ ನಿದ್ರಿಸದೆ ಅಳುತ್ತಿದ್ದ. ಮೊದಲಿಗೆ ಜೋರಾಗಿ ಅತ್ತ, ನಂತರ ಸ್ವಲ್ಪ ಬಿಕ್ಕಳಿಸಿದ. ಆಮೇಲೆ ಅದೂ ನಿಂತು ಹೋಯಿತು.
ಅವನಿಂದ ನಾಲ್ಕು ಅಡಿ ದೂರದಲ್ಲಿ ಅವನ ಚಿಕ್ಕಪ್ಪ ಕುಳಿತಿದ್ದ. ಅವನ ಮುಖದ ರಕ್ತವೆಲ್ಲ ಬಸಿದು ಹೋಗಿರುವ ಹಾಗೆ ಬಿಳಿಚಿಕೊಂಡಿತ್ತು. ಅವನು ತುಟಿಗಳು ಮತ್ತು ಕೈ ಬೆರಳು ಅಲುಗಾಡುವುದನ್ನು ಯಾರಾದರೂ ಗಮನಿಸಿದ್ದರೆ ಅವನು ಯಾವ ಕ್ಷಣದಲ್ಲೂ ಬಿದ್ದು ಬಿಡಬಹುದು ಎಂದು ಭಾವಿಸುತ್ತಿದ್ದರು. ಅಷ್ಟು ಚಳಿಯಲ್ಲೂ ಅವನ ಮೈ ಬೆವರಿನಿಂದ ತೊಯ್ದಿತ್ತು.
ಇನ್ನೂ ಎಷ್ಟು ಹೊತ್ತಾಗುತ್ತೆ ಚಿಕ್ಕಪ್ಪಾ?
ಎಂದು ಕೇಳಿದ.
ಒಂದು ಗಂಟೆ
ನಡುಗುತ್ತಿದ್ದ ಸ್ವರದಲ್ಲಿ ಚಿಕ್ಕಪ್ಪ ಹೇಳಿದ.
************************
ವಿಶಾಲವಾದ ಜೈಲು ಆವರಣವನ್ನು ಕತ್ತಲೆ ಆವರಿಸಿತ್ತು. ಜೈಲಿನ ಕೆಂಪು ಗೋಡೆಗಳು ಬೆಳದಿಂಗಳಿನಲ್ಲಿ ಹೊಳೆಯುತ್ತಿದ್ದವು.
ಸಾಲಾಗಿದ್ದ ಸೆಲ್ಗಳಲ್ಲಿ ಕೈದಿಗಳು ನಿದ್ರಿಸುತ್ತಿದ್ದರು.
ಉದ್ದವಾದ ವೆರೆಂಡಾದಲ್ಲಿ ಇಬ್ಬರು ವ್ಯಕ್ತಿಗಳು ನಿಧಾನವಾಗಿ ನಡೆದು ಬಂದರು. ದೂರದಿಂದ ಬೀಳುತ್ತಿದ್ದ ಬೆಳಕಿನಿಂದಾಗಿ ಅವರು ನಡೆಯುವಾಗ ಅವರ ಉದ್ದನೆಯ ನೆರಳು ಹಾವಿನ ಹಾಗೆ ಕಾಣಿಸುತ್ತಿತ್ತು.
ಇಬ್ಬರೂ ಒಂದು ಸೆಲ್ನ ಬಳಿ ನಿಂತರು. ಬೀಗ ತೆಗೆದ ಸದ್ದು ಕೇಳಿ ಒಳಗೆ ಮಲಗಿದ್ದ ಕೈದಿ ತಲೆ ಎತ್ತಿ ನೋಡಿದ. ಬಾಗಿಲಿನ ಕಿರ್ರೆಂಬ ಸದ್ದು ಬಿಟ್ಟರೆ ಉಳಿದಂತೆ ಎಲ್ಲವೂ ನಿಶ್ಯಬ್ದ.
ಕುಳ್ಳಗಿದ್ದ ವ್ಯಕ್ತಿ ಕೈದಿಗೆ ಹೊಸ ಯೂನಿಫಾರಂ ಕೊಟ್ಟನು. ನೇಣಿಗೆ ಹಾಕುವ ಮೊದಲು ಹೊಸ ಬಟ್ಟೆ ಕೊಡುವ ಸಂಪ್ರದಾಯವಿದೆ!
ಜೈಲಿನ ಅಧಿಕಾರಿಗಳು ಮರಣದಂಡನೆಗೆ ಗುರಿಯಾದ ವ್ಯಕ್ತಿಗೆ ಇಪ್ಪತ್ನಾಲ್ಕು ಗಂಟೆಯ ಮೊದಲು ಅವನಿಗೆ ಸಾವಿನ ಬಗ್ಗೆ ಸೂಚನೆ ಕೊಡುತ್ತಾರೆ. ಅವನು ಮೊದಲು ಮೌನವಾಗಿ ರೋಧಿಸಿದನು. ಸಮಯ ಕಳೆದ ಹಾಗೆ ಅವನಲ್ಲಿ ಒಂದು ರೀತಿಯ ವೈರಾಗ್ಯ ಮನೆ ಮಾಡಿತು. ಕೆಲವರು ಜೋರಾಗಿ ಅಳುತ್ತಾರೆ. ಇನ್ನು ಕೆಲವರು ಕೊರಗುತ್ತಾರೆ. ಮತ್ತೆ ಕೆಲವರು ಹಿಸ್ಟೀರಿಕ್ ಆಗುತ್ತಾರೆ. ಆದರೆ ಬಹಳ ಮಂದಿ ಸಾವನ್ನು ನಿರ್ಲಿಪ್ತರಾಗಿ ಆಹ್ವಾನಿಸುತ್ತಾರೆ. ಇನ್ನು ಇಪ್ಪತ್ನಾಲ್ಕು ಗಂಟೆಯಲ್ಲಿ ಸಾವು ಖಚಿತ ಎಂದು ತಿಳಿದ ಅನೇಕರು ಜೀವಚ್ಛವಗಳಂತಾಗುತ್ತಾರೆ.
ಕೈದಿಗೆ ತಿಳಿಸುವುದಕ್ಕೆ ಒಂದು ದಿನ ಮೊದಲು ಅಂದರೆ ನೇಣಿಗೆ ಹಾಕುವ ಎರಡು ದಿನ ಮೊದಲು ಅವನ ಬಂಧುಗಳಿಗೆ ವಿಷಯ ತಿಳಿಸುತ್ತಾರೆ. ಆದರೆ ಆ ವಿಷಯವನ್ನು ಕೈದಿಗೆ ತಿಳಿಸಬಾರದು ಎಂದು ತಾಕೀತು ಮಾಡುತ್ತಾರೆ. ಆದರೆ ಅವರ ನಡವಳಿಕೆಯನ್ನು ಕಂಡ ಕೈದಿಗೆ ಎಲ್ಲವೂ ಅರ್ಥವಾಗಿ ಬಿಡುತ್ತದೆ.
ಮರಣದಂಡನೆಗೆ ಗುರಿಯಾದವರನ್ನು ಸಾಧ್ಯವಾದಷ್ಟು ಮಟ್ಟಿಗೆ ಒಂಟಿಯಾಗಿ ಇರುವಂತೆ ನೋಡಿಕೊಳ್ಳುತ್ತಾರೆ, ಆವೇಶದಲ್ಲಿ ಇತರ ಕೈದಿಗಳಿಗೆ ಅಪಾಯ ಮಾಡಬಾರದು ಎಂಬ ಉದ್ದೇಶದಿಂದ........ ಅದೇ ರೀತಿ ಇತರ ಕೈದಿಗಳು ನಿದ್ರಿಸುತ್ತಿರುವ ಸಮಯದಲ್ಲಿ, ಸೂರ್ಯೋದಯಕ್ಕೆ ಮೊದಲು ಶಿಕ್ಷೆ ಜಾರಿಯಾಗುತ್ತದೆ. ನಮ್ಮ ನಡುವೆ ಇದ್ದವನೊಬ್ಬ ನಿಶ್ಯಬ್ದವಾಗಿ ‘ಮಾಯ’ವಾದದ್ದನ್ನು ಅವರೆಲ್ಲ ಮಾರನೆ ದಿನ ಗಮನಿಸುತ್ತಾರೆ.
ಅದಕ್ಕೆ ಮೊದಲು ಜೈಲಿಗೆ ಡಾಕ್ಟರ್ ಬಂದು ಕೈದಿಯನ್ನು ಪರೀಕ್ಷೆ ಮಾಡುತ್ತಾನೆ. ಕೈದಿ ಅನಾರೋಗ್ಯದಿಂದ ಇಲ್ಲ ಎಂದು ಆ ಡಾಕ್ಟರ್ ಹೇಳಿದ ಮೇಲೆಯೆ ಶಿಕ್ಷೆ ಜಾರಿಯಾಗುತ್ತದೆ. ಖಾಯಿಲೆಯಿಂದಿರುವ ಕೈದಿಯನ್ನು ನೇಣುಗಂಬಕ್ಕೆ ಏರಿಸುವುದಿಲ್ಲ.
ಕೈದಿ ಹೊಸ ಬಟ್ಟೆ ತೊಟ್ಟ ಮೇಲೆ ಅವನ ಕೈಗಳನ್ನು ಬೆನ್ನ ಹಿಂದೆ ಕಟ್ಟಿದರು. ನಂತರ ಮೂವರೂ ಹೊರಗೆ ಬಂದರು. ಕೈದಿಯು ಒಮ್ಮೆ ತನ್ನ ಸೆಲ್ ಅನ್ನು ಆದ್ಯಂತವಾಗಿ ನೋಡಿದನು. ಹೊಸ್ತಿಲ ಬಳಿ ನಿಂತಿದ್ದ ಸೆಂಟ್ರಿಯ ಕಡೆ ‘ಹೋಗಿ ಬರ್ತೀನಿ’ ಎನ್ನುವ ಹಾಗೆ ಕಣ್ಣಿನಿಂದಲೇ ಹೇಳಿದನು. ಆಗ ಆ ಸೆಂಟ್ರಿ ಮುಖ ತಪ್ಪಿಸಿದನು. ಅವನಿನ್ನೂ ಸಣ್ಣ ವಯಸ್ಸಿನವನು. ಸಾವನ್ನು ಕಣ್ಣಾರೆ ನೋಡಿಯೇ ಇರದವನು.
ಅವರೆಲ್ಲ ವೆರೆಂಡಾದಲ್ಲಿ ನಡೆಯುತ್ತಿದ್ದಾಗ ಜೈಲಿನ ಗಂಟೆ ಬಾರಿಸಿತು, ಆಗ ನಾಲ್ಕೂವರೆ ಗಂಟೆ.
ಮೈ ಮೇಲಿನ ಮಚ್ಚೆಗಳನ್ನು, ಇತರೆ ಗುರುತು ಚಹರೆಗಳನ್ನು ಬರೆದುಕೊಂಡು ನೇಣು ಗಂಬ ಏರಬೇಕಾದವನು ಅವನೇ ಎಂದು ದೃಢಪಡಿಸಿಕೊಂಡರು.
ಆಮೇಲೆ ವಾರಂಟನ್ನು ಓದಲಾಯಿತು.
ನಿನ್ನ ಹೆಂಡತಿಯನ್ನು ಸಾಯಿಸಿದ ಕಾರಣಕ್ಕಾಗಿ ನಿನ್ನನ್ನು ಇಂಡಿಯನ್ ಪೀನಲ್ ಕೋಡ್ನ ಸೆಕ್ಷನ್ 302ರ ಅಡಿಯಲ್ಲಿ ಮರಣ ದಂಡನೆಗೆ ಗುರಿ ಮಾಡಲಾಗಿದೆ.
ಅವನು ಮೌನವಾಗಿ ಆ ಆಪಾದನೆಯನ್ನು ಆಲಿಸಿದನು.
ಕೈದಿಯ ಕಾಲುಗಳನ್ನು ಒಂದು ಬಿಳಿಯ ಹಗ್ಗದಿಂದ ಕಟ್ಟಿದರು. ಹಾಗೆ ಕಟ್ಟುವಾಗ ನಿನ್ನ ಕಡೆಯ ಆಸೆ ಏನು?
ಎಂದೂ ಕೇಳಿದರು. ಆಗ ಅವನು ಮೊದಲ ಬಾರಿಗೆ ಗಹಗಹಿಸಿ ನಕ್ಕು ಈಡೇರ್ಸ್ತೀರಾ?....... ನನ್ನಾಸೆ ಈಡೇರ್ಸ್ತೀರಾ?
ಎಂದು ಕೇಳಿದನು.
ನಿಜ. ಮರಣದಂಡನೆಗೆ ಗುರಿಯಾದ ವ್ಯಕ್ತಿಯ ಕೊನೆಯ ಆಸೆಯನ್ನು ಜೈಲಿನ ಅಧಿಕಾರಿಗಳು ಈಡೇರಿಸುತ್ತಾರೆ-ಎಂದು ಎಲ್ಲರೂ ತಿಳಿದಿರುತ್ತಾರೆ. ಅದು ಸರಿಯಲ್ಲ. ಮ್ಯಾನ್ಯುಯಲ್ ರೀತ್ಯಾ ಯಾವ ಆಸೆಯನ್ನೂ ತೀರಿಸಬೇಕಾಗಿಲ್ಲ. ಯಾರನ್ನಾದರೂ ಭೇಟಿ ಮಾಡಲು ಬಯಸಿದರೆ, ಅದನ್ನು ಮೊದಲೇ ತಿಳಿಸಿದರೆ ಮಾತ್ರ ಅದಕ್ಕೆ ವ್ಯವಸ್ಥೆ ಮಾಡುತ್ತಾರೆ. ಈ ಬಗ್ಗೆ ಇರುವ ಕತೆಗಳೆಲ್ಲ ಅರಿವುಗೇಡಿಗಳು ಮಾಡಿರುವ ಪ್ರಚಾರ ಮಾತ್ರ. ಕೈದಿಯು ವಿಲ್ ಬರೆಯಲು ಬಯಸಿದರೆ ಅಥವಾ ಬರೆದಿರುವ ವಿಲ್ಲನ್ನು ಬದಲಾಯಿಸುವ ಇರಾದೆ ವ್ಯಕ್ತಪಡಿಸಿದರೆ ಅದನ್ನು ಕೊನೆಯ ಆಸೆಯಾಗಿ ಮಾಡಲು ಅವಕಾಶವಿದೆ.
ಹೇಳಿ....... ನನ್ನ ಆಸೆ ಈಡೇರಿಸ್ತೀರಾ?
ಈಡೇರಿಸಲಿಕ್ಕೆ ಸಾಧ್ಯವಾದರೆ....... ಸಣ್ಣ ಆಸೆ ಯಾವುದಾದರೂ ಇದ್ದರೆ....
ಅವನು ಮತ್ತೆ ನಕ್ಕು, ನನ್ನ ಆಸೇನಾ ನೀವ್ಯಾರು ತೀರಿಸಲಾರಿರಿ. ದೇವರು ಮಾತ್ರ ತೀರಿಸಬಲ್ಲ
, ಎಂದನು.
ಏನದು?
ಸಾಯುವ ಕೊನೇ ಕ್ಷಣದಲ್ಲಿ ಹೇಳ್ತೀನಿ, ಆಗ ನಿಮಗೇ ತಿಳೀತದೆ.
ಎಲ್ಲರೂ ಪರಸ್ಪರ ಮುಖ ನೋಡಿದರು. ನಂತರ ಮುಖಕ್ಕೆ ಒಂದು ಕಪ್ಪು ಬಟ್ಟೆಯ ಮುಸುಕು ಹಾಕಿದರು........ಅವನ ಸಾವನ್ನು ದೃಢಪಡಿಸುವುದಕ್ಕೆ ಡಾಕ್ಟರ್ ಮತ್ತು ಇನ್ನಿಬ್ಬರು ಸಾಕ್ಷಿಗಳು ಸಿದ್ಧವಾಗಿದ್ದರು.
ಹಲುಗಿಯ ಮಧ್ಯದಲ್ಲಿ ಮರದ ಬಾಗಿಲಿತ್ತು. ಅದರ ಪಕ್ಕದಲ್ಲಿ ಒಂದು ಲಿವರ್, ಕೈದಿ ಆ ಮರದ ಬಾಗಿಲಿನ ಮೇಲೆ ನಿಂತಿದ್ದ. ಅವನ ಕುತ್ತಿಗೆಗೆ ಹಗ್ಗದ ಕುಣಿಕೆ ಬಿಗಿದರು. ಎಲ್ಲವೂ ನಿಶ್ಯಬ್ದವಾಗಿ ಯಾಂತ್ರಿಕವಾಗಿ ಸಾಗಿತ್ತು.
ಇನ್ನು ಐದು ಸೆಕೆಂಡುಗಳ ನಂತರ ಅವನ ಸಾವು ಸಂಭವಿಸುವುದಿತ್ತು. ಆಗ ಕಪ್ಪು ಬಟ್ಟೆ ಮುಸುಕಿನೊಳಗಿಂದ ಚಿರಂಜೀವಿಯ ಅಪ್ಪ ಗಟ್ಟಿಯಾಗಿ ಅರಚಿದನು.
ನ್ಯಾಯಾಲಯಕ್ಕೆ ಕಣ್ಣಿಲ್ಲ. ಕಾನೂನಿಗೆ ಕಿವಿಯಿಲ್ಲ. ಆ ಕೊಲೇನಾ ನಾನು ಮಾಡಿಲ್ಲ.....ಮಾಡಿಲ್ಲ.
***********************
ಜೋರಾಗಿ ಕಿರುಚಿದನು ಚಿರಂಜೀವಿ. ಮುಗೀತು ಚಿಕ್ಕಪ್ಪಾ! ಐದು ಗಂಟೆ ಆಯ್ತು. ಅಪ್ಪನ್ನ ಅವರು ಸಾಯಿಸಿ ಬಿಟ್ಟಿರ್ತಾರೆ. ಅಮ್ಮ ಕೂಡ ಹೋದಳು. ಈಗ ಅಪ್ಪ.....
ನಿಮ್ಮಮ್ಮನನ್ನು ಕೊಲೆ ಮಾಡಿದ್ದು ನಿಮ್ಮಪ್ಪ ಅಲ್ಲ, ನಾನು!
ಎಂದು ಚಿಕ್ಕಪ್ಪ ಹೇಳಿದನು. ಚಿರಂಜೀವಿ ಸ್ತಂಭೀಭೂತನಾದನು. ಆಗ ಚಿಕ್ಕಪ್ಪ ಹೇಳತೊಡಗಿದ:
ಹೌದು ಕಣೋ. ನಿಮ್ಮಮ್ಮ ಯಾವುದೋ ಘೋರ ತಪ್ಪು ಮಾಡಿದ ಪತಿತೆ ಅಂತ ಬದುಕಿರೋವರೆಗೂ ಕೊರಗಬೇಡ. ಅವಳು ಪತಿವ್ರತೆ, ಒಂಟಿಯಾಗಿದ್ದ ಅವಳನ್ನು ಕಬಳಿಸಬೇಕು ಅಂತ ನೋಡಿದೆ.....
ಬಾಬು ದುಃಖವನ್ನೇ ಮರೆತು ಬಿಟ್ಟನು. ಊಹಿಸದೇ ಆ ಸತ್ಯವನ್ನು ಭರಿಸಲಾಗದೆ ಆ ಹನ್ನೆರಡರ ಹುಡುಗ ಎದೆಯನ್ನು ಒತ್ತಿಕೊಳ್ಳುತ್ತ ಬಿದ್ದುಬಿಟ್ಟನು.
ಬೇಡಿಕೊಂಡಳು......... ನನ್ನ ಕಾಲು ಹಿಡಿದು ಬೇಡಿಕೊಂಡಳು......... ಅಪರ ಕಾಳಿಯ ಹಾಗೆ ಈಳಿಗೆಯನ್ನು ಕೈಗೆ ತೆಗೆದುಕೊಂಡಳು. ಆದರೂ ಮೃಗಬಲದ ಎದುರಿಗೆ ಸೋತು ಹೋದಳು. ಆ ಸೋಲನ್ನು ಸಹಿಸಲಾಗದೆ ಪ್ರಾಣ ಅರ್ಪಿಸಿದಳು. ಆಗ ಅಲ್ಲಿಗೆ ಬಂದ ನಿಮ್ಮಪ್ಪ ಬೇರೇನೋ ಊಹಿಸಿ ಆವೇಶಕ್ಕೊಳಗಾದ. ಅವನ ಆವೇಶವನ್ನು ನಾನು ಬೇರೆ ರೀತಿ ಬಳಸಿಕೊಂಡೆ. ತಪ್ಪನ್ನೆಲ್ಲ ಅವನ ತಲೆಗೆ ಕಟ್ಟಿದೆ. ನಿನಗೆ ಅಮ್ಮ-ಅಪ್ಪ ಇಲ್ಲದ ಹಾಗೆ ಮಾಡಿದೆ... ಆದ್ರೆ ಮಾಡಿದ ಪಾಪ ನಮ್ಮನ್ನ ಕಾಡುತ್ತೆ ಕಣೋ, ಅದಕ್ಕೆ ನಾನೇ ಉದಾಹರಣೆ.......
ಅವನು ಹೊರಳಾಡಿದ ಮುಖ, ಮೈ ತಿರುಚಿಕೊಂಡವು.
ಈ ನೋವನ್ನು ನಾನು ಸಹಿಸಲಾರೆ. ಇದು ನನ್ನನ್ನು ನುಂಗಿ ಹಾಕ್ತಿದೆ.... ನಾನು..... ನಾನು........
ಆಮೇಲೆ ಅವನ ಗಂಟಲಿನಿಂದ ಮಾತುಗಳು ಹೊರಬರಲಿಲ್ಲ. ತೆರೆದಿದ್ದ ಕಣ್ಣುಗಳು ಹಾಗೆಯೇ ಸ್ಥಿರವಾಗಿದ್ದವು. ಎದೆಯ ಮೇಲಿದ್ದ ಕೈ ಕೆಳಗೆ ಜಾರಿತು.
*******************
ಮನುಷ್ಯನನ್ನು ಸಾಯಿಸುವ ಹಕ್ಕು ಮನುಷ್ಯರಿಗಿಲ್ಲ. ಅವನು ಬದುಕಿದ್ದರೆ ಹೊರ ಬೀಳುವ ಸತ್ಯವನ್ನು ಸಾಯಿಸುವ ಮೂಲಕ ಹೂತು ಹಾಕುತ್ತಾರೆ..........ಈ ಮರಣದಂಡನೆಯನ್ನು ರದ್ದು ಮಾಡಬೇಕು.
ಲಿವರ್ ಕದಲುವ ಸದ್ದು!
ಆ ಸದ್ದನ್ನು ನುಂಗಿ ಹಾಕುವ ಹಾಗೆ ಅವನು ಅರಚುವುದು ಸೆರೆಮನೆಯ ಗೋಡೆಗಳು ಕಂಪಿಸುವ ಹಾಗೆ ಕೇಳಿ ಬಂದಿತು.
ಮರಣದಂಡನೆಯನ್ನು ರದ್ದು ಮಾಡಿ...... ರದ್ದು ಮಾಡಿ
ಲಿವರ್ ಅವನ ಕಾಲಿನ ಕೆಳಗಿದ್ದ ಬಾಗಿಲಿನ ಕೊಕ್ಕೆಯನ್ನು ಸರಿಸಿದಾಗ ‘ಧಬ್’ ಎಂಬ ಸದ್ದು ಕೇಳಿಸಿತು. ಆ ಬಾಗಿಲು ಕೆಳಕ್ಕೆ ಹೋಯಿತು. ದೇಹವು ಗಾಳಿಯಲ್ಲಿ ತೂಗಾಡಿದಾಗ ಕುತ್ತಿಗೆಗೆ ಬಿಗಿದಿದ್ದ ಹಗ್ಗದ ಕುಣಿಕೆ ಇನ್ನಷ್ಟು ಬಿಗಿಯಾಯಿತು. ಒಂದೆರಡು ಕ್ಷಣ..........
ಈ ಶಿಕ್ಷೆಯನ್ನು ರದ್ದು ಮಾಡಿರಿ. ಇದೇ ನನ್ನ ಕೊನೆಯ ಆಸೆ. ಐಪಿಸಿ 302ನೇ ಸೆಕ್ಷನ್ ರದ್ದಾಗಲಿ. ಇದೇ ನನ್ನ............
ಟಪ್ ಎಂಬ ಶಬ್ದದೊಂದಿಗೆ ಅವನ ಗೋಣು ಮುರಿಯಿತು.
ಪ್ಯಾಂಟಿನಲ್ಲಿ ವೀರ್ಯ ಸ್ಫಲನವಾಯ್ತು. ಪ್ರಪಂಚದಲ್ಲಿರುವ ಸಾವನ್ನು ಕೊಡುವ ವಿಧಾನಗಳಲ್ಲಿ ಅತಿ ಸುಲಭ ವಿಧಾನ........ಕುತ್ತಿಗೆಗೆ ಹಗ್ಗ ಬಿಗಿದು ನೇಣು ಹಾಕುವುದು. ಹಗ್ಗದ ಕುಣಿಕೆ ಗೋಣು ಮುರಿದ ಕ್ಷಣಗಳಲ್ಲಿ ಸ್ಮøಹೆ ತಪ್ಪುತ್ತದೆ. ವೀರ್ಯಸ್ಫಲನವಾಗುವ ಮೂಲಕ ಅವನನ್ನು ಅತ್ಯಂತ ಸಂತೃಪ್ತ ಸ್ಥಿತಿಯಲ್ಲಿ ಮೇಲಿನ ಲೋಕಕ್ಕೆ ಕಳಿಸಲಾಗುತ್ತದೆ.
ಅವನು ದೇಹ ಒಳಗೆ ಹೋದಾಗ ‘ಸ್ಸ್’ ಎಂಬ ಶಬ್ದವಾಯಿತು. ಆವರೆಗೆ ಬಿಗಿಹಿಡಿದಿದ್ದ ಉಸಿರನ್ನು ಅಲ್ಲಿದ್ದ ಎಲ್ಲರೂ ಒಟ್ಟಿಗೆ ನಿಶ್ವಾಸ ಮಾಡಿದಾಗ ಆದ ಸದ್ದು ಅದು. ಎಷ್ಟೇ ಅನುಭವದಿಂದ ಮಾಡಿದರೂ ಆ ಕೆಲಸ ಬಹಳ ಒತ್ತಡದ ಕೆಲಸವೇ. ನಂತರದ ನಾಲ್ಕೈದು ದಿನ ಅದೇ ಒತ್ತಡ. ಅದೇ ದೃಶ್ಯ ಅವರನ್ನು ಹಿಂಸಿಸುತ್ತವೆ. ಸಾವಿನ ಬಗ್ಗೆ ಮೊದಲೇ ಅರಿತಿದ್ದ ಅವನು ಮುದುಕನೇನಲ್ಲ. ಸಾವಿನ ಹೊಸ್ತಿಲಲ್ಲಿದ್ದ ಅವನನ್ನು ಉಳಿಸಲು ಅಲ್ಲಿ ಡಾಕ್ಟರ್ ಸಹಾ ಇರಲಿಲ್ಲ. ಸುತ್ತ ನಿಂತು ದುಃಖಿಸುವ ಬಂಧುಗಳೂ ಅಲ್ಲಿರಲಿಲ್ಲ. ಕತ್ತಲೆ ಕೋಣೆಯಲ್ಲಿ ಕಳೆದ ಒಂಟಿ ದಿನಗಳು, ಮೌನವಾಗಿ ನಡೆದು ಬಂದು ನೇಣುಗಂಬ ಹತ್ತುವುದು, ಅನುಭವಿ ವೈದ್ಯ ಆಪರೇಷನ್ ಮಾಡುವ ಹಾಗೆ ಅನುಭವಿಯೊಬ್ಬ ಅವನ ಕುತ್ತಿಗೆಗೆ ಹಗ್ಗದಿಂದ ನೇಣು ಬಿಗಿದು ಸಾಯಿಸಿದ್ದು...........ಯಾರು ಕೊಟ್ಟರು ಇವರಿಗೆ ಈ ಅಧಿಕಾರವನ್ನು? ಕಣ್ಣಿರದ, ಸರಿಯಾಗಿ ಕಿವಿ ಕೇಳದ ಈ ನ್ಯಾಯಸ್ಥಾನಕ್ಕೆ-ಬದುಕುವ ಹಕ್ಕನ್ನು ಎಲ್ಲ ನಾಗರಿಕರಿಗೆ ದಯಪಾಲಿಸಿದ ಸಂವಿಧಾನಕ್ಕೆ ವ್ಯತಿರಿಕ್ತವಾಗಿ ಮನುಷ್ಯನನ್ನು ಸಾಯಿಸುವ ಹಕ್ಕನ್ನು ಕೊಟ್ಟವರು ಯಾರು?
ಆತನ ದೇಹವನ್ನು ಅರ್ಧಗಂಟೆ ಹೊತ್ತು ಹಾಗೆಯೇ ಬಿಟ್ಟಿದ್ದರು. ನಂತರ ದೇಹವನ್ನು ಡಾಕ್ಟರ್ ಪರೀಕ್ಷೆ ಮಾಡಿ ಅವನು ಸತ್ತಿದ್ದಾನೆಂದು ದೃಢಪಡಿಸಿದನು. ಜೈಲಿನ ಸೂಪರಿಂಟೆಂಡೆಂಟ್ ದಾಖಲೆ ಪುಸ್ತಕದಲ್ಲಿ ಇದನ್ನೆಲ್ಲ ಬರೆದು ಸಂಬಂಧಿಸಿದ ಫೈಲನ್ನು ಮುಚ್ಚಿದನು. ನೇಣಿಗಂಬ ಏರಿದ ವ್ಯಕ್ತಿಯ ಶವವನ್ನು ಆತನ ಬಂಧುಗಳಿಗೆ ನೀಡುವುದಿಲ್ಲ. ಅದನ್ನು ಹೊರಗೆ ಕೊಂಡೊಯ್ದರು.
ಪೂರ್ವದಲ್ಲಿ ಸೂರ್ಯನು ನಿಧಾನವಾಗಿ ಮೇಲೆ ಬಂದನು. ಆ ಆವರಣವು ನಿರ್ಮಾನುಷವಾಗಿತ್ತು. ಒಬ್ಬ ಮುದುಕಿ ಪೊರಕೆಯಿಂದ ಗುಡಿಸುತ್ತಿದ್ದಳು. ನೇಣುಗಂಬದಲ್ಲಿ ಜೀವ ತೊರೆದವನ ಆತ್ಮವು ಗಟ್ಟಿಯಾಗಿ ಕಿರುಚುತ್ತಿತ್ತು-
ಮರಣದಂಡನೆ ರದ್ದು ಮಾಡಿ.........ರದ್ದು ಮಾಡಿ.........ಐಪಿಸಿ ಸೆಕ್ಷನ್ 302 ರದ್ದಾಗಲಿ
, ಎಂದು.
ಇದೆಲ್ಲ ನಡೆದು ಹನ್ನೆರಡು ವರ್ಷಗಳೇ ಆಗಿದೆ.
:1:
ಹಾಲು ಕಡಿಮೆ ಇರಲಿ, ಸಕ್ಕರೆ ಕೂಡಾ.....
ಚಿರಂಜೀವಿ ಇನ್ನೂ ಮಾತು ಮುಗಿಸಿರಲಿಲ್ಲ;, ಆಗಲೇ ಮಾಣಿ, ಸಕ್ಕರೆ ಕಡಿಮೆ ಸ್ಟ್ರಾಂಗ್ ಕಾಫೀೀೀ.....
ಎಂದು ಗಟ್ಟಿಯಾಗಿ ಅರಚುತ್ತ ಅಲ್ಲಿಂದ ಅವಸರದಿಂದ ಹೊರಟು ಹೋದನು.
ಚಿರಂಜೀವಿ ಕಕ್ಕಾಬಿಕ್ಕಿಯಾದ, ಮಾಣಿ ತನ್ನ ಮಾತನ್ನು ಪೂರ್ತಿ ಕೇಳಿಸಿಕೊಳ್ಳದೆ ಹೋಗಿದ್ದಕ್ಕೆ. ಆದರೂ ಆ ಹುಡುಗನ ಕಡೆ ಮೆಚ್ಚುಗೆಯ ನೋಟ ಬೀರಿದ. ಎಷ್ಟು ಗಟ್ಟಿಯಾಗಿ ಅರಚಿದನಲ್ಲ! ಇಲ್ಲಿರುವ ಇಷ್ಟೆಲ್ಲ ಜನರಲ್ಲಿ ಯಾರನ್ನೂ ಗಮನಿಸದೆ ಎಷ್ಟು ಕಮ್ಯಾಂಡಿಂಗ್ ಆಗಿ ನಡೆದುಕೊಂಡಿದ್ದ........ಅಷ್ಟರಲ್ಲಿ ಮಾಣಿ ಕಾಫಿ ಕಪ್ಪನ್ನು ತಂದು ಟೇಬಲ್ ಮೇಲಿಟ್ಟು ಹೊರಟು ಹೋದ.
ಆಗ ಮೂಗಿನಲ್ಲಿ ಒಂದು ರೀತಿ ನವೆ ಆಯಿತು. ಆ ಆ ಆ ಆಕ್ಷಿ ಎಂದು ಜೋರಾಗಿ ಸೀನಿದರೆ ಹೋಟೆಲ್ನಲ್ಲಿ ಇರುವವರೆಲ್ಲ ತನ್ನ ಕಡೆ ತಿರುಗಿ ನೋಡುತ್ತಾರೆ! ಎಲ್ಲಿಯೋ ಓದಿದ ನೆನಪು-ಸೀನಿದಾಗ ಆ ದ್ರವದ ಹನಿಗಳು ಗಂಟೆಗೆ ನೂರು ಮೈಲಿ ವೇಗದಲ್ಲಿ ಪ್ರಯಾಣಿಸುತ್ತವೆ ಅಂತೆ. ಬಾಯಿಗೆ ಅಡ್ಡವಾಗಿ ಅಂಗೈ ಹಿಡಿದರೆ ಅದನ್ನು ತಡೆಯಬಹುದು. ಆದರೂ ಸದ್ದನ್ನು ಅಡಗಿಸಲು ಸಾಧ್ಯವಿಲ್ಲವಲ್ಲ. ಜನರನ್ನು ಆಕರ್ಷಿಸುವುದು ಆ ಸದ್ದು ಮಾತ್ರವೇ ಅಲ್ಲವೇ? ಆಗ ಒಂದು ವಿಷಯ ನೆನಪಾಯ್ತು. ಜೋರಾಗಿ ಉಸಿರಾಡಿದರೆ ಸೀನು ಬರುವುದಿಲ್ಲ. ತನ್ನ ನೆನಪನ್ನು ತಾನೇ ಅಭಿನಂದಿಸಿಕೊಂಡು ದೀರ್ಘವಾಗಿ ಉಸಿರೆಳೆದುಕೊಂಡು ನಿಧಾನವಾಗಿ ನಿಶ್ವಾಸ ಮಾಡಲು ಆರಂಭಿಸಿದ. ಎರಡು ನಿಮಿಷಗಳ ನಂತರ ‘ಎಲ್ಲ ಸರಿಹೋಯ್ತು’ ಎಂದುಕೊಂಡು ಕಣ್ತೆರೆದು ಸುತ್ತಲಿನ ದೃಶ್ಯವನ್ನು ನೋಡಿ ದಂಗಾಗಿಬಿಟ್ಟ.
ಕೈಲಿ ನೀರಿನ ಲೋಟ ಹಿಡಿದಿದ್ದ ವೇಟರ್ ಅವನ ಕಡೆ ನೋಡುತ್ತ ನಿಂತಿದ್ದ. ಪಕ್ಕದ ಟೇಬಲ್ನ ಕಚ್ಚಿಪಂಚೆಯ ಆಸಾಮಿ, ಎಡಗಡೆ ಟೇಬಲ್ನ ಕುಂಕುಮಧಾರಿ ವ್ಯಕ್ತಿ ತಿನ್ನುವುದನ್ನು ನಿಲ್ಲಿಸಿ ಇವನ ಕಡೆ ನೋಡುತ್ತ ಕುಳಿತಿದ್ದರು. ಎದುರಿನಲ್ಲಿ ಕುಳಿತಿದ್ದ ದಾರಾಸಿಂಗ್ನಂತಹ ಮನುಷ್ಯ ಕಣ್ಣು ಮಿಟುಕಿಸದೆ ನೋಡುತ್ತಿದ್ದ.
ಚಿರಂಜೀವಿ ಕಕ್ಕಾಬಿಕ್ಕಿಯಾಗಿ, ಬಿಲ್
, ಎಂದು ಕೂಗಿದನು.
ಏನಾಯ್ತು ಸಾರ್?
ಏನಿಲ್ಲ-ಬಿಲ್.......
ವೇಯ್ಟರ್ ಬಿಲ್ ಕೊಟ್ಟು ಹೊರಟು ಹೋದನು. ಪರಿಸರವೆಲ್ಲ ಎಂದಿನಂತಾದ ಮೇಲೆ ಬಿಲ್ಲು ಎತ್ತಿಕೊಂಡು ಮೇಲೆದ್ದನು ಚಿರಂಜೀವಿ. ಬಿಲ್ ನೋಡಿ ದಂಗಾದ. ಬಿಲ್ ತನ್ನಲ್ಲಿದ್ದ ದುಡ್ಡಿಗಿಂತ ಐದು ಪೈಸೆ ಹೆಚ್ಚಾಗಿತ್ತು. ಅವನ ಬಳಿ ಅದಕ್ಕಿಂತ ಹೆಚ್ಚು ದುಡ್ಡಿರಲಿಲ್ಲ. ಹಿಂದಿನ ದಿನದ ಊಟ ಮತ್ತು ಇಂದಿನ ಉಪಹಾರ ಎರಡನ್ನೂ ಸೇರಿಸಿ ಎರಡು ಇಡ್ಲಿ ತಿಂದು ಸ್ಟ್ರಾಂಗ್ ಕಾಫಿ ತರಿಸಿ ಕುಡಿದಿದ್ದ. ತನ್ನಲ್ಲಿದ್ದ ಹಣ ಬಿಲ್ಗೆ ಸರಿಹೋಗಬಹುದೆಂದೇ ತಿಳಿದಿದ್ದ. ಆದರೆ ಬಿಲ್ ಕೈಗೆ ಬಂದ ಮೇಲೆ ಮುಜುಗುರವಾಯ್ತು. ‘ಬಿಲ್ ಸರಿಯಾಗಿದೆಯಾ?’ ಎಂದು ವೇಯ್ಟರ್ನನ್ನು ಕೇಳಿದ. ಅವನು ಮತ್ತೆ ಲೆಕ್ಕ ಹಾಕಿ ಸರಿಯಾಗಿ ಒಂದು ರೂಪಾಯಿ ಹದಿನೈದು ಪೈಸಾ..........ಕರೆಕ್ಟಾಗಿದೆಯಲ್ಲ ಸಾರ್
ಎಂದು ಬಿಟ್ಟ.
ಆದ್ರೆ ನೆನ್ನೆ ಎರಡಿಡ್ಲೀ, ಕಾಫಿಗೆ ಒಂದ್ರುಪಾಯಿ ಹತ್ತು ಪೈಸ ಆಗಿತ್ತಲ್ಲಾ?
ಎಂದ ಚಿರಂಜೀವಿ.
ನೆನ್ನೆ ಸಾಯಂಕಾಲ ಸರ್ಕಾರ ಬದಲಾಯ್ತಲ್ಲ ಸಾರ್
ಎಂದು ಆ ಹುಡುಗ ಹೊರಟು ಹೋದ. ಚಿರಂಜೀವಿ ಬಿ.ಎ.ನಲ್ಲಿ ರಾಜಕೀಯ, ಎಕನಾಮಿಕ್ಸ್ ಓದಿದವನೇ. ಆದರೆ ರಾಜಕೀಯಕ್ಕೂ, ಅರ್ಥಶಾಸ್ತ್ರಕ್ಕೂ ಅಷ್ಟು ಹತ್ತಿರದ ಸಂಬಂಧ ಇರುವುದು ಅವನಿಗೆ ತಿಳಿದಿದ್ದು ಮಾತ್ರ ಆಗಲೇ.
ಕೌಂಟರ್ ಕಡೆ ನೋಡಿದ. ಅಲ್ಲಿ ಕುಳಿತಿದ್ದವನು ಸೌಮ್ಯ ಸ್ವಭಾವದವನ ಹಾಗೆ ಕಂಡಿದ್ದರಿಂದ ಧೈರ್ಯವಾಗಿ ಅತ್ತ ಹೆಜ್ಜೆ ಹಾಕಿದ. ತನ್ನಲ್ಲಿದ್ದ ದುಡ್ಡನ್ನೆಲ್ಲ ಕೊಟ್ಟು, ಒರಳು ಕಲ್ಲು ಎಲ್ಲಿದೆ?
ಎಂದು ಕೇಳಿದ.
ಇಲ್ಲವಲ್ಲ, ನಾವು ಕರೆಂಟ್ನಿಂದ ರುಬ್ಬುತೀವಿ
ಎಂದ ಆ ಹೋಟೆಲ್ ಮಾಲೀಕ.
ಎಲ್ಲೆಲ್ಬಿ ಪಾಸ್ ಮಾಡಿದ್ದೀನಿ. ನಾನು ಕಪ್ಪು-ಸಾಸರ್ ತೊಳೆದರೆ ನಮ್ಮ ಉಸ್ಮಾನಿಯಾ ಯೂನಿವರ್ಸಿಟೀಗೇ ಅವಮಾನ. ಅದಕ್ಕೇ ನಾನು ಹಿಟ್ಟು ರುಬ್ಬುತೀನಿ ಅಂದೆ.
ಏನು ವಿಷಯ ಹೇಳಿ
ಚಿರಂಜೀವಿ ತನ್ನಲ್ಲಿ ಐದು ಪೈಸೆ ಕಡಿಮೆ ಇದೆ ಎಂದು ಹೇಳಿದ. ಹೋಟೆಲಿನವನು ಜೋರಾಗಿ ನಕ್ಕು-ಜೀವನ ಅನ್ನೋದು ಖಾಲಿಯಾದ ಕಪ್ ಇದ್ದ ಹಾಗೆ. ದುಡ್ಡು ಇಡ್ಲಿ ಇರುವ ಪ್ಲೇಟ್ ಇದ್ದ ಹಾಗೆ. ಒಂದರ ಸಲುವಾಗಿ ಇನ್ನೊಂದನ್ನು ಖರ್ಚು ಮಾಡಬೇಕಪ್ಪಾ, ಪರವಾಗಿಲ್ಲ ಬಿಡು
, ಎಂದು ಬಿಟ್ಟ.
ಮನಸ್ಪೂರ್ತಿಯಾಗಿ ಆತನಿಗೆ ಕೃತಜ್ಞತೆ ಸಲ್ಲಿಸಿ ಹೊರಟನು ಚಿರಂಜೀವಿ.
:2:
ಇಂತಹವನು ಮುಂದೆ ಅದ್ಹೇಗೆ ಬದುಕ್ತೀಯೋ ತಿಳಿತಿಲ್ಲ............
ಎಂದ ಎಸ್ಸೆಮ್ ಸ್ಫೂರ್ತಿ.
ಹೀಗಿದ್ದೀನಿ ಸರಿ ಮುಂದೆ ಹೇಗಾಗ್ತೀನೋ ನೋಡ್ತಿರು
, ಎಂದು ಹೇಳಿದ ಚಿರಂಜೀವಿ.
ಗಟ್ಟಿಯಾಗಿ ಸೀನುವುದಕ್ಕೆ ಭಯಪಡ್ತೀಯ, ಬೋರ್ಡಿನಲ್ಲಿ ಒಂದು ರೇಟು, ಬಿಲ್ಲಿನಲ್ಲಿ ಒಂದು ರೇಟು ಹಾಕಿದಾಗಲೂ ದಬಾಯಿಸಲಿಕ್ಕೆ ಕೈಲಾಗದವನು ನೀನು...........
ನನ್ನ ಬದುಕಿನ ಅಭಿಲಾಷೆ ಹೋಟೆಲ್ನ ರೇಟುಗಳನ್ನು ಕಂಟ್ರೋಲ್ ಮಾಡುವುದು ಖಂಡಿತ ಅಲ್ಲ.
ಮತ್ತೆ?
ಇಂಡಿಯನ್ ಪೀನಲ್ ಕೋಡ್ನ ಸೆಕ್ಷನ್ 302ಅನ್ನು ಬದಲಾಯಿಸೋದು! ನಮ್ಮ ಕಾನೂನಿನ ಚೌಕಟ್ಟಿನಿಂದ ಮರಣದಂಡನೆ ಶಿಕ್ಷೇನ ರದ್ದು ಮಾಡಿಸೋದು!! ನನ್ನ ತಂದೆ ಸಾವಿಗೆ ಕಾರಣವಾದ ಈ ಸಮಾಜದ ಮೇಲೆ ಸೇಡು ತೀರಿಸಿಕೊಳ್ಳೋದು!!!
ಮುಷ್ಟಿ ಬಿಗಿ ಹಿಡಿದು ಹೇಳಿದ ಚಿರಂಜೀವಿ.
ನೋಡಮ್ಮ ಚಿರಂಜೀವಿ........ಪ್ರಾಕ್ಟೀಸು ಪ್ರಾರಂಭ ಮಾಡಿ ಮೂರು ವರ್ಷ ಆಯ್ತು. ಹೊರಗೆ ನಿಂತರೆ ‘ಮರದ ಕೆಳಗಿನ ಪ್ಲೀಡರ್’ ಅಂತಾರೆ ಅಂತ ಇಲ್ಲಿ ಒಳಗೆ ಕೂತಿರ್ತೀಯ. ಈವರೆಗೆ ಒಂದೇ ಒಂದು ಕೇಸೂ ಹಿಡಿದಿಲ್ಲ. ಭಾರತದ ಮ್ಯಾಪ್ನಲ್ಲಿ ಡೆಲ್ಲಿ ಎಲ್ಲಿದೇಂತಲೇ ನಿಂಗೆ ಗೊತ್ತಿಲ್ಲ. ಡೆಲ್ಲೀನಲ್ಲೀ ಪಾರ್ಲಿಮೆಂಟ್ ಎಲ್ಲಿದೆಯೋ ಅಂತ ಕೇಳಿದರೆ ಬೀಚ್ನಲ್ಲಿ ಅಂತ ಹೇಳೋ ಪೆಕರಾ ನೀನು. ಅಂಥವನು ಐಪೀಸೀನೇ ಬದಲಾಯ್ಸಿ ಬಿಡ್ತೀಯಾ?
ನಗಬೇಡ ಶೇಷಾವರಂ! ಆರು ನೂರು ಮಂದಿ ಪಾರ್ಲಿಮೆಂಟ್ ಸದಸ್ಯರು......
ಅವನು ತನ್ನ ಮಾತನ್ನು ಕಲ್ಪನಾಲೋಕದಲ್ಲಿ ವಿಹರಿಸತೊಡಗಿದ.
ಟ್ರಿಂಗ್.......ಟ್ರಿಂಗ್.
ಪಾರ್ಲಿಮೆಂಟಿನಿಂದ ಚಿರಂಜೀವಿ ಹೊರಗೆ ಬಂದನು. ವಿಶಾಲವಾದ ಮೆಟ್ಟಿಲುಗಳು........ಅವನ ಎರಡು ಬದಿಯಲ್ಲೂ ಪಾರ್ಲಿಮೆಂಟ್ ಸದಸ್ಯರು............ನಗುತ್ತ ವಿಷ್ ಮಾಡಿ ಕಂಗ್ರಾಟ್ಸ್ ಹೇಳಿದವರು-ಪ್ರಧಾನಮಂತ್ರಿ!
ಎರಡು ಮೆಟ್ಟಿಲಿಳಿದ ಚಿರಂಜೀವಿ ಅಲ್ಲಿ ನೆರೆದಿದ್ದ ಅಗಾಧ ಸಂಖ್ಯೆಯ ಜನರನ್ನು ಕಂಡು ವಿಸ್ಮಿತನಾದ. ಕೆಲವರ ಕೈಗಳಲ್ಲಿ ಹೂವಿನ ಹಾರಗಳಿದ್ದವು, ಮತ್ತೆ ಕೆಲವರ ಕೈಗಳಲ್ಲಿ ಧ್ವಜಗಳು. ಎಲ್ಲರೂ ಚಪ್ಪಾಳೆ ತಟ್ಟುತ್ತ ಹರ್ಷಧ್ವನಿ ಮಾಡಿದರು. ‘ಲಾಂಗ್ ಲಿವ್ ಚಿರಂಜೀವಿ’, ಎಂದು ಗಟ್ಟಿಯಾಗಿ ಕೂಗಿದರು ಹಲವರು.
ಮೈಕ್ ಬಳಿಗೆ ಚಿರಂಜೀವಿ ಬಂದಾಗ ಸೂಜಿ ಬಿದ್ದರೂ ಕೇಳಿಸುವಷ್ಟು ನಿಶ್ಯಬ್ದ ಆವರಿಸಿತು. ಅವನ ಮುಂದೆ ದೂರದರ್ಶನ ಮತ್ತು ಆಕಾಶವಾಣಿಯ ಮೈಕ್ಗಳೂ ಸೇರಿ ಒಟ್ಟು ಇಪ್ಪತ್ತೈದು ಮೈಕ್ಗಳಿದ್ದವು. ರಾಷ್ಟ್ರಪತಿಗಳಿಗೂ ಹದಿನಾರಕ್ಕಿಂತ ಹೆಚ್ಚು ಮೈಕ್ಗಳನ್ನು ಬಳಸುವುದಿಲ್ಲ!
ಸಹೋದರರೇ! ನನ್ನ ಪ್ರೀತಿಯ ಭಾರತೀಯ ಮಿತ್ರರೇ!
ಒಮ್ಮೆಗೇ ಜೋರಾಗಿ ಚಪ್ಪಾಳೆ. ಕ್ಷಣಗಳಲ್ಲಿ ಮತ್ತೆ ನಿಶ್ಯಬ್ದ. ಎಲ್ಲರೂ ಆಸಕ್ತಿಯಿಂದ ಅವನಾಡುವ ಮಾತುಗಳನ್ನು ಕೇಳುತ್ತಿದ್ದರು.
ಭಾರತದಲ್ಲಿ ಮರಣದಂಡನೆ ರದ್ದು ಮಾಡಬಾರದು ಎಂದು ಮೊನ್ನೆ ತಾನೇ ಸುಪ್ರೀಂ ಕೋರ್ಟ್ 1981 ಮೇ 9ರಂದು ಬಚ್ಚನ್ಸಿಂಗ್ ಸ್ಟೇಟ್ ಬ್ಯಾಂಕ್ ಆಫ್ ಪಂಜಾಬ್ ಕೇಸಿನಲ್ಲಿ ತೀರ್ಪು ನೀಡಿದೆ! ನನ್ನಲ್ಲಿ ಆವೇಶ ಹುಟ್ಟುವುದಕ್ಕೆ ಅದೇ ಕಾರಣ! ಇಡೀ ವಿಶ್ವವು ಈ ಶಿಕ್ಷೆಯನ್ನು ರದ್ದು ಮಾಡಬೇಕೆಂದು ಯೋಚಿಸುತ್ತಿರುವಾಗ ನಮ್ಮ ದೇಶವು ಮಾತ್ರ ಅಮಾಯಕರನ್ನು ಕ್ರಾಂತಿಕಾರಿಗಳನ್ನು ನೇಣಿಗೇರಿಸುತ್ತಿದೆ. ಬಲಿಷ್ಠ ವ್ಯಕ್ತಿ ತಾನು ಮಾಡಿದ ಕೊಲೆಯನ್ನು ಬಲಹೀನನ ಮೇಲೆ ಸಾಕ್ಷಿ ಸಮೇತವಾಗಿ ಹೇರಿ ಬಿಡುತ್ತಾನೆ. ಆಗ ಆ ಅಮಾಯಕ ಪಾಪ, ನೇಣುಗಂಬ ಏರುತ್ತಾನೆ.
ಜೋರಾಗಿ ಚಪ್ಪಾಳೆ-‘ಸಾಕು’ ಎನ್ನುವಂತೆ ಚಿರಂಜೀವಿ ಕೈ ಎತ್ತಿ ಸೂಚಿಸಿ ತನ್ನ ಮಾತು ಮುಂದುವರೆಸಿದನು-
.........ಬಾತ್ರಾ ಕೇಸಿನಲ್ಲಿ ‘ಈ ಸುನಿಲ್ ಬಾತ್ರಾ ಎಂಬ ಆರೋಪಿ ಬಹಳ ಭಯಂಕರ ವ್ಯಕ್ತಿ. ಇವನಿಗೆ ಮರಣದಂಡನೆಯೇ ಸೂಕ್ತವಾದ ಶಿಕ್ಷೆ ಎಂದು ಭಾವಿಸಿದ್ದೇನೆ’ ಎಂದು ಸೆಷನ್ಸ್ ಜಡ್ಜ್ ವೋಹ್ರಾ ಜಡ್ಜ್ಮೆಂಟ್ ಕೊಟ್ಟಿದ್ದಾರೆ. ಇದೇ ಕೇಸು 1981ರಲ್ಲಿ ಸುಪ್ರೀಂ ಕೋರ್ಟಿಗೆ ಬಂದಾಗ ಅಲ್ಲಿ ನ್ಯಾಯಮೂರ್ತಿ ಸರ್ಕಾರಿಯಾ ಮರಣದಂಡನೆಯನ್ನು ಖಇಂಖಇSಖಿ ಔಈ ಖಿಊಇ ಖಂಖಇ ಸಂದರ್ಭದಲ್ಲಿ ಮಾತ್ರ ವಿಧಿಸಬೇಕು. ಈ ಕೇಸು ಅಂತಹ ಧಾರುಣವಾದ ಕೇಸೆಂದು ನಾನು ಭಾವಿಸುತ್ತಿಲ್ಲ. ಆರೋಪಿಯ ಮರಣದಂಡನೆ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಬದಲಾಯಿಸುತ್ತಿದ್ದೇನೆ
, ಎಂದು ಹೇಳಿದರು.
ಒಬ್ಬ ಮನುಷ್ಯನನ್ನು ಸಾಯಿಸಬೇಕೋ, ಸಾಯಿಸಬಾರದೋ ಎನ್ನುವ ಬಗ್ಗೆ ಅಭಿಪ್ರಾಯಗಳು ಹೇಗೆ ಬದಲಾಗುತ್ತದೆ ಎನ್ನುವುದನ್ನು ದಯವಿಟ್ಟು ಗಮನಿಸಿ. ಮನುಷ್ಯನ ಬದುಕಿಗೂ, ಸಾವಿಗೂ ಇರುವ ವ್ಯತ್ಯಾಸ ಇಷ್ಟು ಸಣ್ಣದೇನು? ಎಂದು ಯೋಚಿಸಿದ ನಾನು ಈ ಹೋರಾಟ ನಡೆಸಲು ನಿಶ್ಚಯಿಸಿದೆ. ನಿಮ್ಮೆಲ್ಲರ ಆಶೀರ್ವಾದ ಬಲದಿಂದ ಜಯಶೀಲನಾದೆ.
ನೂರಾರು ಕ್ಯಾಮೆರಾಗಳು ಕ್ಲಿಕ್ ಎಂದವು..... ಯಾರೋ ನೀರಿನ ಬಾಟಲನ್ನು ಕೊಟ್ಟರು. ನೀರು ಕುಡಿದ ಚಿರಂಜೀವಿ ತನ್ನ ಮಾತು ಮುಂದುವರಿಸಿದ:
ಕ್ರಿಮಿನಲ್ ಪ್ರೊಸೀಜರ್ ಕೋಡ್ಗೆ ಹೊಸದಾಗಿ ಸೇರ್ಪಡೆ ಆಗಿರುವ ಸೆಕ್ಷನ್ 235 (2) ಮತ್ತಷ್ಟು ಗೊಂದಲ ಉಂಟು ಮಾಡುತ್ತಿದೆ. ಕೊಲೆಗಳಲ್ಲೂ ಹಲವಾರು ಕೆಟಗರಿಗಳನ್ನು ಸೃಷ್ಟಿ ಮಾಡಿದ್ದಾರೆ. (ಜನರ ನಗು......) ನೀವು ಒಬ್ಬನ ಎದೆಯನ್ನು ಚುಚ್ಚಿದಾಗ ಅವನು ಸಾಯದಿದ್ದರೆ ನಿಮಗೆ ಮರಣದಂಡನೆ ಇರುವುದಿಲ್ಲ. ನೀವು ಕಿರುಬೆರಳಿನಿಂದ ಚುಚ್ಚಿದಾಗ ಅವನು ಸತ್ತರೆ ಆಗ ಶಿಕ್ಷೆ ಗ್ಯಾರಂಟಿ! ನೋಡಿ ಹೇಗಿದೆ ನಮ್ಮ ನ್ಯಾಯಶಾಸ್ತ್ರ......
ಅವನು ಆ ಮಾತನ್ನು ಹೇಳಿದಾಗ ಜನರ ಉತ್ಸಾಹ ಹುಚ್ಚೆದ್ದಿತು. ತಮ್ಮ ಪ್ರೀತಿಯ ನಾಯಕನ ಸಮೀಪಕ್ಕೆ ನುಗ್ಗಿ ಬರತೊಡಗಿದರು. ಒಬ್ಬ ಹುಡುಗಿ ಅವನ ಕೆನ್ನೆಯನ್ನು ಚುಂಬಿಸಿದಳು. ನಿಮ್ಮದು ಯಾವ ಕಾಲೇಜು?
ಎಂದು ಕೇಳಿದ. ಸ್ಟೆಲ್ಲಾಮೇರಿ
ಎಂದಳು ಆ ಹುಡುಗಿ. ಚಿರಂಜೀವಿ ಎರಡೂ ಕೈಗಳಿಂದ ಆಟೋಗ್ರಾಫ್ ಹಾಕತೊಡಗಿದ.
...................
ಲೇಯ್, ಕನಸು ಕಾಣ್ತಿದ್ದೀಯೇನೋ …………… ಅದ್ಯಾಕೋ ಹಾಗೆ ಭರತನಾಟ್ಯ ಮಾಡಿದ ಹಾಗೆ ಕೈ ಆಡಿಸ್ತಿದ್ದೀಯಾ?
ಗೆಳೆಯನ ಮಾತು ಚಿರಂಜೀವಿಯನ್ನು ಈ ಲೋಕಕ್ಕೆ ಎಳೆದು ತಂದಿತು. ತನ್ನ ಕಡೆ ಗಾಬರಿಯಿಂದ ನೋಡುತ್ತಿದ್ದ ಸ್ಫೂರ್ತಿಗೆ ತನ್ನ ಕನಸಿನ ಬಗ್ಗೆ ಹೇಳಿದ ಚಿರಂಜೀವಿ.
ಸರಿಯಾಗಿ ಹಗಲುಗನಸು ಕಾಣಲಿಕ್ಕೂ ಬರಲ್ಲವಲ್ಲೋ ನಿಂಗೆ.....ಸ್ಟೆಲ್ಲಾಮೇರಿ ಕಾಲೇಜಿರೋದು ವಿಜಯವಾಡದಲ್ಲಿ, ಡೆಲ್ಲೀಲಿ ಅಲ್ಲ.
ಅದ್ಯಾಕೆ ಹಾಗೆ ಹೇಳ್ತಿಯೋ. ಆ ಹುಡುಗೀರು ವಿಜಯವಾಡದಿಂದ ಡೆಲ್ಲಿಗೆ ಎಕ್ಸ್ಕರ್ಷನ್ ಬಂದಿದ್ದರು ಅಂತ ತಿಳಿದುಕೊಂಡರಾಯ್ತು.
ಎಕ್ಸ್ಕರ್ಷನ್ಗೆ ಬಂದವರು ಕೆಂಪುಕೋಟೆ, ಕುತುಬ್ಮಿನಾರ್ ನೋಡ್ಲಿಕ್ಕೆ ಹೋಗದೆ ನಿನ್ನ ಭಾಷಣ ಕೇಳ್ಲಿಕ್ಕೆ ಯಾಕೆ ಬರ್ತಾರೋ?
ಕುತುಬ್ ಮಿನಾರ್, ಕೆಂಪುಕೋಟೆ ಹೆಸರುಗಳು ಹೇಗೆ ಚರಿತ್ರೇಲಿ ಶಾಶ್ವತವಾಗಿ ಇರುತ್ತವೋ ಹಾಗೆ ಈ ಚಿರಂಜೀವಿಯ ಹೆಸರೂ ಶಾಶ್ವತವಾಗಿರುತ್ತೆ, ನೋಡ್ತಾ ಇರು.
ಪೋಸ್ಟ್
ಎಂದು ಒಂದು ಕವರನ್ನು ಎಸೆದು ಹೋದ ಪೋಸ್ಟ್ಮನ್.
ಅಂದವಾದ ಕವರ್. ಅದರ ಮೇಲೆ ನೀಟಾಗಿ ‘ಚಿರಂಜೀವಿ’ ಎಂದು ಟೈಪ್ ಮಾಡಲಾಗಿತ್ತು. ಅದರೊಳಗೆ ಇದ್ದ ಪತ್ರವನ್ನು ಹೊರತೆಗೆದ ಚಿರಂಜೀವಿ. ಪತ್ರ ಇಂಗ್ಲೀಷಿನಲ್ಲಿ ಜನವರಿ 24ನೇ ತಾರೀಖು ಸಂಜೆ 6 ಗಂಟೆಗೆ ನಮ್ಮ ಮನೆಯಲ್ಲಿ ವ್ಯವಸ್ಥೆ ಮಾಡಲಾಗಿರುವ ಕಾಕ್ಟೇಲ್ ಪಾರ್ಟಿಗೆ ತಾವು ಆಗಮಿಸಿ, ತನ್ನ ಕಂಪನಿಯಿಂದ ನನ್ನನ್ನು ಆನಂದಗೊಳಿಸಬೇಕೆಂದು ಕೋರುತ್ತೇನೆ.
ಇಂತು
ಸರ್ವೋತ್ತಮ ರಾವ್
ಅಡ್ವಕೇಟ್."
ಜೋರಾಗಿ ಅರಚಬೇಕೆಂದಿದ್ದ ಚಿರಂಜೀವಿ, ಅಷ್ಟರಲ್ಲಿ ಸಂಭಾಳಿಸಿಕೊಂಡ.
ಸರ್ವೊತ್ತಮ ರಾವ್!
ದೇಶಕ್ಕೆ ಪಾಲ್ಕಿವಾಲಾ ಹೇಗೋ ಕ್ರಿಮಿನಲ್ ಲಾನಲ್ಲಿ ಸರ್ವೋತ್ತಮ ರಾವ್ ಹಾಗೇ ದೊಡ್ಡ ಹೆಸರು. ಅಂತಹ ರಾವ್ ತನ್ನನ್ನು ಪಾರ್ಟಿಗೆ ಆಹ್ವಾನಿಸುವುದೆಂದರೆ.........ಅವನು ಕವರನ್ನು ಇನ್ನೊಮ್ಮೆ ನೋಡಿದ-ವಿಳಾಸ ಸರಿಯಾಗಿದೆಯೇ ಅಂತ. ಹೌದು, ಸಂದೇಹವೇ ಇಲ್ಲ. ಆಹ್ವಾನ ತನಗೇ ಬಂದಿತ್ತು.
ಗುರೂ! ಇದು ನಮಗೇ ಬಂದಿದೆ ಅಂತೀಯಾ?
ಎಂದ ಚಿರಂಜೀವಿ.
ನಿಸ್ಸಂದೇಹವಾಗಿ ನಮ್ಮದೇ....... ಅಲ್ಲ ಅಂತ ಯಾಕೆ ಭಾವಿಸ್ತಿದ್ದೀಯ? ಅ ಪಾಲ್ಕಿವಾಲಾನ ಡ್ರೈವರ್ಗೆ ನಮಗಿಂತ ಹೆಚ್ಚು ಸಂಬಳ ಬರುತ್ತಿರಬಹುದು. ಆದ್ರೇನು?......ನೀನೀ ಪಾರ್ಟಿಗೆ ಖಂಡಿತ ಹೋಗು
. ಎಂದನು ಸ್ಫೂರ್ತಿ.
ಚಿರಂಜೀವಿ ವಿಸ್ಮಯದಿಂದ ತಲೆ ಎತ್ತಿ ನೋಡಿದನು.
"ಹೌದು ಗುರೂ, ನೀನೀ ಪಾರ್ಟಿಗೆ